ಹೃದಯವಂತ ಹೃದಯತಜ್ಞ ಪದ್ಮಭೂಷಣ ಬಿಎಂ ಹೆಗ್ಡೆ
ಪ್ರೊ. ಬಿ.ಎಂ. ಹೆಗ್ಡೆಯವರು ಇತರ ವೈದ್ಯರಿಗಿಂತ ಭಿನ್ನರು. ಜನರ ಆರೋಗ್ಯದ ಬಗ್ಗೆ ನಿಜವಾದ ಕಾಳಜಿಯುಳವರು. ಹೆಗಡೆಯವರ ಲೇಖನವನ್ನು ಓದಿ ಪ್ರೇರಣೆಗೊಂಡು, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿರುವ ಹೆಗಡೆಯವರ ಮನೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದರು. ಅವರನ್ನು ಗುಜರಾತಿಗೆ ಕರೆಸಿ, ಅವರೊಡನೆ ಚರ್ಚಿಸಿ, ಹೆಗಡೆಯವರನ್ನು ತಮ್ಮ ಆರೋಗ್ಯ ಇಲಾಖೆಗೆ ಸಲಹೆಗಾರರನ್ನಾಗಿ ನೇಮಿಸಿದ್ದರು. ಅದೇ ರೀತಿ ಅವರು ಬಿಹಾರದ ಆರೋಗ್ಯ ಇಲಾಖೆಗೂ ಸಲಹಾಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ. ಬಿ.ಎಂ. ಹೆಗಡೆಯವರು ಬಿಡುವಿಲ್ಲದೆ ದುಡಿಯುವ ಕ್ರಿಯಾಶೀಲರು. ಮಕ್ಕಳಿಂದ ಹಿಡಿದು ದೊಡ್ದವವರೆಗೆ ಯಾರೇ ಅವರಿಗೆ ಪತ್ರ ಬರೆದರೂ ಕೂಡಲೇ ಪ್ರತಿಸ್ಪಂದಿಸುತ್ತಾರೆ. ನಾನು ಆರನೇ ತರಗತಿಯಲ್ಲಿ ಇದ್ದಾಗ ಅವರಿಗೆ ಒಂದು ಪತ್ರ ಬರೆದಿದ್ದೆ. ಅದಕ್ಕೆ ಕೂಡಲೇ ಉತ್ತರ ಬರೆದಿದ್ದರು. ಇವಾಗಲೂ ಕೂಡ ಯಾವುದೇ ಪತ್ರಕ್ಕೂ ತಕ್ಷಣವೇ ಉತ್ತರ ಕೊಡುತ್ತಾರೆ. ತಮ್ಮ ಅಸಮಾನ್ಯ ಕಾರ್ಯ ಚಟುವಟಿಕೆಗಳ ನಡುವೆ ಎಲ್ಲವನ್ನೂ ಸುಗಮವಾಗಿ ನಿಭಾಯಿಸುವ ರೀತಿಯನ್ನು ನೋಡಿ ನಾವು ಬೆರಗುಗೊಂಡಿದ್ದೇವೆ.
ಭಾರತದಲ್ಲಿ ಹಾಗು ಹೊರದೇಶಗಳಲ್ಲಿ (ಅಮೇರಿಕ, ಇಂಗ್ಲೆಂಡ್) ಅನೇಕ ವಿಶ್ವ ವಿದ್ಯಾನಿಲಯಗಳಿಗೆ ಗೌರವ ಪ್ರಾಧ್ಯಾಪಕರಾಗಿ ಹಾಗು ಸಂಶೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ (ಅಮೆರಿಕಕ್ಕೆ) ಬಂದಾಗಲೂ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳನ್ನು ಹೊಂದಿರುತ್ತಾರೆ. ಅನೇಕ ಸಭೆ, ಸಮಾರಂಭಗಳಿಗೆ ಅವರನ್ನು ಅಧ್ಯಕ್ಷರನ್ನಾಗಿ ಆಮಂತ್ರಿಸುತ್ತಾರೆ. ಹಾಗಾಗಿ ಇಲ್ಲಿಯೂ ಕೂಡ ಅನೇಕ ಸಲ ಅವರ ಉಪನ್ಯಾಸವನ್ನು ಕೇಳುವ ಭಾಗ್ಯ ನಮ್ಮದಾಗಿದೆ. ಅವರ ಮಗಳಲ್ಲಿಗೆ ಬಂದಾಗ ಮೂವತೈದು ಮೈಲು ದೂರದಲಿರುವ ನಮ್ಮ ಮನೆಗೂ ಅರ್ಧ ಗಂಟೆಗಾದರೂ ಬಂದು ಹೋಗುತ್ತಾರೆ. ಯಾರೇ ಅವರನ್ನು ಮನೆಗೆ ಆಹ್ವಾನಿಸಿದರೂ, ತಮ್ಮ ಬಿಡುವಿಲ್ಲದ ಕಾರ್ಯಗಳ ಮದ್ಯದಲ್ಲೂ ಸ್ವಲ್ಪ ಹೊತ್ತಿಗಾದರೂ ಭೇಟಿಕೊಡುವ ಹೃದಯವಂತರು.
ಹೆಗ್ದೆಯವರಂತೆ ಅವರ ಮಗಳು-ಅಳಿಯನೂ ಕೂಡ (ಡಾ. ಮೈನ, ರವಿ ಶೆಟ್ಟಿ) ವಿನಯಶೀಲರು. ''ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಗಾದೆ ಮಾತು ಅವರ ಕುಟುಂಬಕ್ಕೆ ಹೇಳಿ ಮಾಡಿಸಿದಂತೆ ಇದೆ. ಹೆಗ್ಡೆ ಮತ್ತು ಅವರ ಕುಟುಂಬ ನಮ್ಮ ಮನೆಗೆ ಬಂದಾಗ ತೆಗೆದ ಒಂದು ಛಾಯ ಚಿತ್ರವನ್ನು ನಿಮ್ಮೊಂದಿಗೆ ಸಂತೋಷದಿಂದ ಹಂಚಿಕೊಳ್ಳುತಿದ್ದೇನೆ. ನನ್ನ ಗುರುಗಳಿಗೆ ಪದ್ಮಭೂಷಣ ಬಂದಿರುವುದು ನಾನು ಅಭಿಮಾನದಿಂದ ಬೀಗುತ್ತಿದ್ದೇನೆ.
ಛಾಯಾ ಚಿತ್ರದಲ್ಲಿ ಇರುವವರು (ನನ್ನ ಪತಿ ಅಕ್ಷಯ್, ಪ್ರೊ. ಬಿ.ಎಂ. ಹೆಗ್ಡೆ, ಅವರ ಅಳಿಯ ರವಿ ಶೆಟ್ಟಿ, ಶ್ರೀಮತಿ ಮಾಲತಿ ಹೆಗ್ಡೆ (ಪತ್ನಿ), ಮಗಳು ಡಾ. ಮೈನ ಶೆಟ್ಟಿ, ಮೊಮ್ಮಗಳು ಅಮಲ ಮತ್ತು ದೇವಿ(ನಾನು)).