ಕ್ಯಾಲಿಫೋರ್ನಿಯಾ ಗೆಳೆಯರಿಂದ ಹರಿಗೆ ಶ್ರದ್ಧಾಂಜಲಿ
ಆಗಸ್ಟ್ 1, ಭಾನುವಾರ ಬೆಳಿಗ್ಗೆ 10 ಗಂಟೆಗೆ ಹರಿಹರೇಶ್ವರ ಅವರ ಆಪ್ತ ಸ್ನೇಹಿತ ಶ್ರೀನಿವಾಸ ಭಟ್ಟರ ಮನೆಯಲ್ಲಿ ಒಂದು ಸಂತಾಪ ಸೂಚಕ ಸಭೆ ನಡೆಯಿತು. ಉತ್ತರ ಕ್ಯಾಲಿಫೋರ್ನಿಯಾದ ನಿವಾಸಿಯಾಗಿದ್ದ ಹರಿಹರೇಶ್ವರ ಅವರ ಸ್ನೇಹ ಬಳಗ ದಕ್ಷಿಣ ಕ್ಯಾಲಿಫೋರ್ನಿಯಾಗೂ ಹಬ್ಬಿತ್ತು. ಅವರು ಉತ್ತರ ಕ್ಯಾಲಿಫೋರ್ನಿಯಾದಲ್ಲಿದ್ದಾಗಲೂ ಹಾಗೂ ಮೈಸೂರಿನಲ್ಲಿದ್ದಾಗಲೂ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಔಪಚಾರಿಕವಾಗಿಯೇ ಪ್ರಾರಂಭವಾದ ಈ ಕಾರ್ಯಕ್ರಮ ಭಟ್ಟರಿಂದ ಹರಿಯವರೊಡನೆ ತಮ್ಮ ಸ್ನೇಹ ಸಂಬಂಧ ಬೆಳೆದ ರೀತಿ, ತಮ್ಮ ಇರಾನಿನ ದಿನಗಳು, ಅಮೆರಿಕನ್ನಡ ಪತ್ರಿಕೆಯ ದಿನಗಳು ಹೀಗೆ ಹಲವಾರು ನೆನಪುಗಳನ್ನು ಬಿಚ್ಚಿಟ್ಟರು.
ಕರ್ನಾಟಕ ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷರೂ ಹಾಗೂ ನಾವಿಕ ಸಂಸ್ಥೆಯ ಉಪಾಧ್ಯಕ್ಷರೂ ಆದ ವಲ್ಲೀಶ ಶಾಸ್ತ್ರಿ ಅವರು ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿ ಬರೆಯುವದಕ್ಕೆ ಹೇಗೆ ಉತ್ತೇಜಿಸುತ್ತಿದ್ದರೆಂಬುದನ್ನು ತಿಳಿಸಿದರು. ಇತ್ತೀಚೆಗೆ ನಡೆದ ನಾವಿಕ ಸಮ್ಮೇಳನದಲ್ಲಿ ಹೊರಬಂದಿರುವ "ಅಲೆವಾಣಿ" ಸ್ಮರಣ ಸಂಚಿಕೆಯನ್ನು ಹೊರತರುವುದರಲ್ಲಿ ಹರಿಕೊಟ್ಟ ಸೇವೆಯನ್ನು ನೆನೆಯುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಸಂಸಾರಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸಲು ದೇವರು ಶಕ್ತಿ ಕೊಡಲಿ ಎಂದರು.
ಹಿರಿಯ ಸಾಹಿತಿ ಹಾಗೂ ಹರಿಯ ಸ್ನೇಹಿತರೂ ಆದ ನಾಗ್ ಐತಾಳರು ಅವ್ರ ಮೇಲೆ ಬರೆದಿದ್ದ ಜಾನಪದ ಕವಿತೆಯ ಸಾಲನ್ನು ಓದಿ ಅವರೊಂದಿಗೆ ಕಳೆದ ಸಾಹಿತ್ಯ ಕ್ಷಣಗಳನ್ನು ನೆನೆದರು. ರಮೇಶ್ ಬಸವಾಪಟ್ಟಣ ಅವರು ನೆನೆದದ್ದು ಹರಿ ಅವರ "ಪರಕೀಯ" ಎಂಬ ಕವನವನ್ನು ಓದುವುದರ ಮೂಲಕ. ಹೀಗೆ ನೆರೆದಿದ್ದ ಎಲ್ಲಾ ಸಭಿಕರೂ ತಮ್ಮ ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು. ಬರೆಯುವವರಿಗೆ ಹುರಿದುಂಬಿಸುತ್ತಿದ್ದ ಒಬ್ಬ ಕನ್ನಡದ ಹುರಿಯಾಳುವನ್ನು ಕಳೆದುಕೊಂಡಿದ್ದು ಎಲ್ಲರ ಮನಸ್ಸಿನಲ್ಲಿ ಕಾಡುತ್ತಿತ್ತು.