ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್

By Staff
|
Google Oneindia Kannada News

ಕನ್ನಡದಲ್ಲಿ ಹಾಸ್ಯ ಲೇಖಕಿಯರು ಬೆರಳೆಣಿಕೆಯಷ್ಟು ಮಾತ್ರ. ಹೊರದೇಶದಲ್ಲಿ ನೆಲೆಸಿ, ಕನ್ನಡವನ್ನು ಮರೆಯದೆ ಹಾಸ್ಯ ನಾಟಕಗಳನ್ನು ಬರೆದಿರುವ ಅಲಮೇಲುವಿನ ನಾಟಕವನ್ನು ಸಿಂಗಪುರದಲ್ಲಿ ನೋಡಿ ನಿಜಕ್ಕೂ ಖುಷಿಯಾಯಿತು.

  • ವಾಣಿ ರಾಮದಾಸ್, ಸಿಂಗಪುರ

ಶನಿವಾರ(ಅ.6)ಸಂಜೆ ಸಿಂಗಪುರ ಕನ್ನಡ ಸಂಘದ "ರಂಗ ಸಂಜೆ (ಕನ್ನಡ ನಾಟಕೋತ್ಸವ)" ಕಾರ್ಯಕ್ರಮ ಡಿ.ಬಿ.ಎಸ್. ಸಭಾಂಗಣದಲ್ಲಿ ನಿಯೋಜಿಸಲಾಗಿತ್ತು. ಕಾರ್ಯಕ್ರಮಗಳತ್ತ ಕಣ್ಣೋಟ ಹರಿದಾಗ "ಹೈಟೆಕ್ ಹಯವದನಾಚಾರ್" ಕಂಡೆ. ಫೋನಾಯಿಸಿ ಟಿಕೆಟಿಸಿ ಹೈ ಎಕ್ಸ್‌ಪೆಕ್ಟೇಷನ್ನಿನಿಂದಲೇ ನಡೆದೆ. ಸಭಾಂಗಣದ ಹೊರಗೆ ಮೊದಲು ಕಂಡಿತು ಚಿಕ್ಕ ಚಿಕ್ಕ ಎರಡು ಮೂರು ಮಾರಾಟ ಮಳಿಗೆಗಳು. ಈ ದೃಶ್ಯ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಂಡದ್ದು. ಹೊರನಾಡಿನಲ್ಲಿ ಕನ್ನಡ ಕಾರ್ಯಕ್ರಮಕ್ಕೆ ಪ್ರಾಯೋಜಕರ ಹಿಡಿದು ನಡೆಸುವ ಈ-ಬೆಳವಣಿಗೆ ಇಷ್ಟವಾಯಿತು.

ಸಭಾಂಗಣದಲಿ ಹಳೆಯ ಪರಿಚಯಸ್ಥರು ಬೆರಳೆಣಿಕೆಯಷ್ಟು ಕಂಡು ಬಂದರೆ ಹೊಸ ಮುಖಗಳು ನೂರಾರು ಕಂಡವು. ಹಿರಿಯರಿಗಿಂತ ಕಿರಿಯರ ಬಳಗವೇ ಹೆಚ್ಚಿತ್ತು. ಗಣಪನಿಗೆ ನಮಿಸದೆ ಕಾರ್ಯಕ್ರಮವೇ? ವರಪತಿ, ಸುರಪತಿ ಪಾಲಯ ಮಾಮ್ ಎಂದುಲಿಯುತ್ತಾ, ಕೈ ಮುಗಿಯುತ್ತಾ ವೇದಿಕೆಗೆ ಬಂದವು ಪುಟಾಣಿಗಳು. ಗಣಪನಿಗೆ ಕಿರಿಯರ ನಮೊ ಮುಗಿದಂತೆ ಸ್ತ್ರೀ ಶಕ್ತಿಯರು ನಮಸ್ತೆ ಗಣನಾಥಾಯ ಎಂದು ನಮಸ್ಕರಿಸಿದರು. ರಿದಮ್ ಆಫ್ ಇಂಡಿಯಾದ ಆಲ್ಬಿನ್ ಪಾಲ್ ಮ್ಯಾಥ್ಯೂ ಅವರಿಂದ ಕೀ-ಬೊರ್ಡ್ ಸಂಗೀತ ಇಂಪಾಗಿತ್ತು. ಸಂಗೀತ ನಿರ್ವಹಣೆ ಡಾ.ಸಂಧ್ಯಾ ವಿಜಯಕುಮಾರ್, ಹಿನ್ನಲೆ ಸಂಗೀತ ಸಹಾಯ ಮ್ಯಾಥ್ಯೂ ಅವರಿಂದ.

ನಂತರ ಸಿಂಗಪುರದ ಕನ್ನಡ ಸಂಘದ ಅಧ್ಯಕ್ಷರಾದ ಬಿ.ಕೆ.ರಾಮದಾಸ್ ಅವರು, ಈ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಅಂದಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾ.ದೇಬಶೀಶ್ ಚಟರ್ಜಿ, ಡೀನ್, ಎಸ್. ಪಿ. ಜೈನ್ ಸೆಂಟರ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಕನ್ನಡ ದೂರದರ್ಶನದಲಿ ಹಲವಾರು ನಾಟಕಗಳ ನಿರ್ಮಾಪಕ, ನಿರ್ದೇಶಕ, ನಟ, ಹಾಗೂ ಪ್ರಿಯ ವಿಕ್ಷಕರೇ ಕಾರ್ಯಕರ್ತ ಶ್ರೀನಿವಾಸ್ ಪ್ರಭು ಅವರಿಗೆ ಸ್ವಾಗತವಿತ್ತರು.

ಮಕ್ಕಳಿಂದ ಕಿರು ನಾಟಕ "ಧೃವನ ಕಥೆ" -ಹೇಳಲು ಸೂತ್ರಧಾರನ ಆಗಮನ. ಕಹಳೆಯ ಸದ್ದು, ಪರಾಕುಗಳ ಘೋಷಣೆ ಸಭಾಂಗಣದಲ್ಲಿ ಸಭಿಕರ ಸದ್ದಡಗಿಸಿತು. ಉದ್ಯಾನಗಳಲಿ ಅರಳಿದ ವಿವಿಧ ಪುಷ್ಪಗಳು ಕಣ್ಣಿಗೆ ತಂಪನೀಯುವಂತೆ, ವಿಧ ವಿಧದ ಪೋಷಾಕು ಧರಿಸಿದ ಹೆಮ್ಮೆ, ತೊದಲು ಮಾತು, ಕನ್ನಡನುಡಿ, ವೇದಿಕೆಯಲಿ ಸಿಂಗರಿಸಿ ಬಂದು ನಿಂತ ಹೆಮ್ಮೆ, ಸ್ವಾಭಾವಿಕ ಅಭಿನಯ, ತಂದೆ-ತಾಯಿಗಳ ಕಂಡೊಡನೆ ಹಾಯ್ ಎಂದು ಕೈ ಬೀಸುವ ಪರಿ, ತಮಗಿತ್ತ ಪಾತ್ರಗಳನ್ನು ಮುಗ್ಧತೆ, ನಿಷ್ಠತೆಯಿಂದ ಮಾಡಿ, ಚಪ್ಪಾಳೆಯ ಸುರಿಮಳೆ ಸುರಿದಾಗ ವಿಜಯ ಸಾಧಿಸಿದ ಹೆಮ್ಮೆ ಮನಕೆ ಮುದ ನೀಡಿತು. ನಮ್ಮಲ್ಲಿನ ನೀತಿ ಕಥೆಗಳನ್ನು ಇಂದಿನ ಮಕ್ಕಳಿಗೆ ಅರಿವು ಮೂಡಿಸುವ ಇಂತಹ ಪ್ರಯತ್ನ ಶ್ಲಾಘನೀಯ. ಮಕ್ಕಳ ನಾಟಕದ ನಿರ್ದೇಶಕಿ ದಿವ್ಯಾ ರಾಜೇಶ್.

ಧೃವನು ತಾರೆಯಾದಂತೆ ಸ್ಥಳೀಯ ಕಲಾವಿದರಿಂದ ಒಂದು ಪ್ರಹಸನ. ಹೆಸರಾಂತ ಗಾಯಕ ಕಠೊರಾನಂದ ಸ್ವಾಮಿಗಳ ಸನ್ಮಾನ ಸಮಾರಂಭ. ಜನಗಳ ಕೋರಿಕೆಗೆ ಸ್ವಾಮಿಗಳ ಗಾಯನ ಪ್ರಾರಂಭಗೊಂಡಿತು. ಜೊತೆ ಗೂಡಿತು ಸರ್ವಧರ್ಮ ಸಮನ್ವಯದ ಶಿಷ್ಯ ಸಮೂಹ. "ಭಾಗ್ಯಾದ ಲಕ್ಷ್ಮಿ ಬಾರಮ್ಮಾ" ಕೀರ್ತನೆ ವಿವಿಧ ಮಾತೃ ಭಾಷಾ ಪ್ರವೀಣರ ಬಾಯ್ಗಳಲಿ ಹೇಗೆ ನುಸುಳುತ್ತದೆ ಎಂಬ ಪ್ರಹಸನ. ಆ ಶಿಷ್ಯರ ಬಾಯಲಿ ನುಸುಳಿದ ಗಾಯನವ ಕೇಳಿ ಮೂರ್ಛೆ ಹೋದರು ಕರ್ಣ-ಕಠೋರಾನಂದರು. ಗುರುವಾಗಿ ರಮೇಶ್, ಶಿಷ್ಯರ ಪೈಕಿ ಮುಹಮದೀಯನಾಗಿ ವಿಜಯ್‌ಕುಮಾರ್ ಅವರ ಅಭಿನಯ ಚೆನ್ನಾಗಿತ್ತು.

ಹೈಟೆಕ್ ನಾಟಕ ಪ್ರಾರಂಭಗೊಂಡಿತು. ಇದೀಗ ಜೆಟ್ ಯುಗ. ಈ ಜೆಟ್ ಯುಗದಲಿ ಕಂಪ್ಯೂಟರ್ ಅರಿಯದವ ಅನಕ್ಷರಸ್ಥ. ವೇಳೆಯಿಲ್ಲ ಮಂತ್ರ, ಶಾರ್ಟ್ ಅಂಡ್ ಸ್ವೀಟ್ ತಂತ್ರದ ಕಾಲವಿದು. ಚೊಕ್ಕವಿಲ್ಲದಿದ್ದರೂ ಚಿಕ್ಕಾದಾಗಿಸುವ ವ್ಯವಸ್ಥೆ. ಎಲ್ಲವೂ ಹೈ-ಟೆಕ್ ಆದ ಕಾಲದಲ್ಲಿ ಪೌರೋಹಿತ್ಯ ಹೈಟೆಕ್ ಆಗದಿದ್ದರೆ ಹೇಗೆ. ಮೊಬೈಲ್, ಕಂಪ್ಯೂಟರ್, ಅಪ್ ಟು ಡೇಟ್ ಡ್ರೆಸ್ ಇದು ಕಾಲಕ್ಕೆ ತಕ್ಕಂತೆ ಮಾರ್ಪಾಡು. ಇದರ ಸಂಪೂರ್ಣ ಪ್ರಯೋಜನ ಪಡೆದವರು ಪುರೋಹಿತ ಹಯವದನಾಚಾರ್. ಮಗು ಹುಟ್ಟುವ ಮೊದಲೇ ಪೌರೋಹಿತರಿಂದ ನಕ್ಷತ್ರ ನಿರ್ಧರಿಸಿ ಸಿಸೇರಿಯನ್ ಮಾಡಿಸಿಕೊಳ್ಳುವ ಕಾಲವಿದು. ಹಣ ಸಂಪಾದನೆ ಪುಣ್ಯ ವಿತರಣೆ ಇವರ ಟೆಕ್ನಿಕ್. ಪೌರೋಹಿತ್ಯ ವೃತ್ತಿ ಇತ್ತೀಚಿನ ದಶಕದಲ್ಲಿ ಬೂಮಿಂಗ್ ಬಿಸಿನೆಸ್. ನಾಟಕ ನಿರ್ದೇಶನ ಅರ್ಚನಾ ಪ್ರಕಾಶ್ , ನಾಟಕದ ಮುಖ್ಯ ಪಾತ್ರದಲ್ಲಿ ಗಿರೀಶ್(ಹಯವದನಾಚಾರ್), ಭಾರ್ಗವಿ ಆನಂದ್ (ಮಹಾಲಕ್ಷ್ಮಿ), ವೆಂಕಟ್(ಹಯವದನರ ಅಸಿಸ್ಟೆಂಟ್ ಸುಬ್ಬಣ್ಣ)ಅಭಿನಯಿಸಿದರು.

ಹೈಟೆಕ್ ಹಯವದನಾಚಾರ್ ಪು.ತಿ.ನ ಪುತ್ರಿ ಅಲಮೇಲು ಅಯ್ಯಂಗಾರ್ ಅವರ ಹಾಸ್ಯ ಕೃತಿ. ಈ ನಾಟಕದ ಬಗ್ಗೆ ಹಾಗೂ ಅಲಮೇಲು ತಿರುನಾರಾಯಣ್ ಅವರ ಹಾಸ್ಯ, ಅಭಿನಯ, ಕನ್ನಡ ಚಟುವಟಿಕೆಗಳ ಬಗ್ಗೆ ಅದುವೆ ಕನ್ನಡದಲ್ಲಿ ವರದಿಗಳನ್ನು ಓದಿದ್ದೆ. "ಅಲಮೇಲು ಅಯ್ಯಂಗಾರ್ ನಾಟಕ ಅಂದ್ರೆ ತಪ್ಪಿಸಿಕೊಳ್ಳೋದೇ ಇಲ್ಲ. ಆಕೆ ಬಹಳ ಪ್ರತಿಭಾವಂತೆ ಎಂಬ ಮೆಚ್ಚುಗೆಯ ಮಾತುಗಳನ್ನು ನನ್ನ ಅಮೇರಿಕೆಯ ಕೆಲವು ಸ್ನೇಹಿತರಿಂದ ಕೇಳಿದ್ದೆ. ಈ ಕಾರಣದಿಂದಾಗಿ ನಾಟಕ ಎಕ್ಸ್‌ಪೆಕ್ಟೇಷನ್ ಹೆಚ್ಚಿತ್ತು. ಕನ್ನಡದಲ್ಲಿ ಹಾಸ್ಯ ಲೇಖಕಿಯರು ಬೆರಳೆಣಿಕೆಯಷ್ಟು ಮಾತ್ರ. ಹೊರದೇಶದಲ್ಲಿ ನೆಲೆಸಿ, ಕನ್ನಡವನ್ನು ಮರೆಯದೆ ಹಾಸ್ಯ ನಾಟಕಗಳನ್ನು ಬರೆದಿರುವ ಅಲಮೇಲುವಿನ ಬಗ್ಗೆ ಅಭಿಮಾನ ಮೂಡಿತು. ನಗಿಸುವ ಕಲೆ ಕ್ಲಿಷ್ಠ ಕಲೆ, ಎಲ್ಲರಿಗೂ ಒಲಿಯ ತಕ್ಕದ್ದಲ್ಲ.

ಕಡೆಯದಾಗಿ ಈ ಕಾರ್ಯಕ್ರಮದ ವಿಶೇಷ ಅತಿಥಿಗಳಾದ ಶ್ರೀನಿವಾಸ ಪ್ರಭು ಅವರು ಸಭಿಕರನ್ನು ಉದ್ದೇಶಿಸಿ "ಎಲ್ಲಾದರು ಇರು ಎಂತಾದರು ಇರು ಎಂದೆದಿಗು ನೀ ಕನ್ನಡವಾಗಿರು ಎಂಬುದನ್ನು ನೀವುಗಳು ಸಾಬಿತು ಪಡಿಸಿದ್ದೀರಿ. ಎಲ್ಲರೂ ಕೂಡಿ ಕನ್ನಡ ಉಳಿಸುವ, ಬೆಳೆಸುವ ಕಾಯಕ ಕೈಗೊಳ್ಳೋಣ ಎಂದು ಆಶಿಸಿದರು. ಮಕ್ಕಳ ನಾಟಕ ಚೆನ್ನಾಗಿತ್ತು. ಹೂದೋಟದಲಿ ಕಂಡ ನಲಿವ ವಿವಿಧ ಪುಷ್ಪಗಳಂತೆ ಕಂಡವು. ಅವರುಗಳು ಹೇಗೇ ಮಾಡಿದ್ರೂ ಹಿತವಾಗಿರುತ್ತದೆ. ಹಿರಿಯರ ನಾಟಕದಲಿ ಅಭಿನಯಕ್ಕೆ ಒತ್ತು, ನವಿರು, ಸೂಕ್ಷ್ಮತೆ ಬೇಕು" ಎಂದು ಚೊಕ್ಕದಾಗಿ ಉಪದೇಶಿಸಿದರು. ಕಾರ್ಯಕ್ರಮದ ನಿರೂಪಣೆ ಗಾಯತ್ರಿ ಜೋಯಿಸ್, ವಂದನಾರ್ಪಣೆ ಕಾರ್ಯದರ್ಶಿ ಸುರೇಶ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X