ಅಮೆರಿಕದ ನಾಗಭೂಷಣ ಮೂಲ್ಕಿಗೆ ಮೂರು ಪ್ರಶಸ್ತಿ
ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮತ್ತು ಸಾಹಿತ್ಯ ಹಾಗು ಸಂಸ್ಕೃತಿ ಸಂಸ್ಥೆ, ಮೈಸೂರು, ಕರ್ನಾಟಕ, ಬೆಳ್ಳಿ ಹಬ್ಬದ ಅಂಗವಾಗಿ ನಡೆಸಲಾದ ರಾಜ್ಯ ಮಟ್ಟದ ಕವನ ಸಂಕಲನ ಸ್ಪರ್ಧೆಯಲ್ಲಿ ಡಾ. ನಾಗಭೂಷಣ ಮೂಲ್ಕಿ ಅವರ ಮೊದಲ ಕವನ ಸಂಕಲನ "ಭಾವ ತರಂಗ"ಕ್ಕೆ ರಾಜ್ಯ ಪ್ರಶಸ್ತಿಯಾದ "ಡಾ. ಎಚ್ಕೆ ಕಾವ್ಯ ಪ್ರಶಸ್ತಿ" ನೀಡಲಾಗಿದೆ.
ಇವೇ ಸಂಸ್ಥೆ ಬೆಳ್ಳಿ ಹಬ್ಬದ ಪ್ರಯುಕ್ತ ವರ ಕವಿ ದ.ರಾ. ಬೇಂದ್ರೆ ಅವರ ನೆನಪಿನಲ್ಲಿ ನಡೆಸಲಾಗುವ 200ನೇ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಡಾ. ನಾಗಭೂಷಣ ಮೂಲ್ಕಿ ಅವರ ಕವನಕ್ಕೆ ರಾಜ್ಯ ಪ್ರಶಸ್ತಿಯಾದ "ವರ ಕವಿ ದ.ರಾ. ಬೇಂದ್ರೆ ಕಾವ್ಯ ಪುರಸ್ಕಾರ" ನೀಡಲಾಗಿದೆ.
ಕನ್ನಡ ಸಾಹಿತ್ಯ ಮತ್ತು ಸಂಸೃತಿ ಸಮ್ಮೇಳನ ಕರ್ನಾಟಕ ಜಾಗೃತಿ ವೇದಿಕೆ , ಹೈದರಾಬಾದ್ ಕರ್ನಾಟಕ ಸಾಂಸ್ಕೃತಿಕ ಕಲಾ ಕೇಂದ್ರ ಮತ್ತು ನಾಗರಿಕ ವೇದಿಕೆ, ಬೆಂಗಳೂರು, ಕರ್ನಾಟಕ, ಜಂಟಿಯಾಗಿ ನಡೆಸುವ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕನ್ನಡ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಕೊಡಲಾಗುವ "ಶ್ರೀ ರಾಘವೇಂದ್ರ ಸದ್ಭಾವನ ಪ್ರಶಸ್ತಿ "ಯನ್ನು ಡಾ. ನಾಗಭೂಷಣ ಮೂಲ್ಕಿ ಅವರಿಗೆ ನೀಡಲಾಗಿದೆ.
"ಭಾವ ತರಂಗ" ಕವನ ಸಂಕಲನವು ಅಮೇರಿಕದ ಚಿಕಾಗೊದಲ್ಲಿ 2008ನೇ ಇಸವಿಯಲ್ಲಿ ನಡೆದ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಯಾಗಿತ್ತು. ಅಲ್ಲದೆ, ಜೂನ್, 2009ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ ಬಿಡುಗಡೆಯಾಗಿತ್ತು. "ಉಷಾರಾಗ ದೀಪಿಕಾ" ಮತ್ತು "ಉಷಾ ಬಸವ ವೈಭವ" ಸ್ವರಚಿತ ಕವನಗಳ ಧ್ವನಿಮುದ್ರಿಕೆಯ ನಿರ್ದೇಶನ ಮತ್ತು ಪ್ರಕಾಶನ 2009ರಲ್ಲಿ ಮಾಡಿರುತ್ತಾರೆ.
ಡಾ. ನಾಗಭೂಷಣ ಮೂಲ್ಕಿ ಅವರಿಗೆ ದಟ್ಸ್ ಕನ್ನಡದ ಹಾರ್ದಿಕ ಶುಭಾಶಯಗಳು.