ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ‘ ರಾಗ ’ ನಡೆಸಿದ ‘ಸಂಗೀತ ಸಂಧ್ಯೆ’ಯ ಒಂದು ಪಕ್ಷಿ ನೋಟ
*ಸರಸ್ವತಿ ವಟ್ಟಂ, ಫ್ರೀಮಾಂಟ್, ಕ್ಯಾಪಿಫೋರ್ನಿಯಾ
‘‘ಪಶುರ್ ವೇತ್ತಿ, ಶಿಶುರ್ ವೇತ್ತಿ, ವೇತ್ತಿ ಗಾನರಸಂ ಫಣಿಃ ’’- ಎಂಬುದು ಒಂದು ಜನಪ್ರಿಯ ಲೋಕೋಕ್ತಿ. ‘ಸಂಗೀತ ಸುಮಧುರವಾಗಿದ್ದರೆ ಯಾರನ್ನು ತಾನೇ ಪರವಶಗೊಳಿಸದು ? ’ ಎಂಬುದು ಮಾತಿನ ಭಾವ. ‘ ರಾಗ ’ ಸಂಗೀತಗಾರರ ತಂಡವು ಇದೇ ಅಕ್ಟೋಬರ್ ಆರರಂದು, ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಆಶ್ರಯದಲ್ಲಿ, ಪ್ರಸ್ತುತ ಪಡಿಸಿದ ಅದ್ಧೂರಿಯ ಕಾರ್ಯಕ್ರಮದಲ್ಲಿ, ಭಾರತದಿಂದ, ಕರ್ನಾಟಕದಿಂದ ಇಷ್ಟು ದೂರ ವಿದೇಶಕ್ಕೆ ಬಂದು- ಬಂದು ಬಹಳ ದಿನಗಳಾದ ಕೆಲವರಿಗೂ, ಈಗೀಗ ಬಂದ ಹಲವರಿಗೂ - ಇಲ್ಲಿ ಇರುವವರಿಗೆಲ್ಲಾ, ಆ ಅಂದಿನ ಜನಪ್ರಿಯ ಚಿತ್ರಗೀತೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡಿದವು. ಶ್ರೋತೃಗಳು ತಮ್ಮನ್ನು ತಾವೇ ಮರೆತು, ಹಾಡುಗಾರರ ಜೊತೆಗೆ ಸೇರಿ, ಅಂದಿನ ದಿನಗಳ ಆ ಗಂಧರ್ವಲೋಕಕ್ಕೆ ಕೆಲ ಕಾಲ ತೆರಳುವಂತೆ ಮಾಡಿತು. ಅವರೊಡನೆ ಪಾಲ್ಗೊಂಡು ಆನಂದಿಸುವಂತೆ ವಾತಾವರಣವನ್ನು ಉಂಟುಮಾಡಿತು.
ಕಾರ್ಯಕ್ರಮಕ್ಕೆ ಕೆಲವು ದಿನಗಳ ಮೊದಲೇ ಟಿಕೆಟ್ಟುಗಳು ಬಿಸಿ ದೋಸೆಗಳಂತೆ ಮುಂಗಡವಾಗಿ ಖರ್ಚಾಗಿ, ಸುಮಾರು ಒಂಭೈನೂರು ಜನ ಹಿಡಿಯುವ ಸಂಭಾಗಣ ತುಂಬಿ ತುಳುಕಾಡುತ್ತಿತ್ತು. ಅಲ್ಲಿ ಕಿಕ್ಕಿರಿದ ಜನ ಕುಳಿತುಕೊಳ್ಳಲು ಸೀಟುಗಳೆಲ್ಲ ಭರ್ತಿಯಾಗಿದ್ದರೂ ನಿಂತುಕೊಂಡೇ ಕೇಳಲೂ ಸಿದ್ಧರಾದರು. ಹಾಡುಗಾರರು ಅದೇನು ಮೋಡಿ ಮಾಡಿದರೋ ಏನೋ, ಆದಿನ ಅಲ್ಲಿ ಬಂದಿದ್ದ ಕನ್ನಡಿಗ ಕೇಳುಗರು , ಕೇಳಿ ಆನಂದಿಸಿದರು. ಜೊತೆಗೆ ಹಾಡಿ ಮನದಣಿದರು. ಕುಣಿದು ಕುಪ್ಪಳಿಸಿದರು; ಏನೂ ಪೂರ್ವ ಸಿದ್ಧತೆಯಿಲ್ಲದೆ, ಧಿಡೀರನೇ ಎದ್ದು ಸಾಮೂಹಿಕವಾಗಿ ನರ್ತಿಸತೊಡಗಿದರು - ಒಟ್ಟಾರೆ, ನಂಬಲು ಅಸಾಧ್ಯವಾದ ರೀತಿಯಲ್ಲಿ ಮನಸಾರೆ, ಈ ಗೀತೋತ್ಸವದಲ್ಲಿ ಈ ಪ್ರದೇಶದ ಕನ್ನಡಿಗರು ಪಾಲುಗೊಂಡರು.
ಹೇಳುತ್ತಾರೆ: ‘ ಸಂತೋಷಮ್ ಜನಯೇತ್ ಪ್ರಾಜ್ಞಃ ತದ್ ಏವ ಈಶ್ವರ ಪೂಜನಮ್।’ ಈ ಮಾತು ಅರ್ಥಪೂರ್ಣವಾದದ್ದು. ಇಲ್ಲಿ ನಡೆದದ್ದು ಆ ಬಗೆಯ ಕಲಾದೇವಿಯ ಆರಾಧನೆಯೇ!
ಸುಮಾರು ಮೂರು ಗಂಟೆಗಳ ನಂತರ, ‘‘ ಇಂದಿನ ಕಾರ್ಯಕ್ರಮ ಮುಕ್ತಾಯವಾಯಿತು’’- ಎಂದು ಅಂದು ಪ್ರಧಾನ ಸಂಘಟಕ ವಾದಿರಾಜಭಟ್ ಅವರು ಘೋಷಣೆ ಮಾಡಿದರೂ, ಪ್ರೇಕ್ಷಕರು ಯಾರೂ ಮನೆಗೆ ಮರಳಲು ತಯಾರಿರಲಿಲ್ಲ. ‘‘ಇನ್ನೂ ಬೇಕು, ಇನ್ನೂಬೇಕು; ಮುಂದುವರೆಸಿ, ಮತ್ತೊಮ್ಮೆ ಹಾಡಿ!’’ - ಎಂಬುದೇ ಜನಗಳ ಒತ್ತಾಯವಾಗಿತ್ತು. ಎದ್ದು ಹೋಗದ ಈ ಮೆಚ್ಚುಗೆಯ ಜನಸ್ತೋಮವನ್ನು ತೃಪ್ತಿಪಡಿಸಲು ’ರಾಗ’ ತಂಡದವರು ಮತ್ತೆ ಮೂರು ಹಾಡುಗಳನ್ನು ಹೇಳಿ ಸಭಿಕರನ್ನು ಕುಣಿಸಬೇಕಾಯಿತು. ಅದರಲ್ಲೂ ಪರಿಮಳಾ ಮುರಳೀಧರ ಅವರ ‘ದೂರದಿಂದ ಬಂದಂಥ ಸುಂದರಾಂಗ ಜಾಣ’ ಎಲ್ಲ ರನ್ನೂ ಮತ್ತೊಮ್ಮೆ ಸಭಾಂಗಣದ ನಡುದಾರಿಗಳಲ್ಲಿ ಕುಣಿಯುವಂತೆ ಮಾಡಿತು. ಇದಾದಮೇಲೂ, ಹೋಗಲೊಲ್ಲದ ಜನ ಅಲ್ಲೇ ನಿಂತು ತಮ್ಮ ತಮ್ಮಲ್ಲೇ, ‘ ಅಯ್ಯೋ ಮುಗಿದೇ ಹೋಯಿತೇ ಈ ರಸದೂಟ’ ಎಂದು ಪರಿತಾಪಪಡುತ್ತಾ ಇದ್ದರು !
ಅದಾವುದು ಈ ‘ರಾಗ ’ ಸಂಗೀತ ವೃಂದ ? ಸ್ವಲ್ಪ ತಾಳ್ಮೆಯಿಂದಿರಿ, ಎಲ್ಲಾ ಹೇಳುತ್ತೇನೆ. ವಿವರವಾಗಿಯೇ ತಿಳಿಸುತ್ತೇನೆ: ಯಾವುದೇ ಸಂಗೀತಕ್ಕೆ ರಾಗ ಬೆನ್ನೆಲುಬು ತಾನೇ ? ತಾಳ, ಶೃತಿ, ರಾಗವಿರದೆ ಇರುವ ಹೇಳುವ ಹಾಡು ‘ಹಾಡು’ ಎನಿಸಿಕೊಳ್ಳುವುದೇ? ಹಾಗೆಯೇ ‘ರಾಗ’ ತಂಡದ ಕಾರ್ಯಕ್ರಮವಿರದೇ ಹೋದರೆ ನಮ್ಮ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಆ ವರ್ಷ ಒಂದು ಥರಾ ಬಿಕೋ ಎನಿಸಿಕೊಳ್ಳುತ್ತದೆ. ‘ರಾಗ’ದಲ್ಲಿ ಇರುವ ಪ್ರಮುಖ ಗಾಯಕರೆಲ್ಲ, ವಾದ್ಯಪಟುಗಳೆಲ್ಲ ಸುಮಾರಾಗಿ ಕನ್ನಡ ಕೂಟದಲ್ಲಿರುವವರೇ. ಹೀಗೆ ‘ರಾಗ’ಕ್ಕೂ ಕನ್ನಡ ಕೂಟಕ್ಕೂ ಒಂದು ಬಗೆಯ ಅವಿನಾ ಸಂಬಂಧ.