ಲಾಸ್ ಏಂಜಲಿಸಲ್ಲಿ ಸಾಹಿತ್ಯ ಲೋಕದ ಅಶ್ವಿನೀ ದೇವತೆ
ಲಾಸ್ ಏಂಜಲಿಸ್ ಪ್ರದೇಶದಲ್ಲಿ ಒಟ್ಟು ಎರಡು ಕಾರ್ಯಕ್ರಮಗಳು ನಡೆದವು. ಒಂದು, ನಾಗ ಐತಾಳರ ನಿವಾಸದಲ್ಲಿ ಆತ್ಮೀಯವಾಗಿ ಸೇರಿದ್ದ ಸಾಹಿತ್ಯಾಸಕ್ತರೊಂದಿಗೆ, ಮತ್ತೊಂದು, ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಅರ್ವೈನ್ ಮಂದಿರದಲ್ಲಿ. ಎರಡೂ ಕಾರ್ಯಕ್ರಮಗಳು ಸಾಹಿತ್ಯಾಸಕ್ತರ ಮನ ಸೂರೆಗೊಂಡವು. ಕನ್ನಡ ಕಾವ್ಯ ಪ್ರಪಂಚದಲ್ಲಿ ಎಚ್ಎಸ್ವಿ ಮತ್ತು ಬಿಆರ್ಎಲ್ರ ಪ್ರತಿಭೆಯನ್ನು ಅರಿತವರಿಗೆ ಸಭಿಕರು ಸಮ್ಮೋಹಗೊಂಡಿದ್ದರಲ್ಲಿ ಆಶ್ಚರ್ಯವಾಗಿರಲಿಕ್ಕಿಲ್ಲ.
ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಎಂ.ಆರ್. ದತ್ತಾತ್ರಿ ಮತ್ತು ವಲ್ಲೀಶ ಶಾಸ್ತ್ರಿ ನಿರ್ವಹಿಸಿದರು. ಅಕ್ಕ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಹಾಡುಗಾರ್ತಿ ಕನ್ನಿಕಾ ಸಿಂಗಾರ್ರ ಪ್ರಾರ್ಥನೆ ಮತ್ತು ಆಗಮಿಸಿದ್ದ ಕವಿಗಳ ಭಾವಗೀತೆಗಳ ಗಾಯನದಿಂದ ಕಾರ್ಯಕ್ರಮ ಪ್ರಾರಂಭವಾಯಿತು.
ಎಚ್ಎಸ್ವಿಯವರು, ಕಲೆ ಹೇಗೆ ಸಮಾಜವನ್ನು ಪ್ರಚೋದಿಸುತ್ತದೆ ಎಂದು ಮಾತನಾಡಿ ತಮ್ಮ ಭೂಮಿಯೂ ಒಂದು ಆಕಾಶ', ಕಂಡದ್ದು' ಮತ್ತು ಶ್ರೀಸಂಸಾರಿ' ಕವಿತೆಗಳನ್ನು ಓದಿದರು. ಬಿ.ಆರ್. ಲಕ್ಷ್ಮಣ ರಾವ್ ತಮ್ಮ ಕಿರುಕವಿತೆಗಳ ಹಾಸ್ಯದಿಂದ ಸಭಿಕರ ಮನರಂಜಿಸಿದರು. ಬೆಂಗಳೂರಿನಿಂದ ಬಂದಿದ್ದ ಭ್ರಮರಿ ನಾಟ್ಯ ತಂಡದಿಂದ ವಿವಿಧ ಕವಿಗಳ ರಚನೆಯ ಗೀತೆಗಳ ನೃತ್ಯ ಕಾರ್ಯಕ್ರಮವು ನಡೆಯಿತು.