‘ಸ್ವರ್ಣಸೇತು’ವಿನ ಅನಾವರಣ
*ಜ್ಯೋತಿ
ಮಹಾದೇವ್,
ಕುಪರ್ಟಿನೋ,ಕ್ಯಾಲಿಫೋರ್ನಿಯಾ
[email protected]
‘ಉತ್ತರ ಅಮೆರಿಕದ ಕನ್ನಡತನದ ತವರು ’ ಎಂದು ಕರೆಸಿಕೊಂಡಿರುವ ಉತ್ತರ ಕ್ಯಾಲಿಫೋರ್ನಿಯಾ ಕೊಲ್ಲಿ ಪ್ರದೇಶದ ಕನ್ನಡಕೂಟವು ಫೆಬ್ರವರಿ ಒಂದರಂದು, ಸನ್ನಿವೇಲ್ ದೇವಳದ ಸಭಾಂಗಣದಲ್ಲಿ, ಸಹಸ್ರ-ಸಭಿಕರೊಂದಿಗೆ ಸುಗ್ಗಿಯ ಹಿಗ್ಗನ್ನು ಹಂಚಿಕೊಂಡಾಗ, ಮಿಂಚಿದ ಒಂದು ತಾರೆ ‘ ಸ್ವರ್ಣಸೇತು’ - ಕೂಟದ ವಾರ್ಷಿಕ ಸಾಹಿತ್ಯ ಸಂಚಿಕೆ. ಪ್ರಧಾನ ಸಂಪಾದಕರಾದ ದತ್ತಾತ್ರಿಯವರ ನಿರ್ವಹಣೆಯಲ್ಲಿ ಸಮಾರಂಭದ ಮುಖ್ಯ ಅತಿಥಿ ಜಿ. ವಸಂತ ರಾವ್ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಚಿಕ್ಕದಾದರೂ ಚೊಕ್ಕವಾಗಿ ನಡೆದ ಕಾರ್ಯಕ್ರಮದಲ್ಲಿ ದತ್ತಾತ್ರಿಯವರು ಮುಖ್ಯ ಅತಿಥಿ ಜಿ. ವಸಂತ ರಾವ್ಅವರನ್ನು ಪರಿಚಯಿಸುವುದರ ಜೊತೆಗೆ ತಮ್ಮ ನೇತೃತ್ವದ ಸಂಪಾದಕ ಸಮಿತಿಯ ಸದಸ್ಯರನ್ನೂ ಸಭೆಗೆ ಪರಿಚಯಿಸಿದರು. ವಸಂತರರಾಯರು ‘ ಸ್ವರ್ಣಸೇತು’ ಬಿಡುಗಡೆಗೊಳಿಸಿ ಮಾತನಾಡುತ್ತಾ ‘...ರಸಋಷಿ ಕುವೆಂಪು ಅವರು ಹೇಳಿರುವಂತೆ, ‘ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು,...’ ಎಂಬ ಮಾತಿಗೆ ಹತ್ತಿರವಾಗಿರುವಂಥಾದ್ದು ಈ ರೀತಿ ಕನ್ನಡ ಪುಸ್ತಕವನ್ನು ಪ್ರಕಟಿಸುವ ಕೆಲಸ. ಅದರಲ್ಲೂ ನೀವೆಲ್ಲ ವರ್ಷ-ವರ್ಷವೂ ಒಂದು ಸಾಹಿತ್ಯ ಸಂಚಿಕೆ ಪ್ರಕಟಿಸುತ್ತಿರುವುದು ಸ್ತುತ್ಯರ್ಹವಾಗಿದೆ....’ ಎಂದರು. ಸಂಚಿಕೆಯ ಹೂರಣ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ರಾಯರು, ಪ್ರಬಂಧಗಳ ರಸಬುತ್ತಿ , ಕಥಾಲೋಕ, ಕಾವ್ಯಸೇತು, ಮುಖಾಮುಖಿ ಮುಂತಾದ ವಿಭಾಗಗಳನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ನೆನಪುಗಳ ಸುರುಳಿ ಬಿಡಿಸುವ ಚಿತ್ರಲೋಕ, ಕಚಗುಳಿಯಿಡುವ ರೇಖಾಚಿತ್ರ ವಿಭಾಗಗಳ ಕಡೆಗೂ, ಚಿಣ್ಣರಲೋಕವೆಂದು ಹೆಸರಿಸಿಕೊಂಡಿರುವ ಮಕ್ಕಳ ವಿಭಾಗದತ್ತವೂ ಅವರು ಗಮನ ಸೆಳೆದರು.
ಸಂಪಾದಕ ದತ್ತಾತ್ರಿಯವರ ಕೋರಿಕೆಯ ಮೇರೆಗೆ, ಕಳೆದೆರಡು ವರ್ಷಗಳಲ್ಲಿ ಕನ್ನಡ ಕೂಟದ ಅಧ್ಯಕ್ಷರಾಗಿದ್ದ ರಾಮ್ಪ್ರಸಾದ್ ಅವರು ಮುಖ್ಯ ಅತಿಥಿಯವರಿಗೆ ನೆನಪಿನ ಕಿರುಕಾಣಿಕೆಯನ್ನು ನೀಡಿದರು. ಸಂಪಾದಕ ಸಮಿತಿಯ ಸದಸ್ಯರಿಗೂ, ಸ್ವರ್ಣಸೇತುವಿಗೆ ಅರ್ಥಗರ್ಭಿತವಾಗಿ ಮುಖಪುಟವನ್ನು ರಚಿಸಿದ ಜನಾರ್ದನ ಸ್ವಾಮಿಯವರಿಗೂ ರಾಮ್ಪ್ರಸಾದ್ ಸ್ಮರಣಿಕೆಗಳನ್ನು ನೀಡಿದರು.
ಸಂಪಾದಕ ಸಮಿತಿಯ ಸದಸ್ಯರುಗಳಾದ- ಪದ್ಮನಾಭ ರಾವ್, ನರೇಂದ್ರ ಕುಞೂೕಡಿ, ಕುಮಾರಿ ರಶ್ಮಿ ಶ್ರೀಧರ್ ಮತ್ತು ಶ್ರೀಮತಿ ಜ್ಯೋತಿ ಮಹಾದೇವ್ ಅವರುಗಳು ವೇದಿಕೆಯಲ್ಲಿದ್ದರು. ಸಮಿತಿಯ ಮತ್ತೊಬ್ಬ ಸದಸ್ಯ ಪ್ರಕಾಶ್ ನಾಯಕ್ ಅವರು ತವರಿಗೆ ಭೇಟಿಯಿತ್ತಿರುವುದರಿಂದ, ಅವರ ಗೈರುಹಾಜರಿಯಲ್ಲೇ ಕಾರ್ಯಕ್ರಮವನ್ನು ನಡೆಸಬೇಕಾಯಿತು.
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ’ ಕ್ಕೆ ಹೊಸ ಅಧ್ಯಕ್ಷರಾಗಿರುವ ಸುರೇಶ್ ಬಾಬು ಮತ್ತವರ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಸಂಪಾದಕೀಯ ಮಂಡಳಿಯ ಪರವಾಗಿ ವಂದನೆಗಳನ್ನು ಅರ್ಪಿಸಿದ ದತ್ತಾತ್ರಿಯವರು ಸ್ವರ್ಣಸೇತು ಪ್ರತಿಗಳನ್ನು ಕೂಟದ ಸದಸ್ಯರಿಗೆ ವಿತರಿಸಿದರು.