ಬೃಂದಾವನ ಸಂಘಕ್ಕೆ ಐದು ತುಂಬಿ ಆರು
ಈಸ್ಟ್ ವಿಂಡ್ಸರಿನ ಕ್ರೆಪ್ಸ್ ಸ್ಕೂಲಿನಲ್ಲಿ ಮಧ್ಯಾಹ್ನ 3ಕ್ಕೆ ಶುರುವಾದ ಉಭಯ ಕುಶಲೋಪರಿಯ ನಂತರ, ಮುಖ್ಯ ಸಭಾಂಗಣದಲ್ಲಿ ನ್ಯೂಜೆರ್ಸಿಯ ಬೃಂದಾವನ ಕನ್ನಡ ಸಂಘದ ಸರ್ವ ಸದಸ್ಯರ ಸಭೆ ನಡೆದರೆ, ಸ್ಕೂಲಿನ ಕೆಫೆಟೇರಿಯದಲ್ಲಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗು ಚಿತ್ರ ಬಿಡಿಸುವ ಸ್ಪರ್ಧೆ ನಡೆಸಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ, ಸರ್ವ ಸದಸ್ಯರ ಸಭೆಯನ್ನು ನಡೆಸಿಕೊಡಲು ಆಗಮಿಸಿದ್ದ ಡಾ. ಎಮ್. ಜಿ. ಪ್ರಸಾದ್ ರವರಿಂದ ಗಣೇಶನ ಸ್ತುತಿಯೊಂದಿಗೆ ಸಭೆ ಆರಂಭವಾಯ್ತು.
ಕಾರ್ಯದರ್ಶಿ ಮಧು ರಂಗಯ್ಯನವರ ಪರವಾಗಿ ಬೃಂದಾವನದ ವಾರ್ಷಿಕ ವರದಿಯನ್ನು ಓದಿದ ಅಧ್ಯಕ್ಷೆ ಉಷಾ ಪ್ರಸನ್ನ ಕುಮಾರ್, ಕಳೆದ ಒಂದು ವರ್ಷದಲ್ಲಿ 'ಸ್ಪೂರ್ತಿ' ತಂಡ ಕೈಗೊಂಡ ಹಲವಾರು ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ಆರು ವರ್ಷಗಳ ಪೋರ "ಬೃಂದಾವನ" ಅಚ್ಚುಕಟ್ಟಾಗಿ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು [ಸಮ್ಮೇಳನದ ಗ್ಯಾಲರಿ] ನಡೆಸಿದರ ಬಗ್ಗೆ ಉಲ್ಲೇಖಿಸಿದಾಗ ಸಭೆಯಲ್ಲಿ ನೆರೆದಿದ್ದ ಸದಸ್ಯರ ಕರತಾಡನ ಮುಗಿಲು ಮುಟ್ಟಿತ್ತು.
ಖಜಾಂಚಿ ಸೀಮಾ ಮೂರ್ತಿ, ಹಣಕಾಸಿನ ವಿವರ ಪ್ರಸ್ತುತ ಪಡಿಸಿದ ಬಳಿಕ, "ಬೃಂದಾವನ"ದ ದಾನಶೀಲ ಚಟುವಟಿಕೆಗಳ ಬಗ್ಗೆ ನಿರ್ದೇಶಕರಾದ ರಾಘವೇಂದ್ರ ಮೂರ್ತಿಯವರು ವರದಿ ಸಲ್ಲಿಸಿದರು. ಕಳೆದ ಮೂವತ್ತು ತಿಂಗಳಲ್ಲಿ ಸುಮಾರು 30 ಸಾವಿರ ಡಾಲರ್ (ಸುಮಾರು 14 ಲಕ್ಷ ರೂಪಾಯಿ) ಸಂಗ್ರಹಿಸಿ ಸ್ಥಳೀಯ "ಫುಡ್ ಬ್ಯಾಂಕ್", ಸೂಪ್ ಕಿಚನ್, ಭಾರತದ ಸುನಾಮಿ ಸಂತ್ರಸ್ತರಿಗೆ, ನೆರೆ ಸಂತ್ರಸ್ತರಿಗೆ ಹಾಗು "ಅಕ್ಷಯ ಪಾತ್ರೆ" ಸಂಸ್ಥಾನಕ್ಕೆ ಉದಾರವಾಗಿ ನೀಡಿದುದರ ಬಗ್ಗೆ ತಿಳಿಸಿದಾಗ ಸಭೆಯಲ್ಲಿ ಮೆಚ್ಚುಗೆಯ ಹರ್ಷೋದ್ಗಾರ ಕೇಳಿ ಬಂದಿತು.
6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ "ಅಕ್ಷಯ ಪಾತ್ರೆ"ಯೊಡನೆ ಕೈಜೋಡಿಸಲು ಅನುವು ಮಾಡಿಕೊಟ್ಟ ಅಕ್ಕ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದರು. ಇದಾದ ಬಳಿಕ ಸದಸ್ಯರಿಂದ ಯಾವುದೇ ಪ್ರಶ್ನೆಗಳು ಇಲ್ಲದಿದ್ದರಿಂದ, ಸ್ಪೂರ್ತಿ ತಂಡದ ಕಾರ್ಯ ವೈಖರಿಯ ಬಗ್ಗೆ ಸದಸ್ಯರ ಪ್ರತಿಕ್ರಿಯೆಗೆ ಆಹ್ವಾನಿಸಲಾಯಿತು. "ವನವಾಣಿ" ಸಂಪಾದಕ ಹಾಗು "6ನೇ ಅಕ್ಕ ಸಮ್ಮೇಳನದ ಸ್ಮರಣ ಸಂಚಿಕೆ" ಸಮಿತಿಯ ಚೇರ್ ಆಗಿದ್ದ ಸತೀಶ್ ಹೊಸನಗರ ಅವರು ಕಳೆದ 30 ತಿಂಗಳು ಉಷಾ ಪ್ರಸನ್ನ ಕುಮಾರ್ ನೇತೃತ್ವದ "ಸ್ಪೂರ್ತಿ" ತಂಡದ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಯಾವ ರೀತಿ ಈ ತಂಡ "ಟೀಂ ವರ್ಕ್"ಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿತ್ತು ಎಂಬುದರ ಬಗ್ಗೆ ಉಲ್ಲೇಖಿಸಿ, ಸ್ಪೂರ್ತಿ ತಂಡ ಹಾಗು "ಬೃಂದಾವನ" ಪ್ರವಾಸ (ಪ್ರಚಾರ ವಾರ್ತ ಹಾಗು ಸಂಪರ್ಕ ಸಮಿತಿ) ಯಾವ ರೀತಿ ಯಾವುದೇ ವಿಷಯವನ್ನು ಈ ಮೇಲ್ ಮೂಲಕ ಕಳಿಸಿದಾಗ ಎಲ್ಲೂ ಯಾವೊಂದು ಹೆಸರನ್ನೂ ಉಲ್ಲೇಖಿಸದೆ ಬರಿ "ಸ್ಪೂರ್ತಿ ತಂಡ" ಅಥವ "ಪ್ರವಾಸ" ಎಂಬ ಹೆಸರಲ್ಲಿ ಕಳಿಸುತ್ತಿದ್ದ ಉದಾಹರಣೆ ನೀಡಿದರು.
2008-10ರ ಕಾರ್ಯಕಾರಿ ಸಮಿತಿಯ ಕಾರ್ಯ ತತ್ಪರತೆ, ಮುಂದಿನ ಸಮಿತಿಗಳಿಗೆ ಒಂದು ಮಾದರಿಯಾಗಿ ಉಳಿಯಲಿದೆ ಎಂದು ಮುಕ್ತ ಕಂಠದಿಂದ ಪ್ರಶಂಸಿದರು. ಅಧ್ಯಕ್ಷರ ವಂದನಾರ್ಪಣೆಯೊಂದಿಗೆ ಸರ್ವ ಸದಸ್ಯರ ಸಭೆ ಚಿಕ್ಕದಾಗಿ ಚೊಕ್ಕವಾಗಿ ಮುಕ್ತಾಯವಾಯಿತು. ಕಳೆದ 30 ತಿಂಗಳಲ್ಲಿ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಜೊತೆಗೆ 15 ಅತ್ತ್ಯುತ್ತಮವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ "ಸ್ಪೂರ್ತಿ" ತಂಡಕ್ಕೆ, ಸರ್ವ ಸದಸ್ಯರ ಸಭೆಯಲ್ಲಿ, ಸದಸ್ಯರಿಂದ ಒಂದೇ ಒಂದು ಪ್ರಶ್ನೆಯೂ ಇಲ್ಲದಿದ್ದುದು ಈ ಸಮಿತಿಯ ಕಾರ್ಯವೈಖರಿ ಹಾಗು ಅಚ್ಚುಕಟ್ಟುತನಕ್ಕೆ ಸಾಕ್ಷಿ ಎಂದು ಸಭೆಯ ನಂತರ ಉಪಹಾರ ಗೃಹದಲ್ಲಿ ಹಲವು ಸದಸ್ಯರು "ಪಕೋಡ ಕಾಫಿ" ಸವಿಯುತ್ತಾ ಮಾತನಾಡಿದ್ದು ಕೇಳಿಸಿಕೊಳ್ಳಲು ಕಿವಿಗೆ ಹಿತವಾಗಿತ್ತು.. (ಸಮಾರಂಭದ ಚಿತ್ರಗಳು)