ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಲ್ಬರ್ನ್ ಕನ್ನಡ ಸಂಘದ ರಜತ ಮಹೋತ್ಸವ

By Prasad
|
Google Oneindia Kannada News

Srinath in Melbourne, Australia
ಮೆಲ್ಬೋರ್ನ್ ಕನ್ನಡ ಸಂಘವು ಏಪ್ರಿಲ್ 9, 2011ರಂದು ತನ್ನ 25ನೇ ವರ್ಷದ ರಜತ ಮಹೋತ್ಸವವನ್ನು ಸ್ಪ್ರಿಂಗ್ ವೇಲ್ ಟೌನ್ ಹಾಲ್, ಸ್ಪ್ರಿಂಗ್ ವೇಲ್ ನಲ್ಲಿ ಆಚರಿಸಿತು. ಸುಮಾರು 800 ಜನರುಗಳಿಂದ ಕೂಡಿದ್ದ ಈ ಸಮಾರಂಭದಲ್ಲಿ, ನಮ್ಮ ಕರ್ನಾಟಕದಿಂದ ಸಂಗೀತಗಾರರು ಮತ್ತು ರಾಜಕೀಯ ಧುರೀಣರು ಆಮಂತ್ರಿತರಾಗಿದ್ದರು. ಸಂಘವು ಕಳೆದ 25 ವರುಷಗಳಿಂದ ತನ್ನದೇ ಆದ ರೀತಿಯಲ್ಲಿ ತನ್ನವರಿಗೆ ತನ್ನ ನಾಡು, ನುಡಿ, ಮತ್ತು ಸಂಸ್ಕೃತಿಯನ್ನು ನೆನಪಿಸುತ್ತಲೇ ಈ ಶುಭ ಸಂದರ್ಭದಲ್ಲಿ ತನ್ನ ಎಲ್ಲಾ ಸದಸ್ಯರುಗಳಿಗೆ ಮತ್ತು ಸ್ವಯಂಸೇವಕರುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತದೆ.

ಬೆಳಗಿನ ತಿಂಡಿ (ಉಪ್ಪಿಟ್ಟು ಮತ್ತು ಕೇಸರಿಬಾತ್)ಯ ನಂತರ, ಸಮಯ ಸರಿಯಾಗಿ 9.30 ನಿಮಿಷಕ್ಕೆ ಸರಿಯಾಗಿ ಕನ್ನಡದ ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪನವರಿಂದ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತು. ಮೊದಲಿಗೆ ಭೈರಪ್ಪನವರ ಜೊತೆ ಸಂವಾದ ಏರ್ಪಡಿಸಲಾಗಿತ್ತು. ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ಭೈರಪ್ಪನವರು ತಮ್ಮ ಮಾತುಗಳಲ್ಲಿ ತಾವು ನೆಡೆದು ಬಂದ ದಾರಿಯನ್ನು ಸವಿವರವಾಗಿ ವಿವರಿಸುತ್ತಾ ಹೋದರು.

ನಂತರದ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ರವರಿಂದ ಕನ್ನಡದ ಭಾಷೆ/ಸಾಹಿತ್ಯದ ಬಗ್ಗೆ ಭಾಷಣ ಮತ್ತು ಮೆಲ್ಬರ್ನ್ ಕನ್ನಡ ಸಂಘಕ್ಕೆ ಅವರ ಇಲಾಖೆಯಿಂದ ಆಗಲಿರುವ ಸಹಾಯದ ಬಗ್ಗೆ ಒಂದು ಸಲಹೆ ಕೂಡ ಇತ್ತು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ಜೊತೆ ಮೆಲ್ಬರ್ನ್ ನ ವ್ಯಾಪಾರಿ/ಉದ್ಯಮಿಗಳಿಗಾಗಿಯೇ ಒಂದು ಸೌಹಾರ್ದಯುತವಾದ ಸಂವಾದವನ್ನು ಆಯೋಜಿಸಲಾಗಿತ್ತು. ಕಾರ್ಣಿಕ್ ರ (ಅನಿವಾಸಿ ಭಾರತೀಯ ಸಮಿತಿ) ಉಪಯುಕ್ತ ಮಾಹಿತಿಯಿಂದ ಸಾಕಷ್ಟು ಜನರು ಉಪಯೋಗ ಪಡೆದುಕೊಳ್ಳುವ ನಿರೀಕ್ಷೆಯಿದೆ. ಆನಂತರ ಅಚ್ಚುಕಟ್ಟಾದ ಮಧ್ಯಾನ್ಹದ ಭೋಜನವನ್ನು ಏರ್ಪಡಿಸಲಾಗಿತ್ತು.

ಜ್ಯೋತಿ ಬೆಳಗುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು. ನಮ್ಮ ರಜತ ಮಹೋತ್ಸವದ ನೆನೆಪಿನ ಕಾಣಿಕೆ ಮತ್ತು ಸ್ಮರಣ ಸಂಚಿಕೆ 'ಬೆಳ್ಳಿ ಚುಕ್ಕಿ'ಯನ್ನು ಬಿಡುಗಡೆ ಮಾಡಲಾಯಿತು. ನಮ್ಮ ಸ್ಥಳೀಯ ಪ್ರತಿಭೆಗಳು ತಮ್ಮಲ್ಲಿನ ಪ್ರತಿಭೆಯಿಂದ (ಹಾಡುವುದು, ವಾದ್ಯಸಂಗೀತ, ಕುಣಿತ) ಅಲ್ಲಿ ಸೇರಿದ್ದ ಪ್ರೇಕ್ಷಕರನ್ನು ನಿರೀಕ್ಷೆಗೂ ಮೀರಿ ರಂಜಿಸಿದರು. ಎಂದಿನಂತೆ, ನಮ್ಮ ಸದಸ್ಯರಾದ ಸತೀಷ್ ಸವಣೂರ್ ರಿಂದ ಕನ್ನಡ ಲೈಬ್ರರಿ, ಪವನ್ ಐವಾರ್ (ಸುಮುಖ ಎಂಟರ್ ಪ್ರೈಸಸ್)ರವರ ಆಭರಣದ ಅಂಗಡಿಗಳಾಗಲೇ ಹಾಲಿನಲ್ಲಿ ತಲೆ ಎತ್ತಿದ್ದವು. ಮೊಟ್ಟ ಮೊದಲ ಬಾರಿಗೆ ಡಾ ರೆಡ್ಡಿಯವರು ತಮ್ಮ ಸ್ನೇಹಿತರೊಡಗೂಡಿ ವೇದಿಕೆಯನ್ನು ಬಳಸಿಕೊಂಡು ತಮ್ಮ ಬಾಲ್ಯದ ಆಟಗಳನ್ನು ಪ್ರದರ್ಶಿಸಿದರು.

ನಂತರ ಆಗಮಿಸಿದ ಖ್ಯಾತ ಹಾಸ್ಯ ಕಲಾವಿದ ಮುಖ್ಯಮಂತ್ರಿ ಚಂದ್ರುರವರು ತಮ್ಮ ಹಾಸ್ಯ ಚಟಾಕಿಗಳಿಂದ ಅಲ್ಲಿದ್ದ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದರು. (ನೆನಪಿರಲಿ, ಮೆಲ್ಬೋರ್ನ್ ಕನ್ನಡ ಸಂಘದ ಈ 25ನೇ ವರ್ಷದ ರಜತ ಮಹೋತ್ಸವಕ್ಕೆ ಕರ್ನಾಟಕ ಸರ್ಕಾರದಿಂದ ಹಣ ಸಹಾಯ ದೊರೆಯುವಲ್ಲಿ ಚಂದ್ರುರವರ ಆಸಕ್ತಿ/ಶ್ರಮ/ಸಹಾಯ ಮರೆಯಲಾಗದು). ಆಮೇಲೆ ಕಲಾಗಂಗೋತ್ರಿ ತಂಡದ ಇತರ ಸದಸ್ಯರಾದ ನಿರ್ದೇಶಕ ರಾಜಾರಾಂ, ಸಂಧ್ಯಾವಳಿ ಮತ್ತು ಕಲ್ಪನಾ ನಾಗಾನಾಥ್ ರವರಿಂದ ಅಭಿನಯಿಸಲ್ಪಟ್ಟ "ಕಂಬಳಿ ಸೇವೆ" ನಾಟಕ ಪ್ರೇಕ್ಷಕರ ಪ್ರಶಂಸೆಗಳಿಸಿತು. ನಂತರ ಕನ್ನಡದ ಖ್ಯಾತ ನಟ 'ಪ್ರಣಯರಾಜ' ಶ್ರೀನಾಥ್ ರವರ ದೂರದರ್ಶನ ಷೋ "ಆದರ್ಶ ದಂಪತಿಗಳು" ನಮ್ಮ ವೇದಿಕೆ ಮೇಲೆ ನಡೆಯಿತು. ಅದಕ್ಕಾಗಿ ಮೂವರು ದಂಪತಿಗಳನ್ನು ಆರಿಸಲಾಗಿತ್ತು.

ನಂತರ ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಆಹ್ವಾನಿತರಾಗಿದ್ದ ಸ್ಥಳೀಯ ಮೇಯರ್ Cr. Roz Blades, Hon. Mathew Guy, Minister of Planning Victoria, Rakesh V Kawra, Vice Consul. Consulate General India, ರವರೂ ಸೇರಿದಂತೆ ಕರ್ನಾಟಕದಿಂದ ಆಗಮಿಸಿದ್ದ ಎಲ್ಲರನ್ನು ಸಂಘದ ವತಿಯಿಂದ ನೆನಪಿನ ಕಾಣಿಕೆ ಮತ್ತು ಸ್ಮರಣ ಸಂಚಿಕೆಗಳನ್ನು ನೀಡಿ ಗೌರವಿಸಲಾಯಿತು. ರಾತ್ರಿಯ ಭೋಜನದ ನಂತರ, ಸ್ಲಂ ಡಾಗ್ ಮಿಲಿಯನೇರ್ ಚಿತ್ರದಿಂದ ಖ್ಯಾತರಾದ ಹಿನ್ನೆಲೆ ಗಾಯಕ ಕನ್ನಡಿಗ ವಿಜಯ್ ಪ್ರಕಾಶ್ ಮತ್ತು ಹಿನ್ನೆಲೆ ಗಾಯಕಿ ಅರ್ಚನಾ ಉಡುಪ ಹಾಗೂ ತಂಡದಿಂದ ನಡೆದ ಸಂಗೀತ ಕಾರ್ಯಕ್ರಮ ಕೇಳುಗರನ್ನು ಗಂಧರ್ವಲೋಕಕ್ಕೆ ಕೊಂಡೊಯ್ದಿತು.

English summary
Melbourne Kannada Sangha in Australia celebrated silver jubilee function recently. Laureate SL Bhyrappa, actors Srinath, Mukhyamantri Chandru, Ganesh Karnic participated in this Kannada event in Melbourne.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X