ಬಿಡುಬಿಡು ಎಲ್ಲ ಚಿಂತ್ಯ, ತಿಂದುಬಿಡು ಬೆಲ್ಲ ಮೆಂತ್ಯ!
ರಾವಣವಧೆಯ ತರುವಾಯ ಲಂಕೆಯಿಂದ ಮರಳಿದ ಶ್ರೀರಾಮಚಂದ್ರ ಬ್ರಹ್ಮಹತ್ಯಾದೋಷದಿಂದ ಪಾರಾಗಲು ಶಿವಪೂಜೆ ಮಾಡಬೇಕಾಯ್ತು. ಪುಷ್ಪಕವಿಮಾನ ಭೂಸ್ಪರ್ಶ ಮಾಡಿದ ಆ ಸಮುದ್ರತೀರದಲ್ಲಿ ಪೂಜೆಗೆ ಶಿವಲಿಂಗ ಎಲ್ಲಿಂದ? ಸೀತೆ ಮರಳಿನಿಂದಲೇ ಸಬ್ಸ್ಟಿಟ್ಯೂಟ್ ಶಿವಲಿಂಗವೊಂದನ್ನು ನಿರ್ಮಿಸಿದಳು. ರಾಮ ಅದನ್ನೇ ಪೂಜಿಸಿದ. ಆಮೇಲೆ ಆ ಸ್ಥಳ ರಾಮೇಶ್ವರಮ್ ಕ್ಷೇತ್ರವಾಗಿ ಹೆಸರಾಯಿತು. ಏಕಲವ್ಯನಿಗೆ ಖುದ್ದಾಗಿ ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ಕಲಿಯುವ ಭಾಗ್ಯವಿಲ್ಲವಾದಾಗ ಆತ ದ್ರೋಣರ ವಿಗ್ರಹ ರಚಿಸಿ ಅದನ್ನೇ ತನ್ನ ಸಬ್ಸ್ಟಿಟ್ಯೂಟ್ ಗುರುವೆಂದು ಬಗೆದು ಸ್ವಪ್ರಯತ್ನದಿಂದ ವಿದ್ಯಾರ್ಜನೆಗೈದ; ತನ್ನ ಹೆಬ್ಬೆರಳನ್ನೇ ಸಬ್ಸ್ಟಿಟ್ಯೂಟ್ ಗುರುದಕ್ಷಿಣೆಯಾಗಿ ಕೊಟ್ಟ. ಭರತ ತನ್ನಣ್ಣನ ಪಾದುಕೆಗಳನ್ನು ಹೊತ್ತುತಂದು ಸಬ್ಸ್ಟಿಟ್ಯೂಟ್ ಶ್ರೀರಾಮಚಂದ್ರನೆಂದು ಅವುಗಳನ್ನೇ ಸಿಂಹಾಸನದಲ್ಲಿಟ್ಟು ಹದಿನಾಲ್ಕು ವರ್ಷ ರಾಜ್ಯಭಾರ ನಡೆಸಿ ಭ್ರಾತೃಪ್ರೇಮದ ಪರಾಕಾಷ್ಠೆ ತೋರಿದ. ಸಿರಿವಂತಸ್ನೇಹಿತನಿಗೆ ದುಬಾರಿ ಉಡುಗೊರೆ ಕೊಡಲು ತನ್ನಲ್ಲೇನೂ ಇಲ್ಲದಾದಾಗ ಹರಕುಜೋಳಿಗೆಯಲ್ಲಿ ಒಂದು ಹಿಡಿ ಅವಲಕ್ಕಿಯನ್ನೇ ಸಬ್ಸ್ಟಿಟ್ಯೂಟ್ ಮಾಡಿಕೊಂಡ ಬಡ ಸುದಾಮ. ಪಾರಿವಾಳದ ಪ್ರಾಣರಕ್ಷಣೆಗಾಗಿ ತನ್ನ ತೊಡೆಯ ಮಾಂಸವನ್ನೇ ಸಬ್ಸ್ಟಿಟ್ಯೂಟ್ ಆಗಿ ಅರ್ಪಿಸಿದ ಶಿಬಿ ಚಕ್ರವರ್ತಿ. ಭಾರತೀಯ ಪುರಾಣಗಳಲ್ಲಿ ಸಬ್ಸ್ಟಿಟ್ಯೂಟ್ ಸಂಸ್ಕೃತಿಯ ಉದಾಹರಣೆಗಳಿಗೆ ಲೆಕ್ಕವಿಲ್ಲ.
ಅದು ಪುರಾಣಗಳ ಮಾತಾಯ್ತು. ನಾವಿರುವುದು 21ನೇ ಶತಮಾನದಲ್ಲಿ. ಬೇಕೆನಿಸಿದ್ದೆಲ್ಲ ಬೇಕೆಂದ ಕ್ಷಣದಲ್ಲಿ ಬೆರಳತುದಿಯಲ್ಲೇ ಸಿಗುತ್ತದೆ ಎಂಬ ಭ್ರಮಾಲೋಕದಲ್ಲಿ. ಆದರೂ ಎಷ್ಟೋಸರ್ತಿ ನಮಗೆ ಬೇಕಾದ ವಸ್ತುಗಳು ಬೇಕೆನಿಸಿದ ಸಂದರ್ಭದಲ್ಲಿ ಸಿಗುವುದಿಲ್ಲ. ತಾಯ್ನೆಲದಿಂದ ಬಹುದೂರ ಹೋಗಿ ಪ್ರಪಂಚದ ಯಾವ್ಯಾವುದೋ ಮೂಲೆಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನೊಮ್ಮೆ ಕೇಳಿ ನೋಡಿ. ಮುಖ್ಯವಾಗಿ ಹಬ್ಬ-ಹರಿದಿನಗಳ ಆಚರಣೆಯ ವೇಳೆ ಅವರು ಇದನ್ನು ಬಹಳವಾಗಿ ಅನುಭವಿಸುತ್ತಾರೆ. ಸಂಕ್ರಾಂತಿ ಬಂತೆಂದರೆ ಕಬ್ಬಿನಜಲ್ಲೆ, ಯುಗಾದಿಯಂದು ಮುಂಬಾಗಿಲಿಗೆ ತೋರಣ ಕಟ್ಟಲಿಕ್ಕೆ ಮಾವಿನೆಲೆ, ಬೇವುಬೆಲ್ಲ ತಯಾರಿಸಲಿಕ್ಕೆ ಬೇವಿನ ಸೊಪ್ಪು, ಗೌರಿಹಬ್ಬ-ವರಮಹಾಲಕ್ಷ್ಮೀ ಪೂಜೆಗೆ ಬಾಳೆದಿಂಡು, ಮಲ್ಲಿಗೆ ಸೇವಂತಿಗೆ ಹೂವಿನ ರಾಶಿ... ಭಾರತದಲ್ಲಿದ್ದರೆ ಹಬ್ಬದ ತಯಾರಿಯ ಸಂಭ್ರಮವೇ ಬೇರೆ. ಇಡೀ ವಾತಾವರಣಕ್ಕೆ ವಿಶೇಷ ಕಳೆ. ಆದರೆ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಈಜಿಪ್ಟ್, ಉರುಗ್ವೇ... ಹೀಗೆ ಪರದೇಶಗಳಲ್ಲಿ ಎಲ್ಲಿ ಸಿಗಬೇಕು ಆ ಸಂಭ್ರಮ? ಹಬ್ಬದಾಚರಣೆಗೆ ಬೇಕಾದ ಸಾಂಪ್ರದಾಯಿಕ ವಸ್ತುಗಳು ಇಲ್ಲಿ ದೊರಕುವುದಿಲ್ಲ. ಹಾಗಂತ ಹಬ್ಬವನ್ನೇ ಆಚರಿಸದಿರಲಿಕ್ಕಾಗ್ತದಾ? ಆವಾಗ ನೆರವಿಗೆ ಬರುವುದೇ ಈ ಸಬ್ಸ್ಟಿಟ್ಯೂಟ್ ಸಂಸ್ಕೃತಿ. ಅನುಕೂಲಶಾಸ್ತ್ರ ಅಥವಾ 'ಅಡ್ಜಸ್ಟ್ಮೆಂಟ್ ಶಾಸ್ತ್ರ'.
ಮುಂದೆ ಓದಿ : ಒಂದಕ್ಕಿಂತ ಒಂದು ಕ್ರಿಯೇಟಿವ್ ಐಡಿಯಾ »