ನ್ಯೂ ಇಂಗ್ಲೆಂಡ್ ಮಂದಾರದಲ್ಲಿ ಭರ್ಜರಿ ಗಣೇಶೋತ್ಸವ
ನೂತನ ಅಧ್ಯಕ್ಷ ಪ್ರವೀಣ ನಡುತೋಟ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರೆಲ್ಲ ಹುರುಪಿನಿಂದ ಸಮಯಕ್ಕೆ ಮುಂಚೆ ಆಗಮಿಸಿತಮ್ಮ ತಯಾರಿಯಲ್ಲಿ ಮಗ್ನರಾಗಿದ್ದರು. ಶಾಂತರಾಜು ಅವರ ಹಣಕಾಸು ಸಮಿತಿ ಮತ್ತು ಜಾಹ್ನವಿ ಬಸವರಾಜಪ್ಪ ಅವರ ಸ್ವಾಗತ ಸಮಿತಿಯವರು, ಸದಸ್ಯರು ಹಾಗೂ ಅತಿಥಿಗಳನ್ನು ಬಹಳ ಅಚ್ಚುಕಟ್ಟಾಗಿ ಬರಮಾಡಿಕೊಂಡರು. ಕಾರ್ಯಕ್ರಮದ ಮೊದಲಿಗೆ ಕೋದಂಡಪಾಣಿ ಅವರು ಸಾಂಪ್ರದಾಯಿಕ ಗಣೇಶ ಪೂಜೆ ನಡೆಸಿಕೊಟ್ಟರು. ವಿಘ್ನ ವಿನಾಶಕನ ಕೃಪೆ ಕೋರಿದ ನಂತರ ಉಪಾಧ್ಯಕ್ಷೆ ಮಮತಾ ಕೂಡ್ಲುಗಿ ಅವರಿಂದ ಸ್ವಾಗತ ಭಾಷಣ. ನಂತರ, ಬೋಸ್ಟನ್ನವರೇ ಆದ ದೀಪ್ತಿ ನವರತ್ನ ಅವರು ಕರ್ನಾಟಕ ಶಾಸ್ತ್ರೀಯ ಗಾಯನದಿಂದ ಪ್ರೇಕ್ಷಕರ ಮನ ಗೆದ್ದರು. ಪಕ್ಕವಾದ್ಯದಲ್ಲಿ ಮೃದಂಗ ನುಡಿಸಿದವರು ಉಲ್ಲಾಸ್ ರಾವ್.
ಮುಂದಿನ ಕಾರ್ಯಕ್ರಮದಲ್ಲಿ, ಶೋಭಾ ಹಿರೇಮಠ ಅವರು ತಮ್ಮ ತಂಡದೊಂದಿಗೆ ಹಳ್ಳಿಯ ಜೀವನ ಹಾಗೂ ಜಾನಪದ ಸೊಗಡನ್ನು ನಿರೂಪಿಸುವ "ದುಡಿತ-ಮಿಡಿತ" ಎಂಬ ವಿನೂತನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಇದರಲ್ಲಿ ಅಡುಗೆ ಮನೆ ಪರಿಕರಗಳನ್ನು ಉಪಯೋಗಿಸಿ ಸಂಗೀತ ವಾದ್ಯ ನುಡಿಸಿದರು. ಜನಪದ ಗೀತೆ "ಹಾಕಯ್ಯಾ ಹರಿಗೋಲ ನೂಕಯ್ಯ ತೆಪ್ಪ" ಹಾಗೂ ಇತರ ಹಾಡುಗಳನ್ನು ಕೇಳಿ ಕರ್ನಾಟಕದ ಯಾವುದೋ ಹಳ್ಳಿಗೆ ಭೇಟಿ ಕೊಟ್ಟಂಥ ಅನುಭವ! ಮುಂದೆ, ಕಣ್ಮನ ತಣಿಸುವ ಕರ್ನಾಟಕದ ವಿವಿಧ ಪ್ರದೇಶಗಳ ವಸ್ತ್ರ ವಿನ್ಯಾಸವನ್ನು ಬಿಂಬಿಸುವ ಫ್ಯಾಶನ್ ಶೋ. ಅಶ್ವಿನಿ ಸಾಮಗ ಹಾಗೂ ತಂಡದವರು ವಿವಿಧ ಉಡುಗೆ ಧರಿಸಿ ತಮ್ಮ "ಬೆಕ್ಕಿನ ನಡಿಗೆ" ಯಿಂದ ಎಲ್ಲರನ್ನು ರಂಜಿಸಿದರು! ದಂಪತಿಗಳಲ್ಲದೆ ಮಕ್ಕಳು ಕೂಡ ತಮ್ಮ ವೇಷಭೂಷಣದಿಂದ ನಮ್ಮನ್ನು ಕರುನಾಡಿಗೆ ಒಯ್ದರು.
ವೈಶಾಲಿ ಹೆಗಡೆ ಅವರ ನೇತೃತ್ವದಲ್ಲಿ ಮನರಂಜನಾ ಸಮಿತಿಯವರು ಕೂಟದ ವಿವಿಧ ಸಮಿತಿಗಳನ್ನು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರಿಗೆ ಪರಿಚಯಿಸಿದರು. ಪ್ರತಿ ಕಾರ್ಯಕ್ರಮಕ್ಕೆ ಮುಂಚೆ ಒಬ್ಬೊಬ್ಬರಂತೆ ಭೋಜನ, ಸ್ವಾಗತ, ಅಂತರ್ಜಾಲ ತಾಣ, ಛಾಯಾಗ್ರಹಣ, ಧ್ವನಿ ವ್ಯವಸ್ಥೆ, ಮನರಂಜನೆ, ಪ್ರಚಾರ, ಸಲಹೆ, ಹಾಗೂ ದರ್ಪಣ ವಾರ್ತಾಪತ್ರಿಕೆ ಸಮಿತಿಯವರು ವೇದಿಕೆ ಮೇಲೆ ಬಂದು ತಮ್ಮ ಯೋಜನೆಗಳನ್ನು ಹಂಚಿಕೊಂಡು, ಮುಂಬರುವ ಕಲಾವಿದರ ಪರಿಚಯ ಮಾಡಿಕೊಟ್ಟರು.