ವಿಷ್ಣು ಅಶ್ವತ್ಥ್ದ್ವಯರಿಗೆ ಸಿಡ್ನಿಯಲ್ಲಿ ಶ್ರದ್ಧಾಂಜಲಿ
ಬಾಲಾಜಿಯವರು ಸಭಿಕರನ್ನು ಬರಮಾಡಿಕೊಂಡರು; ಶ್ಯಾಮಸಿಂಗ್ ಅವರು ಹಣತೆಹಚ್ಚಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಮೊದಲಿಗೆ ಸಿಡ್ನಿ ಶ್ರೀನಿವಾಸ್ ಅವರು ತಮ್ಮ ಗೆಳೆಯ ಹಾಡಿನ ಮೋಡಿಗಾರ ಸಿ ಆಶ್ವತ್ಥ್ ಅವರ ಬಗ್ಗೆ ಮಾತನಾಡಿ ಸಂಗೀತ ಸಂಯೋಜಿಸುವಲ್ಲಿ, ಜನರಿಗೆ ಸಂಗೀತ ಒದಗಿಸುವಲ್ಲಿ ಅಶ್ವತ್ಥ್ ಅವರ ವೈಶಿಷ್ಟ್ಯವನ್ನು ಕೊಂಡಾಡಿದರು. ಅಲ್ಲದೆ ಅಶ್ವತ್ಥ್ ಅವರೊಡನೆ ಕಳೆತ ಕೆಲ ಅವಿಸ್ಮರಣೀಯ ಗಳಿಗೆಗಳನ್ನು ಅವರು ಮೆಲುಕು ಹಾಕಿದರು.
ರೇಣುಕಾ ಜನಾರ್ಧನ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರ ಸಾಧನೆಗಳ ಬಗ್ಗೆ ಮಾತನಾಡಿದರು. ನಂತರ ದಕ್ಷಿಣಾ ಮೂರ್ತಿ ಅವರು ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ನಟ ಕೆಎಸ್ ಅಶ್ವತ್ಥ್ ಅವರ ಬಗ್ಗೆ ಮಾತನಾಡಿ, ಸ್ವಾತಂತ್ರ ಸಂಗ್ರಾಮದಲ್ಲಿ ಅವರ ಪಾಲು, ಚಲನಚಿತ್ರ ಕ್ಷೇತ್ರಕ್ಕೆ ಅವರ ನೀಡಿದ ಅಪಾರ ಕೊಡುಗೆಗಳ ಗುಣಗಾನ ಮಾಡಿದರು. ದಿವಾಕರ ಹೇರಳೆ, ಶ್ಯಾಮ್ ಸಿಂಗ್ ಮಾತನಾಡಿ ಈ ಮೂವರ ಜತೆ ಕಳೆದ ಸ್ಮರಣೀಯ ಅನುಭವಗಳನ್ನು ಸಭಿಕೆರೊಡನೆ ಹಂಚಿಕೊಂಡರು.
ಹಿಂದೆ ಈ ಸಂಸ್ಥೆ ಸಿಡ್ನಿಯಲ್ಲಿ ವಿಷ್ಣುವರ್ಧನ್ ಅಭಿನಯಿಸಿರುವ "ಹಬ್ಬ" ಮತ್ತು ಕೆಎಸ್ ಅಶ್ವತ್ಥ್ ಅಭಿನಯಿಸಿರುವ "ಶಬ್ಧವೇಧಿ" ಚಿತ್ರಗಳನ್ನು ಪ್ರದರ್ಶಿಸಿತ್ತು. ಅಲ್ಲದೆ ಹೋದ ಮಾರ್ಚ್ ತಿಂಗಳಲ್ಲಿ ಸಿ ಅಶ್ವತ್ಥ್ ಮತ್ತು ತಂಡದವರು ಇದೇ ಸಂಸ್ಥೆಯ ಆಶ್ರಯದಲ್ಲಿ ಸಿಡ್ನಿ ಮತ್ತು ಮೆಲ್ಬೊರ್ನ್ ಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದರು. ಅದಿನ್ನೂ ಜನರ ನೆನಪಿನಲ್ಲಿ ಅಚ್ಚಳಿಯದೇ ನಿಂತಿದೆ.