ಆಕ್ಲೆಂಡಿನಲ್ಲಿ ಹರಿಹರದಾಸ ಸಂಗೀತ ಸಮಾರಾಧನೆ
ಮೌಂಟ್ ಈಡನ್ ಹಿರಿಯ ನಾಗರಿಕರ ಸಭಾಂಗಣದಲ್ಲಿ ಆಯೋಜಿಸಿದ್ದ ಆರಾಧನೆ, ದಿವಾಕರ್ ಮತ್ತು ಅವರ ಪತ್ನಿ ಶಾಂತಾ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾಯಿತು. ಮೊದಲು ಅತಿ ಕಿರಿಯ ವಿದ್ಯಾರ್ಥಿಗಳು ವೃಂದಗಾನದಲ್ಲಿ ಶ್ರೀ ಗಣನಾಥಾ, ಕೆರೆಯ ನೀರನು ಕೆರೆಗೆ ಚೆಲ್ಲುತ, ಪದುಮನಾಭ ಮುಂತಾದ ಜನಪ್ರಿಯ ಪುರಂದರ ಕೃತಿಗಳನ್ನು ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಕು. ಮೃದುಲಾ ಪ್ರವೀಣ್, ಆದ್ಯ [ಜ್ಞಾನದ ಬಲದಿಂದ], ಶೃತಿ, ಸುಷ್ಮಿತಾ ದೇಶಪಾಂಡೆ, ಅನಘ, ಇಂದು [ರಾಮ ನಾಮ ಭಜಿಸುವವಗೆ], ಚಿ.ಸಾಕೆತ್ [ಇನ್ನೂ ದಯಬಾರದೆ], ವಿಷ್ಣಿ [ಗೋವಿಂದ ನಿನ್ನ ನಾಮವೇ ಚಂದ], ಸ್ನಿಗ್ಧ, ಪ್ರಿಯ, ವರುಣ್ [ತಂಬೂರಿ ಮೀಟಿದವ], ಪವನ್ ಕೌಶಿಕ್ [ಮಧುಕರ ವೃತ್ತಿ ಎನ್ನದು], ಶಿಕ್ಷಾ, ಮಾನಸಿ, ಕೃತ್ತಿಕಾ [ಕೃಷ್ಣಾ ಎನ ಬಾರದೆ], ಮಾನಸಿ [ಮನವೇ ಮಂತ್ರಾಲಯ], ಕೃತ್ತಿಕಾ [ಕಂಡೆ ನಾ ಗೋವಿಂದನಾ], ಶಿಕ್ಷಾ [ನಾರಾಯಣ ನಿನ್ನ], ವರ್ಷಾ ಪೈ [ರಾಮ ಮಂತ್ರವ ಜಪಿಸೋ], ಮಾಧುರಿ ಮತ್ತು ಮುರಲಿ [ವೆಂಕಟರಮಣನೆ ಬಾರೊ], ಶ್ರೀರಾಮ್ [ದಾಸನ ಮಾಡಿಕೋ ಎನ್ನ] ಹೀಗೆ ಹಲವಾರು ದಾಸವರೇಣ್ಯರ ಕೃತಿಗಳನ್ನು ಮತ್ತು ಜನಪ್ರಿಯ ವಚನಗಳನ್ನು ಹಾಡಿ ಕೇಳುಗರ ಮನ ತಣಿಸಿದ ಗಾಯಕ ಗಾಯಕಿಯರ ಪೈಕಿ ಅನೇಕರು ಕನ್ನಡ ಮಾತೃಭಾಷೆಯವರಲ್ಲ ಎಂಬುದು ಗಮನಾರ್ಹ. ಇವರುಗಳಿಗೆ ಸಂಗೀತ ಮಾತ್ರವಲ್ಲದೆ ಕನ್ನಡದ ಕೃತಿಗಳನ್ನು ಸ್ಪಷ್ಟವಾಗಿ ಸುಲಲಿತವಾಗಿ ಹಾಡಲು ಕಲಿಸಿರುವುದು ವಿದ್ವಾನ್ ದಿವಾಕರ್ ಅವರ ಹಲವು ವರ್ಷಗಳ ಶ್ರಮದ ಅಪೂರ್ವ ಸಾಧನೆ.
ಹರಿಹರದಾಸಾರಾಧನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ರತ್ನಾ ವಾಮನ ಮೂರ್ತಿ, ವಯೋಲಿನ್ ವಾದಕ ಡಾ.ಅಶೋಕ್ ಮಾಲೂರ್ [ನ್ಯೂಜಿಲೆಂಡ್ ಕರ್ನಾಟಕ್ ಮ್ಯೂಸಿಕ್ ಸೊಸೈಟಿಯ ಅಧ್ಯಕ್ಷರು], ಮೈಸೂರಿನ ನಾಗರತ್ನ ಪದ್ಮನಾಭ್ ಇವರುಗಳು ಸಹ ತಮ್ಮ ವೈಯುಕ್ತಿಕ ಕೊಡುಗೆಗಳಿಂದ ಎಲ್ಲರ ಸಂತಸಕ್ಕೆ ಕಾರಣರಾದರು. ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ಭಾಗ್ಯದಾ ಲಕ್ಷ್ಮೀ ಬಾರಮ್ಮ ಎಂದು ಮಂಗಳ ಹಾಡಿ ಪುರಂದರ ನಮನ ಸಲ್ಲಿಸಿದರು. ಮಹಾ ಪ್ರಸಾದಕ್ಕೆ ರಾಮ ನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಎನ್ನುವಂತೆ ಸೊಗಸಾದ ಭೋಜನವನ್ನು ಏರ್ಪಡಿಸಲಾಗಿತ್ತು.