ಶಾರ್ಜಾದಲ್ಲಿ ಉಕ್ಕಿ ಹರಿದ ಕನ್ನಡ ಉಲ್ಲಾಸ
ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷೆಯ ಸಂಕೇತವಾಗಿ ಪಂಚ ಜ್ಯೋತಿಗಳನ್ನು ಸಂಘದ ಸದಸ್ಯೆಯರು ಮೆರವಣಿಗೆಯಲ್ಲಿ ತಂದು ಜ್ಯೋತಿ ಬೆಳಗುವುದರ ಮೂಲಕ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರಿನಿಂದ ಅತಿಥಿಗಳಾಗಿ ಬಂದಿದ್ದ ಗಾಯಕರಾದ ರವಿಂದ್ರ ಪ್ರಭು ಮತ್ತು ಅನಿತಾ ಸ್ಯಾಮ್ಸನ್ ರವರ ಪ್ರಾರ್ಥನಾ ಗೀತೆಯ ನಂತರ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ನೋವೆಲ್ ಡಿ. ಅಲ್ಮೇಡಾ ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಅಜ್ಮಾನ್ ಸಿಂಫೊನಿ ಮ್ಯೂಸಿಕ್ ಶಾಲೆಯ ಮಕ್ಕಳು ಅಕರ್ಷಕವಾಗಿ ಸ್ವಾಗತ ನೃತ್ಯದ ಮೂಲಕ ನೋಡುಗರ ಮನಗೆದ್ದರು. ಓಶನ್ ಕಿಡ್ಸ್ ನ ಸಮೂಹ ನೃತ್ಯ, ಸುಮಧುರ ಕಂಠದ ಗಾಯಕ ಹರೀಶ್ ಶೇರಿಗಾರ್ ರವರ ಗಾಯನ, ಮಂಗಳೂರಿನ ಪ್ರಖ್ಯಾತ ಹಾಸ್ಯ ಕಲಾವಿದ ಡೊಲ್ಲಾ ಮಂಗಳೂರ್ ಅವರು ತುಳು, ಕನ್ನಡ, ಕೊಂಕಣಿ ಭಾಷೆಯಲ್ಲಿ ಹಾಸ್ಯ ರಸಾಯನ ನೀಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದರು.
ಬಿಲ್ಲವಾಸ್ ದುಬಾಯಿ ಮತ್ತು ನಾರ್ದರ್ನ್ ಎಮಿರೆಟ್ಸ್ ರವರ ಯೋಗಿತಾ ಸಾಲಿಯಾನ್ ನಿರ್ದೇಶನದ ಮನಮೋಹಕ ನೃತ್ಯ, ನಂತರ ಕರ್ನಾಟಕದಿಂದ ಆಗಮಿಸಿದ ನವೀನ್ ಕೊಪ್ಪ ರವರ ನಿರೂಪಣೆಯಲ್ಲಿ ಪ್ರಸಿದ್ಧ ಗಾಯಕ ರವಿಂದ್ರ ಪ್ರಭು, ಸುಮಧುರ ಕಂಠದ ಗಾಯಕಿ ಅನಿತಾ ಸ್ಯಾಮ್ಸನ್, ರೋಶನ್ ಬೆಳ್ಮಣ್, ಅರುಣ್ ಕಾರ್ಲೋ ಸಂಗೀತ ನಿರ್ದೇಶನದಲ್ಲಿ ಸಂಗೀತ ರಸಮಂಜರಿಯ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷೆಯ ಸುಮಧುರ ಗೀತೆಗಳು ಸಭಾಂಗಣದಲ್ಲಿದ್ದ ಎಲ್ಲರ ಮನಗೆದ್ದು ರಂಜಿಸಿದ್ದವು. ದಾಯಿಜಿ ರಂಗ್ ಮಂದಿರ್ ನೀಡಿದ ಕನ್ನಡ ಹಾಸ್ಯ ಪ್ರಹಸನ ಆಲ್ವಿನ್ ಪಿಂಟೋ, ಸುವರ್ಣ ಸತೀಶ್ ರವರು ನಗೆಗಡಲಲ್ಲಿ ತೇಲಾಡಿಸಿದರು.
"ಸಾರ್ವಭೌಮ" ಕಥಾ ಸಂಕಲನ ಬಿಡುಗಡೆ : ಕನ್ನಡ ಧ್ವನಿ ವೆಬ್ ಸೈಟ್ ನ ಪ್ರಧಾನ ಸಂಪಾದಕರಾದ ಗೋಪಿನಾಥ ರಾವ್ ರವರ ಕಥಾಸಂಕಲನ "ಸಾರ್ವಭೌಮ" ಇದೇ ಸಂದರ್ಭದಲ್ಲಿ ಬೆಳಕು ಕಂಡಿತು. ಸಂಘದ ಪೋಷಕ ಮಾರ್ಕ್ ಡೆನ್ನೆಸ್ ಡಿ ಸೋಜಾ ಪುಸ್ತಕವನ್ನು ಅನಾವರಣಗೊಳಿಸಿದರು. ಗಣೇಶ ರೈ, ನೋಯೆಲ್ ಡಿ ಅಲ್ಮೈಡ, ಶೇಖರ ಶೆಟ್ಟಿ, ಸರ್ವೋತ್ತಮ ಶೆಟ್ಟಿ ಹಾಗೂ ಪ್ರಕಾಶ್ ಪಯ್ಯಾರ್ ವೇದಿಕೆಯಲ್ಲಿದ್ದರು. ಕಥಾ ಸಂಕಲನಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಸಾಹಿತಿ, ಅಂಕಣಕಾರ ಮಹಾಬಲಮೂರ್ತಿ ಕೊಡ್ಲೆಕೆರೆಯವರು ಕೃತಿ ಪರಿಚಯ ನೀಡಿದರು.
ದೀಪಕ್ ಕೋಟ್ಯಾನ್ ನಿರ್ದೇಶನದಲ್ಲಿ ತುಳು ಭಾಷೆಯ"ಬೆಸ್ತರ ನೃತ್ಯ", ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ಮಕ್ಕಳು ಪ್ರದರ್ಶಿಸಿದ "ಇತಿಹಾಸ ಪರಿಚಯ" ಹಾಗೂ ಬ್ಯಾರಿಸ್ ಕಲ್ಚರಲ್ ಫೋರಂ ಯು. ಎ. ಇ. ಯ ಸದಸ್ಯರು ಪ್ರದರ್ಷಿಸಿದ "ದಫ್" ನೃತ್ಯ ಸಭಿಕರ ವಿಶೇಷ ಮನ್ನಣೆ ಪಡೆದವು.
ಸುಶ್ರಾವ್ಯ ಮತ್ತು ಸುಮಧುರ ರಸಮಂಜರಿ : ನವೀನ್ ಕೊಪ್ಪರವರ ಕ್ರಿಕೆಟ್ ಹರಿಕತೆ ಕಂಚಿನ ಕಂಠದಿಂದ ಹಾಸ್ಯಮಯವಾಗಿ ಮೂಡಿ ಬಂದು ಜನರು ನಗೆಗಡಲಲ್ಲಿ ತೇಲಾಡಿದರು. ದಿನಪೂರ್ತಿ ನಡೆದ ಕಾರ್ಯಕ್ರಮಗಳಲ್ಲಿ ನವೀನ್ ತಮ್ಮ ಅಚ್ಚ ಸ್ವಚ್ಚ ಕನ್ನಡದಲ್ಲಿ ನಿರರ್ಗಳವಾಗಿ ಮಾತಾಡಿ ಕನ್ನಡ ಭಾಷೆಯ ಶ್ರೀಮಂತ ಸಂದೇಶವನ್ನು ಜನ ಮನದಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿ ಜನತೆಯ ಅಭಿನಂದನೆಗೆ ಪಾತ್ರರಾದರು. ಕರ್ನಾಟಕದ ಪ್ರಖ್ಯಾತ ಗಾಯಕರುಗಳಾದ ರವಿಂದ್ರ ಪ್ರಭು, ಅನಿತಾ ಸ್ಯಾಮ್ಸನ್, ರೋಶನ್ ಬೆಳ್ಮಣ್, ಹಾಗೂ ಸಂಗೀತ ನಿರ್ದೇಶಕ ಅರುಣ್ ಕಾರ್ಲೊ ತಂಡದವರ ರಸಮಂಜರಿ ಕಾರ್ಯಕ್ರಮ ಬೆಳಗಿನಿಂದ ಸಂಜೆಯವರೆಗೆ, ಕೆಲವು ನೃತ್ಯ ಕಾರ್ಯಕ್ರಮಗಳ ನಡುವೆ, ಸುಮಧುರ ಕನ್ನಡ, ತುಳು, ಕೊಡವ, ಕೊಂಕಣಿ, ಬ್ಯಾರಿ, ಹಿಂದಿ, ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿ ಜನಮನ ಗೆದ್ದರು.
ಡೊಲ್ಲಾರವರಿಗೆ ಕರಾವಳಿ ಹಾಸ್ಯ ಚಕ್ರವರ್ತಿ :ಮಂಗಳೂರಿನಿಂದ ಆಗಮಿಸಿದ "ಡೊಲ್ಲಾ ಮಂಗ್ಳೂರ್" ದಿನ ಪೂರ್ತಿ ಕನ್ನಡ ತುಳು ಭಾಷೆಯಲ್ಲಿ ಹಾಸ್ಯದ ಹೊನಲನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿ ವಿಖ್ಯಾತರಾಗಿರುವ ಡೊಲ್ಲಾ ಮಂಗ್ಳುರ್ ರವರವರಿಗೆ ಶಾರ್ಜಾ ಕರ್ನಾಟಕ ಸಂಘ "ಕರಾವಳಿ ಹಾಸ್ಯ ಚಕ್ರವರ್ತಿ" ಬಿರುದು ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಮಾರ್ಕ್ ಡೆನ್ನಿಸ್ ಡಿ"ಸೋಜರವರು ಶಾಲು ಹೊದಿಸಿ, ಫಲಪುಷ್ಪವನ್ನು ಯಾದವ್ ಕೋಟಿಯಾನ್, ಫಲಕವನ್ನು ಶಶಿಕಾಂತ್ ಕನ್ನಂಗಿ ನೀಡಿದರು. ಅರ್ಥರ್ ಪಿರೇರಾ ಸನ್ಮಾನ ಪತ್ರ ವಾಚಿಸಿ, ವಾಲ್ಟರ್ ಡಿ ಸೋಜ ನಂದಳಿಕೆಯವರು ಸನ್ಮಾನ ಪತ್ರ ಅರ್ಪಣೆ ಮಾಡಿದರು. ಈ ಕಾರ್ಯಕ್ರಮ ದಲ್ಲಿ ಡೊಲ್ಲಾರವ ಜೊತೆಗೆ ಸ್ಥಳಿಯ ಕಲಾವಿದರಾದ ಸಂತೋಷ್ ಡಿಸೋಜ ಸಹಕಲಾವಿದರಾಗಿ ಜನರನ್ನು ರಂಜಿಸಿದರು.
ಬೆಳಗಿನಿಂದ ಸಂಜೆಯವರೆಗೆ ನಿರಂತರವಾಗಿ ನಡೆದ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಯು. ಎ. ಇ. ಕನ್ನಡಿಗರು ಶಾರ್ಜಾ ಕರ್ನಾಟಕ ಸಂಘದ 7 ನೇ ವಾರ್ಷಿಕೋತ್ಸವ, ರಾಜ್ಯೋತ್ಸವ, ಮಯೂರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಶಸ್ವಿಗೊಳಿಸಿದ್ದ ಕೀರ್ತಿಯನ್ನು ತಮ್ಮದಾಗಿಸಿಕೊಂಡರು. ದುಬೈ ಆಸ್ಪತ್ರೆಯಲ್ಲಿ ಮೆದುಳು ರಕ್ತಸ್ರಾವದಿಂದ ಚಿಕಿತ್ಸೆ ಪಡೆಯುತ್ತಿರುವ ಸದಸ್ಯ ಮಂಜಪ್ಪ ಭಂಡಾರಿಯವರ ನೆರವಿಗೆ ಸಭಿಕರು ಮನಸಾರೆ ದೇಣಿಗೆ ನೀಡಿ ಮಾನವೀಯತೆ ಮೆರೆದದ್ದು ಇಂದಿನ ಕಾರ್ಯಕ್ರಮದ ಇನ್ನೊಂದು ಮಹತ್ತರ ಅಂಶ.
ಕಾರ್ಯದರ್ಶಿ ನಿತ್ಯಾನಂದ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸತೀಶ್ ಪೂಜಾರಿಯವರ ಮಾರ್ಗದರ್ಶನ, ಶೋಧನ್ ಪ್ರಸಾದ್ ರವರ ಕಾರ್ಯಕ್ರಮ ನಿರೂಪಣೆಯಲ್ಲಿ ಸೊಗಸಾಗಿ ಮೂಡಿ ಬಂದಿತ್ತು.