ಬೇ ಏರಿಯಾದಲ್ಲಿ ಹರಿಹರೇಶ್ವರ ಶ್ರದ್ಧಾಂಜಲಿ ಸಭೆ
ವೇದಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಹರಿ ಅವರನ್ನು ಹತ್ತಿರದಿಂದ ಬಲ್ಲ ಸ್ನೇಹಿತರು, ಲೇಖಕರು, ಗಾಯಕರು ಹರಿ ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟದ ಅನುಭವಗಳನ್ನು ಸ್ಮರಿಸಿಕೊಂಡರು. ಹರಿ ಮತ್ತು ಅವರ ಪತ್ನಿ ನಾಗಲಕ್ಷ್ಮಿಯವರು ಒಂದು ವಿಮಾನದ ಜೋಡಿ ಪೈಲಟ್ ಗಳಿದ್ದಂತೆ ಇದ್ದರು. ಇಬ್ಬರಲ್ಲಿ ಯಾರು ಬೇಕಾದರೂ ಏನು ಬೇಕಾದರೂ ಮಾಡಬಲ್ಲರು. ಕನ್ನಡ ಕುಟುಂಬಗಳ ಸಂತೋಷಕ್ಕೆ ಮತ್ತು ಸಂಭ್ರಮಕ್ಕೆ ಅವರು ತಮ್ಮನ್ನು ಸದಾ ತೆರೆದುಕೊಂಡಿರುತ್ತಿದ್ದರು ಎನ್ನುವ ಅಂಶ, ನುಡಿ ನಮನ ಸಲ್ಲಿಸಿದ ಸಭಿಕರ ಒಟ್ಟಾರೆ ಅಭಿಪ್ರಾಯವಾಗಿತ್ತು.
ದಿವಂಗತ ಹರಿ ಒಬ್ಬರಿಗೆ ನಡೆದಾಡುವ ವಿಶ್ವಕೋಶದಂತೆ ಕಂಡರೆ ಇನ್ನೊಬ್ಬರಿಗೆ ಋಷಿ ಸಮಾನವಾಗಿ ಕಂಡುಬಂದರು. ಮತ್ತೊಬ್ಬರಿಗೆ ಲೇಖಕರಾಗಿ, ಮಗದೊಬ್ಬರಿಗೆ ಕನ್ನಡ ಕೆಲಸಗಳಿಗೆ ಸದಾ ಸ್ಫೂರ್ತಿಯ ಸೆಲೆಯಾಗಿದ್ದ ಕನ್ನಡ ಕಾರಂಜಿಯಂತೆ ಕಂಡರು. ಹೃದಯವಂತ, ಸ್ನೇಹ ಜೀವಿ ಮತ್ತು ಕನ್ನಡ ಬಂಧು ಹರಿಹರೇಶ್ವರ ಅವರು ಅಮೆರಿಕಾದಲ್ಲಿ ಮಾಡಿದ ಬಹುಮುಖಿ ಕನ್ನಡ ಸೇವೆಯ ಗುಣಗಾನವನ್ನು ಮಿತ್ರವೃಂದ ಶ್ರದ್ಧೆ ಮತ್ತು ಗೌರವದಿಂದ ಮಾಡಿತು.
ಹರಿಯವರ ಆತ್ಮೀಯ ಮಿತ್ರರು ಮತ್ತು ಶಿಷ್ಯಕೋಟಿಯಲ್ಲಿ ಒಬ್ಬರಾಗಿದ್ದ ಅಲಮೇಲು ಅಯ್ಯಂಗಾರ್ ಅವರ ಮುಂದಾಳತ್ವದಲ್ಲಿ ಶ್ರದ್ಧಾಂಜಲಿ ಸಭೆ ವ್ಯವಸ್ಥೆಯಾಗಿತ್ತು. ಹರಿಯವರಿಗೆ ಅಂತಿಮ ನಮನ ಸಲ್ಲಿಸಲು ಮೆಮೋರಿಯಲ್ ಸರ್ವಿಸಿಗೆ ಆಗಮಿಸಿ ತಮ್ಮ ಅನುಭವಗಳನ್ನು ಸ್ಮರಿಸಿಕೊಂಡ ಕನ್ನಡಿಗರ ಕೆಲವು ಹೆಸರುಗಳು ಇಂತಿವೆ.
ರವೀಂದ್ರನಾಥ್, ಸಂಧ್ಯಾ ರವೀಂದ್ರನಾಥ್, ವಿಶ್ವನಾಥ್ ಹುಲಿಕಲ್, ಅರಕೆರೆ ವಾಸುದೇವ್, ವಿಜಯ ಜೋಶಿ, ಪುಷ್ಪಾ ಸುಬ್ಬರಾವ್, ಕೃಷ್ಣಪ್ರಿಯ, ಶ್ರೀ ರಾಮ್ ಕೆದ್ಲಾಯ, ಪೂರ್ಣಿಮ ರಾಮಪ್ರಸಾದ್, ಮನೋರಮ ರಾವ್ ಮತ್ತು ಬಿ.ವಿ.ಮುರಳೀಧರ, ಪರಿಮಳ ಮುರಳೀಧರ, ಹರಿದಾಸ್, ಮೃತ್ಯುಂಜಯ ಹರ್ತಿಕೋಟೆ, ಶ್ರೀಲಕ್ಷ್ಮಿ ಮುದಿಗೆರೆ, ಅಲಮೇಲು ಅಯ್ಯಂಗಾರ್ ಮುಂತಾದವರು.
ಹರಿಯವರನ್ನು ಸ್ಮರಿಸಿಕೊಳ್ಳುವ ಅನೇಕ ಸಂತಾಪ ಸೂಚಕ ಸಂದೇಶಗಳು ಶ್ರದ್ಧಾಂಜಲಿ ಸಭೆಗೆ ಹರಿದು ಬಂದಿತ್ತು. ಕುಸುಮ ಭಟ್, ರಾಜ್ ಜೋಷಿ, ಡಾ. ನಾಗಭೂಷಣ್ ಮುಲ್ಕಿ, ಜ್ಯೋತಿ ಮಹದೇವ, ಎಸ್.ಕೆ ಶಾಮ ಸುಂದರ ಮುಂತಾದವರ ಸಂದೇಶಗಳನ್ನು ಓದಲಾಯಿತು. ಹರಿಯವರ ಜ್ಞಾಪಕಾರ್ಥ ಒಂದು ಬ್ಲಾಗ್ ತೆರೆಯಲಾಗಿದ್ದು ಆಸಕ್ತರು ತಮ್ಮ ಅನುಭವಗಳನ್ನು ಅಲ್ಲಿ ಬರೆದುಕೊಳ್ಳಬಹುದು.
ಶ್ರದ್ಧಾಂಜಲಿ ಸಭೆ [ಚಿತ್ರಗಳು:ರವಿ ಸುಬ್ಬರಾವ್]