ಕುವೈತ್ ಕನ್ನಡ ಕೂಟಕ್ಕೆ ಬೆಳ್ಳಿಸ್ಪರ್ಶ
ಹಚ್ಚೇವು ಕನ್ನಡದ ದೀಪ ಗೀತೆಯ ಹಿನ್ನೆಲೆಯಲ್ಲಿ ಕೂಟದ ರಜತಮಹೋತ್ಸವ ವರ್ಷದ ಕಾರ್ಯಕಾರಿ ಮತ್ತಿತರ ಸಮಿತಿ ಸದಸ್ಯರು ದೀಪಾರಾಧನೆಯನ್ನು ಮಾಡಿದರು. ಕೂಟದ ನಡೆದುಬಂದ ಹಾದಿ ಎಂಬ ಶೀರ್ಷಿಕೆಯಡಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕೂಟ ನಡೆಸಿಕೊಂಡು ಬಂದ ವಿವಿಧ ಕಾರ್ಯಕ್ರಮಗಳ ಒಂದು ಪಕ್ಷಿನೋಟವನ್ನು ಪರದೆಯಮೇಲೆ ದರ್ಶಿಸಲಾಯಿತು.
ಶಶಿಕಲಾ ರಮೇಶ್ ರವರು ಮೂರು ದಿನಗಳ ಈ ಮಹೋತ್ಸವ ಕಾರ್ಯಕ್ರಮಗಳ ಪರಿಚಯ ನೀಡಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದ ಅಧ್ಯಕ್ಷ ಸತೀಶ್ಚಂದ್ರ ಶೆಟ್ಟರು, ಕೂಟದ ರಜತಮಹೋತ್ಸವದ ಸ್ಥೂಲ ಪರಿಚಯದ ಮಾಡಿಕೊಟ್ಟರು. ಅಜಯ್ ಮಲ್ಹೋತ್ರರವರು ಮಾತನಾಡಿ ಇಪ್ಪತ್ತೈದು ವರ್ಷ ಪೂರೈಸಿದ ಕೂಟಕ್ಕೆ ಶುಭ ಹಾರೈಸಿ ಕಲೆ ಸಂಸ್ಕೃತಿ ಆಧಾರಿತ ಕಾರ್ಯಕ್ರಮಗಳಲ್ಲದೇ ಕುವೈತಿನಲ್ಲಿರುವ ಭಾರತೀಯರ ಮತ್ತು ನಾಡಿನಜನತೆಯ ಒಳಿತಿಗಾಗಿ ಸಾಮಾಜಿಕ ಕಾರ್ಯಕ್ರಮಗಳನ್ನೂ ನಡೆಸುತ್ತಾ ಬಂದಿರುವ ಕುವೈತ್ ಕನ್ನಡ ಕೂಟಕ್ಕೆ ಎಲ್ಲ ಸಹಕಾರದ ಭರವಸೆಯನ್ನು ನೀಡಿದರು.
ಕುವೈತ್ ಕನ್ನಡ ಕೂತದ ರಜತ ಮಹೋತ್ಸವ ನೆನಪಿನ ಸಂಚಿಕೆಯನ್ನು ಬಿಡುಗಡೆಮಾಡಿದ ಮುಖ್ಯ ಅತಿಥಿಗಳಾದ ಕ್ಯಾ.ಗಿರೀಶ್ ಕಾರ್ಣಿಕ್ರವರು ಕೂಟದ ಉತ್ಸಾಹೀ ಚಟುವಟಿಕೆಗಳನ್ನು ಪ್ರಶಂಸಿಸಿ ಇದೊಂದು ತನ್ನ ಜೀವನದ ಅವಿಸ್ಮರಣೀಯ ದಿನವೆಂದರು. ತಮ್ಮ ಜೀವನ ಮತ್ತು ತಮ್ಮವರ ಏಳಿಗೆಗಾಗಿ ಪರದೇಶಕ್ಕೆ ಬಂದು ನೆಲೆಸಿ ಕನ್ನಡಸೇವೆಯನ್ನು ಮಾಡುವುದರಜೊತೆಗೆ ನಾಡಿನ ಸಾಮಾಜಿಕ ಬೇಕುಗಳಿಗೆ ಸ್ಪಂದಿಸುತ್ತಿರುವುದು ಕೂಟದ ಹಿರಿಮೆ ಎಂದರು. ಅನಿವಾಸಿ ಭಾರತೀಯ ವೇದಿಕೆಯ ಪಾತ್ರವನ್ನು ವಿವರಿಸುತ್ತಾ ಕರ್ನಾಟಕ ಹೇಗೆ ದೇಶದಲ್ಲೇ ಮಾದರಿಯಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂಬುದನ್ನು ಸಭಿಕರಿಗೆ ವಿವರಿಸಿದರು.
ಹೊರ ದೇಶ, ಅದರಲ್ಲೂ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ನಾಡಿನ ಜನತೆಗೆ ಸಹಾಯಕವಾಗುವ, ಅವರಲ್ಲಿ ಆ ದೇಶದ ಬಗ್ಗೆ ಪೂರ್ವ ತಿಳಿವಳಿಕೆಗಳನ್ನು ಮೂಡಿಸುವ ತರಬೇತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕರ್ನಾಟಕ ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು. ಅನಿವಾಸಿ ಭಾರತೀಯ ವೇದಿಕೆಯ ಭವಿಷ್ಯದ ಯೋಜನೆಗಳು ಜ್ಞಾನಾಧಾರಿತ ಮಾನವಸಂಪನ್ಮೂಲದ ವಿಶೇಷ ಬಳಕೆಯನ್ನು ಅವಲಂಬಿಸಿರುತ್ತವೆ ಎಂದೂ ತಿಳಿಸಿದರು. ಕೂಟದ ಕರ್ಯಕ್ರಮಗಳಿಗೆ ನೆರವಾಗಲು ಮತ್ತು ವಿಶೇಷ ಕಾರ್ಯಕ್ರಮ ಪ್ರಸ್ತುತಿಗೆ ಕರ್ನಾಟಕದಿಂದ ಆಗಮಿಸಿದ್ದ ಪ್ರಭಾತ್ ಕಲಾವಿದರನ್ನು 'ಪ್ರಬುದ್ಧ ಕಲಾವಿದರು' ಎಂದು ಬಣ್ಣಿಸಿದರು.
ಸಾಂಸ್ಕೃತಿಕ ಸಂಜೆಯ ಕಾರ್ಯಕ್ರಮಗಳನ್ನು ಪ್ರಭಾತ್ ಕಲಾವಿದರು ತಮ್ಮ 'ಹಾಸ್ಯ' ದ ಮೂಲಕ ಪ್ರಾರಂಭಿಸಿದರು. ಆನಂತರ ಕೂಟದ ಮಹಿಳೆಯರ ಅಷ್ಟಲಕ್ಷ್ಮಿ ನೃತ್ಯರೂಪಕ ಎಂಟು ಗುಣವಿಶೇಷಗಳ ಲಕ್ಷ್ಮಿಯ ರೂಪಗಳನ್ನು ದರ್ಶಿಸುವ ಪ್ರಯತ್ನ ವಾಗಿತ್ತು. ಬೇಲೂರಿನ ಶಿಲಾಬಾಲಿಕೆಯರನ್ನು ನೆನಪಿಸುವ 'ಶಿಲಾಮೃತ ನೃತ್ಯವನ್ನು ಕೂಟದ ಶ್ರೀಮತಿ ರಂಗಶ್ರೀ ಮಲ್ಲೂರ್ ರವರು ಪ್ರಸ್ತುತಪಡಿಸಿದರು. ಗುಬ್ಬಿ ಬೆಳಗಿನ ಚಿಲಿಪಿಲಿಯನ್ನು ಮಕ್ಕಳಲ್ಲಿ ಎಂತಹ ಮನದ ಮುದಕ್ಕೆ ಕಾರಣವಾಗುತ್ತದೆ ಎಂಬುದನ್ನು 'ಗುಬ್ಬಿ-ಗುಬ್ಬಿ ಹಾಡಿಗೆ ನರ್ತಿಸುವ ಮೂಲಕ ಕೂಟದ ಪುಟಾಣಿಗಳು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ಹೀಗೆಯೇ ಕೋಲಾಟ, ನವಿಲು ನೃತ್ಯ, ಮಕ್ಕಳ ಸೂತ್ರದ ಬೊಂಬೆ ನೃತ್ಯ ಕೂಟದ ಕಲಾವಿದರಿಂದ ಪ್ರಸ್ತುತವಾಯಿತು. ನಾಗರಹೊಳೆಯ ಅಮ್ಮಾಲೆ ಚಲನಚಿತ್ರ ಗೀತೆಗೆ ಮನಮೋಹಕವಾಗಿ ಕುಣಿದು ಕೂಟದ ಮಕ್ಕಳು ಎಲ್ಲರ ಮನಸೂರೆಗೊಂಡರು. ಪ್ರಭಾತ್ ಕಲವಾದರು ಪ್ರಸ್ತುತ ಪಡಿಸಿದ ಕೃಷ್ಣಲೀಲೆ ಕೃಷ್ಣನ ಗೋಕುಲವಾಸದ ವಿವಿಧ ಘಟನಾವಳಿಗಳ ರಮ್ಯ ನೃತ್ಯರೂಪಕವಾಗಿತ್ತು. ಪ್ರಭಾತ್ ಕಲಾವಿದರು ಮತ್ತು ಕೂಟದ ಸದಸ್ಯರು ಕೂಡಿ ಜಂಟಿಯಾಗಿ ಪ್ರಸ್ತುತ ಪಡಿಸಿದ ಕುವೆಂಪು ರವರ ಕೃತಿ ಅಧಾರಿತ ನೃತ್ಯರೂಪಕ ಬೊಮ್ಮನ ಹಳ್ಳಿಯ ಕಿಂದರಿಜೋಗಿ ಮರೆಯಲಾರದ ಅನುಭವವಾಗಿತ್ತು. ನಂತರ ವಿವಿಧ ಕಾರ್ಯಕ್ರಮಗಳ ಕೂಟದ ನಿರ್ದೇಶಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಲಾಯಿತು.