ಅಣು ತ್ಯಾಜ್ಯ ನಿರ್ವಹಣೆ ನಿಸ್ಸೀಮ ಕನ್ನಡಿಗ
ಜೂನ್ 16ರಂದು ರಾಕ್ವಿಲ್ನಲ್ಲಿ ಜರುಗಿದ 33ನೇ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರತಿಷ್ಠಿತ NRC ಪ್ರಶಸ್ತಿಯನ್ನು ಡಾ. ನಟರಾಜ ಅವರು ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ಅತ್ಯುನ್ನತ ಸೇವೆ ಮತ್ತು ಸಾಧನೆ ಅಥವಾ ಅಸಾಧಾರಣ ಮೌಲ್ಯವುಳ್ಳ ಸೇವೆ ಸಲ್ಲಿಸಿದವರಿಗೆ ಎನ್ಆರ್ ಸಿ ನೀಡುತ್ತ ಬಂದಿದೆ. ಪ್ರಶಸ್ತಿಯು ಒಂದು ಫಲಕ, ಪ್ರಶಸ್ತಿ ಭಾಜನರ ಹೆಸರಿರುವ ಬೆಳ್ಳಿ ಪದಕ ಮತ್ತು ನಗದನ್ನು ಒಳಗೊಂಡಿರುತ್ತದೆ.
ನ್ಯೂಕ್ಲಿಯರ್ ನಿಯಂತ್ರಣಾ ಆಯೋಗದಲ್ಲಿ ದಶಕ ಕಾಲ ತಾಂತ್ರಿಕ ತಜ್ಞರಾಗಿ ಎಂಎಸ್ಎನ್ ದುಡಿದ್ದಾರೆ. ಅಣು ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸಂಬಂಧಿಸಿದಂತೆ ಆಯೋಗದ ಆಶೋತ್ತರಗಳು ಮತ್ತು ನಿಶ್ಚಿತ ಗುರಿಯನ್ನು ತಲಪುವಲ್ಲಿ ನಟರಾಜ ಅವರು ನಿರಂತರವಾಗಿ ನೀಡಿರುವ ಅತ್ಯುತ್ಕೃಷ್ಟ ಸೇವೆಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯುಕ್ಕಾ ಪರ್ವತದಲ್ಲಿರುವ ಉನ್ನತ ಮಟ್ಟದ ನ್ಯೂಕ್ಲಿಯರ್ ತ್ಯಾಜ್ಯ ಉಗ್ರಾಣದ ನಿರ್ಮಾಣ, ನಿರ್ವಹಣೆ ಮತ್ತು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ನಟರಾಜ ಅವರ ಸೇವೆ ಅಸಾಧಾರಣ ಎಂದು NRC ಶ್ಲಾಘಿಸಿದೆ. ನಟರಾಜ್ ಅವರು ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಇಂಜಿನಿಯರ್ಸ್ ಸಂಸ್ಥೆಯ ಫೆಲೋ ಆಗಿದ್ದಾರೆ.
ಹೆಮ್ಮೆಯ ಕನ್ನಡಿಗ : ಅಮೆರಿಕಾದ ಪೂರ್ವ ಕರಾವಳಿ ಮೇರಿಲ್ಯಾಂಡ್ ನಿವಾಸಿಯಾಗಿರುವ ಮೈಸೂರು ನಟರಾಜ ಅವರಿಗೆ ಕನ್ನಡ ಭಾಷೆಯಲ್ಲಿ ಸಲ್ಲುವ ಪ್ರತಿಯೊಂದರ ಬಗ್ಗೆಯೂ ತುಂಬಾ ಇಷ್ಟ. ಅವರು ಕನ್ನಡದ ಓರ್ವ ಪ್ರಬುದ್ಧ ಬರಹಗಾರರು ಕೂಡ. ಆಶು ಕವಿತೆ, ಚಾಟೂಕ್ತಿ, ಸಂಗೀತ ವಿಮರ್ಶೆ, ಪ್ರಬಂಧ ಗುಚ್ಛಗಳಲ್ಲದೆ ಅಂತರ್ಜಾಲ ತಾಣದಲ್ಲಿ ಅಂಕಣಕಾರರಾಗಿಯೂ ಅವರು ಕನ್ನಡ ಓದುಗರಿಗೆ ಚಿರಪರಿಚಿತರು. ಮೂರು ದಶಕಗಳಿಂದ ಅಮೆರಿಕಾದಲ್ಲಿ ನೆಲೆಸಿರುವ ಎಂಎಸ್ಎನ್, ವಾಷಿಂಗ್ಟನ್ ಡಿಸಿ ಪ್ರದೇಶದ ಕನ್ನಡ ಬಳಗ, ಕಾವೇರಿ ಕನ್ನಡ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಕನ್ನಡ ಸಾಹಿತ್ಯ ರಂಗದ ಸಕ್ರಿಯ ಸದಸ್ಯರೂ ಆಗಿದ್ದಾರೆ.