ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡನಾಡಿನ ಚಿನ್ನದ ರಾಜ - ಅಮೋಘವರ್ಷ ನೃಪತುಂಗ

By * ತ್ರಿವೇಣಿ ಶ್ರೀನಿವಾಸರಾವ್, ಶಿಕಾಗೋ
|
Google Oneindia Kannada News

Amoghavarsha Nrupatunga, Novel by Prakash Hemavathi
ಕನ್ನಡನಾಡಿಗೆ ಬಹು ವೈಭವದ ಇತಿಹಾಸವಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಹಿನ್ನೆಲೆಯಿದೆ. ಕರ್ನಾಟಕ ಏಳನೆಯ ಶತಮಾನದಲ್ಲೇ ಕಲೆ, ಸಾಹಿತ್ಯ, ವಾಣಿಜ್ಯ, ವಾಸ್ತುಶಿಲ್ಪಗಳಲ್ಲಿ ಉನ್ನತಿಯನ್ನು ಸಾಧಿಸಿತ್ತು. ಈ ಮಣ್ಣನ್ನು ಆಳಿದ ಅರಸರು ತಮ್ಮ ಚಾತುರ್ಯ, ಧೀಮಂತಿಕೆಗಳಿಂದ ಕರುನಾಡಿನ ಇತಿಹಾಸವನ್ನು ಸುವರ್ಣಾಕ್ಷರಗಳಿಂದ ಸಿಂಗರಿಸಿದ್ದಾರೆ. ಅಮೋಘವರ್ಷನು ಇಂತಹ ದೊರೆಗಳಲ್ಲಿ ಪ್ರಮುಖನಾಗಿದ್ದಾನೆ. ಜಗತ್ತಿನ ನಾಲ್ಕು ವಿಶಾಲ ಸಾಮ್ರಾಜ್ಯಗಳಲ್ಲಿ ಒಂದೆಂದು ಅರಬ್ ಪ್ರವಾಸಿ ಸುಲೇಮಾನನು ರಾಷ್ಟ್ರಕೂಟ ಸಾಮ್ರಾಜ್ಯವನ್ನು ಬಣ್ಣಿಸಿದ್ದಾನೆ. ಅಮೋಘವರ್ಷನು ರಾಷ್ಟ್ರಕೂಟ ವಂಶದ ಪ್ರಸಿದ್ಧ ಚಕ್ರವರ್ತಿಯಾಗಿ ಮೆರೆದವನು.

ಅಮೋಘವರ್ಷ ನೃಪತುಂಗ! - ಈ ಹೆಸರಿನಲ್ಲಿಯೇ ಕನ್ನಡಿಗರ ಮೈನವಿರೇಳಿಸುವ ದಿವ್ಯ ಶಕ್ತಿಯಿದೆ! ಕನ್ನಡಿಗರ ಸಾಹಸ, ಸಾಮರ್ಥ್ಯ, ಸಹನೆ, ಸೌಹಾರ್ದ, ಸಂಸ್ಕೃತಿಗೆ ಸಂಕೇತವಾಗಿ ನಿಲ್ಲುತ್ತದೆ ಈ ಧೀರ ದೊರೆಯ ಸುಂದರ ಹೆಸರು! ಈತನ ಕನ್ನಡ ಪ್ರೇಮ ಅಪಾರ. ತರಾಸು ಅವರು ಚಿತ್ರದುರ್ಗದ ಇತಿಹಾಸವನ್ನು ತಮ್ಮ ಕಾದಂಬರಿಗಳಿಂದ ಕಣ್ಣೆದುರು ನಿಲ್ಲಿಸಿದಂತೆ, ಕನ್ನಡ ಮಣ್ಣಿನ ಹೆಮ್ಮೆಯ ಮಗನಾದ "ಅಮೋಘವರ್ಷ" ಬಾಳಿಬದುಕಿದ ಬಗೆಯನ್ನು ಯಾರಾದರೂ ಕಾದಂಬರಿಯಾಗಿಸಿದ್ದಾರೆಯೇ ಎಂದು ಕುತೂಹಲದಿಂದ ಅರಸುತ್ತಿದ್ದ ನನ್ನ ಪ್ರಯತ್ನಕ್ಕೆ ಈವರೆಗೆ ಫಲ ದೊರಕಿರಲಿಲ್ಲ. ಈ ಕುರಿತು ಯಾವುದಾದರೂ ಕಾದಂಬರಿ ಈ ಹಿಂದೆ ಬಂದಿದೆಯೇ ಇಲ್ಲವೋ ತಿಳಿಯದು. ಆದರೆ, ಹಲವಾರು ಉತ್ತಮ ನಾಟಕಗಳನ್ನು ನಿರ್ದೇಶಿಸಿ, 'ಕರ್ನಾಟಕದ ರಾಜಮನೆತನಗಳು" ಎನ್ನುವ ಲೇಖನಮಾಲೆಯನ್ನು ವಿದ್ಯಾರಣ್ಯ ಕನ್ನಡಕೂಟದ 'ಸಂಗಮ" ಪತ್ರಿಕೆಯಲ್ಲಿ ಪ್ರಕಟಿಸಿ, ಶಿಕಾಗೊ ಕನ್ನಡಿಗರೆಲ್ಲರಿಗೂ ಚಿರಪರಿಚಿತರಾಗಿರುವ ಪ್ರಕಾಶ್ ಹೇಮಾವತಿಯವರು ಆ ಬಗ್ಗೆ ಕಾದಂಬರಿಯೊಂದನ್ನು ಹೊರತರುವ ಪ್ರಯತ್ನದಲ್ಲಿದ್ದಾರೆಂದು ತಿಳಿದಾಗ ಬಹಳ ಸಂತೋಷವಾಗಿತ್ತು. ಇದೀಗ ಪ್ರಕಾಶ್ ಹೇಮಾವತಿಯವರ ಬಹುವರ್ಷಗಳ ಅಧ್ಯಯನ, ಆಶಯಗಳ ಫಲವೇ 'ಅಮೋಘವರ್ಷ" ಕಾದಂಬರಿಯ ರೂಪದಲ್ಲಿ ಹೊರಬಂದಿದೆ. ಐಬಿಎಚ್ ಪ್ರಕಾಶನದವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.

ರಾಷ್ಟ್ರಕೂಟ ಅರಸನಾದ ಮೂರನೆಯ ಗೋವಿಂದನ ಮರಣದೊಂದಿಗೆ ಪ್ರಾರಂಭವಾಗುವ ಕಾದಂಬರಿ, ನಂತರ ಹಂತಹಂತವಾಗಿ ರಾಜ್ಯದಲ್ಲೇಳುವ ಬಂಡಾಯ, ಹದಿನಾಲ್ಕು ವರ್ಷದ ಬಾಲಕ ಅಮೋಘವರ್ಷನಿಗೆ ಅನಿವಾರ್ಯವಾಗುವ ಪಟ್ಟಾಭಿಷೇಕ, ರಾಜ್ಯಾಡಳಿತ, ರಾಜ್ಯವನ್ನು ಬಲಪಡಿಸಲು ನಡೆಯುವ ಕಾಳಗ, ಯುವರಾಜನ ವಿವಾಹ.... ಹೀಗೆ ಹಂತಹಂತವಾಗಿ ನೃಪತುಂಗ ದೊರೆಯ ಧೀರೋದಾತ್ತ ವ್ಯಕ್ತಿತ್ವವನ್ನು ನಮ್ಮ ಕಣ್ಣುಗಳೆದುರು ಕಟೆಯುತ್ತಾ ಹೋಗುತ್ತದೆ. ಪ್ರತಿ ಅಧ್ಯಾಯಕ್ಕೂ ಸೂಕ್ತ ಹೆಸರು ನೀಡಿ ಮಾಡಿರುವ ವಿಂಗಡಣೆ ನಮ್ಮ ಓದನ್ನು ಸುಗಮಗೊಳಿಸುತ್ತದೆ. ಕಾಲದ ಕರಿತೆರೆಯಲ್ಲಿ ಮುಚ್ಚಿಹೋಗಿರುವ ಇತಿಹಾಸವನ್ನು ಕಾಗದಕ್ಕಿಳಿಸುವುದು ಬಹಳ ಕಷ್ಟದ ಕೆಲಸ. ಎಂದೋ ನಡೆದ ಘಟನೆಗಳನ್ನು ಕಲ್ಪನೆಯ ಎಳೆಯಲ್ಲಿ ಸೇರಿಸಿ, ಹೆಣೆಯಬೇಕಾಗುತ್ತದೆ. ಸಿಕ್ಕಿಲ್ಲದ, ತೊಡರಿಲ್ಲದ ಸುಸೂತ್ರ ಓದನ್ನು ಓದುಗರಿಗೆ ಒದಗಿಸುವ ಚಾತುರ್ಯ ಲೇಖಕನಿಗೆ ಇರಬೇಕಾಗುತ್ತದೆ. ಕೆಲವೊಮ್ಮೆ ಕಲ್ಪನೆಗಳ ಬಣ್ಣವೇ ಹೆಚ್ಚಾಗಿ ಸೇರಿ ನೈಜ ಚಿತ್ರವೇ ಮಸುಕಾಗುವ ಸಾಧ್ಯತೆಗಳಿರುತ್ತವೆ. ಆದರೆ ಈ ಕಾದಂಬರಿಯಲ್ಲಿ ಕಲ್ಪನೆಗಿಂತ ಇತಿಹಾಸಕ್ಕೆ ಒತ್ತುಕೊಟ್ಟಿರುವುದನ್ನು ಗಮನಿಸಬಹುದು. [ಓದಲೇಬೇಕಾದ ಕಾದಂಬರಿ...]

English summary
Amoghavarsha Nrupatunga is one of the important Kannada emperor ruled Karnataka during Rashtrakuta empire. Prakash Hemavathi from Chicago has written an engrossing novel on Nrupatunga. Triveni Srinivasrao, Chicago writes about the salient feature of Kannada novel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X