ಕನ್ನಡ ಪೀಠ : ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲೇ ಯಾಕೆ ?
ಬೇರೆ ವಿಶ್ವವಿದ್ಯಾಲಯಗಳಲ್ಲಲ್ಲದೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲೇ ಯಾಕೆ ಸಮಂಜಸವೆಂದು ಸಮಜಾಯಿಷಿ ಹೇಳುತ್ತಾ, ‘ನಮ್ಮ ವಿಶ್ವವಿದ್ಯಾಲಯದಲ್ಲಿ ಕಳೆದ ಐದು ದಶಕಗಳಿಂದಲೂ ದಕ್ಷಿಣ ಭಾಷೆಗಳ ಅಧ್ಯಯನ ಕೇಂದ್ರವೊಂದು ಇದ್ದು ಸಮರ್ಥವಾಗಿ ಕೆಲಸ ಮಾಡುತ್ತಿದೆ; ಹೀಗಿರುವುದರಿಂದ ನಿಮ್ಮ ಪ್ರಯತ್ನ, ಆಸೆ, ಔದಾರ್ಯಗಳು ನಿರರ್ಥಕವಾಗುವುದಿಲ್ಲ ; ಆ ‘ಪೀಠ’ ಅರ್ಧದಲ್ಲಿ ಮುಳುಗುವುದಿಲ್ಲ. ಹಣ ಸಂಗ್ರಹಣೆ ಆದ ಆದಂತೆಲ್ಲಾ ಅದಕ್ಕೆ ತಕ್ಕಂತೆ ಸಣ್ಣ, ಸ್ವಲ್ಪ ದೊಡ್ಡ, ಹೆಚ್ಚಿನ ಪ್ರಮಾಣದ ಅಧ್ಯಯನ ಪ್ರವಚನ ಸಂಶೋಧನ ಯೋಜನೆಗಳನ್ನು ಹಾಕಿಕೊಳ್ಳಬಹುದು; ಆದ್ದರಿಂದ ಬನ್ನಿ ನಾವೆಲ್ಲರೂ ಈ ದಿಕ್ಕಿನಲ್ಲಿ ಪ್ರಯತ್ನಿಸೋಣ; ಉಳಿದ ಭಾಷೆಯವರಿಗೆ- ಗುಜರಾತಿ, ತಮಿಳು, ಹಿಂದಿ- ಮುಂತಾದವರಿಗೆ ನಾವು ಒಂದು ಮಾದರಿಯಾಗಬಲ್ಲೆವು....’ ಎಂದು ಹುರಿದುಂಬಿಸಿದರು. ಸಭಿಕರ ಕೆಲವು ಪ್ರಶ್ನೆಗಳಿಗೆ ಪ್ರೊ.ಷಿಫ್ಮನ್ ಸೂಕ್ತವಾಗಿ ಉತ್ತರಿಸಿದರು.
ಇಂಥ ಒಂದು ಸಮಾರಂಭವನ್ನು ನಡೆಸುತ್ತಿರುವುದಕ್ಕಾಗಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮತ್ತು ಕನ್ನಡ ಬಳಗ ಸಂಸ್ಥೆಗಳನ್ನು ಅಭಿನಂದಿಸುತ್ತಾ, ತಮ್ಮ ಅಧ್ಯಕ್ಷ ಭಾಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದವರೂ, ಖ್ಯಾತ ಸಾಹಿತಿಗಳೂ ಆದ ಸಾ.ಶಿ.ಮರುಳಯ್ಯನವರು, ಇಲ್ಲಿಗೆ ಬಂದುದಕ್ಕಾಗಿ ಪ್ರೊ.ಷಿಫ್ಮನ್ ಅವರನ್ನು ಅಭಿನಂದಿಸಿದರು.
ಕಿಟೆಲ್ ನಿಘಂಟು ಮತ್ತೆ ಪರಿಷ್ಕೃತವಾಗಬೇಕಿತ್ತು ..
ಡಾ.ಸಾ.ಶಿ.ಮರುಳಯ್ಯನವರು ಹೇಳಿದರು : ‘ಕಿಟೆಲ್ ನಿಘಂಟು ಬಹಳ ವೈಜ್ಞಾನಿಕವಾಗಿ ರಚಿತವಾದ ಒಂದು ಮಾದರಿ ಕನ್ನಡ ನಿಘಂಟು. ಆದರೆ, ಅಲ್ಲಿ ಒಂದು ಕೊರತೆಯೆಂದರೆ, ಇಂಗ್ಲೀಷಿನಲ್ಲಿ ಕನ್ನಡ ಪದಗಳ ಲಿಪ್ಯಂತರ. ಅದಿದ್ದಿದ್ದರೆ, ಬೇರೆ ಭಾಷಿಕರಿಗೆ ಕನ್ನಡದ ಭಾಷಾ ಸ್ವರೂಪ ಗೊತ್ತಾಗುತ್ತಿತ್ತು ; ಕಿಟೆಲ್ ನಿಘಂಟಿನ ಬಳಿಕ ಕನ್ನಡದಲ್ಲಿ ಅದಕ್ಕೆ ಸಮನಾದ ಅರ್ಥಕೋಶ ಬರಲಿಲ್ಲ ; ಇತ್ತೀಚೆಗೆ ಸೇರಿರುವ ಸಾವಿರಾರು ಕನ್ನಡ ಪದಗಳನ್ನು ಅಂಥಹುದಕ್ಕೆ ಸೇರಿಸಬೇಕಿತ್ತು ; ಉಪಯುಕ್ತವಾದ ಕೆಲವು ಶಬ್ದಗಳ ನಿಷ್ಪತ್ತಿ ಪ್ರಯೋಗಗಳನ್ನು ಸರಿಪಡಿಸುವ ಅವಶ್ಯಕತೆಯಿತ್ತು; ಈ ಮೂರೂ ಉದ್ದೇಶಗಳಿಟ್ಟುಕೊಂಡು ನಿಘಂಟುವನ್ನು ಪರಿಷ್ಕರಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ಯೋಜನೆಯಾಂದು ಕರ್ನಾಟಕ ಸರಕಾರದ ನೆರವಿಲ್ಲದೆ ನಿಂತು ಹೋಯಿತು !’
‘ಕನ್ನಡ ಆಡು- ನುಡಿಯ ವ್ಯಾಕರಣವನ್ನು ಬರೆದ ಪ್ರೊ.ಷಿಫ್ಮನ್ ಅವರ ಕಾರ್ಯ ಪ್ರಶಂಸನೀಯ. ಈಗ ಅವರು ಸ್ಥಾಪಿಸಬೇಕು ಅಂದುಕೊಂಡಿರುವ ‘ಪೀಠ’ ಕನ್ನಡಕ್ಕೆ ಹೊಸತೊಂದು ಹೆಮ್ಮೆಯ ಗರಿ...’ ಎಂದು, ಸುಮಾರು 1500 ವರ್ಷಗಳ ಲಿಖಿತ ಇತಿಹಾಸವಿರುವ ಕನ್ನಡ ಭಾಷೆ ಪ್ರಾಂತೀಯವಾಗಿ ಎಷ್ಟೊಂದು ಭೇದಗಳನ್ನೊಳಗೊಂಡಿದೆಯೆಂದು ಕೆಲವಾರು ಉದಾಹರಣೆಗಳೊಂದಿಗೆ ನುಡಿದ ಡಾ.ಸಾ.ಶಿ.ಮರುಳಯ್ಯನವರು, ‘ಭಾಷೆ ಜಡತ್ವದಿಂದ ಕೂಡಿರಬಾರದು. ಬೇರೆ ಬೇರೆ ಪ್ರಾಂತಗಳ ವ್ಯತ್ಯಾಸಗಳನ್ನು, ಪ್ರಾದೇಶಿಕ ವೈವಿಧ್ಯಗಳನ್ನು ಜೀರ್ಣಿಸಿಕೊಳ್ಳಬೇಕು. ಜೊತೆಗೆ ಬೇರೆ ಭಾಷೆಗಳ ಪ್ರಭಾವವನ್ನು ಸ್ವೀಕರಿಸಬೇಕು. ಆಗಲೇ ಒಂದು ಭಾಷೆಯ ಬೆಳವಣಿಗೆ ಸಾಧ್ಯ. ಆದರೆ ಒಂದು ದಿಕ್ಕಿನ ಬೆಳವಣಿಗೆ ಇನ್ನೊಂದು ದಿಕ್ಕಿನ ವಿನಾಶವೂ ಆಗಬಲ್ಲುದು, ಆದರದು ಅನಿವಾರ್ಯ...’ ಅನ್ನುತ್ತಾ, ಹಲ್ಮಿಡಿ, ಬಾದಾಮಿ ಮೊದಲಾದ ಶಾಸನಗಳನ್ನು ಪುಂಖಾನುಪುಂಖವಾಗಿ ಉದ್ಧರಿಸುತ್ತಾ, ಶಾಸನಗಳಲ್ಲಿ ಹಲವಾರು ಗಣಿತ, ತಂತ್ರಜ್ಞಾನಕ್ಕೆ ಸಂಬಂಧ ಪಡುವಂತಹ ಪದಗಳಿದ್ದವು ಎಂದರು. ಹಲವು ಶಾಸನಗಳ ಲಿಪಿ ಈಗ ಓದಲೂ ಅಸಾಧ್ಯವಾಗಿರುವುದನ್ನು ನೆನಪಿಸಿದರು. ಜೊತೆಗೆ ಡಾ.ಮರುಳಯ್ಯನವರ ಮಾತು ಸಾಹಿತ್ಯ ಸಂಸ್ಕೃತಿಗಳನ್ನು ಹದವಾಗಿ ಬೆರೆಸಿದ ಸುಮಧುರ ಪಂಚಾಮೃತದಂತಿತ್ತು.
ಕನ್ನಡಾಭಿಮಾನ ಗೌರವ ಪ್ರಶಸ್ತಿ
ಬಳಿಕ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಪರವಾಗಿ ಸಭೆಯ ಅಧ್ಯಕ್ಷ ಡಾ.ಮರುಳಯ್ಯನವರು ಪ್ರೊ.ಷಿಫ್ಮನ್ ಅವರಿಗೆ ‘ಕನ್ನಡಾಭಿಮಾನ ಗೌರವ ಪ್ರಶಸ್ತಿ’ ಫಲಕ ನೀಡಿ ಸನ್ಮಾನಿಸಿದರು. ಕನ್ನಡ ಕೂಟದ ಕನ್ನಡಿಗರ ಸ್ನೇಹದ ಕೊಡುಗೆಯಾಗಿ, ಕನ್ನಡ ಕೂಟದ ಅಧ್ಯಕ್ಷ ರಾಮ್ಪ್ರಸಾದ್ ಅವರು, ಕನ್ನಡ ಕೂಟ ಪ್ರಕಟಿಸಿದ ಸಾಹಿತ್ಯ ಸಂಚಿಕೆಗಳನ್ನೂ ಕೆಲವು ಪುಸ್ತಕಗಳನ್ನೂ ಕಿರುಕಾಣಿಕೆಯನ್ನೂ ಪ್ರೊ.ಷಿಫ್ಮನ್ ಅವರಿಗೆ ನೀಡಿದರು. ಕನ್ನಡ ಬಳಗದ ಪರವಾಗಿ ಡಾ.ಮರುಳಯ್ಯನವರಿಗೆ ಫಲ- ಪುಷ್ಪ ಕಾಣಿಕೆಯನ್ನು ಶ್ರೀಮತಿ ಮನೋರಮ ಅವರು ಸಲ್ಲಿಸಿದರು. ಜೊತೆಗೆ ಕನ್ನಡ ಬಳಗ ಅಧ್ಯಕ್ಷ ಶ್ರೀ ಗಜಾನನ ಜೋಷಿಯವರು ಪ್ರೊ.ಷಿಫ್ಮನ್ ಅವರಿಗೆ ಶಾಲು ಹೊದಿಸಿ, ಶ್ರೀ ದೇವರ ಪ್ರಸಾದವನ್ನು ನೀಡಿ, ‘ಅವರು ಹಮ್ಮಿಕೊಂಡಿರುವ ಈ ‘ಕನ್ನಡ ಪೀಠ’ದ ಕಾರ್ಯವು ಸುಗಮವಾಗಿ ನೆರವೇರ’ಲೆಂದು ಹರಸಿದರು. ಕಾರ್ಯಕ್ರಮದ ಪೂರ್ಣ ನಿರ್ವಹಣೆಯನ್ನು ಶ್ರೀ ಹರಿಹರೇಶ್ವರ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಪ್ರೊ.ಹೆರಾಲ್ಡ್ ಷಿಫ್ಮನ್ ಅವರು ಬರೆದ ಪುಸ್ತಕಗಳು :
1.
Schiffman,
Harold
F.
::
"A
Reference
Grammer
of
Spoken
Kannada",
University
of
Washington
Press,
Seattle;
1984
2.
Schiffman,
Harold
F.
and
Carol
M.
Eastman
(Eds.)
::
"The
Ternary
Contrast
in
Dravidian
Coronal
Stops
in
Dravidian
Phonological
Systems",
Institute
for
Comparative
and
Foreign
Area
Studies
and
University
of
Washington
Press,
Seattle;
1975
3.
Schiffman,
Harold
F.
and
Carol
M.
Eastman
(Eds.)
::
"Dravidian
Phonological
Systems",
Institute
for
Comparative
and
Foreign
Area
Studies
and
University
of
Washington
Press,
Seattle;
1975
4.
Schiffman,
Harold
F.
and
Carol
M.
Eastman
(Eds.)
::
"The
Revival
of
Spoken
Sanskrit
in
Modern
India;
An
ethnographic
and
Linguistic
Study";
Schiffman,
1996
What do you think about this article?