ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಲೆಂಡಿನಲ್ಲಿ ಜಾನಪದ ಶೈಲಿಯಲ್ಲಿ ಗಣೇಶ ವಂದನೆ

By * ಪ್ರಕಾಶ್ ರಾಜಾರಾವ್, ಆಕ್ಲೆಂಡ್
|
Google Oneindia Kannada News

Grand Ganeshotsava in Auckland, NZ
"ತೆಪ್ಪು ಮಾಡಿದವನಲ್ಲ, ತೆರ ಕಟ್ಟಿದವನಲ್ಲ, ಬರೀ ಭಕುತಿಯಿಂದ ಹಾಡ್ತಾ ಇದೀನಿ" ಎಂದು ಕಂಸಾಳೆ ಶೈಲಿಯಲ್ಲಿ ಜಾನಪದ ವೇಶಧಾರಿ ದತ್ತಾತ್ರೇಯ ಶಾಮಣ್ಣ ಅವರು ಗಣೇಶನನ್ನು ಸ್ತುತಿಸಿ ನರ್ತಿಸಿ ಹಾಡಿದ್ದು ಅದ್ಭುತವಾಗಿತ್ತು. ನ್ಯೂಜಿಲೆಂಡ್ ಕನ್ನಡ ಕೂಟ ಆಕ್ಲೆಂಡಿನಲ್ಲಿ ದಿನಾಂಕ 24ನೇ ಸೆಪ್ಟೆಂಬರ್ 2011 ಶನಿವಾರದಂದು ಆಯೋಜಿಸಿದ್ದ "ಗಣೇಶೋತ್ಸವ" ಕಾರ್ಯಕ್ರಮ ಯಶಸ್ವಿಯಾಗಲು ದತ್ತಾತ್ರೇಯ ಮತ್ತು ಇನ್ನೂ ಅನೇಕರ ಕೊಡುಗೆ ಕಾರಣವಾಯಿತು.

ಕನ್ನಡ ಕೂಟದ ಅಧ್ಯಕ್ಷ ಪ್ರಕಾಶ್ ಬಿರಾದರ್ ಅವರು ಸ್ವಾಗತ ಭಾಷಣ ಮಾಡಿ, ಇತ್ತೀಚೆಗೆ ಕನ್ನಡಕ್ಕೆ ಎಂಟನೇಯ ಜ್ಞಾನ ಪೀಠ ಪ್ರಶಸ್ತಿ ಗಳಿಸಿಕೊಟ್ಟ ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆ ಸಲ್ಲಿಸಿದರು. ನೂತನ ದಂಪತಿಗಳಾದ ಮಾಳವಿಕ [ಇವರು ಕನ್ನಡದ ಖ್ಯಾತ ನಟ ಚೊಮನದುಡಿ ವಾಸುದೇವರಾವ್ ಅವರ ಮೊಮ್ಮಗಳು] ಮತ್ತು ಪವನ್ ಕೌಶಿಕ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೆಂಕಟಾಚಲಂ ಅವರು ಗಣೇಶನಿಗೆ ಪೂಜೆ ಸಲ್ಲಿಸಿದ ಮೇಲೆ, ರಿಶಭ ಮತ್ತು ಪ್ರಣವ್ ನಿಂಬರ್ಗಿ ಅವರಿಂದ ಗಣೇಶ ಶ್ಲೋಕ ಪಠಣೆ, ಮೃದುಲಾ ಪ್ರವೀಣ್ ಮತ್ತು ಪ್ರಜ್ವಲ್ ಹಾಡಿದ "ಗಜಮುಖನೇ ಗಣಪತಿಯೇ" ಹಾಡುಗಳು ಸುಶ್ರಾವ್ಯವಾಗಿಯೂ ಮತ್ತು ಸಮಯೋಚಿತವಾಗಿಯೂ ಇದ್ದವು. ಪುಟಾಣಿಗಳಾದ ಆದಿತ್ಯ, ಸಾಕ್ಷಿ ಕಟ್ಟಿ, ವಿನೋದಿನಿ, ರಿತ್ವಿಕ್, ಪ್ರಣವ್, ಮೋನಿಶಾ, ಈಶಾ ಎಲ್ಲರೂ ಬಗೆ ಬಗೆಯ ನೃತ್ಯಗಳಿಂದ ರಂಜಿಸಿದರು. ಯಶಸ್ ಧರಣೇಂದ್ರ "ಸಂತೋಷಕ್ಕೆ" ಎಂದು ಕುಣಿದರೆ, ಅನೇಕ ಹಾಡುಗಳ ರೀಮಿಕ್ಸಗಳಿಗೆ ನಿಧಿ ವಿಜಯನಾರಸಿಂಹ ಅವರು ನರ್ತಿಸಿದ್ದು "ಮಿಂಚೆದ್ದು ಕುಣಿದಂತಾಯಿತು" ಈ ನೃತ್ಯ ಸಂಯೋಜನೆ ಮಾಡಿದ ಪೂಜಾ ಭಗತ್ ಅಭಿನಂದನಾರ್ಹರು. ಹಿರಿಯ ಕಲಾವಿದೆ ಆದಿತ್ಯ ಗೋಪಾಲ್ ಅವರ "ಆಪ್ತ ರಕ್ಷಕ" ಚಿತ್ರದ ನೃತ್ಯ ಸೊಗಸಾಗಿತ್ತು.

ಕನ್ನಡ ಕೂಟದ ಸದಸ್ಯರ ವಾರ್ಷಿಕ ಸಭೆಯನ್ನು ನಡೆಸಲಾಯಿತು. ಸದ್ಯದಲ್ಲಿಯೇ ನ್ಯೂಜಿಲೆಂಡಿನಲ್ಲಿ ಬೇಸಗೆಕಾಲ ಬರಲಿರುವ ಕಾರಣ ಕೂಟ ಆಯೋಜಿಸಲಿರುವ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಅಭಿವೃದ್ಧಿ ಇತ್ಯಾದಿ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆದು ಅನೇಕ ಸಲಹೆಗಳನ್ನು ಸದಸ್ಯರು ನೀಡಿದರು. ಡಾ.ರಾಜ್ ಅವರ ಸ್ಮರಣಾರ್ಥ ನಡೆಸಲಾದ ಕನ್ನಡ ಅಂತಾಕ್ಷರೀ ಕಾರ್ಯಕ್ರಮದಲ್ಲಿ ವಿಜೇತರಾದ ಕೃಷ್ಣಾ ನಾಗರಾಜ್, ವಸಂತ್ ಕೆಂಚಪ್ಪ, ಭಾಸ್ಕರ್ ನಾರಾಯಣಪ್ಪ, ಶಂಕರ್ ಬೆಂಗಳೂರು ಅವರಿಗೆ ಬಹುಮಾನ ವಿತರಿಸಿ ಈ ಕಾರ್ಯಕ್ರಮದ ರೂವಾರಿ ಸತ್ಯಕುಮಾರ್ ಕಟ್ಟೆ ಮತ್ತು ಸಂಗಡಿಗರನ್ನು ವಂದಿಸಿಲಾಯಿತು. ಕೂಟದ ಅಧ್ಯಕ್ಷ್ ಪ್ರಕಾಶ್ ಬಿರಾದರ್, ಕಾರ್ಯದರ್ಶಿ, ವಸಂತ್ ಕೆಂಚಪ್ಪ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರೂ ಉಪಸ್ಥಿತರಿದ್ದು ಕಳೆದ ವರ್ಷದಲ್ಲಿ ನಡೆಸಲಾದ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ವರದಿ ನೀಡಿದರು.

ಅಚ್ಚ, ಸ್ವಚ್ಛ ಕನ್ನಡದಲ್ಲ್ಲ ಅರಳು ಹುರಿದಂತೆ ಮಾತನಾಡುತ್ತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ ಮಾಳವಿಕ ಪವನ್ ಕೌಶಿಕ್ ದಂಪತಿಗಳು ಗಣೇಶನ ಹಬ್ಬದ ಮಹತ್ವ, ಅವನು ಮೂಷಿಕವಾಹನನಾದ ವೃತ್ತಾಂತ ಮುಂತಾದ ಉಪಯುಕ್ತ ಮಾಹಿತಿ ನೀಡಿದರು. ಎಂದಿನಂತೆ ಕರ್ನಾಟಕ ನಾಡಗೀತೆ, ಭಾರತ ಮತ್ತು ನ್ಯೂಜಿಲೆಂಡ್ ರಾಷ್ಟ್ರಗೀತೆಗಳನ್ನು ಕೊನೆಯಲ್ಲಿ ಹಾಡಲಾಯಿತು. ಕೂಟದವತಿಯಿಂದ ವ್ಯವಸ್ಥೆ ಮಾಡಿದ್ದ ಭೋಜನವನ್ನು ಸವಿದು, "ಗಣೇಶ ಎಲ್ಲರಿಗೂ ಒಳ್ಳೆಯದು ಮಾಡು, ಮುಖ್ಯವಾಗಿ ಈಗ ನಮ್ಮ ನ್ಯೂಜಿಲೆಂಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ರಗ್ಬೀ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ತಂಡ [ಆಲ್ ಬ್ಲಾಕ್ಸ್] ಗೆಲ್ಲುವಂತೆ ಅನುಗ್ರಹಿಸು" ಎಂದು ಬೇಡುತ್ತಾ ಕಾರ್ಯಕ್ರಮ ಅಂತ್ಯಗೊಳಿಸಲಾಯಿತು.

English summary
Ganeshotsava was celebrated in Auckland in Newzealand in a grand fashion on September 24. Various cultural activities was organized by the Auckland Kannada Sangha. A report by Prakash Rajarao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X