ಈಶಾನ್ಯ ಅಮೆರಿಕನ್ನಡಕೂಟಗಳ ಯಶಸ್ವಿ ನಾಟಕೋತ್ಸವ
ಶನಿವಾರ, ಮೇ 10ರಂದು ಬೃಂದಾವನದ 2006-08 ಕಾರ್ಯಕಾರಿ ಸಮಿತಿಯ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಈಶಾನ್ಯ ಅಮೇರಿಕನ್ನಡಕೂಟಗಳ ನಾಟಕೋತ್ಸವ ಬಹಳ ಅದ್ದೂರಿಯಿಂದ ನೆರವೇರಿತು. ಹತ್ತು ವರ್ಷಗಳ ಹಿಂದೆ ನ್ಯೂಯಾರ್ಕ್ ಕನ್ನಡಕೂಟ ನಡೆಸಿದ್ದ ಈಶಾನ್ಯ ಅಮೇರಿಕನ್ನಡಕೂಟಗಳ ಸಮ್ಮೇಳನದ ನಂತರ ನ್ಯೂಜೆರ್ಸಿಯ ಬೃಂದಾವನ ಪ್ರಥಮ ಬಾರಿಗೆ ಈಶಾನ್ಯ ಅಮೇರಿಕನ್ನಡಕೂಟಗಳ (ನ್ಯೂಯಾರ್ಕ್, ತ್ರಿವೇಣಿ, ಹೊಯ್ಸಳ ಕನೆಟಿಕಿಟ್, ಕಾವೇರಿ, ಉತ್ತರ ಕಾಲಿಫೋರ್ನಿಯಾ ಹಾಗು ಬೃಂದಾವನ ಕನ್ನಡಕೂಟ) ನಾಟಕೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಿತು.
ಬೃಂದಾವನದ ಅಧ್ಯಕ್ಷೆ ವಸಂತಾ ಶಶಿ ಅವರ ನೇತೃತ್ವದಲ್ಲಿ ಹಚ್ಚೇವು ಕನ್ನಡದ ದೀಪ ಹಾಡುವ ಮುಖಾಂತರ ಮತ್ತು ಅಂದಿನ ಮುಖ್ಯ ಅತಿಥಿಗಳಾಗಿ ಕರ್ನಾಟಕದಿಂದ ಆಗಮಿಸಿದ್ದ ಪ್ರಹ್ಲಾದ ರಾವ್ ಹಾಗು ಅವರ ಪತ್ನಿ ಮಲ್ಲಿಕಾ ಪ್ರಹ್ಲಾದ ರಾವ್ ಅವರೊಂದಿಗೆ ದೀಪ ಬೆಳಗುವುದರ ಮೂಲಕ ನಾಟಕೋತ್ಸವದ ಅಗರಕ್ಕೆ ಚಾಲನೆ ನೀಡಿದರು. ಪ್ರಹ್ಲಾದ ರಾವ್ ಅವರ ಡಾ. ರಾಜ್ ಅವರ ಜೀವನ ಸಾಧನೆ ಕುರಿತ ಆಂಗ್ಲ ಅನುವಾದಿತ The inimitable Actor with Golden voice Dr. Raj Kumar ಕೃತಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಡಾ. ರಾಜ್ ಅವರ ಬಂಗಾರದ ಮನುಷ್ಯ ಚಿತ್ರದ 'ಅಹಾ ಮೈಸೂರು ಮಲ್ಲಿಗೆ' ಯುಗಳ ಗೀತೆಯನ್ನ ಮುರಳಿ ಅಯ್ಯಂಗಾರ್ ಮತ್ತು ವಸಂತಾ ಶಶಿ ಸುಶ್ರಾವ್ಯವಾಗಿ ಹಾಡಿದರು.
ನಾಟಕೋತ್ಸವ : ಅಂದಿನ ನಾಟಕೋತ್ಸವದ ಮೊದಲ ಸರದಿ ನಮ್ಮ ಹಿರಿಯಕ್ಕಳಾದ ನ್ಯೂಯಾರ್ಕ್ 'ತರಂಗ' ಕಲಾವಿದರು ಡಾ. ಎಂ. ಜಿ. ಪ್ರಸಾದ್ ಅವರ ನಿರ್ದೇಶನದಲ್ಲಿ 'ಚಾಣಕ್ಯನ ಶಪಥ' ಚಾರಿತ್ರಿಕ ನಾಟಕ ಪ್ರದರ್ಶಿಸಿದರು. ಪ್ರಾರಂಭದಲ್ಲಿ ಮೈಕಾಸುರ ಹಾವಳಿ ಇದ್ದರೂ, ಚಾಣಕ್ಯನ ಪಾತ್ರಧಾರಿಯಾಗಿದ್ದ ಅನಂತ ಅಂಬುಗಾ ಅವರ ಧ್ವನಿಗೆ ಮೈಕೇ ಬೇಕಿಲ್ಲವೆನಿಸಿ, ಬಹಳ ಅಧ್ಭುತವಾಗಿ ಮೂಡಿಬಂದು ಸಭಿಕರನ್ನು ರಂಜಿಸಿತು. ಹೊಯ್ಸಳ ಕನೇಟಿಕಿಟ್ ಕನ್ನಡ ಕೂಟ ಪ್ರಸ್ತುತಪಡಿಸಿದ ಯಶ್ವಂತ ಗಡ್ಡಿ ಅವರ ಸ್ವರಚಿತ 'ಅಗ್ರಹಾರದ ಕನ್ನಡಸಾಲೆ' ಕಿರು ನಗೆ ನಾಟಕ ಗಡ್ಡಿ ಅವರ ನಿರ್ದೇಶನದಲ್ಲಿ ಅಂದಿನ ಕಿಕ್ಕಿರಿದ ಸಭಿಕರ ಚಪ್ಪಾಳೆ ಗಿಟ್ಟಿಸಿತು. ಕನ್ನಡವೇ ಓದಲು/ಬರೆಯಲು ಬಾರದ ಮಕ್ಕಳಿಂದ ಕನ್ನಡದಲ್ಲಿ ನಾಟಕದ ಅಭಿನಯವನ್ನ ಪ್ರದರ್ಶಿಸಿದುದು ಶ್ಲಾಘನೀಯ.
ಪು.ತಿ.ನ ಅವರ ಪುತ್ರಿ ಪದ್ಮ ರಂಗಾಚಾರ್ ನೇತೃತ್ವದಲ್ಲಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ರಚಿತ ಕವಿತೆ ಭಗವತಿ ಅವರ ನಿರೂಪಣೆಯೊಂದಿಗೆ ಹಿಂದಿನ ಕಾಲದ ಗಂಡ ಹೆಂಡಿರ ಪ್ರೇಮ ಪತ್ರದ ಸೊಗಡಿನ ಹಾಸ್ಯ ಪ್ರಹಸನವನ್ನು ತ್ರಿವೇಣಿ ಕನ್ನಡ ಕೂಟ ಸೊಗಸಾಗಿ ಪ್ರದರ್ಶಿಸಿತು. ಅಂದಿನ ವಿಶೇಷವೆಂದರೆ, ಪು.ತಿ.ನ ಅವರ ಪುತ್ರಿ ಅಲಮೇಲು ಅಯ್ಯಂಗಾರ್ ಅವರು ಕೂಡ ಉತ್ತರ ಕಾಲಿಫೋರ್ನಿಯಾ ಕನ್ನಡ ಕೂಟದ ಪ್ರತಿನಿಧಿಯಾಗಿ ಆಗಮಿಸಿ ಮನುಷ್ಯನಿಗೆ ತನ್ನ ಜೀವನದಲ್ಲಿ ನಗುವುದನ್ನು ಅಳವಡಿಸಿಕೊಳ್ಳುವುದು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಒಂದೆರಡು ಮಾತಿನಲ್ಲೇ ಮನದಟ್ಟು ಮಾಡಿಕೊಟ್ಟರು. ನಂತರ ಬೃಂದಾವನದ ಸದಸ್ಯರುಗಳು ಆಶಾ ಅಡಿಗ ಅವರ ನಿರೂಪಣೆಯಲ್ಲಿ ಬಸ್ನಿಲ್ದಾಣದಲ್ಲಿ ನಡೆಯುವ ಹಾಸ್ಯಪ್ರಸಂಗವನ್ನು ಮೂಕಾಭಿನಯದಿಂದ ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ನಾಟಕೋತ್ಸವದ ಅಂಕದ ಪರದೆ ಬೀಳುವ ಮುನ್ನ ಹೆಮ್ಮೆಯ ಕವಿ ನಿಸಾರ್ ಅಹ್ಮದ್ ಅವರ 'ನಿತ್ಯೋತ್ಸವ ತಾಯಿ ನಿತ್ಯೋತ್ಸವ' ಹಾಡನ್ನು ವಸಂತಾ ಶಶಿ ತಂಡ ಇಂಪಾಗಿ ಹಾಡಿತು. ನಂತರ ಈಶಾನ್ಯ ಕನ್ನಡಕೂಟಗಳ ಪತಾಕೆಗಳನ್ನ ಹಾಗು ಭಾರತ ರಾಷ್ಟ್ರ ಧ್ವಜವನ್ನು ಅಮೇರಿಕ ನ್ಯೂಜೆರ್ಸಿಯ ಬೃಂದಾವನದ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.
ನೂತನ ಕಾರ್ಯಕಾರಿ : ಸಮಾರೋಪದ ಹಂತದಲ್ಲಿ, ಬೃಂದಾವನದ ಅಧ್ಯಕ್ಷೆ ವಸಂತಾ ಶಶಿ ಅವರು ಅಮೇರಿಕನ್ನಡ ಕಲಾವಿದರುಗಳನ್ನ ಪ್ರೋತ್ಸಾಹಿಸಿ, ಸನ್ಮಾನಿಸುವುದೇ ಈ ಸಮ್ಮೇಳನದ ಮುಖ್ಯ ಉದ್ದೇಶ ಎಂದು ತಿಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯಹಸ್ತವನ್ನು ನೀಡಿದ ಎಲ್ಲಾ ಕನ್ನಡಕೂಟಗಳಿಗೆ, ಎಲ್ಲಾ ಸ್ಪಾನ್ಸರ್ಸ್ (ಪೋಷಕರಿಗೆ), ಎಲ್ಲಾ ಸ್ವಯಂ ಸೇವಕರಿಗೂ ಹಾಗು ಬೃಂದಾವನದ ಕಾರ್ಯಕಾರಿ ಸಮಿತಿಯವರಿಗೆ ವಂದನೆಗಳನ್ನು ತಿಳಿಸಿದರು. ಹೊಸದಾಗಿ ಆಯ್ಕೆಯಾಗಿರುವ 2008-10 ಸಾಲಿನ ಬೃಂದಾವನ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯವರನ್ನ (ಉಷಾ ಪ್ರಸನ್ನ : ಅಧ್ಯಕ್ಷೆ. ನಿರ್ದೇಶಕರುಗಳು : ಬೆನ್ ಕಾಂತರಾಜು, ರಾಮ್ ಬೆಂಗಳೂರ್, ಮಧು ರಂಗಯ್ಯ, ಸಾಧನ ಶಂಕರ್, ಸಿಂಹಾದ್ರಿ ಸಂತೆಬೆನ್ನುರ್, ಸೀಮ ಮೂರ್ತಿ) ವೇದಿಕೆಯಲ್ಲಿ ಪರಿಚಯಿಸಿ ಮತ್ತಷ್ಟು ಎತ್ತರಕ್ಕೆ ಬೃಂದಾವನದ ಕನ್ನಡ ಕೆಲಸದ ಕಂಪನ್ನು ಉಳಿಸಿ ಬೆಳೆಸಲಿ ಎಂದು ವಸಂತಾ ಶಶಿ ಶುಭ ಕೋರಿದರು.
ಈ
ಕಾರ್ಯಕ್ರಮದ
ಮತ್ತಷ್ಟು
ಚಿತ್ರಪಟಕ್ಕೆ
ಇಲ್ಲಿ
ನೋಡಿ:
http://www.kodakgallery.com/I.jsp?c=tjewprx.az5muy5x&x=0&y=-1c0u68&localeid=en_US
ಮತ್ತಷ್ಟು
ಮಾಹಿತಿಗೆ
:
www.brindavana.org,
www.wavez-music.com