ನ್ಯೂ ಜೆರ್ಸಿಯ ಬೃಂದಾವನದಲ್ಲಿ ಗಣೇಶೋತ್ಸವ
ನಂತರದ ಕಾರ್ಯಕ್ರಮಗಳು ವಿದ್ಯಾ ಮೂರ್ತಿ ಮತ್ತು ಅಶೋಕ್ ಕಟ್ಟೀಮನಿ ಅವರ ನಿರೂಪಣೆಯಲ್ಲಿ ಮೂಡಿಬಂದವು. ಈ ಗಣೇಶೋತ್ಸವ ವಿಶೇಷವೆಂದರೆ ಪ್ರತಿಯೊಂದು ಕಾರ್ಯಕ್ರಮವೂ ಆಮಂತ್ರಿಸಿದ ಅತಿಥಿ ಕಲಾವಿದರು ಪ್ರಸ್ತುತಪಡಿಸಿದವಾಗಿದ್ದವು. ಮೊದಲಿಗೆ ಸೋಮಸುಂದರಂ ಮತ್ತು ತಂಡದವರಿಂದ ಸುಗಮ ಸಂಗೀತ. ಕೀ ಬೋರ್ಡ್ ಹಾಗೂ ತಬಲಾ ಪಕ್ಕವಾದ್ಯದವರ ಸಹಾಯದೊಂದಿಗೆ ಸೋಮಸುಂದರಂ ಕುಟುಂಬದವರು ಹಾಗೂ ಸ್ನೇಹಿತರು ಸೇರಿ ಒಟ್ಟು ಆರು ಜನ ಹಾಡುಗಾರರು ಅನೇಕ ಭಾವಗೀತೆ ಹಾಗೂ ಜನಪದಗೀತೆಗಳನ್ನು ಹಾಡಿದರು. ಮಾಯದಂಥ ಮಳೆ ಮೊದಲಾದ ಹಾಡುಗಳಿಗೆ ಅಲ್ಲಲ್ಲಿ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ತಾಳ ಸೇರಿಸಿದರು. ಸೋಮಸುಂದರಂ ತಂಡದವರಿಗೆ ಎಂ.ಜಿ.ಪ್ರಸಾದ್ ಬೃಂದಾವನ ಫಲಕವನ್ನು ನೀಡಿ ಗೌರವಿಸಿದರು.
ತದನಂತರ ಜ್ಯೂನಿಯರ್ ಅಕ್ಕ ಐಡಲ್ ಪ್ರಶಸ್ತಿ ವಿಜೇತೆ ಕುಮಾರಿ ಸಾನಿಕಾ ಮಹಾಶೆಟ್ಟಿ ನಾಲ್ಕು ಹಾಡುಗಳನ್ನು ಹಾಡಿದರು. ದೂರದ ಮೇರಿಲ್ಯಾಂಡ್ನಿಂದ ತಂದೆಯ ಜೊತೆ ನಾಟಕದ ಟೀಮಿನೊಂದಿಗೆ ಬಂದ ಸಾನಿಕ ತನಗೆ ಸಿಕ್ಕ ಅವಕಾಶವವನ್ನು ಚೆನ್ನಾಗಿ ಬಳಸಿಕೊಂಡು ನಾಲ್ಕು ಹಾಡುಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಈಗಾಗಲೇ ಹಿಂದೂಸ್ತಾನಿ ಸಂಗೀತವನ್ನು ಕಲಿಯುತ್ತಿರುವ ಸಾನಿಕ ಹಾಡಿದ ಹಾಡುಗಳು, ಶೈಲಿ ಹಾಗೂ ಧ್ವನಿ ಇವೆಲ್ಲವೂ ಈ-ಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ನೆನಪಿಗೆ ತಂದಿತು. ಸಾನಿಕ ಪ್ರತಿಯೊಂದು ಹಾಡುಗಳನ್ನು ನೆನಪಿನಲ್ಲಿಟ್ಟುಕೊಂಡು ಹಾಡಿದ್ದೂ ಅಲ್ಲದೇ ಕ್ಯಾರಿಒಕಿ ಹಿಮ್ಮೇಳಕ್ಕೆ ತಕ್ಕಂತೆ ಬಹಳ ಇಂಪಾಗಿ ಹಾಡಿದ್ದು ಪ್ರೇಕ್ಷಕರಿಗೆ ಮೆಚ್ಚುಗೆಯಾಯಿತು. ಸಾನಿಕಾಗೆ ಕಿರುಕಾಣಿಕೆಯನ್ನು ಉಷಾ ಪ್ರಸನ್ನಕುಮಾರ್ ಅವರು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.