ಪಚ್ಚೆನಗರಿ ಸಿಯಾಟಲ್ನಲ್ಲಿ ಪುರಂದರ ಆರಾಧನೆ
ಈ ಪಚ್ಚೆನಗರಿಯ ಕನ್ನಡಿಗರು ಸೇರಿ ಸಿಯಾಟಲ್ ನ ಗರಿಮೆ ಹೆಚ್ಚಿಸುವ ಇನ್ನೊಂದು ಐತಿಹಾಸಿಕ ಘಟನೆಯನ್ನು ಈ ಶನಿವಾರ (ಫೆ. 26) ನಡೆಸಿದರು. ಇಲ್ಲಿ, ಮೊತ್ತಮೊದಲ ಬಾರಿಗೆ ನಮ್ಮ ಕರ್ನಾಟಕದ ದಾಸವರೇಣ್ಯ, ಪುರಂದರದಾಸರ ಆರಾಧನೆಯನ್ನು ಬಹಳ ವೈಭವದಿಂದ, ವೇದಿಕ್ ಕಲ್ಚರಲ್ ಸೆಂಟರ್(ವೈದಿಕ ಸಂಸ್ಕ್ರತಿ ಕೇಂದ್ರ)ನಲ್ಲಿ, ಅತ್ಯುತ್ತಮ ರೀತಿಯಲ್ಲಿ ಆಚರಿಸಿದರು.
ಬೆಳಿಗ್ಗೆ ಹತ್ತು ಗಂಟೆಗೆ ಶ್ರಿಕೃಷ್ಣ ಮತ್ತು ಪುರಂದರ ದಾಸರ ಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಸಂಜೆ ಏಳು ಗಂಟೆಯತನಕ ಬಿಡುವಿಲ್ಲದೆ ನಡೆಯಿತು. ಬೆಂಗಳೂರಿನಿಂದ ಶಾಮ್ ಪ್ರಸಾದ್ ಅವರು ತಂದ ಆರಡಿ ಎತ್ತರದ ಪುರಂದರ ದಾಸರ ಭಾವಚಿತ್ರ, ಮತ್ತು ಹೂ ಮಾಲೆಗಳಿಂದ ಅಲಂಕೃತವಾದ, ವೇದಿಕೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಕಲಾವಿದರು ಸೇರಿ ಗಾಯನ, ನೃತ್ಯಗಳಿಂದ ಸೂಕ್ತ ಹಿಮ್ಮೇಳದೊಡನೆ ಪುರಂದರ ದಾಸರ ಮತ್ತು ಅವರ ಕ್ರತಿಗಳ, ಸ್ಮರಣೆಯನ್ನು ವಿಜೃಂಭಣೆಯಿಂದ ಮಾಡಿದರು.
ಪ್ರತೀ ಕಾರ್ಯಕ್ರಮದ ಮೊದಲು ಆ ರಚನೆಯ ಅರ್ಥ, ಸನ್ನಿವೇಶ, ಪ್ರಾಮುಖ್ಯತೆಗಳನ್ನು ಶುದ್ಧ ಕನ್ನಡದಲ್ಲಿ ವಿವರಿಸಿದುದಲ್ಲದೇ (ಕುಮಾರ್ ರಾವ್), ಕಲಾವಿದರೂ ಅಚ್ಚ ಕನ್ನಡ ವೇಷಭೂಷಣಗಳಿಂದ ಅಲಂಕರಿಸಿಕೊಂಡು ಪ್ರೇಕ್ಷಕರ ಕಣ್ಮನಗಳನ್ನು ತಣಿಸಿದರು. ಪುಟ್ಟಬಾಲಕ, ಬಾಲಕಿಯರಿಂದ ಹಿಡಿದು, ಹವ್ಯಾಸೀ ಕಲಾವಿದರ ಹಾಗೂ ವಿಶ್ವ ವಿಖ್ಯಾತ ಗಾಯಕಿ, ಕನ್ನಡದವರೇ ಆದ ಶ್ರೀವಾಣಿ ಜಡೆಯವರ ಪುರಂದರ, ವಾದಿರಾಜ, ಮತ್ತು ಬಸವೇಶ್ವರರ ರಚನೆಗಳ ಸವಿಯೂಟ ನೆರೆದವರೆಲ್ಲರನ್ನು ಬೇರೆ ಲೋಕಕ್ಕೆ ಕರೆದೊಯ್ಯಿತೆಂದರೆ ಉತ್ಪ್ರೇಕ್ಷೆ ಆಗಲಾರದು.
ಸ್ಥಳೀಯ ಕಲಾವಿದೆಯರಾದ ಮತ್ತು ಸಂಗೀತ ಶಿಕ್ಷಣವನ್ನು ನೀಡುತ್ತಿರುವ ಪ್ರಮೀಳ ರಾಣಿ, ವಿಶ್ವವಾಣಿ ಸಂಗೀತ ಅಕಾಡೆಮಿ, ಪದ್ಮಾ ಅರುಣ್, ಜಯಾ ರಾಮಪ್ರಸಾದ, ಸುಭಾಶಿನಿ ಸಂತಾನಮ್, ಭಾರತಿ ಶಿಕ್ಷಣ ಕೇಂದ್ರಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಹಿತ, ಸುಮಾರು ನೂರು ಕಲಾವಿದ ಮತ್ತು ಕಲಾವಿದೆಯರಿಂದ ಈ ವೈಭವಪೂರಿತ ಸಂಗಿತ ಮತ್ತು ನಾಟ್ಯಗಳ ಆರಾಧನೆ ನಡೆಯಿತು. ಪಕ್ಕವಾದ್ಯಗಳೂ, ಧ್ವನಿ ಸಜ್ಜಿಕೆಯೂ ಪೂರಕವಾಗಿದ್ದುವಲ್ಲದೇ, ಕುಮಾರ್ ರಾವ್ ಅವರು ಬಹಳ ಮುತುವರ್ಜಿಯಿಂದ ಸಂಶೋಧನೆ ನಡೆಸಿ ತಯಾರಿಸಿದ ಪುರಂದರ ದಾಸರ ಜೀವನ ಚರಿತ್ರೆ, ಅವರ ರಚನೆಗಳ ವೈವಿಧ್ಯತೆ, ದೇಶ, ಕಾಲ, ಅರ್ಥ, ಸನ್ನಿವೇಶಗಳ ವಿವರಣೆ ಕಾರ್ಯಕ್ರಮಕ್ಕೆ ಕಳೆಗೂಡಿಸಿತೆಂದರೆ ಅತಿಶಯೋಕ್ತಿ ಆಗಲಾರದು.
ರಮೇಶ್ ಬೆಂಗಳೂರ್ ಅವರ ಧ್ವನಿ ಮತ್ತು ರಂಗ ಸಜ್ಜಿಕೆ ಎಂದಿನಂತೆ ಉತ್ತಮವಾಗಿತ್ತು. ಕಾರ್ಯಕ್ರಮದ ಮಧ್ಯೆ, ಮಧ್ಯೆ ನಮ್ಮ ಪಾಕ ಶಾಸ್ತ್ರ ಪ್ರವೀಣೆಯರು ಸೇರಿ ತಯಾರಿಸಿದ ಬಿಸಿಬೇಳೆಭಾತ್, ಪಕೋಡ, ಮೈಸೂರ್ ಪಾಕ್, ಮೊಸರನ್ನ, ಚುರಿಮರಿ, ಗೋಡಂಬಿ ಹಲ್ವ, ಮತ್ತಿತರ ಸಿಹಿ ತಿಂಡಿಗಳು, ಶುಂಠಿ ಚಹಾ, ಎಲ್ಲ ಬಂದವರ ರುಚಿ ಚಿಗುರುಗಳನ್ನು ಸಂತೃಪ್ತಿಪಡಿಸಿದುವು.
ಇಂತಹ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆಂದೇ ಹೊಸತಾಗಿ ವಿರಚಿತವಾದ, "ಪುರಂದರ ಆರಾಧನೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳ ಆಚರಣೆ ಸಮಿತಿ", (ಶಾಮ್ ಪ್ರಸಾದ್ ಬೆಂಗಳೂರು, ಚಿತ್ರ ಮಂಡ್ಯಂ, ಗಾಯತ್ರಿ ಶ್ರೀನಿವಾಸ್, ಶ್ರೀನಿವಾಸ ಭಟ್ ಮತ್ತು ಗೀತ ಶ್ರೀನಿವಾಸ್ ) ಮತ್ತು ಸಹ್ಯಾದ್ರಿ ಕನ್ನಡ ಕೂಟದ ಸಹಕಾರದಿಂದ ಇಂತಹ ಉತ್ತಮ ಕಾರ್ಯಕ್ರಮಗಳು ಇನ್ನು ಮುಂದೆಯೂ ಸತತವಾಗಿ ನಡೆದು, ನಮ್ಮ ಕನ್ನಡ ಸಂಸ್ಕ್ರತಿಯನ್ನು ನಮಗೂ, ಮುಂದಿನ ಪೀಳಿಗೆಗೂ ಹರಡಲು ಸಹಕಾರಿಯಾಗಲೆಂದು ಆಶಿಸುತ್ತೇನೆ.