ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಚಿಯವರನ್ನು ಹತ್ತಿರದಿಂದ ಬಲ್ಲ ಸುರೇಶ್‌ ರಾಮಚಂದ್ರ ಜೂ.8ರಂದು ಕಚಗುಳಿ ಇಡುವರು.

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

Beechi‘ಕರ್ನಾಟಕದ ಜಾರ್ಜ್‌ ಬರ್ನಾರ್ಡ್‌ ಷಾ’ ಅಂತಲೇ ಹೆಸರಾಗಿದ್ದ ಬೀಚಿ ಜೋಕುಗಳ ಧಾರೆ ಜೋಕ್‌ಫಾಲ್ಸಿನಷ್ಟು ಜೋರು. ಕಚಗುಳಿ ಇಡುತ್ತಲೇ ವ್ಯಂಗ್ಯೋಕ್ತಿಯನ್ನು ಜನಜನಿತವಾಗಿಸಿದ ಅವರ ಬರಹಗಳನ್ನು ಪದೇಪದೇ ಓದಿ ಇವತ್ತಿಗೂ ಹೊಟ್ಟೆ ಹುಣ್ಣಾಗುವಂತೆ ನಗುವ ಅಭಿಮಾನಿಗಳ ದೊಡ್ಡ ಬಳಗವಿದೆ.

Suresh Ramachandranಇಂತಿದ್ದ ಬೀಚಿ ಅವರ ಬರಹಗಳನ್ನು ಮೆಲುಕು ಹಾಕಲು, ಅವರನ್ನು ನೆನಪಿಸಿಕೊಳ್ಳಲು ‘ಭೂಮಿಕಾ’ ಈ ಬಾರಿ ಸುರೇಶ್‌ ರಾಮಚಂದ್ರ ಅವರನ್ನು ಮಾತಾಡಿಸುತ್ತಿದೆ. ‘ಕನ್ನಡ ಹಾಸ್ಯ ಬ್ರಹ್ಮ ಬೀಚಿ ಅವರ ಬರಹಗಳು ಮತ್ತು ನೆನಪುಗಳು’ ಅನ್ನೋದು ಕಾರ್ಯಕ್ರಮದ ಶೀರ್ಷಿಕೆ. ಜೂನ್‌ 8ನೇ ತಾರೀಕು ಭಾನುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ Bauer Community Center ನಲ್ಲಿ ಮಾಹೆ ಮಂಥನ. ‘ತಿಮ್ಮ’ನ ನೆನಕೆಯಲ್ಲಿ ಗೊಳ್ಳನೆ ನಗುವ ಮುಫತ್ತು ಅವಕಾಶ.

ಬೀಚಿ ಬಗ್ಗೆ ನಿಮಗಿಷ್ಟು ಗೊತ್ತಿರಲಿ

ಬೀಚಿ ನಿಜನಾಮ ರಾಯಸಂ ಭೀಮಸೇನರಾಯ. ಹುಟ್ಟಿದ್ದು 1913 ರಲ್ಲಿ, ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ಓದಿದ್ದು ಕೇವಲ ಎಸ್ಸೆಸ್ಸೆಲ್ಸಿವರೆಗೆ ಮಾತ್ರ. ಸರ್ಕಾರಿ ಕಚೇರಿಯಾಂದರಲ್ಲಿ ಅಟೆಂಡರ್‌ ಕೆಲಸದಿಂದ ಶುರುವಾದ ವೃತ್ತಿ ಜೀವನ ಸಿ.ಐ.ಡಿ. ವಿಶೇಷ ಘಟಕದ ಸೂಪರಿಂಟೆಂಡೆಂಟ್‌ ಹುದ್ದೆವರೆಗೆ ಸಾಗಿತು.

ಸಾಹಿತ್ಯದ ಗಂಧ- ಗಾಳಿಯೇ ಇರದಿದ್ದ ಬೀಚಿಗೆ ಅ.ನ.ಕೃ. ಅವರ ‘ಸಂಧ್ಯಾರಾಗ’ ಓದಿದ ಮೇಲೆ ಬರೆಯುವ ಆಸೆ ಹುಟ್ಟಿತಂತೆ. ಆಮೇಲೆ ಕೆಲವು ಪತ್ರಿಕೆಗಳಲ್ಲಿ ತಿಂಮನ ಹರಟೆ ಶುರುವಿಟ್ಟುಕೊಂಡು, ಕಚಗುಳಿಯಿಟ್ಟರು. ಕನ್ನಡದ ಮೊಟ್ಟ ಮೊದಲ ಹಾಸ್ಯ ಕಾದಂಬರಿ ‘ದಾಸಕೂಟ’ವನ್ನು ಬರೆದ ಬೀಚಿಯವರ ನಗೆ ಬರೆಹಗಳವೇ 60 ಕೃತಿಗಳು ಪ್ರಕಟವಾಗಿವೆ. ಸತೀಸೂಳೆ, ಸರಸ್ವತಿಸಂಹಾರ, ಖಾದಿಸೀರೆ, ಬೆಂಗಳೂರು ಬಸ್ಸು, ದೇವನ ಹೆಂಡ, ಏರದ ಬಳೆ, ಮೇಡಮ್ಮನ ಗಂಡ, ಟೆಂಟ್‌ ಸಿನಿಮಾ, ಆರಿದ ಚಹಾ, ಬಿತ್ತಿದ್ದೇ ಬೇವು- ಇವರ ಪ್ರಮುಖ ಕಾದಂಬರಿಗಳು.

ತಮ್ಮನ್ನು ತಾವೇ ತಿಂಮ ಎಂದು ಕರೆದುಕೊಂಡು ಇವರು ಬರೆದ ತಿಂಮನ ತಲೆ, ಅಂದನಾ ತಿಂಮ, ತಿಂಮಿಕ್ಷನರಿ, ಬೆಳ್ಳಿ ತಿಮ್ಮ 108 ಹೇಳಿದ, ಅಮ್ಮಾವ್ರ ಕಾಲ್ಗುಣ, ಚಿನ್ನದ ಕಸ, ಹುಚ್ಚು ಹುರುಳು, ಉತ್ತರ ಭೂತ- ಮೊದಲಾದ ನಗೆ ಹನಿಗಳ ಸಂಕಲನಗಳು ಮನೆಮಾತಾಗಿವೆ. ಅವರ ‘ಭಯಾಗ್ರಫಿ’ ಅವರಂತೆಯೇ ಸದಾ ನಗುತ್ತಿದೆ.

ಮಾತಿನ ಓಘದಲ್ಲಿ ವಿಚಾರ ನಿಧಾನ ಮುಟ್ಟಿಸುವ ಜಾಯಮಾನದ ಬೀಚಿ ಅ.ನ.ಕೃ. ಅವರನ್ನು ತಮ್ಮ ಗುರು ಎಂದೇ ಭಾವಿಸಿದ್ದರು. ರೇಡಿಯೋ ನಾ-ಟಕಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ಬೀಚಿ ನಾಟಕಗಳು, ಹರಟೆಗಳು, ಕಾದಂಬರಿಗಳಲ್ಲಿನ ಜೋಕು ಜೋಕಾಲಿ ಆಡೋದೇ ಸೊಗಸು. ಇಂತಿದ್ದ ಬೀಚಿ 1980ರಲ್ಲಿ ನಿಧನರಾದರು.

ಬೀಚಿ ಅವರನ್ನು ಅರಿತಿರುವ ಸುರೇಶ್‌ ರಾಮಚಂದ್ರ
ಭೂಮಿಕಾ ತಿಂಗಳಂಗಳದಲ್ಲಿ ‘ತಿಂಮನ ತಲೆ’ಯನ್ನು ಪದೇಪದೇ ಕೆರೆಯುವ ಚೆಂದದ ಕೆಲಸಕ್ಕೆ ಒಪ್ಪಿಕೊಂಡಿರುವ ಸುರೇಶ್‌ ರಾಮಚಂದ್ರ ವೃತ್ತಿಯಲ್ಲಿ ಕಂಪ್ಯೂಟರ್‌ ವಿಜ್ಞಾನಿ. ಬೀಚಿ ಜತೆಯಲ್ಲಿ ಅನೇಕ ಗಳಿಗೆಗಳನ್ನು ಕಳೆದಿರುವ ಸುರೇಶ್‌ ನಾಲಗೆ ಮೇಲೆ ಬೀಚಿ ಜೋಕುಗಳು ಸಲೀಸಾಗಿ ಪುಟಿಯುತ್ತವೆ. ಜೋಕುಗಳ ಜತೆಜತೆಗೇ ಬೀಚಿ ಚಿಂತನೆಗಳನ್ನೂ ಸಭಿಕರಿಗೆ ಮುಟ್ಟಿಸುವ ಉಮೇದಿ ಸುರೇಶ್‌ ಅವರದ್ದು.

ಕಾರ್ಯಕ್ರಮಕ್ಕೆ 5 ನಿಮಿಷ ಮುನ್ನವೇ ಎಲ್ಲರೂ ಬಂದು ಸೇರಿದರೆ ಒಳ್ಳೆಯದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-
Dr.Vijaya Kulakarni: 301-871-2234
Padmaja prabhakara: 301-977-3296
Indira Prativadi: 301-670-1665
Jaya Nagendra: 301-352-9256

ನೋಡಿ- ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X