ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ನಾರೈಗಳನ್ನೇಕೆ ಬೀಳುಗಳೆವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

|
Google Oneindia Kannada News
Dr. B.C. Ramachandra Sharmaವೈ. ಆರ್‌. ಮೋಹನ್‌ ಅವರ ಪುಸ್ತಕ ಅಮೇರಿಕಾಯಣ ಬಿಡುಗಡೆಯ ಸಂದರ್ಭದಲ್ಲಿ ಡಾ. ಬಿ. ಸಿ. ರಾಮಚಂದ್ರ ಶರ್ಮ ಮತ್ತು ಡಾ. ಯು.ಆರ್‌.ಅನಂತ ಮೂರ್ತಿ ಅವರು ಅಮೇರಿಕನ್ನಡಿಗರ ಬಗ್ಗೆ ವ್ಯಕ್ತಪಡಿಸಿದ ಭಾವನೆಗಳನ್ನು ಓದಿ ಮತ್ತು ಆ ಭಾವನೆಗಳಿಗೆ (ಖೇದಗೊಂಡ ?) ಇಲ್ಲಿಯ ಕನ್ನಡಿಗರ ಪ್ರತಿಕ್ರಿಯೆಗಳನ್ನು ನೋಡಿ ನನಗೂ ಈ ವಿಷಯದ ಬಗೆಗಿನ ನನ್ನ ಅತಿ ಸ್ವಂತದ ಭಾವನೆಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಪ್ರೇರಿತಳಾಗಿ ಬರೆಯುತ್ತಿದ್ದೇನೆ.

ಬಿ. ಸಿ. ಆರ್‌. ಅವರು ಗಮನಿಸಿದಂತೆ ಇಲ್ಲಿಯ ಅನೇಕ ಜನರಿಗೆ ಅಡಿಗರು ಮತ್ತು ಅಡಿಗರಂತಹ ಇತರ ಶ್ರೇಷ್ಠರು ಯಾರೆಂಬುದೇ ಗೊತ್ತಿಲ್ಲ ಎನ್ನುವುದನ್ನು ನಾನೂ ಪೂರ್ಣವಾಗಿ ಅಲ್ಲಗಳೆಯುವುದಿಲ್ಲ ಮತ್ತು ಈ ಸಂಗತಿಯನ್ನು ಯಾರು ಪೂರ್ಣ ಅಲ್ಲಗಳೆದರೂ ಅದು ನಮಗೆ ನಾವೇ ಸುಳ್ಳು ಹೇಳಿಕೊಂಡಂತೆ. ಆದರೆ ನಾನು ಕೇಳುವುದು, ಇಂತಹ ಕನ್ನಡಿಗರು ಭಾರತದಲ್ಲಿ ಹೋಗಲಿ, ಕರ್ನಾಟಕದಲ್ಲಿಯೇ ಇಲ್ಲವೇ ?

60ರ ದಶಕದಲ್ಲಿ ಈ ದೇಶಕ್ಕೆ ಕಾಲಿಟ್ಟವರೆಲ್ಲರು ಸುಮಾರಾಗಿ ಜಾಗೃತ ಕನ್ನಡಿಗರಿದ್ದರು ಎಂದು ನನ್ನ ಭಾವನೆ. ಅವರಿಗೆ 70ರ ಅಥವಾ 80ರ ಪೀಳಿಗೆಗಿದ್ದ ಇಂಗ್ಲಿಷ್‌ ಸಂಸ್ಕೃತಿಯದಾಗಲೀ ಅಥವಾ ಭಾಷೆಯದಾಗಲೀ ದಟ್ಟ ಪ್ರಭಾವ ಇರಲಿಲ್ಲ. ಆದರೆ ಒಂದು ಕೊರತೆಯಾಗಿದ್ದುದೆಂದರೆ, ಆಗ ಈಗಿರುವಷ್ಟು ಅಂತರ ಜಾಲದ ಬರಹ ತಂತ್ರಾಂಶದ ಸೌಲಭ್ಯಗಳಾವುವೂ ಇರಲಿಲ್ಲ ಎಂಬುದನ್ನು ನಾವು ಗಮನಿಸಬೇಕು.

ಒಂದು ಸಾರಿ ಭಾರತ ಬಿಟ್ಟರೆಂದರೆ ತಮ್ಮ ತಾಯಿ ಬೇರಿನಿಂದ ಸಾಂಸ್ಕೃತಿಕ ಕೊಂಡಿಯಿಂದ ಕಳಚಿ ಬಿದ್ದಂತೆಯೇ. ಅಂತಹ ಬಿಕ್ಕಟ್ಟಿನಲ್ಲಿ ಇಲ್ಲಿಯ ಜೀವನಕ್ಕೆ ಹೊಂದಾಣಿಕೆ ಮಾಡಿಕೊಂಡು, ತಮ್ಮ ವೃತ್ತಿಯನ್ನು ನೋಡಿಕೊಂಡು, ಬೇರಿನಿಂದ ದೂರವಾಗಿ ಮಾನಸಿಕ ತುಮುಲಗಳನ್ನು ಅನುಭವಿಸಿ ಅಭಿವ್ಯಕ್ತಗೊಂಡದ್ದೇ ಅವರೆಲ್ಲರ ಬರವಣಿಗೆ. ನನ್ನ ದೃಷ್ಟಿಯಲ್ಲಿ ಮುಂದೊಂದು ದಿನ ಇವರೆಲ್ಲರ ಬರವಣಿಗೆ ಸಮಗ್ರ ಕನ್ನಡ ಸಾಹಿತ್ಯಕ್ಕೆ ಅಮೇರಿಕನ್ನಡಿಗರ ಕೊಡುಗೆ ಎಂದು ಸ್ವತಂತ್ರವಾಗಿ ನಿಲ್ಲಬಹುದಾದ ಒಂದು ಮುಖ್ಯ ಶಾಖೆಯಾಗಬಹುದು.

ವಿದೇಶಿಯರಿಗೆ ಕನ್ನಡವನ್ನು ಕಲಿಸುವ ಮೊದಲು ಕರ್ನಾಟಕದಲ್ಲಿರುವ ಕನ್ನಡೇತರರು ನಮ್ಮ ಭಾಷೆ ಒಪ್ಪಿಕೊಳ್ಳುವಂತೆ ಮಾಡುವುದು, ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ನಮ್ಮ ಕನ್ನಡ ಯುವ ಪೀಳಿಗೆಯವರು ತಮ್ಮ ಮಾತೃ ಭಾಷೆಯ ಬಗ್ಗೆ ಕೀಳರಿಮೆ ಇಲ್ಲದೇ ಕನ್ನಡದಲ್ಲಿ ವ್ಯವಹರಿಸುವಂತಾಗಬೇಕಾದ್ದು ಮುಖ್ಯ. ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ಆಂಗ್ಲ ಭಾಷೆಯಲ್ಲಿ ವ್ಯವಹರಿಸಿದಾಗ ಸಿಕ್ಕುವ ಸೇವೆಯ ಮಟ್ಟ ಮತ್ತು ಮರ್ಯಾದೆ ಕನ್ನಡದಲ್ಲಿ ವ್ಯವಹರಿಸಿದಾಗ ಸಿಕ್ಕುವುದಿಲ್ಲ. ಇಂತಹ ವಾತಾವರಣ ನಿರ್ಮಿಸಿರುವುದು ನಮ್ಮ ಕನ್ನಡ ಸಮಾಜ, ನಮ್ಮ ಶಾಲೆ ಕಾಲೇಜುಗಳಲ್ಲವೇ ? ಈ ದಿಕ್ಕಿನಲ್ಲಿ ಶಿಕ್ಷಣ ತಜ್ಞರು, ವಿಚಾರವಂತರು ಸಮಾಜ ಸುಧಾರಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾದ್ದು ಮುಖ್ಯ. ಆಗ ಸ್ವಾಭಾವಿಕವಾಗಿಯೇ ಕನ್ನಡೇತರರು ಬಹುಶಃ ವಿದೇಶಿಯರೂ ಕನ್ನಡವನ್ನು ಒಪ್ಪಿಕೊಳ್ಳಬಹುದು.

ಭೂಮಿಕಾ, ಸಾಹಿತ್ಯಗೋಷ್ಠಿಗಳಂತಹ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ ಸಂಗತಿ. ಸಾಹಿತ್ಯಕ ಮನಸ್ಸನ್ನು ತೃಪ್ತಿಗೊಳಿಸುವಲ್ಲಿ ಖಂಡಿತಾ ಸಫಲವಾಗುತ್ತವೆ ಎಂಬುದು ನನ್ನ ನಂಬಿಕೆ. ದಟ್ಸ್‌ಕನ್ನಡ.ಕಾಮ್‌ ಅಂತರ್ವಾಹಿನಿ ಪತ್ರಿಕೆಯು ಕನ್ನಡ ಜಗತ್ತಿನಲ್ಲಿ ವಿದ್ಯಮಾನಗಳನ್ನು ಅಚ್ಚುಕಟ್ಟಾಗಿ ತಿಳಿಸುವುದರ ಮೂಲಕ ಸಮಾನ ಆಸಕ್ತರನ್ನು ಹತ್ತಿರಗೊಳಿಸುವಲ್ಲಿ, ಕನ್ನಡತನವನ್ನು ಉಳಿಸುವಲ್ಲಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ನಿಜಕ್ಕೂ ಪ್ರಶಂಸನೀಯವಾದದ್ದು.


ಪೂರಕ ಓದಿಗೆ-
ಇಗೋ ಕನ್ನಡ : ಬೆಂಗಳೂರಿನಲ್ಲಿ ಅಮೆರಿಕನ್ನಡಿಗನ ಪ್ರಾತ್ಯಕ್ಷಿಕೆ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X