ಕೆಕೆಎನ್ ಸಿ ಅಧ್ಯಕ್ಷೆಯಾಗಿ ಪದ್ಮಾ ರಾವ್
ಆಡಳಿತ ಮಂಡಳಿಯಲ್ಲಿ ಪದ್ಮಾ ಅವರ ಜತೆ ಉಪಾಧ್ಯಕ್ಷರಾಗಿ ವಿನೋದ್ ಕೆರೆಮನೆ, ಕಾರ್ಯದರ್ಶಿಯಾಗಿ ಗಜಾನನ ಭಟ್ಟ, ಜಂಟಿ ಕಾರ್ಯದರ್ಶಿಯಾಗಿ ರಾಘವೇಂದ್ರ ಮುದ್ದಯ್ಯ, ಖಜಾಂಚಿಯಾಗಿ ನಂದ ಕಿಶೋರ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ವಿಜಯ ಲಕ್ಷ್ಮಣ್, ಇವೆಂಟ್ ಮ್ಯಾನೇಜ್ ಮೆಂಟ್ ಗೆ ಅಭಿಜಿತ್ ಪ್ರಹ್ಲಾದ್ ಮತ್ತು ರವಿಪ್ರಸಾದ್ ಅವರು ಕೆಕೆಎನ್ ಸಿ ಕನ್ನಡ ಚಟುವಟಿಕೆಗಳ ಕೇಂದ್ರಬಿಂದುಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಅಣ್ಣ ತಂಗಿಯರ ಅಮೆರಿಕ ಕನ್ನಡ ಸಮ್ಮೇಳನ
ಪ್ರತಿ ವರುಷದಂತೆ ಈ ವರುಷವೂ ಸಂಕ್ರಾಂತಿ, ಯುಗಾದಿ, ಕ್ರೀಡಾ ಕೂಟ, ಗಣೇಶನ ಹಬ್ಬ, ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯನ್ನು ಆಚರಿಸುವ ಉತ್ಸಾಹವನ್ನು ಕೂಟದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ಜತೆಗೆ, ಅಂಕುರ (ANKUR Business and Entrepreneurial Forum) ಮತ್ತು ವಿವಿಧ ಭಾರತೀಯ ಸಾಂಸ್ಕೃತಿಕ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ಈ ವರ್ಷದ ಮೊದಲನೆಯ ಕಾರ್ಯಕ್ರಮ "ಸಂಕ್ರಾಂತಿ" ಜನವರಿ 29ರಂದು Palo Altoನಲ್ಲಿರುವ Gunn High Schoolನಲ್ಲಿ ಆಚರಿಸಲು ಸಿದ್ಧತೆಗಳು ಭರದಿಂದ ಆರಂಭವಾಗಿವೆ.
ಪದ್ಮಾ ರಾವ್ ಸಂದರ್ಶನ ಬಾನುಲಿಯಲ್ಲಿ ಕೇಳಿರಿ
ಪದ್ಮಾ ರಾವ್ ಬಗ್ಗೆ : ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಈ ವರ್ಷದ ಅಧ್ಯಕ್ಷೆ ಪದ್ಮಾ ರಾವ್ ಅವರು 1999ರಿಂದ ಕೂಟದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸಂಗೀತ-ನೃತ್ಯ-ನಾಟಕಗಳ ನಿರ್ದೇಶನ ಮತ್ತು ಮುಖ್ಯ ಪಾತ್ರಗಳನ್ನು ಮಾಡಿದ್ದೇ ಅಲ್ಲದೆ ಮೆರವಣಿಗೆ, ಸೃಷ್ಟಿ ಶೀಲ, ಮನೋರಂಜನ ಸಮಿತಿಗಳ ನೇತೃತ್ವ ವಹಿಸಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಅವರು ನಿರ್ದೇಶಿಸಿದ "ಚೈತ್ರದ ಚಿಗುರು" ಸಭಿಕರ ಅಪಾರ ಮೆಚ್ಚುಗೆಯನ್ನು ಗಳಿಸಿದೆ.
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಅಲ್ಲದೆ ಅವರು "ಮೈಸೂರು ಮಲ್ಲಿಗೆ" ಸಂಗೀತ-ನೃತ್ಯ-ನಾಟಕವನ್ನು ಸೆಕ್ರಮೆಂಟೋ ಕನ್ನಡ ಕೂಟದಲ್ಲಿಯೂ ಮತ್ತು ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ 2010ರಲ್ಲಿ ನಡೆದ ನಾವಿಕ ಸಮ್ಮೇಳನಗಳಲ್ಲಿ ಕೂಡ ನಿರ್ದೇಶಿಸಿ, ಮುಖ್ಯ ಪಾತ್ರವೊಂದನ್ನು ಕೂಡ ಅಭಿನಯಿಸಿ ರಸಿಕರ ಮೆಚ್ಚುಕೆಗೆ ಪಾತ್ರರಾದವರು. ಅಮೆರಿಕದಲ್ಲೇ ಮೊದಲನೇ ಬಾರಿಗೆ ಕನ್ನಡದಲ್ಲಿ ಬೀದಿ ನಾಟಕವನ್ನು ನಿರ್ದೇಶಿಸಿ, ನಟಿಸಿದ ಹೆಮ್ಮೆ ಕೂಡಾ ಪದ್ಮಾ ಅವರದು.