ನ್ಯೂ ಜೆರ್ಸಿಯಲ್ಲಿ ಪುತ್ತಿಗೆ ಶ್ರೀಗಳ ಚಾತುರ್ಮಾಸ್ಯ
ಶ್ರೀಶ್ರೀಗಳು ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ತಾವು ಸಂಸ್ಥಾಪಿಸಿರುವ ಶ್ರೀ ಕೃಷ್ಣ ವೃಂದಾವನ ದೇಗುಲದಲ್ಲಿ ಶ್ರೀಕೃಷ್ಣಾಂಜನೇಯಗುರುಸಾರ್ವಭೌಮರ ಸನ್ನಿಧಾನದಲ್ಲಿ ತಮ್ಮ 36ನೆಯ ಚಾತುರ್ಮಾಸ್ಯ ವ್ರತದೀಕ್ಷೆಯನ್ನು ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಕೃಷ್ಣವೃಂದಾವನದಲ್ಲಿ ಶ್ರೀ ಶ್ರೀಗಳಿಂದ ಶ್ರೀರಾಮಕಥಾ, ಶ್ರೀ ಕೃಷ್ಣಕಥಾ, ಶ್ರೀಕೃಷ್ಣಚಿಂತನ ವೈಭವ, ಭಾಗವತ, ಭಗವದ್ಗೀತೆ, ರುಕ್ಮಿಣೀಶವಿಜಯಗಳ ನಿರಂತರ ಪ್ರವಚನಮಾಲಿಕೆ ಹಾಗೂ ಮಹಾಭಾರತ ತಾತ್ಪರ್ಯನಿರ್ಣಯ, ಯುಕ್ತಿಮಲ್ಲಿಕಾಗ್ರಂಥಗಳ ಪಾಠಮಾಲಿಕೆ, ಪ್ರಶ್ನೋತ್ತರ ಕಾರ್ಯಕ್ರಮಗಳೂ ನಡೆಯಲಿವೆ.
ಪ್ರತಿನಿತ್ಯ ಭಕ್ತರ ಮನೆಗಳಲ್ಲಿ ಸಾಯಂ ವಿಷ್ಣುಸಹಸ್ರನಾಮ ಪ್ರವಚನ ಹಾಗೂ ಸಾಮೂಹಿಕ ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಾಯಂಕಾಲದಲ್ಲಿ ಶ್ರೀ ಕೃಷ್ಣವೃಂದಾವನದಲ್ಲಿ ಮಕ್ಕಳಿಗಾಗಿ ಸಂಧ್ಯಾವಂದನೆ, ದೇವರಪೂಜೆ, ದೇವರನಾಮ, ಸ್ತೋತ್ರ ತರಗತಿಗಳೂ ನಡೆಯಲಿವೆ.
ಆಗಸ್ಟ್ 28ರಂದು ಸಾಮೂಹಿಕ ಶ್ರೀರಾಘವೇಂದ್ರ ಆರಾಧನಾ ಮಹೋತ್ಸವ, ಸೆಪ್ಟೆಂಬರ್ 6ರಂದು ವಿಶ್ವಕನ್ನಡಸಮ್ಮೇಳನದ ಅಕ್ಕ ಬಂಧುಗಳಿಗೆ ಆತಿಥ್ಯ, ಹಾಗೂ ಸಾಮೂಹಿಕ ಶ್ರೀಕೃಷ್ಣ ಲೀಲಾ ಮಹೋತ್ಸವವು ಜರಗಲಿದ್ದು ಸೆಪ್ಟೆಂಬರ್ 25ರಂದು ಚಾತುರ್ಮಾಸ್ಯ ಸಮಾರೋಪ ಸಮಾರಂಭದೊಂದಿಗೆ ಶ್ರೀಕೃಷ್ಣವೃಂದಾವನದಲ್ಲಿ ವೈಭವದ ಶ್ರೀನಿವಾಸಕಲ್ಯಾಣ ಮಹೋತ್ಸವವೂ ಜರಗಲಿದೆ.
ಚಾತುರ್ಮಾಸ್ಯದ ಸಂದರ್ಭದಲ್ಲಿ ಪ್ರತಿನಿತ್ಯ ಶ್ರೀಕೃಷ್ಣವೃಂದಾವನದಲ್ಲಿ ಸಾಂಸ್ಕೃತಿಕ ಮೌಲ್ಯಗಳ ಉತ್ತೇಜನಕ್ಕಾಗಿ ಭಾರತೀಯ ಮಕ್ಕಳ ಪ್ರತಿಭಾ ಪ್ರದರ್ಶನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುತ್ತಿದೆ.
ಹೆಚ್ಚಿನ ವಿವರಣೆಗಾಗಿ ಹಾಗೂ ಚಾತುರ್ಮಾಸ್ಯ ಪರ್ವಕಾಲದ ಸೇವಾ ವಿವರಗಳಿಗಾಗಿಯೂ [email protected] ಈಮೈಲನ್ನು, ಹಾಗೂ www.krishnavrunda.org ಅಂತರ್ಜಾಲತಾಣ ವನ್ನು ಅಥವಾ 732-589-8080,732-283-8982, 732-549-6959, ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.