ಬೆಂಗಳೂರಿನಲ್ಲಿ ನಾವಿಕದ ಅಮೆರಿಕನ್ನಡೋತ್ಸವ
ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ವಿಷಯ ಪ್ರಕಟಿಸಿದರು. ನಾವಿಕ (ನಾರ್ತ್ ಅಮೆರಿಕ ವಿಶ್ವ ಕನ್ನಡಿಗರ ಆಗರ) ಅಮೆರಿಕದಲ್ಲಿ ಸ್ಥಾಪನೆಗೊಂಡ ಒಂದು ಲಾಭ ರಹಿತ ಸಂಸ್ಥೆಯಾಗಿದ್ದು, ವಿಶ್ವದೆಲ್ಲೆಡೆಯ ಕನ್ನಡಿಗರ ಮತ್ತು ಕನ್ನಡ ಸಂಘಟನೆಗಳ ಆಶೋತ್ತರಗಳನ್ನು ಒಂದು ಸೂರಿನಡಿ ತರುವುದೇ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕನ್ನಡ ಭಾಷೆ, ಸಂಸ್ಕ್ರತಿ ಮತ್ತು ಕರ್ನಾಟಕ ಪರಂಪರೆಯನ್ನು ತಾಯ್ನೆಲದಿಂದ ದೂರವಿರುವ ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಉಳಿಸಿ ಬೆಳೆಸುವ ಮಹತ್ವಾಕಾಂಕ್ಷೆಯಿಂದ ಆರಂಭಗೊಂಡ ಸಂಸ್ಥೆ ನಾವಿಕ.ನಾವಿಕದ ಮೊದಲನೇ ಸಮ್ಮೇಳನ ಯಶಸ್ವಿಯಾಗಿದ್ದು ನಮ್ಮ ಉತ್ಸಾಹ ಹೆಚ್ಚುವಂತೆ ಮಾಡಿದೆ ಎಂದು ಬಾಬು ಸಂಸ್ಥೆಯ ಬಗ್ಗೆ ವಿವರಿಸಿದರು. ಅಮೆರಿಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಯಶಸ್ವಿ ಕನ್ನಡಿಗರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ನುಡಿದರು.
ಅಮೆರಿಕದಲ್ಲಿ ನೆಲೆಸಿರುವ ಪೋಷಕರುಗಳಿಗೆ ತಮ್ಮ ಮಕ್ಕಳ ಸಾಧನೆಯನ್ನು ತಾಯ್ನೆಲದಲ್ಲಿ ತೋರ್ಪಡಿಸಬೇಕು ಎಂಬ ಹಂಬಲ ಯಾವತ್ತಿನಿಂದಲೂ ಇದೆ. ಉದ್ದೇಶಿತ 'ಅಮೆರಿಕನ್ನಡೋತ್ಸವ' ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸಲಿದೆ. ಈಗಾಗಲೇ ಸಾಕಷ್ಟು ಮಕ್ಕಳು ಕರ್ನಾಟಕದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಬಾಬು ಸಂತಸ ವ್ಯಕ್ತಪಡಿಸಿದರು.
ಅಮೆರಿಕದಲ್ಲಿರುವ ಕನ್ನಡಿಗರ ಭಾವನೆಗಳನ್ನು ಹೊರಗೆಡಹುವ ನಿಟ್ಟಿನಲ್ಲಿ ಅನೇಕ ಗೋಷ್ಠಿ ಹಾಗೂ ಕಾರ್ಯಕ್ರಮಗಳನ್ನು ಅಮೆರಿಕೋತ್ಸವದಲ್ಲಿ ಪ್ರತಿಬಿಂಬಿಸಲು ನಿರ್ಧರಿಸಲಾಗಿದೆ. ಕನ್ನಡ ನಾಡಿನ ಕಲೆಯನ್ನು ಅಮೆರಿಕದಲ್ಲಿ ಭಿತ್ತರಿಸುತ್ತಿರುವ ಅನೇಕ ಸಾಧಕರ ಕಲಾ ಪ್ರದರ್ಶನ, ಕರ್ನಾಟಕದ ಸುಧಾರಣೆಗೆ ಅಮೆರಿಕಾದಲ್ಲಿ ನೆಲೆಸಿದ ಕನ್ನಡಿಗರ ವಿವಿಧ ಯೋಜನೆಗಳು, ಕರ್ನಾಟಕದ ಮತ್ತು ಅಲ್ಲಿ ನೆಲೆಸಿರುವವರ ನಡುವಿನ ವಾಣಿಜ್ಯ-ವ್ಯವಹಾರದ ಅವಕಾಶಗಳು, ಹೊರಗುತ್ತಿಗೆ, ಅಮೆರಿಕದಲ್ಲಿರುವ ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರು ಮುಂತಾದ ವಿಷಯಗಳ ಕುರಿತಾದ ಗೋಷ್ಠಿ ಹಾಗೂ ಪ್ರದರ್ಶನಗಳೂ ಕೂಡ ಉತ್ಸವದಲ್ಲಿ ಕಾಣಸಿಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸರ್ಕಾರದ ಎನ್ಆರ್ಐ ಫೋರಮ್ನ ಉಪಾಧ್ಯಕ್ಷರಾದ ಗಣೇಶ್ ಕಾರ್ನಿಕ್, ಕಾರ್ಯಕ್ರಮದ ಕರ್ನಾಟಕ ಸಂಚಾಲಕರಾದ ರಂಗಕರ್ಮಿ, ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ ಉಪಸ್ಥಿತರಿದ್ದರು.