ಮೋಡಿ ಮಾಡಿದ ಜ್ಯೂನಿಯರ್ ಕಾಳಿಂಗ ರಾವ್
ಕನ್ನಡ ಸಂಗೀತ ರಸಿಕರಿಗೆ ಇನ್ನಷ್ಟು ಮಾಧುರ್ಯ ಸವಿಯುವ ಅವಕಾಶ ಕಲ್ಪಿಸಿದ್ದು ಕರ್ನಾಟಕದ "ಜ್ಯೂನಿಯರ್ ಕಾಳಿಂಗ ರಾವ್" ಎಂದೇ ಹೆಸರಾದ ಪ್ರೊಫೆಸರ್ ಮಲ್ಲಣ್ಣ ಅವರು. ಮಲ್ಲಣ್ಣ ಅವರು ಸ್ಥಳೀಯ ಗಾಯಕರು ಹಾಗು ವಾದ್ಯಗಾರರ ಜೊತೆಗೂಡಿ, ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಕಾಳಿಂಗ ರಾವ್ ಅವರ ಅಮರ ಗೀತೆಗಳನ್ನು ಮತ್ತು ಇತರ ಅತ್ತ್ಯುತಮ ಚಿತ್ರಗೀತೆಗಳನ್ನು ಹಾಡಿದರು. ಹಲವು ದಶಕಗಳಿಂದ ಕನ್ನಡ ಸಂಗೀತ ಸೇವೆ ಮಾಡಿಕೊಂಡು ಬಂದಿರುವ ಮಲ್ಲಣ್ಣ ಅವರ ಗಾಯನ ಎಲ್ಲರನ್ನೂ ಮೋಡಿ ಮಾಡಿತು.
ಅಧ್ಯಕ್ಷ ಪ್ರವೀಣ ನಡುತೋಟ ಅವರು ತಮ್ಮ ಉಲ್ಲೇಖದಲ್ಲಿ ಎಲ್ಲ ಸದಸ್ಯರಿಗೂ ತಮ್ಮ ಯೋಜನೆಗಳ ಬಗ್ಗೆ ತಿಳಿಸಿ, ಸದಸ್ಯತ್ವ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತಂದಿರುವ ಬದಲಾವಣೆಗಳನ್ನೂ ವಿವರಿಸಿದರು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರನ್ನು ಮಂದಾರ ಕೂಟಕ್ಕೆ ಪರಿಚಯಿಸುವ ಪಣ ತೊಟ್ಟರು. ಇದರ ನಂತರ ಬಿಸಿ ಬಿಸಿ ಭಜ್ಜಿ, ಜೋಳ ತಿಂದು ಚಹಾ ಕುಡಿದ ಮೇಲೆ ಮತ್ತಷ್ಟು ಮನರಂಜನಾ ಕಾರ್ಯಕ್ರಮಗಳು.
ಮುಂದಿನ ಎರಡು ಕಾರ್ಯಕ್ರಮಗಳ ವೈಶಿಷ್ಟ್ಯ ಎಂದರೆ, ಅವನ್ನು ಹೆಸರಾಂತ ಕಲಾವಿದ ದಂಪತಿಗಳಾದ ನಮಿತ ಹಾಗೂ ಗಣೇಶ ದೇಸಾಯಿ ಅವರು ನಡೆಸಿಕೊಟ್ಟಿದ್ದು. ಮೊದಲಿಗೆ, ನಮಿತ ದೇಸಾಯಿ ಅವರ ಅತ್ಯಮೋಘ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನ ಸೂರೆಗೊಂಡಿತು. ನಾಟ್ಯಕ್ಕೆ ಬಳಸಿದ ಹಾಡುಗಳಲ್ಲಿ ಕೆಲವನ್ನು ಈ ದಂಪತಿಗಳೇ ಹಾಡಿದ್ದೂ ಒಂದು ವಿಶೇಷ. ನವ ಪೀಳಿಗೆಯ ಹೆಸರಾಂತ ಶಾಸ್ತ್ರೀಯ ಹಾಗು ಲಘು ಸಂಗೀತಗಾರರಾದಂಥ ಗಣೇಶ ದೇಸಾಯಿ ಅವರ ಗಾಯನದಲ್ಲಿ ಮೂಡಿಬಂದ ಮಂಕುತಿಮ್ಮನ ಕಗ್ಗ, ವಚನಗಳು ಹಾಗೂ ಪ್ರಸಿದ್ಧ ಭಾವಗೀತೆಗಳು ಪ್ರೇಕ್ಷಕರನ್ನು ಭಾವಪರವಶಗೊಳಿಸಿತು. ಗಣೇಶ ದೇಸಾಯಿ ಅವರ ಗಾಯನ ಶೈಲಿ, ಹಾರ್ಮೋನಿಯಂ ನುಡಿಸುವ ಸಾಮರ್ಥ್ಯ, ಪ್ರೇಕ್ಷಕರ ಜೊತೆ ಬೆರೆಯುವ ವೈಖರಿ - ಇವೆಲ್ಲ ಅವರ ಅಸಾಮಾನ್ಯ ಪ್ರತಿಭೆಗೆ ಕನ್ನಡಿ. ಇವರಿಗೆ ತಬಲ ವಾದಕರಾಗಿ ಸಮರ್ಥ ಪಕ್ಕ ವಾದ್ಯ ಸಹಾಯ ನೀಡಿದವರು ಅಕ್ಷಯ್ ನವಲಾಡಿ. ಈ ಪ್ರತಿಭಾನ್ವಿತ ದಂಪತಿಗಳು ಎಲ್ಲರ ಮೆಚ್ಚುಗೆ ಪಡೆದಿದ್ದು ಪ್ರೇಕ್ಷಕರ ಪ್ರಚಂಡ ಕರತಾಡನದಿಂದ ವ್ಯಕ್ತವಾಯಿತು. [ಮುಂದೆ ಓದಿ... ಬೊಂಬಾಟ್ ಭೋಜನ]