ಬೆವರಿಳಿಸಿದ 'ಬೃಂದಾವನ' ಗುರುಕಿರಣ್ ರಸಸಂಜೆ
ಮಾನ್ಯರೆ,
ಸೆ. 14 ರಂದು ನ್ಯೂಜೆರ್ಸಿ ಯಲ್ಲಿ ಬೃಂದಾವನ ಏರ್ಪಡಿಸಿದ್ದ ಗುರುಕಿರಣ್ ರಸಸಂಜೆ ಮುಗಿಸಿಬಂದ ಮೇಲೆ ನೆನಪಿನಲ್ಲುಳಿದಿದ್ದು ಮೂರು ಶಬ್ದ 'ಸೆಕೆ ಸೆಕೆ ಸೆಕೆ'. ಹೌದು! ಅತೀ ಬೇಸರದಿಂದ ಈ ಮಾತನ್ನು ಬರೆಯುತ್ತಿದ್ದೇನೆ. ಈ ಕೆಳಕಂಡ ಅನುಭವ, ಅನಿಸಿಕೆಗಳನ್ನು ತಮ್ಮೆಲ್ಲರೊಂದಿಗೆ ಹಂಚ್ಚಿಕೊಳ್ಳಲು ಇಷ್ಟಪಡುತ್ತೇನೆ.
* ಪ್ರವೇಶ ಶುಲ್ಕ 30 ಡಾಲರ್, ಈ ಮಟ್ಟದ ಕಾರ್ಯಕ್ರಮಕ್ಕೆ ತುಂಬಾ ದುಬಾರಿಯಾಯಿತು.
* ಹೊರಗೆ ತುಂಬಾ ಸೆಕೆಯಿದ್ದದ್ದು ಮತ್ತು ಆಡಿಟೋರಿಯಂನಲ್ಲಿ ಏರ್ ಕಂಡಿಶನ್ ವ್ಯವಸ್ಥೆ ಇಲ್ಲದಿದ್ದದ್ದು, ಒಳಗೆ ಕೂತವರಿಗೆ ಬಾಯ್ಲರ್ ನಲ್ಲಿ ಬೆಂದ ಅನುಭವವಾಗುತಿತ್ತು. ಪ್ರತಿಯೊಬ್ಬರೂ ಧಾರಾಕಾರವಾಗಿ ಬೆವರುತ್ತ ಕೈಗೆ ಸಿಕ್ಕ ಪೇಪರ್, ಪ್ಲೇಟ್, ಕರ್ಚೀಫ್ ವಗೈರೆ ವಗೈರೆ ಗಳಿಂದ ಬರೋಬ್ಬರಿ 5-6 ಗಂಟೆ ಗಾಳಿ ಹಾಕಿಕೊಳ್ಳುತ್ತಿದ್ದುದು ಅಸಹನೀಯವಾಗಿತ್ತು. ನಮ್ಮಂಥ ವಯಸ್ಸಾದವರ ಸ್ಥಿತಿ ಚಿಂತಾಜನಕವಾಗಿತ್ತು. ಹಿರಿಯ ನಾಗರಿಕರ ತೊಂದರೆಗಳಿಗೆ ಬೆಲೆ ಇಲ್ಲ.
* ಸುಮಾರು ಹೊತ್ತಿನ ನಂತರ ತಂದ 8-10 ಮನೆ ಬಳಕೆ ಫ್ಯಾನ್ ಗಳು ಆ ದೊಡ್ಡ ಆಡಿಟೋರಿಯಮ್ ನಲ್ಲಿ ಆಟದ ವಸ್ತುಗಳಂತೆ ಕಾಣುತ್ತಾ ಬಕಾಸುರನ ಹೊಟ್ಟೆಗೆ ಬಿಡಿಕಾಸಿನ ಮಜ್ಜಿಗೆಯಂತಿದ್ದವು.
* ಸ್ಟೇಜ್ ನ ಮೈಕ್ ಸಿಸ್ಟಂ ತುಂಬಾ ಅಧ್ವಾನ. ಮಾತು ಕೇಳುತ್ತಲೇ ಇಲ್ಲ, ಬೆಳಕು ಮಂದ ಮಂದ. ಡಿಸ್ಕೊಗೆ ಮಾತ್ರ ಚೆಂದ.
* ರಂಗಗೀತೆ ಮತ್ತು ನಾಟಕ ಬಿಟ್ಟು ಇತರೆ ಕಾರ್ಯಕ್ರಮಗಳು ತುಂಬಾ ಕಳಪೆ ಮಟ್ಟದ್ದಾಗಿದ್ದವು. ಎಲ್ಲೂ ಕಂಟಿನ್ಯುಟಿ ಇರಲಿಲ್ಲ.
* ಊಟ ಅಷ್ಟಕ್ಕಷ್ಟೆ. 'ಮಧು ರಂಗಯ್ಯ' ಎಂಬ ಕಾರ್ಯದರ್ಶಿಗೆ ಮಕ್ಕಳು ಮತ್ತು ಮುದುಕರ ಬಗ್ಗೆ ಮರುಕವೇ ಇದ್ದಂತಿರಲಿಲ್ಲ. ರಾತ್ರಿ ಒಂಬತ್ತು ಗಂಟೆಗೆ ಡೈನಿಂಗ್ ಹಾಲಿಗೆ ಬಂದು, ಊಟದ ಸಾಲಿನಲ್ಲಿ ನಿಂತವರನ್ನು ಮತ್ತು ಅಡಿಗೆ ಬಡಿಸುತ್ತಿದ್ದ ಸಣ್ಣ ಮಕ್ಕಳನ್ನು "ಊಟಕ್ಕೆ ಪರ್ಮಿಶನ್ ಕೊಟ್ಟವರು ಯಾರು?" ಎಂದು ತರಾಟೆಗೆ ತೆಗೆದುಕೊಂಡು ಕೂಗಾಡಿದ್ದು ತುಂಬಾ ಬೇಸರ ಹುಟ್ಟಿಸಿತು. ದಯವಿಟ್ಟು ಕಾರ್ಯದರ್ಶಿಗಳು ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು : 'ಯಾರೂ ಅನ್ನ ಕಾಣದೆ ಇಂತಹ ಸಮಾರಂಭಕ್ಕೆ ಬಂದಿರುವುದಿಲ್ಲ'.
* ಗುರುಕಿರಣ್ ತಮ್ಮ ಬಾಜಾ ಬಜಂತ್ರಿಗಳೊಂದಿಗೆ ಎಲ್ಲರಿಗೂ ರಸದೌತಣ ನೀಡುತ್ತಾರೆಂದುಕೊಂಡವರಿಗೆ, ಕೆಸೆಟ್ ಹಾಕಿ ಅದರೊಂದಿಗೆ ಹಾಡಿದ್ದು, ಹಾಡಿಗೆ ಗಂಡು ಹೆಣ್ಣುಗಳೆಂಬ ಬೇಧವಿಲ್ಲದೆ ಕುಣಿದದ್ದು ಅಸಹ್ಯ ಹುಟ್ಟಿಸುವಂತಿತ್ತು.
* ಇಡೀ ಕಾರ್ಯಕ್ರಮದಲ್ಲಿ ಗುರುತಿಡುವ ಒಂದೇ ಉತ್ತಮ ಅಂಶವೆಂದರೆ ಕಡೆಯದಾಗಿ ಹಾಡಿದ 'ರಾಷ್ಟ್ರ ಗೀತೆ'. ಅದು ಇಡೀ ಕಾರ್ಯಕ್ರಮವನ್ನೇ ಅಣಕಿಸುವಂತಿತ್ತು.
ಇಂತೀ ತಮ್ಮವ
ನಾ. ದೀಕ್ಷಿತ್