ಅಕ್ಕ ಕಾರ್ಯಕರ್ತರ ಸಮ್ಮೇಳನ ದೀಕ್ಷೆ
* ಸತೀಶ್ ಹೊಸನಗರ, ನ್ಯೂ ಜೆರ್ಸಿ
ಕನ್ನಡ ಕಾರ್ಯಶ್ರದ್ಧೆ ಮತ್ತು ಸಮ್ಮೇಳನವನ್ನು ಯಶಸ್ಸಿನತ್ತ ಕೊಂಡೊಯ್ಯುವ ಕಾಯಕ ದೀವಿಗೆಯನ್ನು ಕಾರ್ಯಕರ್ತರು ಹುಮ್ಮಸ್ಸಿನಿಂದ ಬೆಳಗಿದರು. ಪ್ರತಿಯೊಂದು ಕಮಿಟಿಯ ಚೇರ್, ಕೋ-ಚೇರ್ ನವರಿಗೆ ಮಾತನಾಡಲು ಸಭೆಯಲ್ಲಿ ಎರೆಡೆರಡು ನಿಮಿಷ ಕಾಲಾವಕಾಶ ನೀಡಲಾಗಿತ್ತು. ಆಯಾ ಕಮಿಟಿಯ ಕಾರ್ಯಕರ್ತರು ತಮ್ಮ ಮುಂಬರುವ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಅವರವರ ಯೋಜನೆಗಳ ವ್ಯಾಪ್ತಿ ಮತ್ತು ಒಳನೋಟಗಳನ್ನು ತಿಳಿಸಿಕೊಟ್ಟರು.
ಸಮ್ಮೇಳನದ ಸಂಚಾಲಕರ ಪರವಾಗಿ ಮಾತನಾಡಿದ ಪ್ರಸನ್ನ ಅವರು ಟೀಮ್ವರ್ಕ್, ಎಥಿಕ್ಸ್ ಹಾಗೂ ಸಮ್ಮೇಳನ ಸ್ಥೂಲ ರೂಪರೇಷೆಗಳ ಸಭೆಯ ಮುಂದಿಟ್ಟರು.ಇತ್ತೀಚೆಗಷ್ಟೇ ಐದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವ ನ್ಯೂ ಜರ್ಸಿ "ಬೃಂದಾವನ" ಕನ್ನಡ ಸಂಘ ಅಕ್ಕ ಸಮ್ಮೇಳವನ್ನು ಆಯೋಜಿಸುವುದಕ್ಕೆ ಆಯ್ಕೆಗೊಂಡ ಹಿನ್ನೆಲೆಯನ್ನು ಸ್ಥೂಲವಾಗಿ ತಿಳಿಸಿದರು. ಒಟ್ಟು ಮುವತ್ತನಾಲ್ಕು ಕಮಿಟಿಗಳಲ್ಲಿ ಸ್ಥಳೀಯ ನ್ಯೂ ಜೆರ್ಸಿಯ ಕಾರ್ಯಕರ್ತರಷ್ಟೇ ಅಲ್ಲದೇ ನೆರೆಯ ನ್ಯೂ ಯಾರ್ಕ್, ಪೆನ್ಸಿಲ್ವೇನಿಯಾ, ಡೇಲವೇರ್ ಹಾಗೂ ಕನೆಕ್ಟಿಕಟ್ ಕನ್ನಡ ಕೂಟಗಳ ಸದಸ್ಯರೂ ಸೇರಿಕೊಂಡಿರುವುದು ವಿಶೇಷ.
ಈ ಸಭೆ ಮುಂಬರುವ ಸಮ್ಮೇಳನ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ಕೊಟ್ಟಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಮಿಟಿಯವರೂ ಸಹ ತಮ್ಮ ತಮ್ಮ ತಂಡದ ಪರವಾಗಿ ವಿಶ್ವದಾದ್ಯಂತ ಕನ್ನಡಿಗರ ಮನೆ ಮನಗಳನ್ನು ತಲುಪುವುದಕ್ಕೆ ವೇದಿಕೆ ಸಿದ್ದವಾದಂತಾಯಿತು. ಪ್ರತಿಯೊಂದು ಕಮಿಟಿಯವರೂ ತಮ್ಮ ಇ-ಮೇಲ್ ವಿಳಾಸ ಹಾಗೂ ಗ್ರೂಪ್ ವಿಳಾಸವನ್ನು ಗೊತ್ತು ಮಾಡಿಕೊಂಡು ತಮ್ಮ ತಮ್ಮ ತಂಡಗಳನ್ನು ಬಲಪಡಿಸಿಕೊಂಡು ಕಾರ್ಯೋನ್ಮುಖರಾಗಲು ಗೆಜ್ಜೆಕಟ್ಟಿಕೊಂಡರು.
ಅಕ್ಕ ಮುಖ್ಯಸ್ಥರಾದ ಅಮರನಾಥ ಗೌಡರು ತಮ್ಮ ದೂರವಾಣಿ ಭಾಷಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮುಂಬರುವ ಒಂಭತ್ತು ತಿಂಗಳಿನಲ್ಲಿ ಎಲ್ಲರ ಮುಂದಾಳತ್ವ ಹಾಗೂ ಮಾರ್ಗದರ್ಶನದಲ್ಲಿ ಸಮ್ಮೇಳನ ಸಫಲವಾಗಲೆಂದು ಹಾರೈಸಿದರು.
ಬರಲಿರುವ ದಿನಗಳಲ್ಲಿ ಸಮ್ಮೇಳನದ ನಾನಾ ಸಮಿತಿಯವರು ಅಮೇರಿಕ ಹಾಗೂ ವಿಶ್ವದ ಇತರ ಕನ್ನಡ ಕೂಟಗಳ ಪದಾಧಿಕಾರಿಗಳೊಡನೆ ಸಂಪರ್ಕವೇರ್ಪಡಿಸಲಿದ್ದಾರೆ. ರಿಜಿಸ್ಟ್ರೇಷನ್ನ್, ಸಾಹಿತ್ಯ, ಸಂಗೀತ, ನಾಟಕ, ಸ್ಮರಣ ಸಂಚಿಕೆ, ಕಾರ್ಯಕ್ರಮ, ಆತಿಥ್ಯ, ಆಧ್ಯಾತ್ಮ ಮೊದಲಾದ ಸಮಿತಿಯ ಪದಾಧಿಕಾರಿಗಳು ಇನ್ನು ಕೆಲವೇ ದಿನಗಳಲ್ಲಿ ಕನ್ನಡಿಗರನ್ನು ಸಂಪರ್ಕಿಸಲಿದ್ದಾರೆ. ನಿಮ್ಮೆಲ್ಲರ ಸಹಾಯ, ಸಹಕಾರ ಹಾಗೂ ಭಾಗವಹಿಸುವಿಕೆಯನ್ನು ಹಲವಾರು ತಂಡಗಳು ಕಾದುಕೊಂಡಿವೆ, ಈ ನಿಟ್ಟಿನಲ್ಲಿ ಕನ್ನಡಿಗರು ಅಕ್ಕ ಸಮ್ಮೇಳನದ ಅನೇಕಾನೇಕ ನಿವೇದನೆಗಳನ್ನು ಕಾಲಕಾಲಕ್ಕೆ ನಿರೀಕ್ಷಿಸಬಹುದಾಗಿದೆ.