ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೇಷ್ಠವಾದದ್ದು ಪಾರ್ಲಿಮೆಂಟ್ ಅಲ್ಲ ಸಂವಿಧಾನ

By * ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

Anna Hazare
(ಮುಂದುವರಿದಿದೆ...) ಇಲ್ಲಿ ಮುಖ್ಯವಾಗಿ ಪರಾಮರ್ಶಿಸುವ ಅಂಶವೆಂದರೆ ಈ ತರಹದ ಗೊಂದಲ ಮತ್ತು ಸಂಶಯಗಳು ಈ ವಿಷಯದಲ್ಲಿ ಸೂಕ್ತವೆ? ಅತಿ ಕೆಳಗಿನ ಸರಕಾರಿ ಗುಮಾಸ್ತೆಯಿಂದ ದೊಡ್ಡ ದೊಡ್ಡ ಮಂತ್ರಿಗಳನೇಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅತೀ ಮುಖ್ಯ ಸ್ಥಾನಗಳಲ್ಲಿರುವವರು ಇಂತಹ ಭ್ರಷ್ಟರನ್ನು ರಕ್ಷಿಸುತ್ತಾರೆ ಎಂಬ ಭಾವನೆ ಜನಮನದಲ್ಲಿ ಗಾಢವಾಗಿದೆ. ಜನಪ್ರತಿನಿಧಿಗಳಾದವರೇ ಭ್ರಷ್ಟರಾದಾಗ ಅಥವಾ ಭ್ರಷ್ಟರನ್ನು ರಕ್ಷಿಸುತ್ತಿರುವಾಗ ಅವರಿಂದ ಬಲಿಷ್ಠವಾದ ಭ್ರಷ್ಟಾಚಾರ ವಿರೋಧಿ ಮಸೂದೆಯನ್ನು ಆಶಿಸುವದರಲ್ಲಿ ಅರ್ಥವಿದೆಯೇ? 2ಜಿ ಹಗರಣ, ಏಶಿಯಾ ಪಂದ್ಯದ ಹಗರಣಗಳಂಥ ಅನೇಕ ಹಗರಣಗಳಲ್ಲಿ ಅನೇಕ ಮಂತ್ರಿಗಳೇ ಸಿಲುಕಿಹಾಕಿಕೊಂಡಿರುವಾಗ ಜನಪ್ರತಿನಿಧಿಗಳಲ್ಲಿ ಜನರ ವಿಶ್ವಾಸ ಅಡಗಿ ಹೋಗಿರುವದು ಸ್ವಾಭಾವಿಕ. ಇಂತಹ ಸಮಯದಲ್ಲಿ ಅದೇ ಜನಗಳನ್ನು ಪ್ರತಿನಿಧಿಸುವ ಗುಂಪೊಂದು ಸರಕಾರವನ್ನು ಎಳೆದು ದಾರಿಗೆ ತರುವ ಪ್ರಯತ್ನ ಮಾಡಿದರೆ ಅದರಲ್ಲಿ ತಪ್ಪೇನಿದೆ?

ಸರಕಾರ ಜನರಿಂದ ಚುನಾಯಿಸಲ್ಪಟ್ಟ ಪಾರ್ಲಿಮೆಂಟ್ ಪರಮಶ್ರೇಷ್ಠ ಮತ್ತು ಕಾನೂನನ್ನು ಮಾಡುವದು ಕೇವಲ ಪಾರ್ಲಿಮೆಂಟ್‌ನ ಕೆಲಸ. ಕೆಲವು ಸ್ವಘೋಷಿತ ಸಿವಿಲ್ ಸೊಸೈಟಿಯ ಪ್ರತಿನಿಧಿಗಳದ್ದಲ್ಲ ಎಂದು ಪದೇ ಪದೇ ಹೇಳುತ್ತ ಅಣ್ಣಾ ಹಜಾರೆಯವರ ಆಂದೋಲನವನ್ನು ಕಡೆಗಾಣಿಸುವ ಪ್ರಯತ್ನ ಮಾಡುತ್ತಿದೆ. ಆದರೆ ನಿವೃತ್ತ ಅಟಾರ್ನಿ ಜನರಲ್ ಸೊಲಿ ಸೊರಾಬ್‌ಜಿ ಅವರ ಪ್ರಕಾರ, ಪರಮ ಶ್ರೇಷ್ಠವಾದದ್ದು ಸಂವಿಧಾನ. ಪಾರ್ಲಿಮೆಂಟ್ ಅಲ್ಲ, ಸಂವಿಧಾನ We the people ಎಂದು ಆರಂಭವಾಗುತ್ತದೆ. ಆದ್ದರಿಂದ ಜನರಿಗಾಗಿ ಮಾಡಲ್ಪಟ್ಟ ನೀತಿ ಸಂಹಿತೆಯಾದ ಸಂವಿಧಾನ ಕೂಡ ಜನರ ಆಶೋತ್ತರಗಳನ್ನು ಕಡೆಗಾಣಿಸುವದನ್ನು ಸಹಿಸುವದಿಲ್ಲ ಎಂದು ತಿಳಿಯಬಹುದು. ಕರ್ನಾಟಕದ ಪ್ರಖ್ಯಾತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕೂಡ ಅಣ್ಣಾ ಹಜಾರೆಯವರ ಆಂದೋಲನ ಸಂವಿಧಾನಕ್ಕನುಗುಣವಾಗಿದೆ ಮತ್ತು ಅದಕ್ಕೆ ಅವರ ಬೆಂಬಲವಿದೆ ಎಂದು ಹೇಳಿದ್ದಾರೆ.

ಸಂವಿಧಾನ ಜನಮನದ ಪಾಲನೆ ಮತ್ತು ರಕ್ಷಣೆಗಾಗಿ ಮಾಡಲ್ಪಟ್ಟಿದೆ. ಆ ಸಂವಿಧಾನದ ರಕ್ಷಕರೇ ಭಕ್ಷಕರಾದಾಗ, ಅದೇ ಜನಮನ ಸರಕಾರದ ಕಿವಿ ಹಿಡಿದು ಸರಿದಾರಿಗೆ ಕರೆದೊಯ್ಯುವದು ಹೇಗೆ ತಪ್ಪು? ಭ್ರಷ್ಟಾಚಾರವನ್ನು ಮಟ್ಟ ಹಾಕುವ ಯಾವ ಮಂತ್ರದಂಡವೂ ತಮ್ಮಲ್ಲಿಲ್ಲ ಎಂಬ ಅಸಹಾಯಕತೆಯನ್ನು ಪ್ರದರ್ಶಿಸುವ ಸರಕಾರ ಜನರೆಲ್ಲ ಒಪ್ಪುವಂತಹ ವಿಕಲ್ಪವನ್ನು ಮುಂದಿಟ್ಟಾಗ ಅದನ್ನು ಪರಾಮರ್ಶಿಸುವ ಗೋಜಿಗೂ ಹೋಗದೆ ಸಾರಾಸಗಟಾಗಿ ನಿರಾಕರಿಸುತ್ತಿದೆಯೇಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕದಿರುವದರಿಂದ ಮತ್ತು ಅಣ್ಣಾ ಹಜಾರೆ ಮಾತ್ರ ಒಂದು ವೈಕಲ್ಪಿಕ ಶಕ್ತಿಯಾಗಿ ಕಾಣಿಸುತ್ತಿರುವದರಿಂದ ಅವರಿಗೆ ಇಂತಹ ಅಭೂತ ಪೂರ್ವ ಜನ ಬೆಂಬಲ ದೊರಕುತ್ತಿದೆ.

ಕೆಲವು ರಾಜಕೀಯ ನೇತಾರರು ಅಣ್ಣಾ ಹಜಾರೆ ಅವರ ಆಂದೋಲನ ವಿಪಕ್ಷ ಮತ್ತು ಅವರ ಸಹಯೋಗಿ ಸಂಸ್ಥೆಗಳಿಂದ ಏರ್ಪಟ್ಟ ರಾಜಕೀಯ ತಂತ್ರ ಎಂದು ಬಣ್ಣಿಸಿ ಈ ಜನಾಂದೋಲನಕ್ಕೆ ರಾಜಕೀಯದ ಕೆಸರೆರಚಲು ಪ್ರಯತ್ನಿಸಿದ್ದಾರೆ. ಆದರೆ ಆಂದೋಲನದಲ್ಲಿ ಭಾಗವಹಿಸುತ್ತಿರುವ ಎಲ್ಲಾ ತರಹದ ಸಾಮಾನ್ಯ ಜನರನ್ನು ನೋಡಿದಾಗ ಈ ಹೇಳಿಕೆ ಅದೆಷ್ಟು ಸುಳ್ಳು ಎಂದು ಅರಿವಾಗುತ್ತದೆ. ಸಣ್ಣ ಕೂಸೊಂದನ್ನು ಎತ್ತಿಕೊಂಡು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ಮಹಿಳೆಯೊಬ್ಬಳು ನಮ್ಮಈ ಹೋರಾಟ ನಮಗಾಗಿ ಅಲ್ಲ. ಜನ ಲೋಕಪಾಲ ಕಾನೂನಿನಿಂದ ಸದ್ಯದಲ್ಲಿಯೇ ಮಹತ್ವದ ಬದಲಾವಣೆಯಾಗುತ್ತದೆ ಎಂದೇನು ನಾನು ಆಶಿಸಿಲ್ಲ. ಆದರೆ ಈಗ ಆರಂಭವಾದ ಈ ಹೋರಾಟ, ನಮ್ಮ ಮಕ್ಕಳ ಭವಿಷ್ಯದಲ್ಲಿ ಮಹತ್ವದ ಬದಲಾವಣೆ ತರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದು ಜನತೆಯ ಸದ್ಯದ ಮನೋಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಮಹಿಳೆ ಹೇಳಿದಂತೆ ಈ ಆಂದೋಲನದಿಂದ ಅಥವಾ ಜನಲೋಕಪಾಲ ಕಾನೂನಿನಿಂದ ಯಾವದೇ ತಕ್ಷಣದ ಬದಲಾವಣೆ ಆಗಲಿಕ್ಕಿಲ್ಲ. ಆದರೆ ಹೊರಾಟ ದಶಕಗಳಿಂದ ಸತಾಯಿಸಲ್ಪಟ್ಟ, ತುಳಿಯಲ್ಪಟ್ಟ ಮತ್ತು ನಿರ್ಲಕ್ಷ್ಯಕ್ಕೊಳಗಾದ ಜನರ ಆಕ್ರೋಶದ ಪ್ರತೀಕವಾಗಿದೆ. ಈ ಹೋರಾಟ ತನ್ನ ಸದ್ಯದ ಗುರಿಯನ್ನು ತಲುಪಲೇಬೇಕು. ಗುರಿ ತಲುಪಿ ಅಲ್ಲಿಗೆ ನಿಲ್ಲುವಂತಿಲ್ಲ. ಸದಾ ಕಾಲ ಆಳುವ ಜನಪ್ರತಿನಿಧಿಗಳ ಮತ್ತು ಸರಕಾರಿ ಉದ್ಯೋಗಿಗಳ ಮೇಲೆ ಕಣ್ಣಿಡುವ ಒಂದು ನೀತಿ ಸಂಹಿತೆ, ಪ್ರಣಾಳಿಕೆ ಮತ್ತು ಅದನ್ನು ಜಾರಿಗೊಳಿಸುವ ಮಾಧ್ಯಮದ ಉಪಸ್ಥಿತಿ ಅತ್ಯಗತ್ಯ. ಆದರೆ ಈ ಹೋರಾಟ ನಿಂತು ಹೋದರೆ ನಾವೊಂದು ಅರಾಜಕ ದೇಶ(Banana Republic)ವಾಗಿ ಮಾರ್ಪಟ್ಟು, ನಮ್ಮ ಮುಂದಿನ ಪೀಳಿಗೆಗಳ ಭವಿಷ್ಯ ಅತ್ಯಂತ ಕರಾಳವಾಗುವುದರಲ್ಲಿ ಸಂಶಯವಿಲ್ಲ.

English summary
Non-resident Indians residing in Singapore have aired their views on Anna Hazare movement in India against corruption and for Jan Lokpal bill. Vasanth Kulkarni from Singapore writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X