ಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ
ಜೂನ್ 26, 2009 ಸಂಜೆ 5 ಗಂಟೆಗೆ ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 24ನೇ ಹುಟ್ಟುಹಬ್ಬ 'ರಂಗ ಸಿರಿ ಉತ್ಸವ-2009'ದಲ್ಲಿ ಪ್ರಶಸ್ತಿ ಪ್ರದಾನವು ನೆರವೇರಲಿದೆ. ಸಮಾರಂಭಕ್ಕೆ ಕರ್ನಾಟಕದಿಂದ ಅತಿಥಿಗಳಾಗಿ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ಡಾ. ಸಿ. ಸೋಮಶೇಕರ್ ಹಾಗೂ ಜರಗನಹಳ್ಳಿ ಶಿವಶಂಕರ ಭಾಗವಹಿಸಲಿರುವರೆಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
ನಾಗಾಭರಣ ಕುರಿತು : ಶಾಲಾ ದಿನಗಳಲ್ಲಿಯೇ ನಾಟಕದ ಗೀಳು ಹಚ್ಚಿ ಕೊಂಡಿದ್ದ ನಾಗಾಭರಣ ಅವರು ಅಧುನಿಕ ರಂಗಭೂಮಿಯ ಬ್ರಹ್ಮ ಎಂದೇ ಕರೆಯಲ್ಪಡುವ ಪ್ರಖ್ಯಾತ ನಾಟಕಗಾರ ಆದ್ಯ ರಂಗಾಚಾರ್ಯರಿಂದ ಪ್ರೇರಣೆ ಪಡೆದವರು. ಕಾಲೇಜಿನಲ್ಲಿಓದುತ್ತಿರುವಾಗ ಶ್ರೀರಂಗರ 'ಏವಂ ಇಂದ್ರಜಿತ್' ಮತ್ತು 'ಶೋಕ ಚಕ್ರ' ನಾಟಕಗಳನ್ನು ನಿರ್ದೇಶಿಸಿದ್ದರು. ಇವರು ರಂಗಕರ್ಮಿಯಾಗಿ ಪರದೆಯ ಹಿಂದೆ ಹಾಗು ಮುಂದೆ ದುಡಿದು ಅನುಭವನ್ನು ಗಳಿಸಿಕೊಂಡರು.
ನಂತರದ ದಿನಗಳಲ್ಲಿ ರಂಗ ಭೂಮಿಯ ಮೇಲೆ ಹಿರಿಯ ರಂಗ ನಾಟಕಗಾರದ ಬಿ.ವಿ.ಕಾರಂತ್, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡರ ಜೊತೆಗೆ ದುಡಿಯುವ ಭಾಗ್ಯ ನಾಗಭರಣ ಅವರಿಗೆ ಒದಗಿ ಬಂದಿತ್ತು. ನಾಗಭರಣ ಅವರು ನಿರ್ದೇಶಿಸಿದ ಹಾಗೂ ನಟಿಸಿರುವ ನಾಟಕಗಳಲ್ಲಿ ಸಾಂಗ್ಯಾ ಬಾಳ್ಯಾ, ಕತ್ತಲೆ ಬೆಳಕು, ಜೋಕುಮಾರ ಸ್ವಾಮಿ, ಸತ್ತವರ ನೆರಳು, ಕೃಷ್ಣ ಪಾರಿಜಾತ, ಈಡಿಪಸ್, ಟಿಂಗರ ಬುಡ್ಡಣ್ಣ, ಮುಂದೆನ ಸಖಿ ಮುಂದೇನ, ಹಯವದನ, ನೀಗಿಕೊಂಡ ಸಂಸ, ಬಕ... ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.
ಸಿನೆಮ ಮಾದ್ಯಮದಲ್ಲಿ ಕೂಡ ತನ್ನದೇ ಆದ ಚಾಪು ಒತ್ತಿರುವ ನಾಗಭರಣ ಅವರು ಸುಮಾರು 32 ಸಿನೆಮಾಗಳನ್ನು ನಿರ್ದೇಶಿಸಿದ್ದು ಎಂಟು ರಾಷ್ಟ್ರೀಯ ಪ್ರಶಸ್ತಿ ಹಾಗೂ 14 ರಾಜ್ಯ ಪ್ರಶಸ್ತಿಗಳನ್ನು ಪಡೆದು ಕೊಂಡಿರುವರು. ಇದಲ್ಲದೆ ಹಲವಾರು ದೇಶ ವಿದೇಶಗಳ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವರು. ಇವರ ಏಳು ಚಿತ್ರಗಳು ಅಂತಾರಾಷ್ಟ್ರೀಯ ಫಿಲ್ಮ್ ಪನೋರಮಾಕ್ಕೆ ಪ್ರದರ್ಶಿತಗೊಂಡಿವೆ.