ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಕ್ಷಕರ ಮನತಟ್ಟಿದ ಸೀತೆಯ ಸ್ವಗತ

By * ವೈಶಾಲಿ ಹೆಗಡೆ
|
Google Oneindia Kannada News

Bhramari Shivaprakash
ವಿದುಷಿ ಭ್ರಮರಿ ಶಿವಪ್ರಕಾಶ್ ರವರು ರೋಡ ಐಲಾನ್ಡಿನ "ಪೆರಿಶಬೇಲ್ ಥಿಯೇಟರ್"ನಲ್ಲಿ ಪ್ರಸ್ತುತಪಡಿಸಿದ "ಸೀತೆಯ ಸ್ವಗತ" ಎಂಬ ನಲವತ್ತು ನಿಮಿಷಗಳ ಭರತನಾಟ್ಯ ನೃತ್ಯರೂಪಕ, ಸಾಹಿತ್ಯಿಕವಾಗಿ, ರಂಗಭೂಮಿಯ ದೃಷ್ಟಿಯಿಂದ ನೋಡಿದರೂ ಒಂದು ವಿಶಿಷ್ಟ ಪ್ರಯೋಗ. ಸ್ಥೂಲವಾಗಿ ಹೇಳಬೇಕೆಂದರೆ ಉತ್ತರ ರಾಮಾಯಣದ ಆದಿಯಲ್ಲಿ ರಾಮನಿಂದ ಪರಿತ್ಯಕ್ತ ಸೀತೆಯನ್ನು ಲಕ್ಷ್ಮಣ ಕಾಡಿನಲ್ಲಿ ಕರೆತಂದು ಬಿಟ್ಟು ಹೋದಾಗ ಸೀತೆ ಏನಂದುಕೊಂಡಿರಬಹುದು, ಅವಳ ಭಾವನೆಗಳೇನಾಗಿರಬಹುದು, ಆಕೆಯ ವಿಲಾಪವೋ, ಕೋಪವೋ, ಪ್ರಲಾಪವೋ, ಅವರವರ ಭಾವಕ್ಕೆ ತಕ್ಕಂತೆ ನಾವು ಊಹಿಸಿ ಪರಿತಪಿಸಿ ಓದಿಕೊಂಡಿದ್ದೇವೆ. ಆ ಒಂದು ಸನ್ನಿವೇಶದ ಸಂಕಟವನ್ನು, ತೀವ್ರತೆಯನ್ನು ಶಕ್ತಿಯುತವಾಗಿ ಸೆರೆಹೆಡಿದು ಶಬ್ದ ತುಂಬಿದವರು, ಸೀತೆಯ ಸ್ವಗತದ ಕೃತಿಕರ್ತ ಕನ್ನಡದ ಸಾಹಿತಿ, ರಂಗಕರ್ಮಿಗಳಲ್ಲೊಬ್ಬರಾದ ಉದ್ಯಾವರ ಮಾಧವ ಆಚಾರ್ಯರು. ಅದನ್ನು ಸೀತೆಯೇ ಮೈತಳೆದಂತೆ ಅನುಭವಿಸಿ ಭಾವಭಿವ್ಯಕ್ತಿಯಿಂದ ನರ್ತಿಸಿ ಮನಸೆಳೆದಿದ್ದು ಅವರ ಮಗಳು ವಿದುಷಿ ಭ್ರಮರಿ.

ಇದಿಷ್ಟೇ ಆಗಿದ್ದರೆ ಈ ಪ್ರಯೋಗ ಅದ್ಭುತ ಎನ್ನಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಬಸುರಿ ಸೀತೆಯ ನೋವನ್ನು ಸಶಕ್ತವಾಗಿಸಿದ್ದು ಸ್ವತಃ 36 ವಾರಗಳ ಬಸುರಿಯಾಗಿದ್ದ ಭ್ರಮರಿಯವರು! ಕನ್ನಡ ಕಲಾಕ್ಷೇತ್ರದಲ್ಲಾಗಲೀ ಅಥವಾ ಇತರ ಭಾರತೀಯ ರಂಗಭೂಮಿಯಲ್ಲಿ ಇಂಥ ಒಂದು ಪ್ರಯೋಗವನ್ನು ಇದುವರೆಗೂ ನೋಡಿಲ್ಲ, ಕೇಳಿಲ್ಲ. ಒಬ್ಬ ಬಸುರಿ ಆ ದೇಹಸ್ಥಿತಿಗೆ ತಕ್ಕುದಾದ ಪಾತ್ರವನ್ನು ಅತ್ಯಂತ ನೈಜರೂಪದಲ್ಲಿ ಬಿಂಬಿಸಿದ್ದು ಇದೆ ಮೊದಲೇನೋ. ಆ ದೃಷ್ಟಿಯಿಂದ ನೋಡಿದಾಗಲಂತೂ ಈ ಪ್ರಯತ್ನ ಮಹತ್ವದ್ದು ಎನಿಸುತ್ತದೆ.

ಅಲ್ಲಿ ನೆರೆದಿದ್ದ ನಮಗೆಲ್ಲ ಅವರನ್ನು ನೋಡಿದ ತಕ್ಷಣ ಕಣ್ಣು ಕುಕ್ಕಿದ್ದು ಇಷ್ಟು ತುಂಬಿದ ಬಸುರಿ ಹೇಗೆ ಭರತನಾಟ್ಯ ನಿಭಾಯಿಸಲು ಸಾಧ್ಯ? ಆದರೆ ಒಮ್ಮೆ ರೂಪಕ ಆರಂಭವಾದಾಗ ಅಲ್ಲಿದ್ದಿದ್ದು ಬರೀ ಸೀತೆ, ವಾಲ್ಮೀಕಿಯ ವನದಲ್ಲಿನ ಬಸುರಿ ಸೀತೆ. ಜಟಿಲ ಹೆಜ್ಜೆಗಳಲ್ಲಿ, ಭರತನಾಟ್ಯದ ಬಳುಕು ಭಂಗಿಗಳಲ್ಲಿ, ಭ್ರಮರಿ ಬಸುರಿ ಎಂದು ಅಲ್ಲಿ ಕುಳಿತವರಯಾರಿಗೂ ಅನಿಸಲೇ ಇಲ್ಲ, ಹಾಗೆಯೇ ಸೀತೆಯ ಭಾವವೈವಿಧ್ಯಗಳಲ್ಲಿ ಕಂಡಿದ್ದು ಕೇವಲ ತುಂಬಿದ ಬಸುರಿ ಸೀತೆ.

ರೂಪಕವು ಸೀತೆ ವಾಲ್ಮೀಕಿಯ ವನದಲ್ಲಿ ಒಬ್ಬಳೇ ಕುಳಿತು ಮರೆಯಾಗುತ್ತಿರುವ ಲಕ್ಷ್ಮಣನನ್ನೇ ನೋಡುತ್ತಾ, ಹಕ್ಕಿಗಳ ಕುಹೂಗಾನದಿಂದ ಯೋಚನಾಸರಣಿ ತುಂಡಾಗಿಯೂ, ಹೊಸ ಸರಣಿ ಆರಂಭವಾದಂತೆಯೂ ಮೊದಲಾಗುತ್ತದೆ. ಹುತ್ತದಿಂದ ಹೊರಬಂದು ಕವಿಯಾದವನೇ, ಕೇಳು ನನ್ನ ವ್ಯಥೆಯ, ಹಾಡು ನನ್ನ ಕಥೆಯ ಎಂದು ಸೀತೆ ಅನ್ನುತ್ತಿದ್ದಂತೆ, ವನವೆಲ್ಲ ರಾಮನಾಮದಿಂದ ಅನುರಣಿಸತೊಡಗುತ್ತದೆ. ಆಗ ಸೀತೆಯ ಮನ ನಲಿವಿನಿಂದ ತುಯ್ಯಿತೆ, ನೋವಿನಿಂದ ಹುಯಿಲಿಟ್ಟಿತೆ?

ಹೌದು.. ಕೊನೆಗೂ ಬಣ್ಣದ ಜಿಂಕೆ ಸಿಗಲಿಲ್ಲ ಸೀತೆಗೆ.
ಸೀತೆಯ ಮನದಲ್ಲಿ ಬಿಚ್ಚಿಕೊಳ್ಳುತ್ತಾ ಸಾಗುವ ತನ್ನೆಲ್ಲ ಹಿಂದಿನ ದಿನಗಳು, ನೆನಪುಗಳು, ರಂಗದ ಮೇಲೆ ಹಾಡಾಗುತ್ತ, ಮಾತಾಗುತ್ತ, ನೃತ್ಯದ ವಿಶಿಷ್ಟ ಅಭಿವ್ಯಕ್ತಿಯಾಗುತ್ತ ಸಾಗುತ್ತವೆ. ಅಪ್ಪನ ನೇಗಿಲು ತಾಕಿದರೂ ಏನೂ ನೋವು ಕೊಡಲಿಲ್ಲ, ಆದರೆ ಕೋದಂಡರಾಮನ ಬತ್ತಳಿಕೆಯ ಬಾಣ ನನ್ನನ್ನು ತಟ್ಟದೆಯೂ ತಾಯ್ತನದ ತಾಣಗಳನ್ನೆಲ್ಲ ತತ್ತರಿಸುವಂತೆ ಮಾಡಿತೇ ಎನ್ನುತ್ತಾ ಮೊದಲಾಗುವ ಸ್ವಗತ, ತುಂಬಿದ ಬಸುರಿಯನ್ನು ನೋಡುತ್ತಾ ಆಗಲೇ ವಾಲ್ಮೀಕಿ ವನದೊಳಗೆ ಪ್ರವೇಶಿಸಿಬಿಟ್ಟ ಪ್ರೇಕ್ಷಕರನ್ನು ವಿಚಲಿತಗೊಳಿಸಲು ಸುರುವಿಟ್ಟಿತ್ತು. ಕುಳಿತ ತಾಯಂದಿರೆಲ್ಲ ಕಂಡೊ, ಕಾಣದೆಯೋ ಎರಡು ಹನಿ ಉದುರಿಸಿದ್ದರು. ಹಾಗೆ ನೆನಪುಗಳ ಮಾಲೆ ಪೋಣಿಸುತ್ತ ಸಾಗುವ ಸೀತೆಗೆ ರಾಮಾಯಣದ ಹೆಂಗಸರಲ್ಲೆಲ್ಲ ಮೊದಲು ನೆನಪಾಗಿದ್ದು ತಾಟಕಿ! ರಾಕ್ಷಸಿಯಾದರೇನು ಹೆಣ್ಣಲ್ಲವೇ ಅವಳು ರಾಮ! ಎಂದು ತಾಟಕಿಗಾಗಿ ಪರಿತಪಿಸುವ ಸೀತೆ, ತಕ್ಷಣವೇ ರಾಮನನ್ನು ತಾನು ತಪ್ಪಿತಸ್ಥನ ಸ್ಥಾನದಲ್ಲಿ ತನಗರಿವಿಲ್ಲದಂತೆಯೇ ನಿಲ್ಲಿಸತೊಡಗಿದ್ದೆನೆಯೇ ಎಂದು ದ್ವಂದ್ವಕ್ಕೊಳಗಾಗುತ್ತಾಳೆ. ಸಾಧ್ಯವೇ ಇಲ್ಲ, ಅಹಲ್ಯೆಯಂಥ ಶಿಲೆಯಾಗಿದ್ದ ಹೆಣ್ಣನ್ನು ಉದ್ಧರಿಸಿದ ಕರುಣಾಳು ಅವನು ಅವನ ತಪ್ಪಿಲ್ಲ ಎಂದುಕೊಳ್ಳುತ್ತಿದ್ದಂತೆಯೇ.. ಭಗ್ನ ದಾಂಪತ್ಯದ ಉರಿಯಲ್ಲಿ ಬೆಂದ ಅಹಲ್ಯೆಯ ಅಂತಃಕರಣವನ್ನೂ ಅರಿತು ಉದ್ಧರಿಸಿದವನು... ನನಗೆ ಹೀಗೇಕೆ ಶಿಲೆಯಾದೆ? ಮತ್ತೆ ಪ್ರಶ್ನೆಯಾಗುತ್ತಾಳೆ ಸೀತೆ. ಕೈಕೆ ಮಾತುಕೇಳಿ ಪಿತೃವಾಕ್ಯಪರಿಪಾಲಕನೆಂದುಕೊಂಡು ಮಾತೆ ಕೌಸಲ್ಯೆಯ ಕರುಳು ಕೊಯ್ದು ನಡೆದೆಯಲ್ಲ.. ಮಿಥಿಲೆಯಿಂದ ಕನಸಿನ ಪಲ್ಲಕ್ಕಿಯಲ್ಲಿ ಕೂತು ಬಂದವಳು ನಾನು ಪಟ್ಟ ಬಿಟ್ಟು, ಪಟ್ಟೆ ತೊಟ್ಟು ಜೊತೆಗೂಡಿದೆನಲ್ಲ..; ಹಾಗಿದ್ದರೆ ನಿನ್ನ ಹೃದಯ ಮಿಡಿದದ್ದಾರೂ ಯಾರಿಗಾಗಿ? ಇಂದಿಗೂ ಸೀತೆಯ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆಯಲ್ಲವೇ.

ತನ್ನ ಕನಸುಗಳೆಲ್ಲ ಯಾವಾಗಲೂ ಕಾಡಿನ ಪಾಲೇಕೆ ಎಂದು ಕೇಳುವ ಸೀತೆಗೆ ಉತ್ತರ ಯಾರಲ್ಲಿದೆ? ಆದರೆ ಆ ಕಾಡಲ್ಲಿ ರಾಮ ನೀ ಜೊತೆಗಿದ್ದೆ. ಎದೆಯ ಹಾರಗಳನ್ನೂ ತೆಗೆದಿರಿಸಿ ಮೈಗೆ ಮೈತಾಗಿಸಿ ಸುತ್ತಿದ ಆ ಅರಣ್ಯ ರಮ್ಯಲೋಕವಾಗಿತ್ತು ಎಂದು ಹಂಬಲಿಸುವ ವಿರಹಿ ಸೀತೆ. ಜೊತೆಯಲ್ಲೇ ಕರಾಳ ಲಂಕೆಯ ಕತ್ತಲ ನೆನಪುಗಳು. ಅಂದು ಶೂರ್ಪನಖಿ ನಕ್ಕಳು, ಪ್ರತಿಯಾಗಿ ನಾನೂ ನಕ್ಕೆ.. ಆದರೆ ಆ ನಗುಗಳ ತಾಕಲಾಟದಲ್ಲಿ ನನ್ನ ಜೀವನದ ನಗುವೇ ಮಾಯವಾಗಿತ್ತು. ನನಗಾಗಿ ಶೂರ್ಪನಖಿಯನ್ನು ದೂಡಿದವನೆ.. ಇಂದು ಯಾರಿಗಾಗಿ ನನ್ನ ಕಾಡಿಗೆ ದೂಡಿದೆ? ಸೀತೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ. ಸ್ವರ್ಣಜಿಂಕೆ ಸಿಗದೇ ಸ್ವರ್ಣಲಂಕೆ ಸುಟ್ಟವ ನೀನು, ಸ್ವರ್ಣಬೆಂಕಿಯಲ್ಲಿ ಸುಟ್ಟುಬಂದವಳು ನಾನು. ಇವೆಲ್ಲದರ ನಡುವೆ ನಾವಿಬ್ಬರೂ ಕಳೆದುಕೊಂಡದ್ದನ್ನು ಈ ಕಾಡಿನಲ್ಲಿ ಹುಡುಕಲೆಂದು ಇಲ್ಲಿ ಬಿಟ್ಟಿರುವೆಯಾ ರಾಮ ಎನ್ನುವ ಸೀತೆಯ ಸಂಕಟ ಏರುತ್ತಲೇ ಹೋಗುತ್ತದೆ. ಕೊನೆಗೂ ಸ್ವರ್ಣಜಿಂಕೆ ಸಿಗದೇ ಹೋಯಿತು ನನಗೆ ಆ ಜಿಂಕೆ ಸಿಗದೇ ಹೋಯಿತು! ಜಿಂಕೆ ಇಲ್ಲಿ ಒಂದು ಚಿತ್ರ ಮಾತ್ರ. ಸೀತೆಯ ಹತಭಾಗ್ಯದ ಆಕೆ ಉರಿದ ಬೆಂಕಿಯಲ್ಲಿ ಕರಟಿ ಹೋದ ಕನಸುಗಳ ಪ್ರತಿರೂಪಿ ಜಿಂಕೆ ಪ್ರೇಕ್ಷಕರ ಕಣ್ಣೆದುರಲ್ಲಿ ಅವರ ಮನದಲ್ಲಿ ಬದಲಾಗುತ್ತ ಹೋಗುತ್ತದೆ.

ಭಾವಭಿವ್ಯಕಿಯ ಅಂಗವಾಗಿಯೋ.. ನರ್ತನದ ಸಂಕೀರ್ಣತೆಗಳ ತೊಯ್ದಾಟಗಳಿಂದ ಮಗುವನ್ನು ಸಮಾಧಾನಿಸಲೋ ಎನ್ನುವಂತೆಯೋ.. ಭ್ರಮರಿ ಮಧ್ಯೆ ಮಧ್ಯೆ ತಮ್ಮ ತುಂಬಿದ ಹೊಟ್ಟೆ ಸವರಿಕೊಳ್ಳುತ್ತಿದ್ದರೆ, ಅಧಾರ ಕೊಡುತ್ತಿದ್ದರೆ ಪಾಪ ಆ ಸೀತೆ ಹೇಗೆ ಅನುಭವಿಸಿದಳೋ ಇಷ್ಟೆಲ್ಲಾ ಸಂಕಟ ಎಂದು ಪ್ರತಿಯೊಬ್ಬರೂ ಮಿಡಿಯುತ್ತಿದ್ದರು.

ಲಕ್ಷ್ಮಣ ರೇಖೆಯನ್ನು ದಾಟಿದ ತಪ್ಪಿಗೆ ಲಕ್ಷ್ಮಣನನ್ನೇ ಕಾಡಿಗೆ ಬಿಡಲು ಕಳಿಸಿದೆಯ? ರೇಖೆ ದಾಟಿದ ತಪ್ಪಿಗೆ ಹಾಗಿದ್ದರೆ ಸೀತೆ ಅನುಭವಿಸಿದ್ದು ಸಾಲದೇ? ಅವಳ ಪ್ರಶ್ನೆಗಳಿಗೆ ಉತ್ತರ ರಮಾಯಣದಲ್ಲಂತೂ ಉತ್ತರವಿಲ್ಲ. ಅಲ್ಲಿ ಗರಬಡಿದವರಂತೆ ಕೂತ ನಮ್ಮಲ್ಲೂ ಉತ್ತರವಿರಲಿಲ್ಲ. ವಿಲಾಪಿಸುವ ಸೀತೆ ಮತ್ತೆ ಅಗ್ನಿರೂಪದಲ್ಲಿ ಸಾಮಾನ್ಯ ಹೆಣ್ಣಂತೆ ಕೆಂಡಕೋಪವಾಗಿ ನೀನೀಗ ಪ್ರಜಾರಮಣ ಜಗದೇಕವೀರ ರಾಮನಲ್ಲವೇ. ಮುಂದೆ ನೀನು ಅಶ್ವಮೇಧದ ಸಂಕಲ್ಪ ಮಾಡಿದರೆ, ನಿನ್ನ ಯಜ್ಞಕ್ಕೆ ಒದಗುವವಳು ಈ ಸಂಗಾತಿಯಲ್ಲ. ಸ್ವರ್ಣಬೆಂಕಿಯಲಿ ಉರಿದರೂ ಆರದ ಈ ತೇಜವಲ್ಲ, ಸಂಶಯದ ಸುಳಿಯಲ್ಲಿ ಸಿಕ್ಕು ಮನದ ಬೇಗುದಿಯ ಒಳಸುಳಿಯೊಳಗೆಲ್ಲ ನಲುಗಿ ಕೆಂಪಾದ ಸ್ವರ್ಣಸೀತೆ; ಅದಷ್ಟೇ ಇನ್ನು ನಿನ್ನ ಪಾಲಿಗೆ ಎಂದು ಉಸುರುವಾಗ ನಿನ್ನ ತೀರ್ಮಾನ ಸರಿ ಸೀತೆ ಭೇಷ್ ಎನ್ನಬೇಕು ಅನಿಸುತ್ತಿತ್ತು.

ಮತ್ತೆ ಕುಹೂ ಗಾನದಿಂದ ಎಚ್ಚತ್ತ ಸೀತೆ ತಾನಿನ್ನು ಬದುಕುವುದು ತನ್ನ ಬಸಿರ ಭಾಗ್ಯಕ್ಕಾಗಿ ಎನ್ನುತ್ತಾ ಸೀತೆ ಈಗ ಮಾತೆ.. ಜಗನ್ಮಾತೆ ಎಂಬ ಗಾಯನದೊಂದಿಗೆ ಮುಕ್ತಾಯಗೊಳ್ಳುತ್ತದೆ. ಉದ್ಯಾವರರ ಸರಳ ಸಂಕ್ಷಿಪ ಆದರೂ ಸಮಗ್ರವಾಗಿ ಸೀತೆಯ ಪ್ರಶ್ನೆಗಳನ್ನು ಬಿಂಬಿಸುವ ಪಾಂಡಿತ್ಯಪೂರ್ಣ ಸಾಹಿತ್ಯಕ್ಕೆ ಭ್ರಮರಿಯವರ ಸುಶ್ರಾವ್ಯ ಕಂಠದಲ್ಲಿ, ಸಂಗೀತ ಸಾಥಿಯಲ್ಲಿ.. ಅವರ ತುಂಬಿದ ಬಸುರಿಯ ಸ್ಥಿತಿಯಲ್ಲಿನ ಅದ್ಭುತ ನರ್ತನ ಸೀತೆಯನ್ನು ನಮಗೆ ತಲುಪಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಸಾಹಿತ್ಯ ಪರಿಪಕ್ವವಾಗಿದ್ದರೂ ಈ ಕೃತಿಯನ್ನು ಸಹಜ ಸ್ಥಿತಿಯಲ್ಲಿ ಎಷ್ಟೇ ಸುಂದರವಾಗಿ ಸಂಕೀರ್ಣತೆಗಳಿಂದ ನರ್ತಿಸಿದ್ದರೂ ಸೀತೆ ನಮ್ಮನು ಇಷ್ಟು ಗಾಢವಾಗಿ ತಟ್ಟುತ್ತಿದ್ದಳೋ ಇಲ್ಲವೋ. ಭ್ರಮರಿಯವರು ಬಸುರಿಯ ಬಯಕೆಯೆಂಬಂತೆ ಈ ಒಂದು ಕೃತಿಯನ್ನು ಅನುಭವಿಸಿ ಅಭಿನಯಿಸಿದ್ದು ಸೀತೆಯ ಸ್ವಗತವನ್ನು ಅನಿರ್ವಚನೀಯ ಅನುಭವವನಾಗಿಸಿದೆ. ಅಲ್ಲಿಂದ ಹೊರಬಂದರೂ ಮನದಲ್ಲುಳಿಯುವುದು ಒಂದೇ ಭಾವ. "ಹೌದು.. ಕೊನೆಗೂ ಬಣ್ಣದ ಜಿಂಕೆ ಸಿಗಲಿಲ್ಲ ಸೀತೆಗೆ".

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X