ಆಕ್ಲೆಂಡಿನಲ್ಲಿ ಸಂಗೀತಾ ಕಟ್ಟಿ ಸಂಗೀತ ರಸದೌತಣ
ತಮ್ಮ ಕಾರ್ಯಕ್ರಮವನ್ನು ಬೆಳಗಿನ ರಾಗವಾದ ಗುಣಕಲಿಯಿಂದ ಪ್ರಾರಂಭಿಸಿ ಬಿಭಾಸ, ನಂದ, ಬ್ರಿಂದಾವನಿ ಸಾರಂಗ, ಮಾಲಕಂಸ ಹಾಗು ತೋಡಿ ರಾಗಗಳಲ್ಲಿ ದಾಸರ ಪದಗಳಾದ ರಾಮ ನಾಮ ಪಾಯಸಕ್ಕೆ ಕೃಶ್ಣನಾಮ ಸಕ್ಕರೆ, ಒಂದೆ ನಮನ ಸಾಲದೇ, ಆರಿಗೆ ನಮನಾದೆ, ಶರಣರ ವಚನಗಳಾದ ಮಾಡಿ ಮಾಡಿ ಕೆಟ್ಟರು, ಉಳ್ಳವರು ಶಿವಾಲಯವ ಮಾಡುವರು, ಶಿಶುನಾಳ ಶರೀಫರ ಎಲ್ಲಿ ಕಾಣೆ ಎಲ್ಲಿ ಕಾಣೆ, ಭಾವ ಗೀತೆಗಳಾದ ನಾಕು ತಂತಿ, ಶ್ರಾವಣ ಬಂತು ಶ್ರಾವಣ ಎಂದು ಕನ್ನಡ ಸಾಹಿತ್ಯವನ್ನು ಸಂಗೀತಾ ಭಾವಪೂರ್ಣವಾಗಿ ಹಾಡಿದರು.
ಯಮನ್, ಪಹಾಡಿ ಮತ್ತು ಭೈರವಿ ರಾಗಗಳನ್ನು ಪರಿಚಯಿಸುತ್ತ ಚಲನಚಿತ್ರಗಳ ಹಾಡುಗಳನ್ನು ಹಾಡಿ ಸಭಿಕರನ್ನು ತಮ್ಮ ಕಾರ್ಯಕ್ರಮದಲ್ಲಿ ತಲ್ಲೀನರಾಗುವಂತೆ ಮಾಡಿದರಲ್ಲದೇ ಕನ್ನಡ ಕೂಟದ ಸದಸ್ಯರಾದ ಆಶಿಶ್ ಮತ್ತು ಚೈತ್ರಾ ಅವರನ್ನು ತಮ್ಮೊಂದಿಗೆ ಹಾಡಲು ಪ್ರೆರೇಪಿಸಿದರು. ಕರ್ನಾಟಕದ ತಬಲಾ ನಿಪುಣರಾದ ಉದಯರಾಜ ಕರ್ಪುರ ಅವರು ಸಂಗೀತಾ ಕಟ್ಟಿಯವರಿಗೆ ಸಹಕಾರ ನೀಡಿದರು. ವಿರಾಮದ ನಂತರ ಉದಯರಾಜ್ ಕರ್ಪುರ ಅವರು ಶ್ರೋತೃಗಳ ಕೋರಿಕೆಯ ಮೇರೆಗೆ ತಬಲಾ ಸೋಲೊ ವಾದದ ತುಕಡಾ ಚಕ್ರಧಾರಗಳ ಸವಿಯನ್ನು ನೀಡಿ ರಸಿಕರನ್ನು ರಂಜಿಸಿದರು.
ಆಕ್ಲೆಂಡ್ ದ ಕಲಾ ನಿಪುಣರಾದ ಅರುಣ ಕೊತ್ಕರ ಅವರು ಹಾರ್ಮೋನಿಯಮ್, ವಿದ್ವಾನ್ ದಿವಾಕರ್ ಅವರು ವೀಣಾ ಮತ್ತು ಕೀಬೊರ್ಡ್, ಸತ್ಯಕುಮಾರ ಕಟ್ಟೆ ಅವರು ತಾಳದೊಂದಿಗೆ ಸಾಥಿ ನೀಡಿದರು. ಸಂಗೀತಾ ಕಟ್ಟಿ ಕುಲ್ಕರ್ಣಿಯವರು ತಮ್ಮ ಕಾರ್ಯಕ್ರಮವನ್ನು ಭೈರವಿ ರಾಗದ ಕಾಯೋ ಕರುಣಾನಿಧೆ ಹಾಡಿನ ಮೂಲಕ ನ್ಯೂಜಿಲೇಂಡ್ ಕನ್ನಡ ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಪ್ರಾಚಾರ್ಯ ವಾಮನಮೂರ್ತಿಯವರಿಗೆ ಭಾವಪೂರ್ಣವಾಗಿ ಅರ್ಪಿಸಿದರು.
ನ್ಯೂಜಿಲೇಂಡ್ ಕನ್ನಡ ಕೂಟದ ಅಧ್ಯಕ್ಷ ರವಿಶಂಕರ್ ಅವರು ಅತಿಥಿಗಳಾದ ಸಂಗೀತಾ ಕಟ್ಟಿ ಕುಲ್ಕರ್ಣಿ ಹಾಗು ಉದಯರಾಜ್ ಕರ್ಪುರ್ ಅವರನ್ನು ಸ್ವಾಗತಿಸಿ ಪರಿಚಯಿಸಿದರು. ರತ್ನಾ ವಾಮನಮೂರ್ತಿ ಅವರು ಸಂಗೀತಾ ಅವರಿಗೆ ಸನ್ಮಾನ ಮಾಡಿದರು. ಸಂಸ್ಥಾಪಕ ಕಾರ್ಯದರ್ಶಿ ಡಾ. ಲಿಂಗಪ್ಪ ಕಲ್ಬುರ್ಗಿ ಅವರು ಉದಯರಾಜ್ ಕರ್ಪುರ್ ಅವರನ್ನು ಸನ್ಮಾನಿಸಿದರು.
ಎಲ್ಲಮ್ಮನ ಜೋಗತಿಯ ಉಧೋ ಉಧೋ ತತ್ತ್ವದ ಮೂಲಕ ನಮ್ಮಲ್ಲಿ ಭಕ್ತಿಯ ಕಂಪನಗಳನ್ನೆಬ್ಬಿಸಿ, ನಾಕುತಂತಿಯಿಂದ ನಮ್ಮ ಭಾವನೆಗಳನ್ನು ಮೀಟಿ, ಶ್ರಾವಣದ ಹಾಡಿನ ಮೂಲಕ ನಮ್ಮ ಭಾವನೆಗಳನ್ನು ಬೆಚ್ಚಗಾಗಿಸಿ ತಮ್ಮ ಸ್ವರ ವೈವಿಧ್ಯತೆ, ಗಾನ ವೈವಿಧ್ಯತೆಯಿಂದ ರಾಗಗಳನ್ನು ಪರಿಚಯಿಸುತ್ತ ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತ, ಜಾನಪದ ಸೊಗಡಿನೊಂದಿಗೆ ಚಲನಚಿತ್ರದ ಮೆಲುಕು ಹಾಕುವಂತಹ ಗೀತೆಗಳ ರಸದೌತಣವನ್ನು ಆಕ್ಲೆಂಡಿನ ರಸಿಕರಿಗೆ ಉಣಬಡಿಸಿದ ಸಂಗೀತಾ ಕಟ್ಟಿ ಕುಲ್ಕರ್ಣಿ ಹಾಗು ಉದಯರಾಜ್ ಕರ್ಪುರ್ ಅವರನ್ನು ಪ್ರಕಾಶ್ ವಂದಿಸಿದರು. ಈ ಕಾರ್ಯಕ್ರಮದ ವ್ಯವಸ್ಥೆ ಮಾಡಿದ ಏಸಿಯಾ ಪೆಸೆಫಿಕ್ಕನ್ನಡ ಒಕ್ಕೂಟದ ಸೂತ್ರಧಾರರಾದ ಓಂಕಾರ ಸ್ವಾಮಿ, ಮತ್ತು ಈ ಕಾರ್ಯಕ್ರಮವನ್ನು ಪ್ರಯೋಜಿಸಿದ Premier Properties Mysore ಅವರಿಗೆ ನ್ಯೂಜಿಲೇಂಡ್ ಕನ್ನಡ ಕೂಟದ ವತಿಯಿಂದ ಆಭಾರ ಮನ್ನಣೆ ಮಾಡಿಲಾಯಿತು.