ಸಹ್ಯಾದ್ರಿಯಲ್ಲಿ ಸರದೇಶಪಾಂಡೆ ರಾಶಿಚಕ್ರ ಪ್ರಯೋಗ
ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಸರದೇಶಪಾಂಡೆಯವರನ್ನು ಭೇಟಿ ಮಾಡಿ ಅವರೊಡನೆ ನನ್ನ ಸಂಶಯವನ್ನು ಹಂಚಿಕೊಂಡೆ. ಆದರೆ ಕಾರ್ಯಕ್ರಮ ನೋಡಿದ ಮೇಲೆ ನನ್ನ ಸಂಶಯವೆಲ್ಲ ವ್ಯರ್ಥವೆಂದು ಅರಿವಾಯಿತು, ಇಂತಹ ಉತ್ತಮ ಕಾರ್ಯಕ್ರಮ ನೋಡುತ್ತ, ಎರಡುವರೆ ಗಂಟೆಗಳು ಹೇಗೆ ಕಳೆದುವೋ ಗೊತ್ತಾಗಲಿಲ್ಲ. ಪ್ರಾರಂಭದಲ್ಲಿ ಸಮಿತಿಯ ರಮ್ಯ ರಾಜಶೇಖರ ಅವರಿಂದ ಕಾರ್ಯಕ್ರಮಗಳ ವಿವರ, ಶಾಮ್ ಬೆಂಗಳೂರು ಅವರಿಂದ ಯಶವಂತ ಸರದೇಶಪಾಂಡೆ ಅವರ ಪರಿಚಯ ಆದ ಮೇಲೆ ರಾಶಿಚಕ್ರ ಕಾರ್ಯಕ್ರಮ ಪ್ರಾರಂಭವಾಯಿತು.
ಯಶವಂತ ಸರದೇಶಪಾಂಡೆ ರಾಶಿಚಕ್ರ ವಿಡಿಯೋ
ಹನ್ನೆರಡು ರಾಶಿಗಳ ಜನರ ಮುಖ್ಯ ಗುಣಗಳನ್ನು ವಿಡಂಬನಾತ್ಮಕವಾಗಿ ಪರಿಶೀಲಿಸಿ, ಪರಸ್ಪರ ಸಂಬಂಧಗಳನ್ನು ಹಾಸ್ಯನೋಟದಿಂದ ಅವಲೋಕಿಸಿ ತಮ್ಮದೇ ಆದ ಶೈಲಿಯಲ್ಲಿ, ಪ್ರೇಕ್ಷಕರನ್ನು ನಗಿಸಿ ನಲಿಸುವುದರಲ್ಲಿ ಯಶವಂತ ಯಶಸ್ವಿ ಆದರು. ಮನುಷ್ಯರೆಂದ ಮೇಲೆ ಎಲ್ಲರಿಗೂ ತಮ್ಮದೇ ವಿಶಿಷ್ಟವಾದ ಪ್ರಬಲ, ಅಬಲಗುಣಗಳು ಇದ್ದೇ ಇರುತ್ತವೆ. ಪರಸ್ಪರ ಸಂಬಂಧಗಳಲ್ಲಿ ಈ ವೈಪರೀತ್ಯ ಸ್ಪಷ್ಟವಾಗಿ ಪ್ರಕಟವಾಗುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಹಾಸ್ಯದ ದೃಷ್ಟಿಯಿಂದ ನೋಡಿದಾಗ, ಅದನ್ನು ಹಾವಭಾವ ಪೂರಿತವಾಗಿ ಪ್ರಕಟಿಸಿದಾಗ, ನೆರೆದ ಪ್ರೇಕ್ಷಕರಿಗೆ ರಸದೌತಣ ದೊರೆಯುತ್ತದೆ. ಈ ನಿಟ್ಟಿನಲ್ಲಿ ಯಶವಂತ ಅವರ ಪಳಗಿದ ನಟನೆ, ಪ್ರಬುದ್ಧ ಸಂಭಾಷಣೆ, ಸೂಕ್ಷ್ಮ ಕಲೆಗಾರಿಕೆಗಳು ನೆರೆದ ಜನಸಮೂಹಕ್ಕೆ ತಮ್ಮ ಹಳೆಯ ನೆನಪುಗಳನ್ನು ತಂದವಲ್ಲದೇ, ಬಂದವರೆಲ್ಲರನ್ನೂ ಕಾರ್ಯಕ್ರಮದ ಉದ್ದಕ್ಕೂ ನಗೆಯ ಕಡಲಿನಲ್ಲಿ ತೇಲಿಸಿದುವು.
ಎರಡುವರೆ ಗಂಟೆಗಳ ಮನರಂಜನೆಯನ್ನು ಸಲೀಸಾಗಿ ನೀಡಿದ ಯಶವಂತ ಸರದೇಶಪಾಂಡೆಯವರಿಗೆ ಮತ್ತು ಈ ಅಮೂಲ್ಯ ರಸ ಸಂಜೆಯ ಅವಕಾಶವನ್ನು ಒದಗಿಸಿದ ಸಹ್ಯಾದ್ರಿ ಕನ್ನಡ ಕೂಟದ ಸಮಿತಿಯವರಿಗೆ ನಮ್ಮೆಲ್ಲರ ಅಭಿನಂದನೆ ಸಲ್ಲಲೇಬೇಕು. ಇಂತಹ ಉತ್ತಮ ಕಲಾವಿದರನ್ನು ಇನ್ನೂ ಸಹ್ಯಾದ್ರಿ ಕನ್ನಡ ಕೂಟದ ನಾಗೇಂದ್ರ ಮತ್ತು ಸ್ನೇಹಿತರು ಕರೆಸಲಿ ಮುಂದೆಯೂ ಇಂತ ಉತ್ತಮ ಕಲಾವಿದರನ್ನು ನೋಡುವ ಅವಕಾಶ ನಮಗೆಲ್ಲರಿಗೂ ದೊರೆಯಲಿ ಎಂದು ಹಾರೈಸುತ್ತೇನೆ.