ತೆಂಗಿನಕಾಯಿಗೆ ಸಬ್ಸ್ಟಿಟ್ಯೂಟ್ ಜುಟ್ಟು!
ಮಿನ್ನೆಸೊಟಾದಲ್ಲಿರುವ ಶ್ರೀಲಕ್ಷ್ಮೀ ಹೊನ್ನವಳ್ಳಿ ಅದೆಲ್ಲ ಸಮಸ್ಯೆಯೇ ಬೇಡ ಅಂತ ಭಾರತದಿಂದ ಬೆಳ್ಳಿಯ ಹೂಗಳು, ಬೆಳ್ಳಿಯ ವೀಳ್ಯದೆಲೆ (ಬೆಳ್ಳಿಯ ತೆಂಗಿನಕಾಯಿ ಸಹ?) ತಂದಿಟ್ಟುಕೊಂಡಿದ್ದಾರಂತೆ. ಒಂದೆಡೆ ಭಕ್ತಿಯೂ ಆಯ್ತು, ಮತ್ತೊಂದೆಡೆ ರೀಯೂಸ್/ರೀಸೈಕ್ಲಿಂಗ್ ಮಂತ್ರದ ಪರಿಪಾಲನೆಯೂ ಆದಂತಾಯ್ತು! ಟೆಕ್ಸಸ್ನಲ್ಲಿರುವ ಮೀನಾ ಭಾರದ್ವಾಜ್ ಅವರಂತೂ ತೆಂಗಿನಕಾಯಿ ಬಳಸೋದೇ ಇಲ್ಲ. ಸತ್ಯನಾರಾಯಣ ವ್ರತಕಥೆಯ ವೇಳೆ ಒಂದೊಂದು ಅಧ್ಯಾಯದ ನಂತರ ಒಂದೊಂದು ತೆಂಗಿನಕಾಯಿ ಒಡೆದು ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳುವುದೇಕೆ ಅಂತ ತೆಂಗಿನಕಾಯಿ ಬದಲಿಗೆ ಕಿತ್ತಳೆ, ಸೇಬು ಹಣ್ಣಿನ ನೈವೇದ್ಯ ಮಾಡ್ತಾರಂತೆ.
ಇವೆಲ್ಲಕ್ಕಿಂತಲೂ ಹೃದಯಸ್ಪರ್ಶಿಯಾದ ಒಂದು ಸಬ್ಸ್ಟಿಟ್ಯೂಟ್ ಸಂಸ್ಕೃತಿ ಅನುಭವ ಬರೆದಿದ್ದಾರೆ ಗುರುಭೀಮ ಜೋಯಿಸ್. ನಾಲ್ಕು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡರು. ಉತ್ತರಕ್ರಿಯೆ ವಿಧಿಗಳನ್ನೆಲ್ಲ ಪೂರೈಸಿ ನಾನು ಟಾಂಜಾನಿಯಾಕ್ಕೆ ಹಿಂದಿರುಗುವಾಗ ನಮ್ಮಪ್ಪ ಹೇಳಿದ್ದರು- ಪ್ರತಿ ತಿಂಗಳು ಮಾಸಿಕ ಮಾಡುವುದು ಹೇಗೆ ಅಂತ ಚಿಂತೆ ಮಾಡಬೇಡ. ಅಲ್ಲೇ ಆಕಳಿಗೆ ಸ್ವಲ್ಪ ಬೆಲ್ಲ ಮತ್ತು ಅಕ್ಕಿ ತಿನ್ನಲು ಮುಂದಿಟ್ಟು ನೀನು ಪ್ರದಕ್ಷಿಣೆ ಮಾಡು. ಅಷ್ಟು ಸಾಕು. ನನಗೂ ಸ್ವಲ್ಪ ನೆಮ್ಮದಿ ಅನಿಸ್ತು. ಆದರೆ ಅದು ಎಷ್ಟು ಕಷ್ಟಕರ ಎಂದು ಇಲ್ಲಿಗೆ ಬಂದಮೇಲೆ ತಿಳಿಯಿತು. ಆಕಳನ್ನು ಹುಡುಕುವುದೇ ಒಂದು ಯಜ್ಞ. ಒಂದು ಹುಲ್ಲುಗಾವಲಿದೆ, ಅಲ್ಲಿ ದನಗಳು ಮೇಯುವದನ್ನು ನೋಡಿದ್ದೇವೆ, ಆದರೆ ನೀನು ಅಕ್ಕಿಬೆಲ್ಲ ಇಟ್ಟು ಪ್ರದಕ್ಷಿಣೆ ಮಾಡೋದನ್ನು ಸ್ಥಳಿಯರು ನೋಡಿದರೆ ನೀನು ಪೋಲಿಸ್ ಸ್ಟೇಷನ್ ಪ್ರದಕ್ಷಿಣೆ ಮಾಡಬೇಕಾಗಿ ಬರುತ್ತೆ ಜಾಗ್ರತೆ! ಅಂತ ಹೆದರಿಸಿದರು ನನ್ನ ಕೆಲ ಸ್ನೇಹಿತರು/ಸಹೋದ್ಯೋಗಿಗಳು. ಬೇರೇನೂ ಮಾಡಲಾಗದೆ ಅಲ್ಲೇ ಕೃಷ್ಣನಗುಡಿ ಹುಂಡಿಯಲ್ಲಿ ಕಾಣಿಕೆ ಸಲ್ಲಿಸಿ ಸುಮ್ಮನಾದೆ.
ನನಗೆ ಶರಪಂಜರ ಚಿತ್ರದ ಹಾಡಿನ ಸಾಲುಗಳು ನೆನಪಾಗ್ತಿವೆ. ಮುತ್ತುಗದ ಹೂವು ಮಲ್ಲಿಗೆಯೇ, ಅತ್ತಿಯ ಹಣ್ಣು ಅಂಜೂರವೇ... ಬೆಟ್ಟದ ಕಾಳ್ಗಿಚ್ಚು ದೀಪವೇ ಬಿರುಗಾಳಿ ಕೆಂಧೂಳಿ ಧೂಪವೇ... ಮೋಹದಾ ವೇಷ ಭಕ್ತಿಯೇ ಸವಿಯಾದುದೆಲ್ಲ ನೈವೇದ್ಯವೇ... ಅಂದಹಾಗೆ, ಕನ್ನಡನಾಡಿನಲ್ಲಿದ್ದುಕೊಂಡು ನೀವು ಸಹ ಯಾವ ಥರದಲ್ಲಾದರೂ ಈರೀತಿಯ ಸಬ್ಸ್ಟಿಟ್ಯೂಟ್ ಸಂಸ್ಕೃತಿಯನ್ನು ಅನುಸರಿಸುತ್ತೀರಾ? ಸ್ವಾರಸ್ಯಕರವಿದ್ದರೆ ಬರೆದು ತಿಳಿಸುತ್ತೀರಾ?
(ಸ್ನೇಹಸೇತು : ವಿಜಯ ಕರ್ನಾಟಕ (ಪರಾಗಸ್ಪರ್ಶ ಅಂಕಣ))
ಸಬ್ಸ್ಟಿಟ್ಯೂಟ್ ಸಂಸ್ಕೃತಿ : ಲೇಖನದ ಮೊದಲ ಭಾಗ