ಸರೋಜಾದೇವಿಗೆ ಈಬಾರಿ ಅಮೆರಿಕ ಗಣೇಶನ ಕಡುಬು
ಜರ್ಮನ್ ಟೌನಿನ ಸೆನೆಕಾ ವ್ಯಾಲಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಉತ್ಸವ ಹಲವು ಆಕರ್ಷಣೆಗಳನ್ನು ತನ್ನದಾಗಿಸಿಕೊಂಡಿತ್ತು. ಗಣೇಶ ಪೂಜೆ, ಮೆರವಣಿಗೆ ಮತ್ತು ವಿಸರ್ಜನೆ ; ಕಾವೇರಿ ಮಕ್ಕಳಿಂದ ಹಾಡು ನೃತ್ಯ; ಕರ್ನಾಟಕದಿಂದ ಆಗಮಿಸಿರುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈಭವ.
ಸ್ಥಳೀಯ 'ಗಾನಸುಧೆ' ತಂಡದಿಂದ ಸುಶ್ರಾವ್ಯ ಕರ್ನಾಟಕ ಕರೋಕೆ ಹಾಡುಗಳು, ಬೆಂಗಳೂರಿನ 'ಸಮರ್ಥನಂ' ಅಂಧರ ಶಾಲೆಯ ಮಕ್ಕಳಿಂದ ಮನೋಜ್ಞ ಭರತನಾಟ್ಯ ಪ್ರದರ್ಶನ ಹಾಗೂ ಪಿಟ್ಜ್ ಬರ್ಗ್ ನ ನವಚೇತನ ಕಲಾವಿದರು ತಂಡದ 'ವಶೀಕರಣ' ನಗೆನಾಟಕ ಅಪಾರ ಜನಮೆಚ್ಚುಗೆ ಗಳಿಸಿತು.
ನಗೆನಾಟಕ 'ವಶೀಕರಣ'ವು ಹೆಸರಿಗೆ ತಕ್ಕಂತೆ ಪ್ರೇಕ್ಷಕರನ್ನು ವಶೀಕರಣಗೊಳಿಸುವುದರಲ್ಲಿ ಯಶಸ್ಸು ಕಂಡಿತೆಂದರೆ ತಪ್ಪಾಗದು. ಸರಾಸರಿ ಎರಡು ನಿಮಿಷಕ್ಕೊಂದಾದರೂ ನಗೆಯ ತರಂಗಗಳನ್ನು ಎಬ್ಬಿಸುತ್ತಿದ್ದ ಹಾಸ್ಯ ಡೈಲಾಗ್ಗಳೇ ಆ ನಾಟಕದ ಜೀವಾಳ.
ಚತುರ್ಭಾಷಾ ತಾರೆ, ಅಭಿನೇತ್ರಿ ಬಿ. ಸರೋಜಾದೇವಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಮೆರಿಕಾ ಕನ್ನಡಿಗರ ಕನ್ನಡಪರ ಚಟುವಟಿಕೆಗಳಿಗೆ ಹರ್ಷ ವ್ಯಕ್ತಪಡಿಸಿದ ಅವರು ವಿಶೇಷವಾಗಿ ಸಮರ್ಥನಂ ಅಂಧ ಮಕ್ಕಳ ನಾಟ್ಯಸೌರಭಕ್ಕೆ ಮನಸೋತರು.
ಈ ಮಕ್ಕಳ ಶ್ರೇಯೋಭಿವೃದ್ದಿಗಾಗಿ ವೇದಿಕೆಯಿಂದಲೇ 260 ಡಾಲರುಗಳ ನೆರವು ಘೋಷಿಸಿದ ಕೊಡುಗೈ ದಾನಿ ಸರೋಜಮ್ಮ, ತಾವು ಮಲ್ಲೇಶ್ವರಂನಲ್ಲಿ ನಡೆಸುತ್ತಿರುವ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಅನಿವಾಸಿ ಕನ್ನಡಿಗರು ನೆರವಿನ ಹಸ್ತ ಚಾಚಬೇಕೆಂದು ಇದೇ ಸಂದರ್ಭದಲ್ಲಿ ಸೆರಗೊಡ್ಡಿದರು.
"ಯಾವುದೇ ಹೆಣ್ಣನ್ನು ಈ ರೀತಿ ಶೋಷಿಸಬಾರದು. ಎಲ್ಲರನ್ನೂ ಗೌರವದಿಂದ ಕಾಣಬೇಕು" ಎಂದು ಅಮೆರಿಕಾಗೆ ತೆರಳುವ ಮುನ್ನ ಕರ್ನಾಟಕ ಮಾಧ್ಯಮಗಳಿಗೆ ಅವರು ಹೇಳಿದುದನ್ನು ಇಲ್ಲಿ ಸ್ಮರಿಸಬಹುದು.
ಕಾವೇರಿ ಅಧ್ಯಕ್ಷೆ ಜಯಶ್ರೀ ಜಗದೀಶ್ ಮಾರ್ಗದರ್ಶನದಲ್ಲಿ ಉತ್ಸವವನ್ನು ಕಾವೇರಿ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಏರ್ಪಡಿಸಿದ್ದರು. ಮನೆ ಬಾಗಿಲಿಗೆ ಬಂದ ಹಿರಿಯ ಕನ್ನಡತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಆದರೆ, ಹಬ್ಬದ ಊಟೋಪಚಾರಗಳ ವೈವಿಧ್ಯ ಹಾಗೂ ಸರಬರಾಜು ಸರಾಸರಿ ಗುಣಮಟ್ಟಕ್ಕಿಂತ ಕೆಳಗಿತ್ತು ಎಂದು ಸದಸ್ಯರು ಬೇಜಾರು ವ್ಯಕ್ತಪಡಿಸಿದರು. ಕಾವೇರಿ ಸಂಘ ಮತ್ತು ಡಾ. ರಂಗಮಣಿ ಹಾಗೂ ಮಾಧು ಮೂರ್ತಿ ಅವರು ಗಣೇಶ ಹಬ್ಬವನ್ನು ಜಂಟಿಯಾಗಿ ಪ್ರಾಯೋಜಿಸಿದ್ದರು.
ಅಂದಹಾಗೆ, ಕಾವೇರಿ ಪಲ್ಲಕ್ಕಿಯನ್ನು ಹೊರಲು ಹೊಸ ಪದಾಧಿಕಾರಿಗಳ ಪಡೆ ಆಗಮಿಸುತ್ತದೆ. ಸರ್ವ ಸದಸ್ಯರ ಸಭೆ, ಚುನಾವಣೆ ದಿನಾಂಕಗಳು ಸಮೀಪಿಸುತ್ತಿದ್ದು ಕಲಾವಿದ ಇ-ಸ್ಯಾವಿ ಹರಿದಾಸ್ ಲಹರಿ ಅವರು ಮುಂದಿನ ಸಾಲಿಗೆ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅದಕ್ಕೆ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಪ್ರೋತ್ಸಾಹ ಸಿಗಲಿದೆ ಎಂಬ ಮಾತುಗಳು I-495 ಕ್ಯಾಪಿಟಲ್ ಬೆಲ್ಟ್ ವೇಯಿಂದ ಕೇಳಿ ಬರುತ್ತಿವೆ ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.