ಶಾರ್ಜಾ ಕನ್ನಡಸಂಘದ 7ನೇ ಹುಟ್ಟುಹಬ್ಬ
ವಾರ್ಷಿಕೋತ್ಸವ ನಿಮಿತ್ತ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮಯೂರ ಪ್ರಶಸ್ತಿ ವಿತರಣೆ ಮತ್ತು ಮಕ್ಕಳ ದಿನಾಚರಣೆ ಕಲಾಪಗಳು ಆಕರ್ಷಣೆಯ ಕೇಂದ್ರಬಿಂದುವಾಗಲಿವೆ. ಸಂಸ್ಕೃತಿ, ಸಾಹಿತ್ಯ, ಸಂಗೀತ, ವಾಣಿಜ್ಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಕನ್ನಡಿಗ ಕನ್ನಡತಿಯರನ್ನು ಮಯೂರ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಸಾಧನೆಯೊಂದೇ ಮಾನದಂಡವಾಗಿದ್ದು ಜಾತಿ ಮತ ಪ್ರದೇಶಗಳ ಸಂಕುಚಿತ ಧೋರಣೆಗಳು ಪ್ರಶಸ್ತಿಯ ಮಾನದಂಡವಾಗದು ಎಂದು ಕನ್ನಡಸಂಘದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದಿಂದ ಆಯ್ದ ಗಣ್ಯರ ಸಮೂಹ ಭಾರತದಿಂದ ಶಾರ್ಜಾಗೆ ಬರಲಿದೆ. ಸಾಧಕರು ಪ್ರಶಸ್ತಿ ಸ್ವೀಕರಿಸುವುದಲ್ಲದೆ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮದಲ್ಲಿ ಸ್ವತಃ ಭಾಗಿಗಳಾಗಿ ಗಲ್ಫ್ ಕನ್ನಡಿಗರ ಹೃದಯ ಸೂರೆಗೊಳ್ಳಲಿದ್ದಾರೆ.
ಭಾರತದಿಂದ ಇಲ್ಲಿಗೆ ಆಗಮಿಸಲಿರುವ ಸಾಸ್ಕೃತಿಕ ರಾಯಭಾರಿಗಳ ಪಟ್ಟಿಯಲ್ಲಿ ಇರುವ ಹೆಸರುಗಳು ಇಂತಿವೆ : ಗಾಯಕರಾದ ರವೀಂದ್ರ ಪ್ರಭು, ಮತ್ತು ಅನಿತಾ ಸ್ಯಾಂಪ್ ಸನ್. ಸಂಗೀತಗಾರರಾದ ರೋಷನ್ ಬೆಲ್ಮನ್, ನವೀನ್ ಕೊಪ್ಪ ಮತ್ತು ಅರುಣ್ ಕಾರ್ಲೋ. ಡೊಳ್ಳ ನಂದಿಗುಡ್ಡೆ ಅವರಿಂದ ಹಾಸ್ಯರಸಾಯನದ ನೇತ್ರಾವತಿ ಹೊಳೆ ಹರಿಯಲಿದೆ. ಇದಲ್ಲದೆ, ಜೋಕು ಹೊಡೆಯುವವರು, ನೃತ್ಯ ಪಟುಗಳು ಮತ್ತು ಇನ್ನಿತರ ಹಾಡುಗಾರರ ದಂಡು ಕನ್ನಡ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಿವೆ.ಹೆಚ್ಚಿನ ವಿವರಗಳಿಗೆ ಕಾಲ್ ಮಾಡಿ : 050 4537298