ಪ್ರೇರಣಾ ಪ್ರಸಂಗ: ‘ಕೆಲಸದ ಮಹತ್ವ’ ಅರಿಯಿರೊ ನೀವೆಲ್ಲರೂ !
*ಎಂ. ವಿ. ನಾಗರಾಜ ರಾವ್
ಒಮ್ಮೆ ನಗರದಲ್ಲಿ ಜಾಡಮಾಲಿಗಳು ಹರತಾಳವನ್ನು ಆಚರಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅವರಿಗೆ ಬೇರೆ ಮಾರ್ಗ ಇರಲಿಲ್ಲ. ನಗರದಲ್ಲಿ ಕಸಕಡ್ಡಿ ಕೊಳಕು ತುಂಬಿತು. ಇದೇ ರೀತಿ ಮುರ್ನಾಲ್ಕು ದಿನ ಕಳೆಯಿತು. ನಗರದ ಬೀದಿ, ಚರಂಡಿಗಳು ಕೊಳಕಿನಿಂದ ತುಂಬಿ ನಾರತೊಡಗಿದವು. ಧರ್ಮಪರಾಯಣ ಜನರು ಮತ್ತು ಸ್ವಚ್ಛತಾ ಪ್ರಿಯರಿಗೆ ಇದರಿಂದ ತುಂಬಾ ದುಃಖವಾಯಿತು. ಅವರೆಲ್ಲರೂ ಸಂಬಂಧಿಸಿದ ಅಧಿಕಾರಿಗಳ ಬಳಿ ಬಂದು ತಮ್ಮ ದುಃಖವನ್ನು ಹೇಳಿಕೊಂಡರು. ಕೆಲವರು ಕಣ್ಣೀರು ಸುರಿಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ನಗರವಾಸಿಗಳು ಹೌಹಾರಿದರು. ಕೆಟ್ಟ ವಾಸನೆಯಿಂದ ಅವರಿಗೆ ಮನೆಯಾಳಗಿರುವುದು ಸಾಧ್ಯವಾಗಲಿಲ್ಲ. ಬೀದಿಯಲ್ಲಂತೂ ಓಡಾಡುವ ಹಾಗಿರಲಿಲ್ಲ. ಮುಂದೇನು ...? ತಲೆಯ ಮೇಲೆ ಕೈ ಹೊತ್ತು ಕುಳಿತರು. ಈಗ ಅವರಿಗೆ ರೋಗ ಹರಡುವ ಭಯ ಕಾಡತೊಡಗಿತು. ಕೆಲವರು ಜಾಡಮಾಲಿಗಳ ಮನ ಒಲಿಸಲು ಪ್ರಯತ್ನಿಸಿ ವಿಫಲರಾದರು. ಮತ್ತೆ ಕೆಲವರು ಅಧಿಕಾರಿಗಳ ಮುಂದೆ ಕೈ ಜೋಡಿಸಿ ಅಂಗಲಾಚಿದರು. ಪರಿಸ್ಥಿತಿ ಸುತರಾಂ ಸುಧಾರಿಸಲಿಲ್ಲ. ಅಷ್ಟರಲ್ಲಿ ವಿಭಾಗದ ಮಾಜಿ ಉಪನಿರ್ದೇಶಕ ಮದಾನ್ ಸಾಹೇಬರು ಒಂದು ಅದ್ಭುತ ಪವಾಡವನ್ನೆಸಗಿದರು. ಒಂದು ಕೈಯಲ್ಲಿ ಪೊರಕೆ, ಮತ್ತೊಂದರಲ್ಲಿ ಬಕೀಟು ಹಿಡಿದು ರಸ್ತೆಯಲ್ಲಿ ನಡೆದರು. ಜನರು ಕುತೂಹಲದಿಂದ ಅವರ ಸುತ್ತ ನೆರೆದರು. ‘ಇದೇನು ವಿಚಿತ್ರ’ ಎಂದು ಹುಬ್ಬೇರಿಸಿದರು. ‘ನಾವು ಈ ರೀತಿ ಕೈ ಮುಗಿಯುತ್ತಾ ಅಲ್ಲಿ ಇಲ್ಲಿ ಅಲೆದರೆ ಅಥವಾ ಇನ್ನೊಬ್ಬರ ಮುಂದೆ ಅಂಗಲಾಚುತ್ತಾ ಕುಳಿತರೆ ಏನೂ ಪ್ರಯೋಜನವಿಲ್ಲ... ನಾವೇ ನಮ್ಮ ನಮ್ಮ ಗಲ್ಲಿಯನ್ನು ಚೊಕ್ಕಟಗೊಳಿಸೋಣ. ಇದರಲ್ಲಿ ನಾವು ನಾಚಿಕೆ ಪಡುವಂಥದ್ದೇನಿದೆ ? ’ ಅವರು ಗಂಭೀರ ಧ್ವನಿಯಲ್ಲಿ ನೆರೆದ ಸಮೂಹವನ್ನು ಪ್ರಶ್ನಿಸಿದರು. ‘ನಾವು ಬೇರೆಯವರೆದುರು ಅಸಹಾಯಕತೆಯಿಂದ ಕೈ ಜೋಡಿಸುವುದು ಗೌರವಕ್ಕೆ ಕುಂದುಂಟಾಗುತ್ತದೆ. ಎಲ್ಲರೆದುದು ನಿಂತು ಕಣ್ಣೀರು ಸುರಿಸುವುದರಿಂದ ಏನೂ ಲಾಭವಿಲ್ಲ.’
ಮದಾನ್ ಸಾಹೇಬರ ಮಾತಿನಿಂದ ಪ್ರಭಾವಿತರಾದ ಜನರು ಕೈಯಲ್ಲಿ ಪೊರಕೆ, ಬಕೀಟು, ಬುಟ್ಟಿ ಇತ್ಯಾದಿ ಹಿಡಿದು ಹೊರಟರು. ಇದನ್ನು ಕಂಡ ಜಾಡಮಾಲಿಗಳು ಅವರನ್ನು ತಡೆದರು. ಮದಾನ್ ಸಾಹೇಬರು ಅವರನ್ನು ಕುರಿತು ‘ನಮಗೆ ನಿಮ್ಮ ಮೇಲೆ ದ್ವೇಷವಿಲ್ಲ. ನಿಮ್ಮ ಬೇಡಿಕೆಗಳನ್ನು ಅಧಿಕಾರಿಗಳು ಈಡೇರಿಸುವುದು ಅವಶ್ಯಕ. ಆದರೆ ಅಂಗಲಾಚಿ ಬೇರೆಯವರ ಎದುರು ತಲೆತಗ್ಗಿಸಿ ನಿಲ್ಲುವುದು ನಮಗೆ ಅವಮಾನ. ಕೊಳಕು ಮತ್ತು ದುರ್ವಾಸನೆಯ ಬಗ್ಗೆ ನಮಗೆ ತಿರಸ್ಕಾರವಿದೆ, ಅಂತೆಯೇ ಬೇರೆಯವರ ಮುಂದೆ ಅಂಗಲಾಚುತ್ತಾ ಕಣ್ಣೀರು ಸುರಿಸುವುದರ ಬಗ್ಗೆಯೂ ನಮಗೆ ತಿರಸ್ಕಾರವಿದೆ.’ ಎಂದು ಹೇಳಿದರು. ಜಾಡಮಾಲಿಗಳು ಮರುಮಾತನಾಡದೆ ಅವರಿಗೆ ದಾರಿ ಬಿಟ್ಟರು. ಮದಾನ್ ಸಾಹೇಬರ ಕಾಯಕ ನಿಷ್ಠೆಯೆದುರು ಅವರು ತಲೆಬಾಗಲೇ ಬೇಕಾಯಿತು.(ನಮ್ಮ ನಮ್ಮ ಕೆಲಸಗಳನ್ನು ನಿರ್ವಹಿಸಲು ನಾಚಿಕೆ ಪಟ್ಟುಕೊಳ್ಳಬಾರದು)
ಪ್ರೇರಣಾ
ಪ್ರಸಂಗ
ಪ್ರಸಂಗ
1
:
ಮುಖಪುಟ
/
ಸಾಹಿತ್ಯ
ಸೊಗಡು