ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅರಳುಮಲ್ಲಿಗೆ’ಗೆ ದಶಮಾನೋತ್ಸವದ ಕಂಪು

By Staff
|
Google Oneindia Kannada News

ಕಡಲಾಚೆ ಬಂದರೂ, ಪ್ರತಿದಿನ ಪರದೇಶಿ ಸಂಸ್ಕೃತಿಯಲ್ಲಿ ಬೆಳೆಯುವ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಅದರಲ್ಲೂ ಕರ್ನಾಟಕ ಸಂಸ್ಕೃತಿಯನ್ನು ಬೆಳೆಸುವ ಬಗೆ ಹೇಗೆ? ಇದೊಂದು ದೊಡ್ಡ ಪ್ರಶ್ನೆ.

ಪ್ರತಿಯಾಬ್ಬ ಅಮೇರಿಕನ್ನಡಿಗನೂ, ಅಷ್ಟೇ ಏಕೆ, ಎಲ್ಲ ಅನಿವಾಸಿ ಭಾರತೀಯರೂ ತಮ್ಮ ಮಕ್ಕಳ ಬೆಳವಣಿಗೆಯ ಕುರಿತು ಅನುಭವಿಸುವ ದ್ವಂದ್ವವಿದು. ಒಂದೆಡೆ ಜೀವನದ ಅವಿಭಾಜ್ಯ ಅಂಗವಾದ ಅಮೆರಿಕನ್‌ ಸಂಸ್ಕೃತಿ, ಇನ್ನೊಂದೆಡೆ ಬೇರುಗಳಂಥ ಭಾರತೀಯ ಸಂಸ್ಕೃತಿ. ಎರಡನ್ನೂ ಮಕ್ಕಳಿಗೆ ಸಮನ್ವಯದ ರೀತಿಯಲ್ಲಿ ಪರಿಚಯಿಸುವುದು ಹೇಗೆ ? ಈ ಗೊಂದಲದಲ್ಲಿಯೇ ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಹುಟ್ಟುತ್ತದೆ.

Aralumalligege Hatthu Varshaಎಲ್ಲರಿಗೂ ತಮ್ಮ ಮಕ್ಕಳು ನಮ್ಮ ಸಂಸ್ಕೃತಿಯನ್ನು ಕಲಿಯಲಿ, ನಮ್ಮ ಪರಂಪರೆಯನ್ನು ಉಳಿಸಿಕೊಂಡು ಬರಲಿ ಎನ್ನುವ ಬಯಕೆ. ಆದರೆ ಇದನ್ನು ಈಡೇರಿಸಲು ತಂದೆ ತಾಯಂದಿರು ಪಡುವ ಬವಣೆ ಅಷ್ಟಿಷ್ಟಲ್ಲ. ಈ ಎಡೆಯಲ್ಲಿ ಅಳಿಲು ಸೇವೆ ಮಾಡಲು ಮುಂದಾಗಿರುವ ಸಣ್ಣ ಪುಟ್ಟ ಅನೇಕ ಸಂಸ್ಥೆಗಳು ಅಮೇರಿಕಾದ ಮುಖ್ಯಪಟ್ಟಣಗಳಲ್ಲಿ ವೆ. ಅಂತಹ ಸಂಸ್ಥೆಗಳು ಲಾಸ್‌ ಏಂಜಲಿಸ್‌ನ ಸುತ್ತ ಮುತ್ತ ಪ್ರದೇಶಗಳಲ್ಲೂ ಸಾಕಷ್ಟಿವೆ. ಅಂತಹ ಸಂಸ್ಥೆಗಳಲ್ಲೊಂದು ‘ಅರಳುಮಲ್ಲಿಗೆ’.

‘ಅರಳುಮಲ್ಲಿಗೆ’ ಇದೀಗ ತನ್ನ ಹತ್ತು ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಹೊರಟಿದೆ. ಹಲವಾರು ಕನ್ನಡ ಸಂಸಾರಗಳು ತಮ್ಮ ಮಕ್ಕಳನ್ನು ಈ ಸಂಸ್ಥೆಯಲ್ಲಿ ತಿಂಗಳಿಗೊಮ್ಮೆ ಒಂದೆಡೆ ಸೇರಿಸಿ, ಭಾರತೀಯ ಸಂಸ್ಕೃತಿ, ಕರ್ನಾಟಕ ಸಂಸ್ಕೃತಿಯ ಬಗ್ಗೆ ಸಂಸ್ಥೆಯ ಸದಸ್ಯರೇ ವಿಷಯ ಸಂಗ್ರಹಿಸಿ ಮಕ್ಕಳಿಗೆ ಹೇಳಿ ಕೊಡುತ್ತಾರೆ. ರಾಮಾಯಣ, ಮಹಾಭಾರತ, ಭಗವದ್ಗೀತದ ಬಗ್ಗೆ ಅಷ್ಟೇ ಅಲ್ಲ, ಭಾರತದ ನಾಯಕರುಗಳ ಬಗ್ಗೆ, ಹೆಸರಾಂತ ಕವಿಗಳು, ಪ್ರಶಸ್ತಿ ವಿಜೇತ ವಿಜ್ಞಾನಿಗಳು ಅದರಲ್ಲೂ ಕರ್ನಾಟಕದವರು.

ಆಮೇರಿಕನ್ನಡದ ಮಕ್ಕಳು ಪ್ರತಿವರ್ಷ ಒಂದು ವಿಷಯದಂತೆ ಕಲಿಯುತ್ತಾರೆ. ಉದಾಹರಣೆಗೆ ಕಳೆದ ಮೂರು ವರ್ಷದಲ್ಲಿ ಕಲಿತಿದ್ದು ಭರತನಾಟ್ಯದ ಚರಿತ್ರೆ, ಕರ್ನಾಟಕದ ವಿಜ್ಞಾನಿಗಳು, ಕರ್ನಾಟಕದ ಹೆಸರಾಂತ ಬೇಲೂರು, ಹಳೇಬೀಡು ತಾಣಗಳು, ಕರ್ನಾಟಕದ ಕವಿಗಳು. ರಾಮಾಯಣ, ಮಹಾಭಾರತ, ದಶಾವತಾರ,.. ಹೀಗೆ ಹಲವಾರು ಪುರಾಣಕಥೆಗಳು ವರ್ಷದ ಪಠ್ಯಪುಸ್ತಕದಲ್ಲಿ ಸೇರಿರುತ್ತವೆ. ದೇಣಿಗೆ ನೀಡುವುದರಲ್ಲೂ ‘ಅರಳುಮಲ್ಲಿಗೆ’ ಎತ್ತಿದ ಕೈ. ಕರ್ನಾಟಕದ ಬರಪರಿಹಾರ ನಿಧಿಗೆ ನೆರವು, ಸಂತ್ರಸ್ತರಿಗೆ ಹಳೇಬಟ್ಟೆಗಳನ್ನು ಸಂಗ್ರಹಿಸಿ ಕೊಡುವುದು ಈ ಸಂಸ್ಥೆಯ ಕಾರ್ಯಗಳಲ್ಲಿ ಒಂದಾಗಿದೆ. ಸ್ಥಳೀಯ ಕನ್ನಡ ಸಂಘದ ಎಲ್ಲ ಕಾರ್ಯಕ್ರಮಗಳಲ್ಲಂತೂ ಇದರದ್ದೇ ಮೇಲುಗೈ.

‘ಅರಳುಮಲ್ಲಿಗೆ’ ಸಂಸ್ಥೆಗೆ ಯಾವುದೇ ಅಧ್ಯಕ್ಷನಾಗಲಿ, ಕಾರ್ಯದರ್ಶಿಯಾಗಲಿ ಇಲ್ಲ. ಏಕೆಂದರೆ ಇಲ್ಲಿ ಹಣದ ಅವಶ್ಯಕತೆಯೇ ಇಲ್ಲ. ಎಲ್ಲ ನಡೆಯುವುದು ಸ್ವಸಹಾಯದಿಂದ. ವರ್ಷಕ್ಕೆ ಒಬ್ಬರಂತೆ ಸರದಿ ಪ್ರಕಾರ ಕಾರ್ಯನಿರ್ವಾಹಕರಾಗುತ್ತಾರೆ. ಇವರ ಕೆಲಸ ತಿಂಗಳಿಗೊಮ್ಮೆ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿವಸದಂತೆ ತರಗತಿಗಳನ್ನು ನಡೆಸುವುದಕ್ಕೆ ಏರ್ಪಾಡು ಮಾಡುವುದು.

ಸಂಸ್ಥೆಯ ಸದಸ್ಯರೆಲ್ಲಾ ಒಂದೇ ಕುಟುಂಬದ ಸದಸ್ಯರಂತೆ, ಕಷ್ಟದಲ್ಲೂ ಸುಖದಲ್ಲೂ ಭಾಗಿಯಾಗುತ್ತಾರೆ. ಕರ್ನಾಟಕದ ಹಬ್ಬಗಳನ್ನೆಲ್ಲಾ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಹಬ್ಬ ಒಟ್ಟಿಗೇ ಅಚರಿಸುವುದು ಈ ಸಂಸ್ಥೆಯ ವಿಶೇಷ. ಬಹುಶಃ ಇಂತಹ ಸಂಸ್ಥೆಗಳಲ್ಲಿ (ಕನ್ನಡ ಸಂಘಗಳನ್ನು ಹೊರತುಪಡಿಸಿ) ಇದೊಂದೇ ಸಂಸ್ಥೆ ಮಕ್ಕಳಿಗೆ ಕನ್ನಡವನ್ನು ಕಲಿಸುವುದು.

‘ಅರಳುಮಲ್ಲಿಗೆ’ ತನ್ನ ದಶಮಾನೋತ್ಸವ ಸಮಾರಂಭವನ್ನು ಅಕ್ಟೋಬರ್‌ ತಿಂಗಳಲ್ಲಿ ಭರ್ಜರಿಯಾಗಿ ಹೆಮ್ಮೆಯಿಂದ ಆಚರಿಸಲಿಗೆ. ಸಂಸ್ಥೆಯ ಕುಟುಂಬಗಳು ತಮ್ಮ ಸ್ನೇಹಿತರನ್ನು ಕರೆದು ಹತ್ತು ವರ್ಷದಲ್ಲಿನ ತಮ್ಮ ಮಕ್ಕಳ ಸಾಧನೆಯನ್ನು ತೋರಿಸಲು ಇದೊಂದು ವೇದಿಕೆ. ಈ ಸಂದರ್ಭದಲ್ಲಿ ಮಕ್ಕಳು ತಾವು ವರ್ಷವೆಲ್ಲಾ ಓದಿ ಕಲಿತ ದಶಾವತಾರ ನಾಟಕವನ್ನು ಕನ್ನಡದಲ್ಲಿ ಆಡಿತೋರಿಸಲಿದ್ದಾರೆ. ಅದೂ ಅಲ್ಲದೆ ಹತ್ತು ವರ್ಷದಲ್ಲಿ ನಡೆದ ಕಾರ್ಯಕ್ರಮಗಳ ತುಣುಕುಗಳು, ಯೋಗ ಮತ್ತು ಇತರ ತರಗತಿಗಳ ಪ್ರತಿರೂಪ ಹೀಗೆ ಹಲವಾರು ಕಾರ್ಯಕ್ರಮಗಳನ್ನು ‘ಅರಳುಮಲ್ಲಿಗೆ’ ಹಮ್ಮಿಕೊಂಡಿದೆ.

‘ಅರಳುಮಲ್ಲಿಗೆ’ ಸಂಸ್ಥೆ ಚಿರಕಾಲ ಬಾಳಲಿ. ಅಮೇರಿಕೆಯ ತುಂಬ ಬೆಳೆಯಲಿ. ನಮ್ಮ ಸಂಸ್ಕೃತಿಯ ಉಳಿವಿಗಾಗಿ ನಡೆಯುತ್ತಿರುವ ‘ಅರಳುಮಲ್ಲಿಗೆ’ಯ ಅಳಿಲು ಸೇವೆ ವೃದ್ಧಿಸಲಿ ಎಂದು ಹಾರೈಸುವ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X