ಡಲ್ಲಾಸ್ ನಲ್ಲಿ ನಾಗಶ್ರೀ ಸಂಗೀತ ಆರಂಗ್ರೇಟಮ್
ಹಲವಾರು ವರುಷಗಳಿಂದ ವಿದ್ಯಾಶಂಕರ್ ದಂಪತಿಗಳಿಗೆ ಇಲ್ಲಿರುವ ಭಾರತೀಯರಿಂದ ಬರುತಿದ್ದ ಪ್ರಶ್ನೆಯೇ ಇದು. ನಿಮ್ಮ ಮಗಳು ಕುಂ.ನಾಗಶ್ರೀ ಸುಶ್ರಾವ್ಯವಾಗಿ ಹಾಡುತ್ತಾಳೆ ಅವಳಿಗೆ ಸಂಗೀತದ ಆರಂಗ್ರೇಟಮ್ ಯಾವಾಗ ಮಾಡುತ್ತೀರಿ? ಎಂದು. ಅದಕ್ಕೆ ಉತ್ತರವಾಗಿ ಕಳೆದ ಒಂದು ವರುಷದಿಂದ ತಯಾರಿ ನಡೆಸಿದ್ದರು. ಡಲ್ಲಾಸ್ ನಗರದ ಸಂಗೀತ ಪ್ರೇಮಿಗಳು ಎದುರು ನೋಡುತ್ತಿದ್ದ ದಿನ ಆಗಸ್ಟ್ 2, 2009. ಇಲ್ಲಿನ ಚಿಲ್ದ್ರೆನ್ ಕೋರ್ಟ್ಯಾರ್ಡ್ ಥಿಯೇಟರ್ ನಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ಎಂದರೆ ಸುಮಾರು ಮೂರೂವರೆಗೇ ಜನರು ಸೇರಲು ಪ್ರಾರಂಭಿಸಿದರು. ಸುಮಾರು 300 ಅಸನಗಳನ್ನೊಳಗೊಂಡ ರಂಗಮಂದಿರದ ಎಲ್ಲಾ ಆಸನಗಳು ಭರ್ತಿಯಾಗಿ ನಿಂತು ನೋಡುವ ಪರಿಸ್ಥಿತಿ.
ದಕ್ಷಿಣ ಭಾರತದ ದೇವಾಲಯದ ದೃಶ್ಯ ಹಿಂಬದಿಯಲ್ಲಿದ್ದರೆ, ಅಕ್ಕ ಪಕ್ಕ ಚೆನ್ನಕೇಶವ ದೇವಾಲಯದ ಕಂಬದಂತೆ ಕಾಣುವ ಇಳಿಬಿದ್ದ ಪರದೆಗಳು. ಇದರ ಮಧ್ಯೆ ಅಪ್ಪಟ ದಕ್ಷಿಣ ಭಾರತದ ಸಂಪ್ರದಾಯದಂತೆ ಹಳದಿ ಬಣ್ಣಕ್ಕೆ ಕೆಂಪು ಅಂಚಿನ ಸೀರೆ ತೊಟ್ಟು, ಮೈಸೂರು ಮಲ್ಲಿಗೆಯನ್ನು ಮುಡಿದು ಸ್ಥಳೀಯ ಸಂಗೀತದ ಘಟಾನುಘಟಿಗಳ ಎದುರು ಹಾಡಲು ಸಿದ್ದ. ದರ್ಬಾರ್ ರಾಗದ ವರ್ಣದಿಂದ ಕಾರ್ಯಕ್ರಮದ ಆರಂಭ. ನಾಟರಾಗದ ಶ್ರೀ ಮಹಾಗಣಪತಿಂ ಹಾಡುವ ಮೂಲಕ ಗಜಾನನನ್ನು ಪ್ರಾರ್ಥಿಸಿದರು ನಾಗಶ್ರೀ.
ರಾಗ ಮಧ್ಯಮಾವತಿಯಲ್ಲಿ ತ್ಯಾಗರಾಜರ ರಾಮಕಥಾ ಸುಧಾವನ್ನು ಸಂಪೂರ್ಣವಾಗಿ ಸ್ವರಪ್ರಸ್ತಾರಗಳೊಂದಿಗೆ ಹಾಡಿ ಮುಗಿಸಿದಾಗಲಂತೂ ಸಭೆಯಲ್ಲಿ ಕಿವಿಗಡಚಿಕ್ಕುವಷ್ಟು ಕರತಾಡನ. ಕಛೇರಿಯ ಕೊನೆಯಲ್ಲಿ ಕನ್ನಡ ಸಂಗೀತ ಸಾಹಿತ್ಯಕ್ಕೆ ಕೊಡುಗೆ ಇತ್ತ ಪ್ರತಿಯೊಬ್ಬರನ್ನು ಸ್ಮರಿಸುತ್ತಾ ರಾಘವೇಂದ್ರ ಸ್ವಾಮಿಗಳ ಕೃತಿ, ಬಸವಣ್ಣನವರ ವಚನ, ಪುರಂದರದಾಸರ ಕೃತಿಗಳನ್ನು ಮಧುರ ಕಂಠದಿಂದ ಹಾಡಿ ಎಲ್ಲರ ಮನ ಗೆದ್ದರು ನಾಗಶ್ರೀ. ಸತತ ಮೂರು ಗಂಟೆಗಳು ವಿರಾಮವಿಲ್ಲದೇ ನಡೆದ ಕಛೇರಿ ಇದಾಗಿತ್ತು. ಪ್ರತಿಯೊಂದು ಹಾಡು ಮುಗಿದಾಗಲು ಜನರ ಉದ್ಗಾರ. ಸ್ಪಷ್ಟ ಉಚ್ಛಾರಣೆ, ಸ್ವರಪ್ರಸ್ತಾರ, ರಾಗಮಾಧುರ್ಯವನ್ನು ಆಲಿಸಿದಾಗ ಇವಳು ಅಮೆರಿಕಾದಲ್ಲಿ ಹುಟ್ಟಿ ಬೆಳೆದ ಹುಡುಗಿಯೇ ಎನ್ನುವ ಅಚ್ಚರಿ. ಕಾರ್ಯಕ್ರಮ ಮುಗಿದಕೂಡಲೇ ಡಾ. ಬಾಲಮುರಳಿಕೃಷ್ಣರವರ ಶಿಷ್ಯೆಯರಲ್ಲಿ ಒಬ್ಬರಾದ, ನಡೆದಾಡುವ ಸರಸ್ವತಿ ಎಂದೇ ಖ್ಯಾತಿಯಾಗಿರುವ ಶ್ರೀಮತಿ ಲಲಿತ ಮಾಮಿ ನಾಗಶ್ರೀಯನ್ನು ಅಭಿನಂದಿಸುವುವರಲ್ಲಿ ಮೊದಲಿಗರಾಗಿದ್ದರು.
ನಾಗಶ್ರೀ ಬಂದಿರುವುದು ಸಂಗೀತಗಾರರ ಕುಟುಂಬದಿಂದ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಗಾಯಕಿಯಾದ ತಾಯಿ ಜಯಶ್ರೀಯವರೇ ಮೊದಲ ಗುರು. ದೊಡ್ಡಮ್ಮ ಶ್ರೀಮತಿ ಗಾಯತ್ರಿ ಕೂಡ ಗಾಯಕಿ ಹಾಗು ಸದ್ಯ ಮೈಸೂರು ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದ ಮುಖ್ಯಸ್ಥೆ ತಾತ ನಂಜುಂಡಯ್ಯನವರು ವಯೊಲಿನ್ ವಾದಕರು. ಮೈಸೂರು ಸಹೋದರರೆಂದೇ ಖ್ಯಾತಿಯಾಗಿರುವ ಮೈಸೂರ್ ಮಂಜುನಾಥ್ ಹಾಗು ಮೈಸೂರ್ ನಾಗರಾಜ್ ಅವರ ತಂದೆಯವರ ಒಡನಾಡಿಗಳು ಹಾಗು ಆಪ್ತ ಮಿತ್ರರು ಹೌದು.
ಬಾಲ್ಯದಿಂದಲೇ ನಾಗಶ್ರೀಗೆ ಸಂಗೀತದಲ್ಲಿ ವಿಶೇಷ ಆಸಕ್ತಿ. 2004 ನೇ ಇಸವಿಯಲ್ಲಿ ಸದ್ಯ ಮೈಸೂರಿನಲ್ಲಿ ಇರುವ ಶ್ರೀಮತಿ.ಎಂ.ವಿ. ಅನಿತಾ ಅವರಿಗೆ ನಾಗಶ್ರೀಯನ್ನು ಪರಿಚಯಿಸಲಾಯಿತು. ಅವರಿಂದ ಶಾಸ್ತ್ರೋಕ್ತವಾಗಿ ಸಂಗೀತ ಕಲಿಕೆ ಪ್ರಾರಂಭವಾಯಿತು. ಎಲ್ಲ ಮಕ್ಕಳು ಅಜ್ಜಿ ತಾತನ ಮನೆಗೆ ಬೇಸಿಗೆ ರಜಾ ಕಳೆಯಲು ಹೋದರೆ ನಾಗಶ್ರೀ ಅಮೇರಿಕಾದಿಂದ ಸಂಗೀತ ಕಲಿಯಲು ಮೈಸೂರಿಗೆ ಬರುತಿದ್ದಳು. ನಂತರ ಸ್ಥಳೀಯ ಗಾಯಕಿಯರಾದ ಶ್ರೀಮತಿ ಇಂದು ಮಾಮಿ ಹಾಗು ದೀಪ ಶ್ರೀನಿವಾಸ್ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆದಳು. ಕಳೆದ ಎರಡು ತಿಂಗಳಿಂದ ಅಮೇರಿಕಾ ಪ್ರವಾಸದಲ್ಲಿರುವ, ಆಕಾಶವಾಣಿಯಲ್ಲಿ 'ಎ' ದರ್ಜೆ ಗಾಯಕಿಯಾದಂಥ ವಿದುಷಿ ಶ್ರೀಮತಿ ಪಿ. ರಮಾ ಅವರಿಂದ ಸತತವಾಗಿ ಸಂಪೂರ್ಣ ಕಛೇರಿ ನಡೆಸಲು ಬೇಕಾದ ಅಂಶಗಳನ್ನು ಕಲಿತಳು.
ಸಂಗೀತವಲ್ಲದೆ ವಿಜ್ಞಾನ ಸಂಶೋಧನೆಯಲ್ಲಿ ಹೆಚ್ಟು ಆಸಕ್ತಿ ಹೊಂದಿರುವ ನಾಗಶ್ರೀ ಸ್ಥಳೀಯ ವಿಶ್ವವಿದ್ಯಾನಿಲಯದ ಆರೋಗ್ಯ ವಿಜ್ಞಾನ ಇಲಾಖೆಯ ಮುಖ್ಯಸ್ಥರಾಗಿರುವ ಅಲಕಾನಂದ ಬಸು ಹಾಗು ಡಾ. ಚಂದ್ರಮೋಹನ್ ಅವರೊಡಗೂಡಿ ಕೀಮೋ ಥೆರಪಟಿಕ್ ಡ್ರಗ್ ರೆಸಿಸ್ಟೆನ್ಸ್ ಹಾಗು ಚರ್ಮ ಖಾಯಿಲೆಯಲ್ಲಿ ಒಂದಾದ ಲುಪಸ್ ಅನ್ನು ಪ್ರಥಮ ಹಂತದಲ್ಲಿ ಕಂಡು ಹಿಡಿಯುವ ಬಗ್ಗೆ ಸಂಶೋಧನೆ ನಡೆಸಿ ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನವನ್ನು ಗಳಿಸಿದ್ದಾಳೆ. 12ನೇ ತರಗತಿಯನ್ನು ಅತಿ ಹೆಚ್ಚು ಅಂಕಗಳನ್ನು ಪಡೆಯುವುದರೊಂದಿಗೆ ಪೂರ್ಣ ವಿದ್ಯಾರ್ಥಿ ವೇತನದೊಂದಿಗೆ ಇಲ್ಲಿನ ವೈದ್ಯಕೀಯ ಪೂರ್ವ ಶಿಕ್ಷಣಕ್ಕೆ ಸೇರುವ ಸಿದ್ದತೆಯಲ್ಲಿದ್ದಾಳೆ. ಕನ್ನಡ, ಕರ್ನಾಟಕದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಈ ಬಾಲೆ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡದ ಒಂದು ಸಾಲು ಹಾಕಲು ಮರೆಯಲಿಲ್ಲ ಹಾಗು ತನ್ನ ಪ್ರತಿಭೆಗೆ ಅವಕಾಶ ವೇದಿಕೆಯನ್ನು ಕಲ್ಪಿಸಿಕೊಟ್ಟ ಸ್ಥಳೀಯ ಮಲ್ಲಿಗೆ ಕನ್ನಡ ಸಂಘವನ್ನು ಸ್ಮರಿಸಲು ಮರೆಯಲಿಲ್ಲ.