ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕ್ಯಾಲಿಫೋರ್ನಿಯದಲ್ಲಿ ಹಾಸ್ಯ ಸಂಜೆ

By Staff
|
Google Oneindia Kannada News

*ಆಶಾ ಬಾಲಕೃಷ್ಣ ಭಟ್‌

ಉತ್ತರ ಕ್ಯಾಲಿಫೋರ್ನಿಯ : ಇಲ್ಲಿನ ಕನ್ನಡ ಕೂಟವು ಏ.14 ರ ಶನಿವಾರದಂದು ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ಸುಮಾರು ಆರು ನೂರಕ್ಕೂ ಹೆಚ್ಚು ಮಂದಿ ಕನ್ನಡಿಗರು ಭಾಗವಹಿಸಿದ್ದ , ಹಾಸ್ಯ ಸಂಜೆ ಹೆಸರಿನಿಂದ ನಡೆದ ಈ ಸಂಜೆಯ ಕಾರ್ಯಕ್ರಮಗಳೆಲ್ಲವೂ ಹಾಸ್ಯಭರಿತವಾಗಿಯೇ ಇದ್ದು , ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದರು.

ಮೊದಲಿಗೆ ಶ್ರೀಮತಿ ಅನಿತಾರತ್ನಂ ಅವರ ನಿರ್ದೇಶನದಲ್ಲಿ ಮಕ್ಕಳು ಶ್ಲೋಕ ಹಾಗೂ ಜನಪದ ಶೈಲಿಯಲ್ಲಿ ಹಾಡಿ ಗಣೇಶನನ್ನು ವಂದಿಸಿದರು. ನಂತರ ಬಾಳೇಹೊನ್ನೂರು ಮಠದ ಶ್ರೀ ಸ್ವಾಮಿಗಳ ಆಗಮನವಾಯಿತು. ವೇದಿಕೆಯ ಮೇಲೆ ಸುಖಾಸೀನರಾಗಿ ಕುಳಿತು, ಐದು ನಿಮಿಷ ಸೊಗಸಾಗಿ ಪ್ರವಚನ ಮಾಡಿ, ತಮ್ಮ ಆಶ್ರಮಕ್ಕೆ ಧನಸಹಾಯ ಬೇಡಿ, ಆಶೀರ್ವಚನ ನೀಡಿ, ಎಲ್ಲರನ್ನೂ ತನ್ಮಯರಾಗಿಸಿದ ನಂತರ ಆ ಸ್ವಾಮಿಗಳು ತಾವು ಉಟ್ಟಿದ್ದ ಒಂದೊಂದೇ ಕಾವಿಯ ಹೊದಿಕೆ, ಪಂಚೆ ಇತ್ಯಾದಿ ಉಡುಗೆಗಳನ್ನು ಕಳಚತೊಡಗಿ, ಪ್ಯಾಂಟ್‌ ಷರ್ಟ್‌ಧಾರಿಗಳಾಗಿ ಗೋಚರಿಸಿದಾಗಲೇ ಅವರು ಬೇರೆ ಯಾರೂ ಅಲ್ಲ , ನಮ್ಮ ಕಾರ್ಯಕ್ರಮಗಳ ನಿರೂಪಕರಲ್ಲಿ ಒಬ್ಬರಾದ ಶ್ರೀನಿವಾಸರು ಎಂಬುದು ಎಲ್ಲರಿಗೂ ಗೊತ್ತಾಗಿ, ಸಭಿಕರನ್ನು ಬಾಯಿ ತುಂಬಾ ನಗಿಸಿತು.

ಸನ್ನಿವೇಲ್‌ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್‌ ಶ್ರೀ ಗಜಾನನ ಜೋಷಿಯವರು ಪಂಚಾಂಗ ಶ್ರವಣ ಮಾಡಿಸಿದರು. ಆಮೇಲೆ ಶ್ರೀಮತಿ ಸಂಧ್ಯಾ ಕೆದ್ಲಾಯರು ನಿರ್ದೇಶಿಸಿದ ತಂದಾನಿ ತಾನಾನಿ ಎಂಬ ಬಿಂದಿಗೆ ಹಾಗೂ ಕೋಲಾಟದೊಂದಿಗೆ, ಹತ್ತು ಮಕ್ಕಳ ಸಮೂಹ ನೃತ್ಯ ತುಂಬಾ ಚೆಲುವಾಗಿ ಮೂಡಿಬಂತು. ನಂತರ ಶ್ರೀಮತಿ ಸುಭದ್ರಮ್ಮನವರು ನಿರ್ದೇಶಿಸಿದ ಮಕ್ಕಳ ಹಾಸ್ಯಮಯ ಕಿರುನಾಟಕ ‘ತಿರುಗುಬಾಣ’ ಪ್ರೇಕ್ಷಕರಿಗೆ ಆನಂದವನ್ನು ಕೊಟ್ಟಿತು. ಈಗಾಗಲೇ ಬಹಳಷ್ಟು ಕಾರ್ಯಕ್ರಮಗಳನ್ನು ನಿರ್ದೇಶಿಸಿ ಹೆಸರು ಪಡೆದಿರುವ ಶ್ರೀಮತಿ ನಂದಿನಿ ಉಮೇಶ್‌ ಅವರ ನೇತೃತ್ವದಲ್ಲಿ ಕಲಿತ ಮಕ್ಕಳ ಕನ್ನಡ ಚಿತ್ರಗೀತೆಗಳ ನೃತ್ಯ ಕಾರ್ಯಕ್ರಮ ‘ಚಿತ್ರ ವಿಚಿತ್ರ’ ತುಂಬಾ ಸೊಗಸಾಗಿತ್ತು .

ಆಮೇಲೆ ನಡೆದ ಯುವ ನಾಯಕ ನಾಯಕಿಯ ನಗೆ ನಾಟಕ : ಶ್ರೀಮತಿ ಪುಷ್ಪಾ ಸುಬ್ಬರಾವ್‌ ರಚಿಸಿ, ನಿರ್ದೇಶಿಸಿದ ‘ಪಪ್ಪೆಟಿಯರ್‌ ರಮಣಿ’. ಬಳಿಕ, ಕನ್ನಡದ ವಿವಿಧ ಚಲನಚಿತ್ರ ನಟರ ನಟನೆ, ಧ್ವನಿಯ ಅನುಕರಣೆಯಿಂದ ಆರಂಭಿಸಿ, ವರನಟ ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸಿದ ಘಟನೆಯಾಂದಿಗೆ ಮುಗಿಸುತ್ತಾ , ಹಾಸ್ಯಮಯ ರೀತಿಯಲ್ಲಿ ಅಭಿನಯಿಸಿ ‘ನಗುನಗುತಾ ನಲೀ ನಲೀ’ - ಎಂಬ ಹಾಡಿನೊಂದಿಗೆ ಕೊನೆಗೊಂಡ ನಾಟಕವಾಡಿ ಜನಮನವನ್ನು ಗೆದ್ದವರು- ಶ್ರೀ ಮಧುಕಾಂತ್‌, ಶ್ರೀ ಜಗನ್ನಾಥ್‌ ಹಾಗೂ ಅವರ ಜೊತೆಗಾರ ಕಲಾವಿದರುಗಳು.

ನಂತರದ ಭೋಜನ ವಿರಾಮದಲ್ಲಿ ಬಹು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರಿಗೆ ಸೊಗಸಾದ ಊಟದ ಏರ್ಪಾಡಿತ್ತು .

ಮಧ್ಯಂತರ ವಿರಾಮದ ನಂತರ, ಕೂಟದ ಅಧ್ಯಕ್ಷರಾದ ಶ್ರೀ ರಾಮಪ್ರಸಾದ್‌ ಅವರು ಈ ವರ್ಷದ ಕಾರ್ಯಕಾರಿ ಸಮಿತಿಯನ್ನು ಸಭಿಕರಿಗೆ ಪರಿಚಯಿಸಿದರು. ಹಾಗೂ ಈ ವರ್ಷ ಕನ್ನಡಕೂಟ ಹಮ್ಮಿಕೊಂಡ ಕಾರ್ಯಕ್ರಮಗಳ ಪ್ರಸ್ತಾಪ ಮಾಡಿದರು. ಜೊತೆಗೆ, ಈ ವರ್ಷ ಪ್ರತಿ ಕಾರ್ಯಕ್ರಮದಲ್ಲೂ ಇಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ , ನಮ್ಮ ಕೂಟದ ಇಬ್ಬರು ಪ್ರತಿಭಾವಂತರನ್ನು ಸನ್ಮಾನಿಸುವ ವಿಷಯವನ್ನು ತಿಳಿಸಿದರು. ಅದರಂತೆ ಅಮೇರಿಕಾದಲ್ಲಿ ಎಲ್ಲಾ ಕನ್ನಡಿಗರಿಗೂ ಪರಿಚಿತರಾಗಿರುವ ಶ್ರೀ ಎಸ್‌.ಕೆ. ಹರಿಹರೇಶ್ವರ ಮತ್ತು ಇಲ್ಲಿನ ಶಾಸ್ತ್ರೀಯ ಕರ್ನಾಟಕ ಹಿಂದೂಸ್ತಾನೀ ಹಾಗೂ ಸುಗಮ ಸಂಗೀತದ ಉತ್ತಮ ಗಾಯಕರಾದ ಶ್ರೀ ನಚಿಕೇತ ಶರ್ಮ ಅವರುಗಳನ್ನು ವೇದಿಕೆಗೆ ಕರೆದು, ಪ್ರಶಸ್ತಿ ಫಲಕ ನೀಡಿ, ಸನ್ಮಾನಿಸಲಾಯಿತು.

ಕೊನೆಯಲ್ಲಿ ಎಲ್ಲರೂ ಕಾದು ನಿರೀಕ್ಷಿಸುತ್ತಿದ್ದ , ಶ್ರೀಮತಿ ಅಲಮೇಲು ಅಯ್ಯಂಗಾರ್‌ ಅವರು ರಚಿಸಿ ನಿರ್ದೇಶಿಸಿದ ‘ನಾಟಕ ಹೈಟೆಕ್‌ ಹಯವದನಾಚಾರ್‌’ ಎಂಬ ನಾಟಕ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತು.

ಹೊಸ ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳೂ, ಮುಖ್ಯವಾಗಿ ಆಹಾರ ಸಮಿತಿಯ ಅನ್ನಪೂರ್ಣೆಯರೂ, ಮನರಂಜನಾ ಕಾರ್ಯದರ್ಶಿಗಳಾದ ಶ್ರೀಮತಿ ಪರಿಮಳಾ ಮುರಳೀಧರ್‌, ಶೋಭಾ ಪ್ರಭಾಕರ್‌ ಮತ್ತು ರಾಘವೇಂದ್ರ ಹೆಬ್ಬಳಲು ಇವರುಗಳು ತುಂಬಾ ಉತ್ಸಾಹ, ಶ್ರದ್ಧೆಯಿಂದ ಶ್ರಮಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಕೊನೆಯಲ್ಲಿ , ವಂದನಾರ್ಪಣೆ ಮಾಡಿದ ಮನರಂಜನಾ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಶ್ರೀಮತಿ ಪರಿಮಳಾ ಮುರಳೀಧರ್‌ ಅವರು, ಕಾರ್ಯಕ್ರಮದ ಸಮರ್ಥ ನಿರೂಪಕರಾದ ಶ್ರೀ ವಾದಿರಾಜ್‌ ಭಟ್‌ ಮತ್ತು ಶ್ರೀ ಶ್ರಿನಿವಾಸ್‌ ಅವರಿಗೆ, ಭಾಗವಹಿಸಿದ ಎಲ್ಲ ಕಲಾವಿದರಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಆಭಾರ ಮನ್ನಣೆಯನ್ನು ಸಮರ್ಪಿಸಿದರು. ರಾಷ್ಟ್ರಗೀತೆಯಾಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X