ಸಹೃದಯ ಗೋಷ್ಠಿಯಲ್ಲಿ ಪುತಿನ ಕಾವ್ಯಗಳ ರಸಯಾತ್ರೆ
ಸಹೃದಯತೆಗೆ ಹೆಸರಾದ ನಮ್ಮ ಬೇ ಏರಿಯಾದ ಅಲಮೇಲು ಮತ್ತು ತಿರುನಾರಾಯಣ ಐಯ್ಯಂಗಾರ್ ಅವರು ಸಹೃದಯ ಗೋಷ್ಠಿಯನ್ನು ಸರಟೋಗಾದಲ್ಲಿರುವ ಅವರ ಸ್ವಗೃಹದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದರು. ಈ ಗೋಷ್ಠಿಯ ವಿಶೇಷತೆ ಏನೆಂದರೆ, ಪುತಿನ ಅವರು ಇಲ್ಲಿಗೆ ಆಗಮಿಸಿದ್ದಾಗ ತಮ್ಮ ಮೊದಲನೆಯ ಗೋಷ್ಠಿಯಲ್ಲಿ ಮಾತನಾಡಿ ನಂತರ ಹಲವಾರು ಸುಪ್ರಸಿದ್ಧ ಕನ್ನಡ ಸಾಹಿತಿಗಳಾದ ಡಾ. ಜಿ.ಎಸ್. ಶಿವರುದ್ರಪ್ಪ, ಎಚ್. ಎಸ್. ವೆಂಕಟೇಶ ಮೂರ್ತಿ ಮುಂತಾದವರು ಮಾತನಾಡಿ ಅಣಿಮಾಡಿದ ವೇದಿಕೆ ಇದು.
ಸಾಹಿತಿ, ನೃತ್ಯಗಾರ್ತಿ, ಮೈಸೂರಿನಲ್ಲಿ ನೃತ್ಯಾಲಯ ಟ್ರಸ್ಟ್ ನೃತ್ಯ ಶಾಲೆ ನಡೆಸುತ್ತಿರುವ ಡಾ. ತುಳಸಿಯವರು ಪುತಿನ ಅವರ ಕಾವ್ಯಗಳ ರಸಯಾತ್ರೆ ರಸಧಾರೆ ಹರಿಸಲು ಆಯ್ದುಕೊಂಡ ಎರಡು ಕೃತಿಗಳು "ಶ್ರೀಹರಿ ಚರಿತೆ" ಮತ್ತು "ಶಬರಿ". "ಶ್ರೀಹರಿ ಚರಿತೆ" ಒಂದು ಮಹಾಕಾವ್ಯ, "ಶಬರಿ" ಒಂದು ಖಂಡ ಕಾವ್ಯ", ಕ್ರಮವಾಗಿ "ಶೃಂಗಾರ" ಮತ್ತು "ಕರುಣ" ರಸಗಳಲ್ಲಿ ರಚಿಸಲಾಗಿದೆ. "ನಿಲ್ಲಿಸದಿರು ವನಮಾಲಿ ಕೊಳಲ ಗಾನವ" (ಪು.ತಿ.ನ.ವಿರಚಿತ) ಕವನವನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ, "ಈ ಒಂದು ಪದ್ಯ ಅವರಿಗೆ ಬಾಳಿನಲ್ಲಿ ಹೇಗೆ ಸ್ಪೂರ್ತಿಕೊಟ್ಟಿದೆ" ಎಂದು ವಿವರಿಸುತ್ತಾ, ಕೃಷ್ಣನ ಅರಾಧಕರಾದ ಪು.ತಿ.ನ ಅವರ "ಶ್ರೀಹರಿ ಚರಿತೆ"ಯನ್ನು ಅರಂಭಿಸಿದರು.
ಡಾ. ತುಳಸಿಯವರು ಪುತಿನ ಅವರ ಮಹಾಕಾವ್ಯ ಶ್ರೀಹರಿ ಚರಿತೆ ಬಗ್ಗೆ ಮಾತನಾಡುತ್ತಾ "ತಾಳ, ಲಯಗಳು, ಭಾವಬಂಧಗಳು ನೃತ್ಯ ನಾಟಕಕ್ಕೆ ಅತ್ಯಂತ ಸಮರ್ಥಕವಾಗಿರುವಂತೆ ಬ್ರಹ್ಮ ಛಂದಸ್ಸಿನಲ್ಲಿ ಗೀತನಾಟಕವನ್ನು ರಚಿಸಲಾಗಿದೆ" ಎಂದು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. "ಶೃಂಗಾರ" ರಸದ ಹಲವು ಮಜಲುಗಳನ್ನು ಹೃದಯಂಗಮವಾಗಿ ಚಿತ್ರಿಸಲಾಗಿದೆ. ಪು.ತಿ.ನ. ಅವರು ಶ್ರೀಹರಿ ಚರಿತೆಯ ರಾಧಾದರ್ಶನದಲ್ಲಿ ಶೃಂಗಾರ ರಸಕ್ಕೆ ಪ್ರಾಧಾನ್ಯತೆ ಕೊಡುವುದರ ಜೊತೆಗೆ, ರಾಧೆಯನ್ನು ಮುಗ್ಧನಾಯಕಿಯಾಗಿ ಚಿತ್ರಿಸಿದ್ದಾರೆ. "ಶ್ರೀಹರಿ ಚರಿತೆ"ಯಲ್ಲಿ ಕೃಷ್ಣನ ಕೊಳಲು ರಾಧೆಗೆ ಕೃಷ್ಣನಂತೆಯೇ ವ್ಯವಹರಿಸುತ್ತದೆ. ಈ ಪದ್ಯ "ವ್ಯಷ್ಟಿ ಸಮಷ್ಟಿ" ಭಾವವನ್ನು ಸೆರೆಹಿಡಿಯುವುದರಲ್ಲಿ ಸಾರ್ಥಕವಾಗಿದೆ. "ಜೀವಾತ್ಮ-ಪರಮಾತ್ಮ" ಮತ್ತು "ಯೋಗಕ್ಷೇಮಂ ವಹಾಮ್ಯಹಮ್" ಎಂದು ಶ್ರೀಕೃಷ್ಣನೇ ಭಗವತ್ ಗೀತೆಯಲ್ಲಿ ಹೇಳಿದಂತೆ, "ಎಲ್ಲರೊಳು ಅವನಿದ್ದು, ಎಲ್ಲರನು ಸಲಹುವನು, ಇದಕೆ ಸಂಶಯವಿಲ್ಲ" ಎಂಬ ಎಲ್ಲರಿಗೂ ಭಗವಂತನೊಡನಿರುವ ಅನೂನ್ಯ ಸಂಬಂಧವನ್ನು ವ್ಯಕ್ತಪಡಿಸುತ್ತದೆ ಎಂದು ಅವರು ವಿವರಿಸಿದರು.
ಮುಂದಿನ ಕೃತಿ, "ಶಬರಿ"ಯಲ್ಲಿ ಆರ್ದ್ರತೆಯಿಂದ ಕರುಣರಸ ಹರಿದಿದೆ ಎಂದರೆ ತಪ್ಪಾಗಲಾರದು. ಮಾತಂಗ ಮುನಿ ಆಶ್ರಮದಲ್ಲಿ, ಅವಳ ಗುರು ಇಹಲೋಕವ ತ್ಯಜಿಸಿದ ಮೇಲೆ, ಮತಂಗ ಮುನಿಯ ಆದೇಶದ ಮೇರೆಗೆ, ಶಬರಿ ಹಣ್ಣುಹಣ್ಣು ಮುದುಕಿಯಾಗೂ, ಹೂವು, ತರ, ತರಹಾವರಿ ಹಣ್ಣುಗಳನ್ನು ಶೇಖರಿಸಿ ಒಂದೇ ನಿಟ್ಟಿನಿಂದ ಶ್ರೀರಾಮನ ಬರವಿಗಾಗಿ ಬರದಿಂದ ಕಾಯುತ್ತಾಳೆ. ಕಾಯುವಾಗ ರಾಮನ ಗುಣಗಳನ್ನಾಡಿ, ಪಾಡುತ್ತಾಳೆ.
ಕೊನೆಯಲ್ಲಿ ಶಬರಿ ಅಗ್ನಿ ಪ್ರವೇಶಿಸುತ್ತಾಳೆ. ಅಗ್ನಿ ಆಹುತಿಯಲ್ಲಿ "ರಜತಶ್ರೀ"ಯಂತೆ ರಾರಾಜಿಸುತ್ತಿರುವ ಶಬರಿಯನ್ನು ಕಂಡು ರಾಮ, ಲಕ್ಷ್ಮಣನಿಗೆ ತೋರಿಸುತ್ತಾ, ನೋಡು ಲಕ್ಷ್ಮಣ, ನಮಗೆ ಅಭಯ ಹಸ್ತವನ್ನು ತೋರುತ್ತಿರುವ ತೇಜಸ್ವಿನಿಗೆ ನಮಸ್ಕರಿಸು ಎನ್ನುತ್ತಾ, ಆ ದಿವ್ಯ ಶ್ರೀರಕ್ಷೆಯನ್ನೇ ತದೇಕಚಿತ್ತದಿಂದ ನೋಡುತ್ತಿರುತ್ತಾನೆ. ಹೀಗೆ, ಶಬರಿಯ ಅಗ್ನಿಪ್ರವೇಶದಿಂದ ಕೊನೆಗೊಳ್ಳುವ ಈ (ಶಬರಿ) ಖಂಡ ಕಾವ್ಯವು, ಶೋತೃಗಳ, ಪ್ರೇಕ್ಷಕರ ಮತ್ತು ಓದುಗರ ಮನಸ್ಸಿನಲ್ಲಿ ನೆಲೆಯಾಗುವ ವಿಶೇಷ ಭಾವಗಳನ್ನು ಕರುಣಾ ರಸದಲ್ಲಿ ಪುತಿನ ಅವರು ಅಮೋಘವಾಗಿ ಹಿಡಿದಿಟ್ಟಿದ್ದಾರೆ.
ಹೀಗೆ, ಎರಡು ಗಂಟೆಗಳ ಪುತಿನ ಅವರ "ಕಾವ್ಯಗಳ ರಸಯಾತ್ರೆ" ಹರಿದಿದ್ದೇ ತಿಳಿಯಲಿಲ್ಲ, ಘಮ, ಘಮ ಊಟದ ಸುವಾಸನೆ ಮೂಗಿಗೆ ತಟ್ಟಿದ ಮೇಲೇ ಶೋತೃಗಳೆಲ್ಲಾ ಎದ್ದಿದ್ದು. ಈ ಅವಕಾಶವನ್ನು ನನಗೆ ಕಲ್ಪಿಸಿಕೊಟ್ಟ, ಅಲಮೇಲು ದಂಪತಿಗಳಿಗೆ, ಡಾ. ತುಳಸಿ ರಾಮಚಂದ್ರ ಅನಂತ ಕೃತಜ್ಞತೆಗಳು.
ಈ
ಲೇಖನವನ್ನೂ
ಓದಿರಿ
ಗೋಕುಲ
ನಿರ್ಗಮನ
-
ಒಂದೆ
ಬಾರಿ
ನುಡಿಸು
ಕೃಷ್ಣ
ಅಭಯಗೀತವ