ಜನಮನವನ್ನು ಗೆದ್ದ ಸಮರ್ಥನಮ್ ಕಲಾವಿದರು
ಸುನಾದ ತಂಡದವರ ನೆರವಿಗಾಗಿ ಸಭೆಯಲ್ಲಿ ಫಂಡ್ ರೈಸಿಂಗ್ ಅನ್ನು ಹಮ್ಮಿಕೊಳ್ಳಲಾಗಿತ್ತು, ಆಯೋಜಕರ ನಿರೀಕ್ಷೆಗೂ ಮೀರಿ 1251 ಡಾಲರುಗಳನ್ನು ಸಂಗ್ರಹಿಸಿ ಸಭೆಯಲ್ಲಿ ಬೃಂದಾವನದ ಪದಾಧಿಕಾರಿಗಳು ಕಲಾವಿದರಿಗೆ ಸಮರ್ಪಿಸಿದರು. ತಾವು ಪ್ರಸ್ತುತಪ್ರಡಿಸಿದ ನೃತ್ಯಗಳಿಗೆ ತಕ್ಕಂತೆ - ಭರತನಾಟ್ಯ, ಸಾಮಾಜಿಕ ಹಾಗೂ ಜಾನಪದ ಹಾಡುಗಳಿಗೆ ತಕ್ಕಂತೆ ಕಲಾವಿದರು ತಮ್ಮ ಉಡುಪು ಮತ್ತು ಅಲಂಕಾರವನ್ನು ಶೀಘ್ರದಲ್ಲಿ ಬದಲಿಸಿಕೊಳ್ಳುತ್ತಿದ್ದುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನಂತರ ಸುನಾದ ತಂಡದವರ ಸನ್ಮಾನದ ಸಮಯದಲ್ಲಿ ಅವರ ಕೈಯಿಂದಲೇ "ಪರಿ" ಚಿತ್ರದ ಆಡಿಯೋ ಸಿಡಿಗಳನ್ನು ಪೂರ್ವ ಕರಾವಳಿಯ ಕನ್ನಡಿಗರಿಗೆಲ್ಲ ಬಿಡುಗಡೆ ಮಾಡಲಾಯಿತು. ಸ್ಥಳೀಯ ಸುರೇಶ್ ಬಾಬು ಮತ್ತು ಕ್ಯಾಲಿಫೋರ್ನಿಯಾದಿಂದ ಆಗಮಿಸಿದ ಎಂ.ಸಿ. ಗೌಡ ಅವರ ಜೊತೆಗೆ ವೇದಿಕೆಯ ಮೇಲೆ ಬೃಂದಾವನ ಮೈತ್ರಿ ತಂಡದ ಪದಾಧಿಕಾರಿಗಳು ಮತ್ತು ಸ್ಥಳೀಯ ಅಕ್ಕ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬೃಂದಾವನದ ಅಧ್ಯಕ್ಷ ಸಂತೋಷ್ಕುಮಾರ್ ಕಡ್ಳೇಬೇಳೇ ಅವರು ಅಕ್ಟೋಬರ್ 29,30ರಂದು ಬೃಂದಾವನದ ವತಿಯಿಂದ ಎಡಿಸನ್, ನ್ಯೂ ಜೆರ್ಸಿಯಲ್ಲಿ "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ಚಿತ್ರದ ಬಿಡುಗಡೆಯ ಸಿಹಿ ಸುದ್ದಿಯನ್ನು ಪ್ರೇಕ್ಷಕರಲ್ಲಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನಕುಮಾರ್ ಅವರು ಸುನಾದ ಹಾಗೂ ಪರಿ ತಂಡದವರಿಗೆ ಯಶಸ್ಸನ್ನು ಹಾರೈಸಿದರು. ನಂತರ ಉಷಾ ಪ್ರಸನ್ನಕುಮಾರ್ ಅವರು ಕಳೆದ ವರ್ಷ ನ್ಯೂ ಜೆರ್ಸಿಯಲ್ಲಿ ನಡೆದ ಅಕ್ಕ ಸಮೇಳನದ ವಿಶೇಷ ಕ್ಷಣಗಳನ್ನು ಮೆಲುಕು ಹಾಕಿದರು. ಸಭೆಯಲ್ಲಿ ಹಾಜರಿದ್ದ ಅನೇಕ ವಾಲಂಟಿಯರುಗಳ ಸೇವೆಯನ್ನು ಸ್ಮರಿಸಿದ ಅವರು ಮುಖ್ಯವಾಗಿ ಸಾಧನ-ಶಂಕರ್ ಶೆಟ್ಟಿ ಅವರು ಕನ್ವೆನ್ಷನ್ ಸೆಂಟರ್ಗೋಸ್ಕರ ನೀಡಿದ ಹಣಕಾಸಿನ ನೆರವನ್ನು ಪ್ರಶಂಸಿಸಿದರು. ನಂತರ ಮಾತನಾಡಿದ ಮಧು ರಂಗಯ್ಯ ಅವರು ಇನ್ನು ಕೆಲವೇ ದಿನಗಳಲ್ಲಿ ಮುಂದಿನ ವರ್ಷ ಅಕ್ಕ ಸಮ್ಮೇಳನ ಎಲ್ಲಿ ನಡೆಯುತ್ತದೆ ಎಂಬುದನ್ನು ಬಹಿರಂಗ ಮಾಡಲಾಗುವ ವಿಷಯವನ್ನು ಹಂಚಿಕೊಂಡರು. ಅಲ್ಲದೇ ಕಳೆದ ವರ್ಷದ ಹಣಕಾಸಿನ ಲೆಕ್ಕಾಚಾರವನ್ನು ಇನ್ನು ಸ್ವಲ್ಪದಿನಗಳಲ್ಲೇ ವಿಶ್ವಸ್ಥ ಮಂಡಳಿಯವರು ಸಾಲಪಡೆದಾದರೂ ತೀರಿಸುವುದಾಗಿ ಘೋಷಿಸಿದರು.