ಕಾನ್ಪುರ ಐಐಟಿಯಲ್ಲಿ ಕನ್ನಡ ಕಲರವ
- ಪಿ. ಬಿಂದುಮಾಧವಿ, ಐ ಐ ಟಿ, ಕಾನ್ಪುರ್
[email protected]
ಐ.ಐ.ಟಿ. ಕಾನ್ಪುರದಲ್ಲಿ ‘ಕನ್ನಡಸಂಘ’ ಪ್ರಾರಂಭವಾಗಿ ದಶಕಗಳೇ ಕಳಿದಿವೆ. ಕರ್ನಾಟಕದಿಂದ ಬಂದಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ನೌಕರರು, ಅಷ್ಟೇ ಅಲ್ಲದೆ, ಇಲ್ಲಿ ಬಂದು ನೆಲಸಿರುವ ಕನ್ನಡ ಬಲ್ಲ ಇತರ ಭಾಷಿಗರು ಮತ್ತು ಕನ್ನಡಪ್ರಿಯರು - ಎಲ್ಲರೂ ಈ ಕನ್ನಡ ಸಂಘದ ಸದಸ್ಯರು. ಇದರ ಜೊತೆಗೆ, ಕನ್ನಡಸಂಘದ ರುಚಿಕರ ಊಟಕ್ಕೆ ಮಾರುಹೋಗಿ ನಮ್ಮ ಕನ್ನಡಸಂಘದ ಸದಸ್ಯರಾಗಿರುವ ಕನ್ನಡೇತರರೂ ಇಲ್ಲಿದ್ದಾರೆ!
ಪ್ರಸ್ತುತ ವರ್ಷದಲ್ಲಿ, ಕನ್ನಡದ ಬಗ್ಗೆ ತುಂಬಾ ಕಾಳಜಿ ಇರುವ ಪ್ರಮೀಳಾ ರಾಬರ್ಟ್ಸ್ ನಮ್ಮ ಕನ್ನಡಸಂಘದ ಅಧ್ಯಕ್ಷೆ. ಇವರು ಮೂಲತ: ಹುಬ್ಬಳ್ಳಿಯವರು ಮತ್ತು, ಇಲ್ಲಿ ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್) ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊಫೆಸರ್ ನಿರ್ಮಲ್ ರಾಬರ್ಟ್ಸ್ ಅವರ ಧರ್ಮಪತ್ನಿ. ಚಟುವಟಿಕೆಯ ಪಾದರಸದಂತಿರುವ ಎಂ.ಟೆಕ್ ವಿದ್ಯಾರ್ಥಿ, ನಂದಕಿಶೋರ್ ಕನ್ನಡ ಸಂಘದ ‘ಕಾರ್ಯದರ್ಶಿ’. ಐ.ಎಂ.ಇ. ವಿಭಾಗದಲ್ಲಿ ಎರಡನೆಯವರ್ಷದ ಎಂ.ಬಿ.ಎ. ಮಾಡುತ್ತಿರುವ ನಾನು (ಅಂದರೆ, ಪಿ. ಬಿಂದುಮಾಧವಿ) ಈ ಬಾರಿಯ ‘ಮನರಂಜನಾ ಕಾರ್ಯದರ್ಶಿ’. ಪಿಎಚ್.ಡಿ. ವಿದ್ಯಾರ್ಥಿಯಾದ ಮನೋಜ್ ಎಸ್. ಗುನ್ತಲ ಅವರು ನಮ್ಮ ಸಂಘದ ಸಮರ್ಥ ಖಜಾಂಚಿ.
ನಾವು ಇತ್ತೀಚೆಗೆ ನಡೆಸಿದ ಯುಗಾದಿ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ವರದಿ ಮಾಡುತ್ತ, ನಮ್ಮ ಕನ್ನಡಸಂಘವನ್ನು ಪರಿಚಯ ಮಾಡಿಕೊಡ ಬಯಸುತ್ತೇನೆ: ಎಲ್ಲ ಕನ್ನಡಿಗರ ಮನೆ ಹಬ್ಬವಾದ ಚಾಂದ್ರಮಾನ ಯುಗಾದಿ ಹಬ್ಬವನ್ನು, ‘ಸ್ವಭಾನು’ ಬರುತ್ತಿದ್ದಂತೆಯೇ, ಏಪ್ರಿಲ್ ಎಂಟರಂದು ಇಲ್ಲಿನ ಕನ್ನಡಿಗರೆಲ್ಲ ಸೇರಿ ಸಡಗರದಿಂದ ಆಚರಿಸಿದೆವು.
ಸಂಭ್ರಮದ ಈ ಉತ್ಸವ ಚಿ. ಕೈಲಾಶ್ ನ ಪ್ರಾರ್ಥನೆಯಾಂದಿಗೆ ಪ್ರಾರಂಭವಾಯಿತು. ನಾನು ಕಾರ್ಯಕ್ರಮ ನಿರೂಪಣೆಯ ಹೊಣೆ ಹೊತ್ತಿದ್ದೆ. ಇಲ್ಲಿ ನಮ್ಮ ಇನ್ಸ್ಟಿಟ್ಯೂಟ್ ನಲ್ಲಿ ಬಹಳ ವರುಷಗಳಿಂದಲೂ ಕೆಲಸಮಾಡುತ್ತಿದ್ದು, ವಿದ್ಯಾರ್ಥಿಗಳಿಗೂ ಸಹೋದ್ಯೋಗಿಗಳಿಗೂ ಅಚ್ಚು ಮೆಚ್ಚಿನವರಾಗಿದ್ದ ಕನ್ನಡದವರಾದ ಪ್ರಾಧ್ಯಾಪಕರು ಗಂಗಾಧರಯ್ಯ ಮತ್ತು ಮಾಧವ ಅವರು. ಇವರಿಬ್ಬರೂ ನಿವೃತ್ತರಾಗಿದ್ದರು. ಕಾನ್ಪುರದ ಐ ಐ ಟಿಗೆ ವಿದಾಯ ಹೇಳ ಹೊರಟ ಇವರ ಬೀಳ್ಕೊಡೆಗೆಯ ಸಮಾರಂಭವೂ ಇದಾಗಿ ನಮ್ಮ ಯುಗಾದಿ ಕಾರ್ಯಕ್ರಮ ಪರಿಣಮಿಸಿತು. ‘ಅವರುಗಳ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು’ ಎಂದು ನಾನು ಪ್ರಾಧ್ಯಾಪಕ ರಾಘವೇಂದ್ರ ಅವರನ್ನು ವಿನಂತಿಸಿಕೊಂಡೆ. ಆಗ, ಸಹಜ ಹಾಸ್ಯ ಪ್ರವೃತ್ತಿಯವರಾದ ಅವರು ಏನು ಮಾಡಿದರು ಗೊತ್ತೆ? ಭಾಷಣಕ್ಕೆ ಎದ್ದು ನಿಂತ ಪ್ರಾ. ರಾಘವೇಂದ್ರರಾಯರು ಹೇಳಿದರು: ‘‘ ಎರಡು ಮಾತು ಅಂದರೆ, ‘ಗುಡ್ ಬೈ’ - ಎಂದು ಬಿಡಲಾ? ’’ ಜನರೆಲ್ಲ ನಕ್ಕು, ಹೊಟ್ಟೆ ಹುಣ್ಣಾಯಿತು. ಆಮೇಲೆ ಮುಂದುವರಿಸಿ, ಪ್ರಾ. ರಾಘವೇಂದ್ರ ಅವರು ಸ್ವಾರಸ್ಯಕರವಾಗಿ ಪ್ರಾ. ಗಂಗಾಧರಯ್ಯ ಮತ್ತು ಮಾಧವ ಅವರ ಬಗ್ಗೆ, ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು, ನಗಿಸಿದರು. ಅನಂತರ, ಆಶಾ ಮತ್ತು ಅವರ ಮಕ್ಕಳಿಂದ ನಡೆದ ವೃಂದಗಾನ ಸುಶ್ರಾವ್ಯವಾಗಿತ್ತು. ಇದಾದಮೇಲೆ, ನಮ್ಮ ಕನ್ನಡ ಸಂಘದ ಹಲವಾರು ಕುಟುಂಬಗಳ ಗೋಷ್ಠಿಗಾನ ಜನರ ಮನಸ್ಸನ್ನು ಸೂರೆಗೊಂಡಿತು.
ಉಲ್ಲಾಸಮಯವಾಗಿದ್ದ ಕಾರ್ಯಕ್ರಮದ ಮುಕ್ತಾಯರೂಪದಲ್ಲಿ ಎಲ್ಲರೂ ನಿರೀಕ್ಷಿಸುತ್ತಿದ್ದ ಭೂರಿ ಭೋಜನ lecture hall complex ನಲ್ಲಿ ನಡೆಯಿತು. ಈ ವಿಶೇಷ ಊಟಕ್ಕಾಗಿ ಪ್ರೊ.ರವಿಶಂಕರ್ ಅವರ ಮನೆಯಲ್ಲಿ ಸಂಘದ ಎಲ್ಲಾ ಮಹಿಳೆಯರೂ ಸೇರಿ ಹೋಳಿಗೆ ತಯಾರಿಸಿದ್ದರು. ಹೋಳಿಗೆಯಾಂದಿಗೆ ವಿಶೇಷವಾದ ವಿವಿಧ ಭಕ್ಷ್ಯ ಭೋಜ್ಯಗಳು ಮತ್ತು ಹಬ್ಬದ ಹಲವು ಹತ್ತು ರುಚಿಕರ ಪಕ್ವಾನ್ನ ವ್ಯಂಜನಗಳ ಊಟದೊಂದಿಗೆ ನಮ್ಮ ಸಂಭ್ರಮದ ಯುಗಾದಿ ಕೊನೆಗೊಂಡಿತು.
ಕಾನ್ಪುರಕ್ಕೆ ಬರುವ ಏನಾದರೂ ಯೋಜನೆ/ಯೋಚನೆ ನಿಮಗಿದೆಯ? ಹಾಗೆ ಬರುವುದಾದಲ್ಲಿ ನಮ್ಮ ಕನ್ನಡಸಂಘಕ್ಕೆ ಭೇಟಿಕೊಡಲು, ನಾವು ನಡೆಸುವ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳಲು ಮರೆಯಬೇಡಿ, ಮರೆತು ನಿರಾಶರಾಗ ಬೇಡಿ!












Click it and Unblock the Notifications