ರಾಜ್ಯೋತ್ಸವದಂದು ದುಬೈ ನೆಲದಲ್ಲಿ ಮೊಳಗಿತು ಕನ್ನಡ ಡಿಂಡಿಮ
* ಬಿ.ಜಿ.ಮೋಹನ್ ದಾಸ್, ದುಬೈ
ಜಾನಪದ ನೃತ್ಯ, ಸ್ಯಾಕ್ಸಫೋನಿನಲ್ಲಿ ಕರ್ನಾಟಕ ಸಂಗೀತ, ಮಕ್ಕಳ ಹೆಜ್ಜೆ ಮಾತಾಡಿದ ಪರಿ... ಸುಂದರ ವೇದಿಕೆಗೆ ಚಂದದ ಚಂದ್ರಮನ ಕಳೆ ಕಟ್ಟಿಕೊಟ್ಟಿತ್ತು. ದುಬೈ ಕರ್ನಾಟಕ ಸಂಘ ನವೆಂಬರ್ 1ರಂದು ರಾಜ್ಯೋತ್ಸವ ಆಚರಿಸಿದ್ದು ಹೀಗೆ; ಚೊಕ್ಕವಾಗಿ ಚೆಂದವಾಗಿ.
ಡಾ. ಬಿ.ಕೆ. ಯೂಸುಫ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಮಧುರ ಕ್ಷಣಗಳನ್ನು ಮೊಗೆದುಕೊಂಡವರ ಯಾದಿಯಲ್ಲಿ ಪ್ರಮುಖರು- ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ಉದಯವಾಣಿಯ ಎನ್. ಗುರುರಾಜ್, ಲೇಖಕ ಪ್ರೊ. ಇಕ್ಬಾಲ್ ಅಹ್ಮದ್. ಕನ್ಸಲ್ ಜನರಲ್ ಆಫ್ ಇಂಡಿಯಾದ ಡಾ. ಜಾರ್ಜ್ ಜೋಸೆಫ್ ಮುಖ್ಯ ಅತಿಥಿ ಜಾಗೆಯಲ್ಲಿದ್ದರು. ಸಂಘದ ಹಿರೀಕ ಬಿ.ಆರ್.ಶೆಟ್ಟಿ, ಸಲಹೆಗಾರ ಟಿ.ಎಸ್.ಶೆಟ್ಟಿಗಾರ್, ಸರ್ವೋತ್ತಮ ಶೆಟ್ಟಿ, ಸತೀಶ್ ಶೆಟ್ಟಿ , ಬೋನಿಫೇಸ್ ಕಾರ್ಲೋ ಹಾಗೂ ನಾರಾಯಣ್- ಇವರೆಲ್ಲರ ಉಪಸ್ಥಿತಿಯಿಂದ ಕಾರ್ಯಕ್ರಮ ಕಳೆಗಟ್ಟಿತ್ತು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ.ಎಸ್. ಗೋಪಾಲಕೃಷ್ಣರ ಸ್ಯಾಕ್ಸೋಫೋನ್ ವಾದನ ಕಿವಿತುಂಬುವ ಮುನ್ನ ಬನ್ನಂಜೆ ಗೋವಿಂದಾಚಾರ್ಯ, ಜಾರ್ಜ್ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಮತ್ತು ಸಂಸ್ಥಾಪಕರ ಪೈಕಿ ಒಬ್ಬರಾದ ಸುಂದರ ದೇವಾಡಿಗ, ಕಾರ್ಯಕ್ರಮದ ನೃತ್ಯ ನಿರ್ದೇಶಕ ಹರಿಹರನ್ ಮತ್ತು ಚೆಂದದ ವೇದಿಕೆ ನಿರ್ಮಿಸಿದ ಗಣೇಶ್ ರೈ ಅವರನ್ನೂ ಗೌರವಿಸಲಾಯಿತು.
ಸಂಘದ ಮನರಂಜನಾ ಕಾರ್ಯದರ್ಶಿಗಳಾದ ದಿನೇಶ್ಕುಮಾರ್ ಹಾಗೂ ಗೋಪಿಕಾ ಮಯ್ಯ ಕಾರ್ಯಕ್ರಮಗಳನ್ನು ನಿರ್ಮಿಸಿ, ಪ್ರಸ್ತುತ ಪಡಿಸಿದರು. ಸಹಕಾರಕ್ಕೆ ಹರಿಹರನ್, ಸಂಜಯ್ಕೃಷ್ಣ, ಹೇಮಾ ಚಂದ್ರ, ಶ್ರೀಮತಿ ಪಾಟೀಲ್, ಮೀರಾಭಟ್, ಮನೋಹರ ಹೆಗಡೆ, ಜಯಂತ್ ಶೆಟ್ಟಿ, ಮರೀನಾ ಮೆನೆಜೆಸ್ ನಿಂತಿದ್ದರು. ಕಾರ್ಲೋ ಸೋದರಿಯರು ಹಾಗೂ ಚಿಣ್ಣರು ಕೊಟ್ಟ ನೃತ್ಯ ಕಾರ್ಯಕ್ರಮ ಕಿನ್ನರ ಲೋಕಕ್ಕೆ ಕನ್ನಡಿ ಹಿಡಿದಂತಿತ್ತು.
ETA GROUP ಪ್ರಾಯೋಜಕತ್ವದ ಈ ಕಾರ್ಯಕ್ರಮವನ್ನು ಹಸನಾಗಿ ನಡೆಸಿಕೊಡುವಲ್ಲಿ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಮತ್ತು ಸ್ವಯಂ ಸೇವಕರು ಶ್ರಮಿಸಿದರು.
ರಾತ್ರಿ ಊಟ ಸವಿದು ಹೊರಟ ದುಬೈ ಕನ್ನಡಿಗರ ಕಣ್ಣಲ್ಲಿ ಸುಂದರ ಅನುಭವ ಮನೆ ಮಾಡಿತ್ತು.