ಕ್ಯಾಲಿಫೋರ್ನಿಯಾದಲ್ಲಿ ಚೆಂದದ ವನವಿಹಾರ
ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಂಘದ ವಾರ್ಷಿಕ ವನವಿಹಾರ ಕಾರ್ಯಕ್ರಮ ತುಂಬ ಚೆನ್ನಾಗಿತ್ತು. ಇಂಥ ಕಾರ್ಯಕ್ರಮಗಳು ನಮಗೆ ಇನ್ನೂ ಹೆಚ್ಚು ಬೇಕು ಎಂದು ವಿಹಾರದಲ್ಲಿ ಭಾಗವಹಿಸಿ ಸಂತೋಷಪಟ್ಟ ಲಾಸ್ ಏಂಜಲಿಸಿನ ಕನ್ನಡ ಮಕ್ಕಳು ಹೇಳಿದ್ದಾರೆ.
ವರ್ಷಕ್ಕೊಮ್ಮೆ ಏಕೆ, ವರ್ಷಕ್ಕೆ ಎರಡು ಬಾರಿ ಬರಲು ತಾವೆಲ್ಲರೂ ರೆಡಿ ಎಂದು ವಾಹನ ಚಾಲನೆ ಪರವಾನಗಿ ಹೊಂದಿರುವ ಮತ್ತು ಪರವಾನಗಿ ಪಡೆಯಲು ವಯೋಮಾನ ಅರ್ಹತೆಯನ್ನು ಇನ್ನೂ ಪಡೆಯದ ಮಕ್ಕಳು ಏಕಕಾಲಕ್ಕೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಆಟ ಊಟ ಓಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದಲ್ಲದೆ, ಜಾಸ್ತಿ ಇಂಗ್ಲಿಷ್ನಲ್ಲಿ ಮಾತನಾಡಿ ಹಿರಿಯರಿಂದ ಬಯ್ಯಿಸಿಕೊಂಡರೂ ಪಿಕ್ ನಿಕ್ ಅನ್ನು ಎಂಜಾಯ್ ಮಾಡಿದ ಮಕ್ಕಳು ಇನ್ನೊಂದು ವಿಹಾರಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ!
ಕನ್ನಡ ಕೂಟದ ಎಲ್ಲ ವಯಸ್ಸಿನ ಸದಸ್ಯರು ಕುಟುಂಬ ಪರಿವಾರ ಸಮೇತ ಭಾಗವಹಿಸುವುದಕ್ಕೆ ಅವಕಾಶ ಕೊಡುವ ವನವಿಹಾರ ಕಾರ್ಯಕ್ರಮವನ್ನು ದಕಾಕಸ ಕಳೆದ ವಾರಾಂತ್ಯ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸಪಟ್ಟ ಮಕ್ಕಳು ತಮ್ಮ ಸಂತೋಷವನ್ನು ದಟ್ಸ್ ಕನ್ನಡ ಸಂಪಾದಕರೊಂದಿದೆ ಇಮೇಲ್ ಮುಖಾಂತರ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಲಾಸ್ ಏಂಜಲಿಸ್ ನ ಪಸಡೀನ ಸಭಾಂಗಣದಲ್ಲಿ ಜರುಗಿದ ನಾವಿಕ ಸಮ್ಮೇಳನದ ನಾನಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹುರುಪು ಆರುವ ಮುನ್ನವೇ ವನವಿಹಾರ ಉತ್ಸವವನ್ನು ಸ್ಥಳೀಯ ಕನ್ನಡ ಸಂಘ ಏರ್ಪಡಿಸಿದ್ದು ಸಮಯೋಚಿತವಾಗಿತ್ತು.
ಅಂದಹಾಗೆ, ವನವಿಹಾರಕ್ಕೆ 250 ಜನ ಬಂದಿದ್ದರಂತೆ. ಇದು ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಸಂಘದ ಇತಿಹಾಸದಲ್ಲಿ ಒಂದು ದಾಖಲೆ ಎನಿಸಿದೆ ಎಂದು ಸಂಘದ ಅಧ್ಯಕ್ಷೆ ಕವಿತಾ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮನ್ನು ಯಶಸ್ವಿಗೊಳಿಸಿದಲು ಶ್ರಮವಹಿಸಿದ ಶಂಖಂ ಜಗನ್ನಾಥ್ ಮತ್ತು ಸೋಮು ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ಕಳೆದ ವಾರ ಏರ್ಪಡಿಸಲಾಗಿದ್ದ ಕೂಟದ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಮುತುವರ್ಜಿಯಿಂದ ವ್ಯವಸ್ಥೆಗೊಳಿಸಿದ ಸ್ವಯಂಸೇವಕರನ್ನು ಕವಿತಾ ಪ್ರಶಂಸಿದ್ದಾರೆ.
ಕೂಟದ ಮುಂದಿನ ಕಾರ್ಯಕ್ರಮ ಸಾಮೂಹಿಕ ಗಣೇಶೋತ್ಸವ. ಇದನ್ನು ಸ್ಥಳೀಯ ಜೈನ್ ಟೆಂಪಲ್ ನಲ್ಲಿ ಸೆಪ್ಟೆಂಬರ್ 19ರ ಭಾನುವಾರ ಆಯೋಜಿಸಲಾಗಿದ್ದು ಭಕ್ತಾದಿಗಳು ದೇವತಾ ಕಾರ್ಯಕ್ರಮದಲ್ಲಿ ಬಹುಸಂಖ್ಯೆಯಲ್ಲಿ ಭಾಗವಹಿಸಿ ಗಣೇಶನ ಕೃಪೆಗೆ ಪಾತ್ರರಾಗಬೇಕೆಂದು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯ ಕುಟುಂಬಗಳನ್ನು ವಿನಂತಿಸಿಕೊಂಡಿದ್ದಾರೆ. ಹೆಚ್ಚಿನ ವಿವರಗಳನ್ನು ಕೂಟದ ಮಾಸ್ ಇಮೇಲ್ ಮೂಲಕ ರವಾನಿಸಲಾಗುತ್ತದೆ.