......ಹೀಗೇ, ಒಂದು ಮಾತು - ಪುಟ 3
ನಮ್ಮ ದೇಶದಲ್ಲಿ ವೈದ್ಯಕೀಯ ಅರ್ಥಶಾಸ್ತ್ರ ಕವಲುದಾರಿಯಲ್ಲಿದೆ. ಒಂದೆಡೆ ದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳು. ಮತ್ತೊಂದೆಡೆ ಬೀದಿ ಬೀದಿಯಲ್ಲಿರುವ ಸಣ್ಣ ಕ್ಲಿನಿಕ್ಕುಗಳು. ಸಮಾಜವಾದದ ದುರಂತ. ಕಾರ್ಪೊರೇಟ್ ಸಂಸ್ಕೃತಿ ಈಗ ಈ ರಂಗಕ್ಕೆ ಬಂದಿರುವುದು ಒಳ್ಳೆಯದೇ. ಮ್ಯಾಕ್ಡೊನಾಲ್ಡಿನಂತೆ ಆಸ್ಪತ್ರೆಗಳು ಫ್ರಾಂಚೈಸ್ ಹಾದಿ ಹಿಡಿದರೆ, ಏನಿಲ್ಲದಿದ್ದರೂ ಕನಿಷ್ಠ ಎಲ್ಲ ರೋಗಿಗಳು ಸಮಾನವಾದ ಚಿಕಿತ್ಸೆ ಪಡೆಯುವ ಅನುಕೂಲ ಪಡೆದುಕೊಂಡಿರುತ್ತಾರೆ. ಒಂದು ನಿರ್ದಿಷ್ಟ ಗುಣಮಟ್ಟವನ್ನು ಗ್ರಾಹಕ ಇವರುಗಳಿಗಿಂತ ಅಪೇಕ್ಷಿಸುತ್ತಾನಾದ್ದರಿಂದ ವ್ಯಾಪಾರಿಗೆ ಆ ಗುಣಮಟ್ಟವನ್ನು ಕಾಪಾಡಿಕೊಂಡು ಬರುವುದು ತೀರಾ ಅನಿರಾವ್ಯವಾಗುತ್ತದೆ(ಮ್ಯಾಕ್ ಡೊನಾಲ್ಡಿಗೆ ಹೋಗಿ ಇಡ್ಲಿ, ವಡೆ ಯಾರೂ ಕೇಳುವುದಿಲ್ಲವಲ್ಲ. ಮತ್ತು ಯಾವುದೇ ಮ್ಯಾಕ್ಡೊನಾಲ್ಡಿಗೆ ಹೋದರೂ ಒಂದೇ ರುಚಿಯಿರುತ್ತದೆಂಬುದನ್ನು ಎಲ್ಲರೂ ತಿಳಿದಿರುತ್ತಾರೆ). ಆದರೆ ಇವೆಲ್ಲವಕ್ಕೆ ಹಣ ಹೊಂದಿಸುವುದು ಇನ್ನೊಂದು ಪ್ರಾಯಶಃ ಇನ್ನೊಂದು ಲೇಖನದ ವಿಷಯವಾಗುತ್ತವೆ. ಈ ರೀತಿಯಾದಾಗ ದೊಡ್ಡ ಸಂಸ್ಥೆಗಳ ದೈತ್ಯಾಕಾರದ ಅಲೆಯಲ್ಲಿ ಸಣ್ಣ ವ್ಯವಸ್ಥೆಗಳು ಹುಳುಗಳ ಹಾಗೆ ಕೊಚ್ಚಿಕೊಂಡು ಹೋಗುತ್ತವೆ. ಅಥವಾ ಸಣ್ಣವೂ ದೊಡ್ಡದರ ಆಶ್ರಯದಲ್ಲಿ ಧನ್ಯತೆ ಹೊಂದುತ್ತವೆ. ವೈದ್ಯರಂಗದಲ್ಲಿ ಪ್ರಗತಿಗೆ ಈ ಬದಲಾವಣೆ ಅನಿವಾರ್ಯ. ಇಲ್ಲಿ ಯಾವುದೂ ಪುಗಸಟ್ಟೆ ಸಿಗುವುದಿಲ್ಲ. ಬೇರೆ ಯಾವುದೇ ವ್ಯವಹಾರದಂತೆ ಇಲ್ಲಿಯೂ ಬಂಡವಾಳ ಬೇಕು. ಆರೋಗ್ಯಕರ ಸ್ಪರ್ಧೆ ಇರಬೇಕು. ಮೇಲಾಗಿ ಉತ್ತಮ ಫಲಿತಾಂಶ ಬೇಕು.
ಕಾರ್ಪೊರೇಟ್ ಸಂಸ್ಕೃತಿಯ ಹೊರಗುಳಿದಿರುವ ಎರಡು ಉದಾಹರಣೆಗಳನ್ನು ಮಾತ್ರ ನಾನು ಮೇಲಿಟ್ಟಿದ್ದೇನೆ. ಇಬ್ಬರೂ ಉತ್ತಮ ವೈದ್ಯರುಗಳೇ. ತಮ್ಮ ಕೆಲಸ ತಾವು ಚೆನ್ನಾಗಿಯೇ ಮಾಡಿದ್ದಾರೆ. ಅಂದು ರಿಪೇರಿ ಮಾಡಿಸಿಕೊಂಡ ನನ್ನ ಹೆಂಡತಿಯ ಹಲ್ಲು ಇಂದಿಗೂ ಚೆನ್ನಾಗಿಯೇ ಇದೆ. ಆದರೆ ಮಾರ್ಕೆಟಿಂಗ್ ದೃಷ್ಟಿಯಲ್ಲಿ ಇಬ್ಬರೂ ಹೀನಾಯವಾಗಿ ಸೋತರು. ಇವರುಗಳು ಅಮೆರಿಕಾದಲ್ಲೇನಾದರೂ ಪ್ರಾಕ್ಟೀಸ್ ಮಾಡುತ್ತಿದ್ದರೆ ಬಹುಶಃ ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದರು.
ನಮ್ಮ ಸಂಸ್ಕೃತಿಯೇ ಬೇರೆ ಅನ್ನುವ ವಾದವೊಂದಿದೆ. ವೈದ್ಯನಲ್ಲಿ ನಂಬಿಕೆಯಾಂದಿದ್ದರೆ ಸಾಕು. ಅರ್ಧ ಕಾಯಿಲೆ ಗುಣವಾಗುತ್ತದೆ ಎನ್ನುವ ಹಳೆಯ ಮಾತೊಂದಿದೆ. ಅದು ಬರೀ ಪೊಳ್ಳುವಾದ. ನಂಬಿಕೆಯಿದ್ದಷ್ಟೇ ಅನುಮಾನವೂ ಇರಬೇಕು. ಹಾಗಾದಾಗ ಮಾತ್ರ ಒಬ್ಬ ವೈದ್ಯ ತನ್ನ ಕೆಲಸ ಸರಿಯಾಗಿ ಮಾಡಲು ಸಾಧ್ಯ. ಅಮೆರಿಕಾದ ಅಂಕಿ ಅಂಶಗಳ ಪ್ರಕಾರ ವೈದ್ಯರ ತಪ್ಪಿನಿಂದ ಸಾಯುವ ರೋಗಿಗಳ ಸಂಖ್ಯೆ ವರ್ಷಕ್ಕೆ ಸುಮಾರು ಒಂದು ಲಕ್ಷ. ಇದು ಗಣನೀಯವಾಗಿಯೇ ಇದೆ. ರೋಗಿ ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿರಬೇಕು. ತನಗೆ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದು ಅವನ ಜವಾಬ್ದಾರಿ. ಬರೀ ತೆಗೆದುಕೊಳ್ಳುವುದನ್ನು ಬಿಟ್ಟು , ಕೊಟ್ಟು ತೆಗೆದುಕೊಂಡಾಗ ಮಾತ್ರ ವೈದ್ಯ ಶಾಸ್ತ್ರ ಉತ್ತಮವಾಗಲು ಸಾಧ್ಯ.
ಆದರೆ ಇಲ್ಲಿ ಸಣ್ಣ ಅಪಾಯವೊಂದಿದೆ. ವೈದ್ಯ ಮಾಡುತ್ತಿರುವುದನ್ನೆಲ್ಲಾ ರೋಗಿ ಕಾಮಾಲೆ ಕಣ್ಣಿನಿಂದ ನೋಡುತ್ತಾ ಹೋಗುವ ಒಂದು ದುರಂತವಿದೆ. ಸಾಮಾನ್ಯ ರೋಗಿಗಳು ಜಾಗರೂಕರಾದಾಗ ಈ ಬೆಳವಣಿಗೆ ತೀರ ಸಹಜವೇ. ಹಾಗಾದಾಗ ವೈದ್ಯ ತನ್ನ ಹಕ್ಕನ್ನು ರಕ್ಷಿಸಿಕೊಳ್ಳಬೇಕಾಗುವ ಅನಿವಾರ್ಯತೆ ಒದಗುತ್ತದೆ. ತಾನು ಮಾಡುವುದನ್ನೆಲ್ಲಾ ತಪ್ಪೆಂದು ತಿಳಿಯುವ ಅಥವಾ ಮಾಡುವ ಎಲ್ಲದಕ್ಕೂ ಕೋರ್ಟ್ ಮಾರ್ಶಲ್ ರೀತಿ ಉತ್ತರ ಕೊಡಬೇಕಾದಲ್ಲಿ , ಜಾಗರೂಕನಾಗುವ ಸರದಿ ವೈದ್ಯನದಾಗುತ್ತದೆ. ಹೀಗಾದಾಗ, ಅನವಶ್ಯಕ ಪರೀಕ್ಷೆಗಳು, ಚಿಕಿತ್ಸೆಗಳು ಪ್ರಾರಂಭವಾಗುತ್ತವೆ. ಎದೆನೋವೆಂದು ಬರುವ ರೋಗಿಗೆ ಹೃದಯಾಘಾತ ಆಗುತ್ತಿಲ್ಲವೆಂಬ ನಂಬಿಕೆ ಬರಬೇಕಾದ ಅವಶ್ಯಕತೆ ಇರಲಿ ಬಿಡಲಿ, ನಾನಾ ರೀತಿ ಪರೀಕ್ಷೆಗೆ ತನ್ನನ್ನೇ ತಾನು ಒಡ್ಡಿಕೊಳ್ಳಬೇಕಾಗುವ ಹೊಸ ಪದ್ಧತಿಗೆ ನಮ್ಮನ್ನು ನಾವೇ ಗುರಿಮಾಡಿಕೊಂಡಾಗಾಗುತ್ತದೆ. ಒಂದು ಇಸಿಜಿ ಮಾಡಿ ಹೃದಯ ಸರಿ ಇದೆ ಎಂದು ಹೇಳುವ ದಿನಗಳು ದೂರವಾಗುತ್ತವೆ. ವೈದ್ಯ ತನ್ನ ಪೇಟ್ರನೈಸಿಂಗ್ ಮನೋಭಾವವನ್ನು ತೊರೆದು ರೋಗಿಯ ಜತೆ ಕೆಲಸ ಮಾಡಬೇಕಾಗುತ್ತದೆ. ತನ್ನ ಕೈಯ್ಯಾರೆ ಖರ್ಚು ಮಾಡುತ್ತಿರುವ ರೋಗಿ ವೈದ್ಯನ ಲಾಯರ್ ಬಿಲ್ಲನ್ನೂ ಭರಿಸಬೇಕಾದಲ್ಲಿ , ಡಾಕ್ಟರ ಬಿಲ್ಲು ದುಪ್ಪಟ್ಟಾಗುವ ಭಯವಿದ್ದೇ ಇದೆ. ಈಗ ಅಮೇರಿಕಾದಲ್ಲಾಗುತ್ತಿರುವುದೂ ಇದೇ. ಆದರೆ, ಇಲ್ಲಿ ವಿಮಾ ಕಂಪೆನಿಗಳು ತೋರಿಕೆಗಾದರೂ ರೋಗಿಯ ಮೇಲಿನ ಹೊರೆಯನ್ನು ಕಡಿಮೆ ಮಾಡಿದಂತಿದೆ.
ಹೀಗೇ ಎಲ್ಲವನ್ನೂ ಯೋಚಿಸುತ್ತೇನೆ. ನನ್ನ ಹಾಗೆ ಯೋಚಿಸಿರುವವರು ಇಲ್ಲವೇ? ಅಮೆರಿಕಾ ಇಂಗ್ಲೆಂಡುಗಳಲ್ಲಿ ಕಲಿತ ಡಾಕ್ಟರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಲೇ ಇಲ್ಲವೇ ? ಖಂಡಿತಾ ಇದ್ದಾರೆ. ಅವರುಗಳು ಈ ರೀತಿ ಯೋಚಿಸಿ ಏನೂ ಮಾಡಲಾಗದೇ ಅಲ್ಲಿನ ಒಂದು ಭಾಗವಾಗಿ ಹೋಗಿದ್ದಾರೆ. ಏನೋ ಮಾಡಬೇಕು. ಏನೆಂದು ಗೊತ್ತಿಲ್ಲ. ಹೇಗೆಂದು ಗೊತ್ತಿಲ್ಲ. ಅನ್ನುವ ಮನೋಭಾವನೆ ಎಲ್ಲರದು. ನಾನು ಇಲ್ಲಿ ಕುಳಿತು ಹೀಗೆ ಬರೆಯುತ್ತಿದ್ದೇನೆ. ಬೆಂಗಳೂರಿನಲ್ಲಿದ್ದರೆ ವಾಸ್ತವಕ್ಕೆ ಕಟ್ಟು ಬಿದ್ದು ಹೆಂಡತಿ ಮಕ್ಕಳ ಉದ್ಧಾರಕ್ಕೆ ಏನು ಬೇಕೋ ಅದು ಮಾತ್ರ ಮಾಡುತ್ತಿದ್ದೆನೇನೋ ? ಏಕೆ ಗೊತ್ತೇ ? ನಾನು ಬೆಂಗಳೂರಿನಲ್ಲಿ ಡಾಕ್ಟರಾಗಿದ್ದೆ. ಕೇವಲ ಆರುವರ್ಷಗಳ ಹಿಂದೆ. ಆಗ ನನಗೆ ಇವೆಲ್ಲ ಹೊಳೆಯಲೇ ಇಲ್ಲವಲ್ಲ ? ಯಾಕೆ. ಮನಸ್ಸು ತೀರ ಬುದ್ಧಿವಂತಿಕೆಯಿಂದ ಇಂತಹವನ್ನೆಲ್ಲಾ ಯೋಚಿಸಲು ನಿರಾಕರಿಸಿತ್ತು. ಅಲ್ಲವೇ ?