ಅಮೆರಿಕನ್ನಡಿಗನಿಗೆ ‘ವೈದಿಕ ರತ್ನ'ಪ್ರದಾನ
ವೃತ್ತಿಯಿಂದ ವೆಟರ್ನರಿ ಮೆಡಿಕಲ್ ಆಫೀಸರ್ ಮತ್ತು ಪ್ರವೃತ್ತಿಯಿಂದ ವೇದಶಾಸ್ತ್ರ ವಿದ್ವಾಂಸನಾಗಿರುವ ಕೃಷ್ಣಮೂರ್ತಿಯವರು ಕಳೆದ 35ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದಾರೆ. ಪ್ರಸ್ತುತ ಅಮೆರಿಕ ಸರಕಾರದ ಕೃಷಿ ಇಲಾಖೆ (ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್, ಯು.ಎಸ್ ಫೆಡೆರಲ್ ಗವರ್ನ್ಮೆಂಟ್) ವಾಷಿಂಗ್ಟನ್ ಡಿಸಿ ಕಚೇರಿಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಾರಾಂತ್ಯಗಳಲ್ಲಿ ಮತ್ತು ಬಿಡುವಿನ ವೇಳೆಯಲ್ಲಿ ವರ್ಜೀನಿಯಾದಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಮೆರಿಕದ ವಿವಿಧೆಡೆಗಳಲ್ಲಿ ನಡೆದಿರುವ 'ಅಕ್ಕ" ವಿಶ್ವಕನ್ನಡ ಸಮ್ಮೇಳನಗಳ ಉದ್ಘಾಟನಾ ಸಮಾರಂಭದಲ್ಲಿ ವೇದಘೋಷ ಮೊಳಗಿಸುವ ಶುಭಕಾರ್ಯವನ್ನು ಡಾ.ಕೃಷ್ಣಮೂರ್ತಿ ಆಸ್ಥೆಯಿಂದ ನಡೆಸಿಕೊಂಡು ಬಂದಿದ್ದಾರೆ. 1986ರಲ್ಲಿ ಇವರು ವಾಷಿಂಗ್ಟನ್ ಮೆಟ್ರೊ ಪ್ರದೇಶದ 'ಕಾವೇರಿ"ಕನ್ನಡ ಸಂಘದ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು.
ವೈದಿಕ ಕುಟುಂಬದಲ್ಲಿ ಜನಿಸಿದ ಕೃಷ್ಣಮೂರ್ತಿ, ಬಾಲ್ಯದಲ್ಲಿ ಹತ್ತು ವರ್ಷಗಳ ಕಾಲ ವೇದಾಧ್ಯಯನ ನಡೆಸಿದವರು. ವೃತ್ತಿ ಮತ್ತು ವಿದ್ಯಾಭ್ಯಾಸಗಳಿಗೋಸ್ಕರ ದೂರದ ಆಮೆರಿಕದಲ್ಲಿ ನೆಲೆಸಿದ ನಂತರವೂ ವೇದಾಧ್ಯಯನವನ್ನು ಮುಂದುವರಿಸಿಕೊಂಡು ಬಂದವರು. ಭಾರತೀಯ ಸಂಸ್ಕೃತಿ, ಸನಾತನ ಧರ್ಮಗಳ ಬಗ್ಗೆ ಅಪಾರ ಅಭಿಮಾನ, ಅವುಗಳ ಪ್ರಚಾರಕ್ಕಾಗಿ ಎಲೆಮೆರೆಯ ಕಾಯಿಯಂತೆ ಅವಿರತ ಪರಿಶ್ರಮ ಡಾ.ಕೃಷ್ಣಮೂರ್ತಿಯವರ ವ್ಯಕ್ತಿತ್ವದ ಸಾರಾಂಶ. ಇವರು ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಹಿಂದೂ ಮತ್ತು ಇತರ ಧರ್ಮದ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ, ವಿಚಾರಸಂಕಿರಣ, ತರಬೇತಿ ಶಿಬಿರಗಳನ್ನೂ ನಡೆಸುತ್ತಿದ್ದಾರೆ.